Advertisement

ಪಾಲಿಕೆ ವಾಹನಗಳಿಗೆ ತ್ಯಾಜ್ಯ ಕೊಡಿ

06:14 PM Dec 27, 2019 | Naveen |

ದಾವಣಗೆರೆ: ಮಹಾನಗರ ಪಾಲಿಕೆಯಿಂದ ಪ್ರಾಯೋಗಿಕವಾಗಿ ನಿಯೋಜಿಸಿರುವ ವಾಹನಗಳಿಗೆ ಮಾಂಸದ ಅಂಗಡಿಗಳ ತ್ಯಾಜ್ಯ ಕೊಡುವ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು ಎಂದು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ| ಸಂತೋಷ್‌ ಮನವಿ ಮಾಡಿದ್ದಾರೆ.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕುರಿ, ಕೋಳಿ, ಮೀನು ಅಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಗುರುವಾರ ನಗರಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಂಸದಂಗಡಿ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಕುರಿ, ಕೋಳಿ, ಮೀನು ಮಾಂಸದಂಗಡಿ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 238 ಮಾಂಸದಂಗಡಿಗಳಿವೆ. ಸ್ವತ್ಛತೆ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಧೂಳು ತಡೆಯಲು ಗ್ಲಾಸ್‌ ಅಳವಡಿಸಬೇಕು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮಾಂಸದ ತ್ಯಾಜ್ಯ ಸಂಗ್ರಹಣೆಗಾಗಿ ನಗರಪಾಲಿಕೆಯಿಂದ ಪ್ರಾಯೋಜಿಕವಾಗಿ ಬಿಟ್ಟಿರುವ 2 ವಾಹನಗಳಿಗೆ ತ್ಯಾಜ್ಯ ಕೊಡುವ ಮೂಲಕ ಶುಚಿತ್ವ ಕಾಪಾಡಲು ಕೈ ಜೋಡಿಸಬೇಕು. ಪ್ರತಿ ಅಂಗಡಿಯವರು ತಿಂಗಳಿಗೆ 750 ರೂಪಾಯಿ ಶುಲ್ಕ ನೀಡಬೇಕು ಎಂದು ತಿಳಿಸಿದರು.

ಮಾಂಸ ಕತ್ತರಿಸಿ ರಕ್ತವನ್ನು ಚರಂಡಿಗೆ ಬಿಡುತ್ತಿರುವುದರಿಂದ ಚರಂಡಿ ಬ್ಲಾಕ್‌ ಆಗುತ್ತಿರುವುದು ಕಂಡು ಬರುತ್ತಿದೆ. ಮಾಂಸದಂಗಡಿ ಸುತ್ತ ನಾಯಿಗಳ ಹಾವಳಿ ಹೆಚ್ಚಾಗಿದೆ. ಕಡ್ಡಾಯವಾಗಿ ತ್ಯಾಜ್ಯವನ್ನು ವಾಹನಕ್ಕೆ ಹಾಕಬೇಕು. ತ್ಯಾಜ್ಯ ಹೆಚ್ಚಿದ್ದಲ್ಲಿ ಮತ್ತೆ ಬಂದು ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಶಂಕರ್‌ ಮಾತನಾಡಿ, ದಿನ ಬೆಳಗ್ಗೆ ತ್ಯಾಜ್ಯ ಸಂಗ್ರಹಿಸುತ್ತೇವೆ ಎಂದಾಗ ಕೋಳಿ ಅಂಗಡಿಗಳ ಸಂಘದ ಅಧ್ಯಕ್ಷ ಶಂಶುದ್ದೀನ್‌ ತಬರೇಜ್‌(ಚಾರ್ಲಿ), ರಾತ್ರಿ ವೇಳೆ ಸಂಗ್ರಹಿಸಿದರೆ ಉತ್ತಮ. ಮರುದಿನ ದುರ್ವಾಸನೆ ಬರುತ್ತದೆ. ಜನರಿಗೆ ತೊಂದರೆ ಆಗಲಿದೆ ಎಂದರು. ಮಾಂಸದಂಗಡಿ ಮಾಲಿಕ ಸುರೇಶ್‌ ಮಾತನಾಡಿ, 150 ಕೋಳಿ ಮಾಂಸದಂಗಡಿಗಳಿದ್ದು ಎರಡು ತ್ಯಾಜ್ಯ ಸಂಗ್ರಹ ಗಾಡಿ ಸಾಕಾಗುವುದಿಲ್ಲ. ಹೆಚ್ಚಿನ ವಾಹನಗಳ ವ್ಯವಸ್ಥೆ ಮಾಡಬೇಕು. ತಿಂಗಳಿಗೆ 750 ರೂಪಾಯಿ μàಸ್‌ ಹೆಚ್ಚಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಂಸದಂಗಡಿಗಳಿಗೆ ಬುಧವಾರ ಮತ್ತು ಭಾನುವಾರವೇ ವ್ಯಾಪಾರ ಹೆಚ್ಚು. ಭಾನುವಾರ ಎಂದರೆ ಒಂದು ರೀತಿ ಹಬ್ಬ ಇದ್ದಂತೆ. ಭಾನುವಾರ ಜಯಂತಿ ಬಂದರೆ ಕಷ್ಟ ಆಗುತ್ತದೆ. ಆದ್ದರಿಂದ ಕೆಲವು ಮುಖ್ಯ ಜಯಂತಿ ಹೊರತುಪಡಿಸಿ ಬೇರೆ ಜಯಂತಿಗಳಿಗೆ ವಿನಾಯಿತಿ ನೀಡಬೇಕು ಎಂದು ವ್ಯಾಪಾರಿ ಮುಸ್ತಾಕ್‌ ಮನವಿ ಮಾಡಿದರು.

Advertisement

ಕುರಿ ಮಾಂಸ ಮಾರಾಟ ವರ್ತಕರ ಸಂಘದ ಜಿಲ್ಲಾ ಅಧ್ಯಕ್ಷ ಮಾಲತೇಶ್‌ ಪಿ. ಕಲಾಲ್‌ ಮಾತನಾಡಿ, 65 ಮಾಂಸದ ಅಂಗಡಿಗಳಿವೆ. ದಾವಣಗೆರೆಯಲ್ಲಿ ವ್ಯವಸ್ಥಿತವಾದ ಸ್ಲಾಟರ್‌ ಹೌಸ್‌ಗಳಿಲ್ಲ. ಕಾರ್ಪೋರೇಷನ್‌ ಮಳಿಗೆ 25 ರಿಂದ 30 ವರ್ಷ ಹಳೆಯದಾಗಿವೆ. ಸ್ಲಾಟರ್‌ ಹೌಸ್‌ ಮತ್ತು ದೊಡ್ಡಿ ಅವಶ್ಯಕತೆ ಇದೆ ಎಂದರು.

ಕಸಾಯಿಖಾನೆ (ಸ್ಲಾಟರ್‌ ಹೌಸ್‌)ಗೆ ಜಾಗ ಗುರುತಿಸಲಾಗಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಅನೇಕ ನಿಯಮಾವಳಿಗಳಿರುವ ಪ್ರಯುಕ್ತ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತದೆ ಎಂದು ತಿಳಿಸಿದರು. ಪ್ಲಾಸ್ಟಿಕ್‌ ಚೀಲ ಬಳಸುವಂತಿಲ್ಲ. ಮಾಂಸವನ್ನ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಪೇಪರ್‌ ಬ್ಯಾಗ್‌ನಲ್ಲಿ ಕೊಡಬೇಕು ಎಂದು ಡಾ| ಸಂತೋಷ್‌ ತಿಳಿಸಿದರು.

ಮಾಂಸ ಹಸಿ ಇರುವುದರಿಂದ ಟಿಶ್ಯೂ ಅಥವಾ ಪೇಪರ್‌ ಬಳಕೆ ಸೂಕ್ತವಲ್ಲ. ಅಲ್ಯುಮಿನಿಯಂ ಹಾಳೆ ಬಳಸುವಂತಿಲ್ಲ ಎಂದು ಮಾಂಸದ ಅಂಗಡಿಯವರು ವಾದಿಸಿದರು. ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಡಾ|
ಸಂತೋಷ್‌ ತಿಳಿಸಿದರು.

ಎಲ್ಲ ಅಂಗಡಿಯವರು ಕಡ್ಡಾಯವಾಗಿ ಟ್ರೇಡ್‌ ಲೈಸೆನ್ಸ್‌ ಮಾಡಿಸಬೇಕು ಎಂದು ಅಧಿಕಾರಿ ಸೂಚಿಸಿದರು. ಟ್ರೇಡ್‌ ಲೈಸೆನ್ಸ್‌ ಪ್ರಕ್ರಿಯೆಯನ್ನು ಸರಳೀಗೊಳಿಸಬೇಕು ಎಂದು ಮಾಲೀಕರು ಮನವಿ ಮಾಡಿದರು. ಟ್ರೇಡ್‌ ಲೈಸೆನ್ಸ್‌ ಪ್ರಕ್ರಿಯೆ ಸರಳಗೊಳಿಸಲಾಗಿದೆ. ಅನೇಕ ವರ್ಷಗಳಿಂದ ಬಾಕಿ ಇರುವವರು ಕೂಡ ಬಾಕಿ ಕಟ್ಟಲು ಅನುವು ಮಾಡಿಕೊಡಲಾಗುವುದು ಎಂದು ಆರೋಗ್ಯ ನಿರೀಕ್ಷಕರು ತಿಳಿಸಿದರು. ಪ್ರಥಮ ದರ್ಜೆ ಸಹಾಯಕ ಬಿ.ಎಸ್‌. ವೆಂಕಟೇಶ್‌ ವಂದಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next