Advertisement

ಕೋವಿಡ್ ನಿಂದ ಜನರ ಕಾಪಾಡಲು ಸನ್ನದ್ಧ

04:15 PM Apr 12, 2020 | Naveen |

ದಾವಣಗೆರೆ: ಇಡೀ ವಿಶ್ವವನ್ನೇ ನಡುಗಿಸಿರುವ ಮಹಾಮಾರಿ ಕೋವಿಡ್‌-19 ವೈರಾಣು ಸೋಂಕು ಎದುರಿಸಲು ಜಿಲ್ಲಾಡಳಿತ ಅವಿರತವಾಗಿ ಶ್ರಮಿಸುತ್ತಿದ್ದು, ಜಿಲ್ಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮೂವರು ಕೊರೊನಾ ವೈರಸ್‌ ಸೋಂಕಿತರು ಈಗಾಗಲೇ ಗುಣಮುಖರಾಗಿ 14 ದಿನಗಳ ಇನ್‌ ಸ್ಟಿಟ್ಯೂಷನ್‌ ಕ್ವಾರಂಟೈನ್‌ನಲ್ಲಿದ್ದಾರೆ.

Advertisement

ವಿವಿಧ ದೇಶಗಳಿಂದ ಬಂದವರು, ಚಿಕಿತ್ಸೆಗಾಗಿ ದಾಖಲಾದ ಬೇರೆ ಜಿಲ್ಲೆಯವರೂ ಸೇರಿ ಶನಿವಾರದವರೆಗೆ ಒಟ್ಟು 433 ಮಂದಿ ಅವಲೋಕನಾ ಪಟ್ಟಿಯಲ್ಲಿದ್ದಾರೆ. ಇನ್ನು ಸೋಂಕು ನಿಯಂತ್ರಣಕ್ಕಾಗಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮದಲ್ಲಿ 189 ಮಂದಿ 28 ದಿನಗಳ ಹಾಗೂ 170 ಜನರು 14 ದಿನಗಳ ಅವಲೋಕನ ಅವಧಿ ಪೂರ್ಣಗೊಳಿಸಿದ್ದಾರೆ. ಒಟ್ಟು 19 ಜನರನ್ನು ಮನೆಯಲ್ಲೇ ಮತ್ತು 54 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದುವರೆಗೂ 43 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.  ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಒಟ್ಟು 16 ವಿವಿಧ ತಂಡಗಳನ್ನು ರಚಿಸಿದ್ದು, ಆ ತಂಡಗಳಿಗೆ ಸಂಬಂಧಪಟ್ಟ ಕಾರ್ಯನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ: ಒಟ್ಟು 900 ಬೆಡ್‌ಗಳ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಈಗ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, ಕೋವಿಡ್ ಚಿಕಿತ್ಸೆಗಾಗಿ 300 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 50 ಬೆಡ್‌ಗಳನ್ನು ಐಸೋಲೇಷನ್‌ ವಾರ್ಡ್‌ ಪ್ರತ್ಯೇಕಿಸಲಾಗಿದೆ. ಈ ಆಸ್ಪತ್ರೆ ಜತೆಗೆ ಅಗತ್ಯ ಬಿದ್ದರೆ ಬಾಪೂಜಿ ಹಾಗೂ ಎಸ್‌ಎಸ್‌ ಹೈಟೆಕ್‌ಯಲ್ಲೂ ಸಹ ಕೊರೊನಾ ಚಿಕಿತ್ಸೆ ನೀಡಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಸದ್ಯ 7 ವೆಂಟಿಲೇಟರ್‌ಗಳಿದ್ದು, ನಗರದ ಖಾಸಗಿ ಆಸ್ಪತ್ರೆಗಳಲ್ಲೂ ವೆಂಟಿಲೇಟರ್‌ ಬಳಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 40 ಮಂದಿ ವೈದ್ಯರು, 90 ಮಂದಿ ಸಿಬ್ಬಂದಿ ಇದ್ದಾರೆ. ಜೆಜೆಎಂ ಮೆಡಿಕಲ್‌ ಕಾಲೇಜಿನ ಪಿಜಿ ವಿದ್ಯಾರ್ಥಿಗಳು ಸಹ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ವೈದ್ಯರ ಕೊರತೆ ಇಲ್ಲ. ಪ್ರಾಥಮಿಕ ಕಾಂಟಾಕ್ಟ್ಗಳ ಕ್ವಾರಂಟೈನ್‌ ಗೆ ನಗರದಲ್ಲಿ 6 ಲಾಡ್ಜ್ ಮತ್ತು ತಾಲೂಕುಗಳಲ್ಲಿ ಒಂದೊಂದು ಲಾಡ್ಜ್ ಗುರುತಿಸಲಾಗಿದೆ.

ಉಚಿತ ಹಾಲು: ನಗರದ ಒಟ್ಟಾರೆ 50 ಸ್ಲಂಗಳಿದ್ದು, 12,951 ಮನೆಗಳಿವೆ. ಕಳೆದ 27ರಿಂದಲೇ ಪ್ರತಿಮನೆಗೂ 1 ಲೀಟರ್‌ ಹಾಲು ವಿತರಿಸಲಾಗುತ್ತಿದೆ. ಪ್ರಾರಂಭದಲ್ಲಿ ಹಾಲು ವಿತರಣೆ ಸಮರ್ಪಕವಾಗಿರಲಿಲ್ಲ. ಪಾಲಿಕೆ ವತಿಯಿಂದ ಹಾಲು ವಿತರಣೆಗೆ ತಂಡ ರಚಿಸಲಾಗಿದೆ. ಕೆಲವೆಡೆ ನೀಡುವ ಹಾಲು ಹೆಚ್ಚಾಗುತ್ತಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ.

ಮಾಂಸ ಮಾರಾಟ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿತ್ತು.ಅಲ್ಲದೆ, ಹರಿಹರ ತಾಲ್ಲೂಕು ಬನ್ನಿಕೊಡಿನ ಫಾರಂನಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟಕ್ಕೂ ನಿರ್ಬಂಧ ಹೇರಲಾಗಿತ್ತು. ಈಗ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿ, ದರ ನಿಗದಿಪಡಿಸಲಾಗಿದೆ. ಟೆಲಿಮೆಡಿಸನ್‌: ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳಿಗೂ ಜನರು ಆಸ್ಪತ್ರೆಗಳಿಗೆ ಬರುವುದನ್ನ ತಪ್ಪಿಸಲು ಜಿಲ್ಲಾಡಳಿತ ಟೆಲಿಮಡಿಶನ್‌ ವ್ಯವಸ್ಥೆ ಮಾಡಿದೆ. ದೂರವಾಣಿ ಮೂಲಕ ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆ ವೈದ್ಯರ ಮೂಲಕ ಪರಿಹಾರ ಪಡೆಯಬಹುದು. ಅಲೋಪತಿ, ಆಯುರ್ವೇದ ಹಾಗೂ ಹೋಮಿಯೋಪತಿ ವೈದ್ಯರು ದೂರವಾಣಿ ಮೂಲಕವೇ ಪರಿಹಾರ ಸೂಚಿಸುತ್ತಿದ್ದಾರೆ.

Advertisement

ಲಾಕ್‌ಡೌನ್‌ ಬಿಗಿ
ಲಾಕ್‌ಡೌನ್‌ ಇದ್ದರೂ ಪ್ರಾರಂಭದಲ್ಲಿ ಒಂದಿಷ್ಟು ಜನ ಹಾಗೂ ವಾಹಗಳ ಸಂಚಾರ ಇದ್ದಿದ್ದರಿಂದ ಕಳೆದ 4-5 ದಿನಗಳಿಂದ ಪೊಲೀಸರು ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ. ಅನಾವಶ್ಯಕವಾಗಿ ಸಂಚರಿಸುವ ಮಂದಿಗೆ ಲಾಠಿ ಬಿಸಿ ಮುಟ್ಟಿಸಿದ್ದಲ್ಲದೆ, ಈಗ ವಾಹನಗಳ ಜಪ್ತಿ ಮಾಡುತ್ತಿದ್ದಾರೆ. ಹಾಗಾಗಿ ಬೆಳಿಗ್ಗೆ ಅಲ್ಲಲ್ಲಿ ವಾಹನಗಳ ಸಂಚಾರವಿದ್ದರೂ ಮಧ್ಯಾಹ್ನ ನಿಶ್ಯಬ್ದ ವಾತಾವರಣ ಇರಲಿದೆ. ಪ್ರಮುಖ ವೃತ್ತ, ರಸ್ತೆಗಳು ಸೇರಿದಂತೆ ಹಲವಡೆ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದೆ. ಏನೇ ಬಿಗಿ ಮಾಡಿದರೂ ಕೆಲವೆಡೆ ಜನಸಂಚಾರ ಕಡಿಮೆಯಾಗದಿರುವುದರಿಂದ ಶನಿವಾರದಿಂದ ಪೊಲೀಸ್‌ ಇಲಾಖೆ ಡ್ರೋಣ್‌ ಕ್ಯಾಮರ ಮೂಲಕ ಪರಿಶೀಲಿಸಲು ಕ್ರಮ ಕೈಗೊಂಡಿದೆ.

ಅಗತ್ಯ ವಸ್ತುಗಳು ಲಭ್ಯ
ತರಕಾರಿ ಹಾಗೂ ಅಗತ್ಯ ವಸ್ತುಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿಲ್ಲ. ದಿನಸಿ ಅಂಗಡಿಗಳು ಬೆಳಿಗ್ಗೆಯಿಂದಲೇ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಾರುಕಟ್ಟೆಯಲ್ಲಿ ಜನಜಂಗುಲಿ ಆಗುತ್ತಿದ್ದರಿಂದ ಈಗ ತಳ್ಳುವ ಗಾಡಿ ಹಾಗು ಆಪೇ ಆಟೋಗಳ ಮೂಲಕ ಎಲ್ಲಾ ವಾರ್ಡ್‌ಗಳಲ್ಲೂ ತರಕಾರಿ ಸಿಗುವ ಸೌಲಭ್ಯ ಕಲ್ಪಿಸಲಾಗಿದೆ. ಪಾಲಿಕೆ ಹಾಗೂ ಎಪಿಎಂಸಿ ಅಧಿಕಾರಿಗಳು ತರಕಾರಿಗೆ ದರ ನಿಗದಿಪಡಿಸಲಿದ್ದು, ನಿಗದಿತ ದರಕ್ಕಿಂತ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.ಆದರೂ ತಳ್ಳುವ ಗಾಡಿಯಲ್ಲಿನ ತರಕಾರಿ ಬೆಲೆ ದುಬಾರಿ ಎಂಬ ಮಾತು ಕೇಳಿ ಬರುತ್ತಿವೆ.

ಪಡಿತರ ವಿತರಣೆ
ಜಿಲ್ಲೆಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್‌ ಸೇರಿ ಒಟ್ಟು 3,79,769 ಕಾರ್ಡ್‌ದಾರರಿದ್ದು, ಶುಕ್ರವಾರದವರೆಗೆ ಒಟ್ಟು 2,91,523 ಕಾರ್ಡ್‌ದಾರರಿಗೆ ಪಡಿತರ ವಿತರಿಸಲಾಗಿದೆ. ಮಾರ್ಚ್‌ 31ರ ವರೆಗೂ ಬಾಕಿ ಕಾಡ್‌ ìದಾರರಿಗೆ ಪಡಿತರ ವಿತರಿಸಲಾಗುವುದು. ಎಪಿಎಲ್‌ ಕಾರ್ಡ್‌ದಾರರು ಯಾರೂ ಸಹ ಪಡಿತರಕ್ಕಾಗಿ ಬಂದಿಲ್ಲ. ಮೇಲಾಗಿ ಪಡಿತರ ವಿತರಣೆ ವೇಳೆ ಹಣ ಕೇಳಿದ ದೂರಿನ ಮೇರೆಗೆ ನಾಲ್ಕು ಅಂಗಡಿಗಳನ್ನ ಸಸ್ಪೆಂಡ್‌ ಮಾಡಲಾಗಿದೆಯಲ್ಲದೆ, ಮೂರು ಅಂಗಡಿಯವರಿಗೆ ನೋಟಿಸ್‌ ನೀಡಲಾಗಿದೆ ಎಂದು ಆಹಾರ ಇಲಾಖೇ ಉಪ ನಿರ್ದೇಶಕ ಮಂಟೇಸ್ವಾಮಿ ತಿಳಿಸಿದ್ದಾರೆ.

ಎನ್‌.ಆರ್‌. ನಟರಾಜ 

Advertisement

Udayavani is now on Telegram. Click here to join our channel and stay updated with the latest news.

Next