Advertisement

ದಸರಾ ಟೂರ್

08:44 PM Sep 29, 2019 | Lakshmi GovindaRaju |

ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ದಸರಾ, ಸಾಂಸ್ಕೃತಿಕ ಹಬ್ಬ ನಿಜ. ಜೊತೆಗೆ ಹೂ ಹಣ್ಣು ತರಕಾರಿ ಮಾರಾಟಗಾರರಿಗೆ, ಹೋಟೆಲಿನವರಿಗೆ, ಟ್ರಾವೆಲ್‌ ಏಜೆನ್ಸಿಯವರಿಗೆ ಸೇರಿದಂತೆ ಅಲ್ಲಿನ ಸಮಸ್ತ ವ್ಯಾಪಾರಸ್ಥರಿಗೂ ಇದು ಹಬ್ಬದ ಸೀಸನ್‌!

Advertisement

ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ನಡೆಸುವ ನವರಾತ್ರಿ ದಸರಾ ಉತ್ಸವ ಸಂಪೂರ್ಣವಾಗಿ ಧಾರ್ಮಿಕ ಆಚರಣೆಗಳದ್ದಾಗಿರುತ್ತದೆ. ಸರ್ಕಾರ ನಡೆಸುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ಬೇರೆ ಬೇರೆ ಆಯಾಮಗಳೂ ಬೆರತುಕೊಂಡಿವೆ. ಹತ್ತು ದಿನಗಳ ಕಾಲ ನಡೆಯುವ ನಾಡಹಬ್ಬ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳುವುದೇ ಹಬ್ಬ.

ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುವ ಮೈಸೂರಿಗೆ, ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಬಂದು ಹೋಗುತ್ತಾರೆ. ಅದರಲ್ಲೂ ದಸರೆಯ ಕೊನೆಯ ದಿನ ಜಂಬೂಸವಾರಿ ಮೆರವಣಿಗೆ ನೋಡಲು ಸೇರುವ ಲಕ್ಷೋಪ ಲಕ್ಷ ಜನರ ಗೌಜು-ಗದ್ದಲದ ಮಧ್ಯೆ750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಗಜ ಗಾಂಭೀರ್ಯದಿಂದ ಸಾಗುವ ಅರ್ಜುನನ ನೇತೃತ್ವದ ಗಜಪಡೆಯನ್ನು ನೋಡುವುದೇ ಆನಂದ.

ವ್ಯಾಪಾರಸ್ಥರಿಗೆ ಖುಷಿ: ಮೈಸೂರು ದಸರೆಯೆಂದರೆ ಜಂಬೂಸವಾರಿ ಮಾತ್ರವಲ್ಲ. ಅದರೊಂದಿಗೆ ಪ್ರವಾಸೋದ್ಯಮ, ವ್ಯಾಪಾರ, ವಾಣಿಜ್ಯೋದ್ಯಮವೂ ಬೆಸೆದುಕೊಂಡಿದೆ. ಆಟೋ ಚಾಲಕರು, ಟಾಂಗಾವಾಲಾಗಳು, ಹೋಟೆಲ್‌ ಮಾಲೀಕರುಗಳಿಂದ ಹಿಡಿದು, ಎಲ್ಲ ಬಗೆಯ ವ್ಯಾಪಾರಸ್ಥರೂ ವರ್ಷಪೂರ್ತಿ ದಸರೆಯನ್ನು ಎದುರು ನೋಡುತ್ತಿರುತ್ತಾರೆ. ಸಹಜವಾಗಿಯೇ, ಇಡೀ ವರ್ಷದ ವ್ಯಾಪಾರ-ವಹಿವಾಟಿನ ಶೇ.30ರಿಂದ 40ರಷ್ಟು, ದಸರೆಯ ಒಂದು ತಿಂಗಳಲ್ಲಿ ನಡೆಯುವುದು ವಾಡಿಕೆಯಾಗಿದೆ.

ಮೈಸೂರಿಗೆ, ಆನೆಗಳು ಬಂದವು ಎಂದರೆ ದಸರಾ ಶುರುವಾಯಿತೆಂದು ಅರ್ಥ. ದಸರಾ ಆನೆಗಳು ನಡೆಸುವ ತಾಲೀಮು ನೋಡುವ ಸಲುವಾಗಿಯೇ ಒಂದಷ್ಟು ಪ್ರವಾಸಿಗರು ಬಂದು ಹೋಗುತ್ತಾರೆ. ಮೈಸೂರಿಗೆ ಪಕ್ಕದ ಕೇರಳದಿಂದ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಅಂಬಾ ವಿಲಾಸ ಅರಮನೆ, ಶ್ರೀಚಾಮರಾಜೇಂದ್ರ ಮೃಗಾಲಯ, ಕೇರಳ ಪ್ರವಾಸಿಗರ ನೆಚ್ಚಿನ ತಾಣ.

Advertisement

ಸಾರಿಗೆ ವಹಿವಾಟು ಜೋರು: ಪಂಚತಾರಾ ಹೋಟೆಲ್‌ಗ‌ಳಿಂದ ಹಿಡಿದು ಮೈಸೂರಿನ ಹೋಟೆಲ್‌ ಮತ್ತು ವಸತಿಗೃಹಗಳಲ್ಲಿ ಸುಮಾರು 6 ಸಾವಿರ ಕೊಠಡಿಗಳಿವೆ. ಬಹುತೇಕ ಕೊಠಡಿಗಳನ್ನು ಪ್ರವಾಸಿಗರು ಈಗಾಗಲೇ ಕಾದಿರಿಸಿದ್ದಾರೆ. ಮೈಸೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿದ ಪ್ರವಾಸಿಗರು, ಪಕ್ಕದ ಕೊಡಗು, ಮಂಡ್ಯ, ಹಾಸನ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ತೆರಳುವುದು ವಾಡಿಕೆ. ಬಹುತೇಕ ಪ್ರವಾಸಿಗರು ಟೂರ್ ಮತ್ತು ಟ್ರಾವೆಲ್ಸ್‌ ಏಜೆನ್ಸಿಗಳನ್ನು ಸಂಪರ್ಕಿಸಿ ಈಗಾಗಲೇ ವಾಹನಗಳನ್ನು ಮುಂಗಡ ಕಾದಿರಿಸಿದ್ದಾರೆ. ಜೊತೆಗೆ ಕೆಎಸ್ಸಾರ್ಟಿಸಿ ಕೂಡ ಗಿರಿದರ್ಶಿನಿ, ಜಲ ದರ್ಶಿನಿ, ದೇವ ದರ್ಶಿನಿ ಹೆಸರಿನಲ್ಲಿ ಪ್ಯಾಕೇಜ್‌ ಟೂರ್‌ಗಳನ್ನು ಆಯೋಜಿಸಿದೆ.

ಹೆಚ್ಚಿನ ಪ್ರವಾಸಿಗರು ಕುದುರೆಗಾಡಿಗಳಲ್ಲಿ ಕುಳಿತು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಇಂಥವರಿ ಗಾಗಿಯೇ ಅರಮನೆಯ ಸುತ್ತಮುತ್ತ, ಗ್ರಾಮಾಂತರ ಬಸ್‌ ನಿಲ್ದಾಣದ ಎದುರು, ಅಗ್ರಹಾರ ವೃತ್ತ, ಕುಕ್ಕರಹಳ್ಳಿ ಕೆರೆ ಮುಖ್ಯದ್ವಾರದ ಎದುರು ಸೇರಿದಂತೆ ಹಲವು ಕಡೆಗಳಲ್ಲಿ ಟಾಂಗಾ ನಿಲ್ದಾಣಗಳನ್ನು ಕಟ್ಟಲಾಗಿದೆ. ಇಲ್ಲಿಂದ ಟಾಂಗಾ ಏರಿ ನಗರ ಸುತ್ತುವುದೇ ಹಬ್ಬ.

ನಗರದಾದ್ಯಂತ ಶಾಪಿಂಗ್‌ ಮೇಳ: ದಸರಾ ಮಹೋತ್ಸವ ಉದ್ಘಾಟನಾ ದಿನವೇ ಆರಂಭವಾಗಿ 90 ದಿನಗಳ ಕಾಲ ನಡೆಯುವ ದಸರಾ ವಸ್ತುಪ್ರದರ್ಶನ, ಪ್ರವಾಸಿಗರ ನೆಚ್ಚಿನ ಶಾಪಿಂಗ್‌ ತಾಣ. ಇಲ್ಲಿ ವಸ್ತುಗಳನ್ನು ಕೊಳ್ಳುವ ಜತೆಗೆ ಮನರಂಜನೆ ಕಾರ್ಯಕ್ರಮವೂ ನಡೆಯುತ್ತದೆ. ಅಂಬಾವಿಲಾಸ ಅರಮನೆ ಮುಂಭಾಗ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ನಡೆಯುವ ಖ್ಯಾತನಾಮ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗುವುದಲ್ಲದೆ, ದಸರಾ ಆಹಾರ ಮೇಳದಲ್ಲಿ ನಾಲಗೆ ರುಚಿಯನ್ನೂ ತಣಿಸಿಕೊಳ್ಳಬಹುದು. ಪುಸ್ತಕ ಓದುವ ಹವ್ಯಾಸ ಇರುವವರಿಗೆ ದಸರಾ ಪುಸ್ತಕ ಮೇಳ ಕೂಡ ಇರಲಿದೆ. ಒಟ್ಟಾರೆ, ಪ್ರವಾಸಿಗರಿಗೆ ದಸರಾ ಜಂಬೂಸವಾರಿ ಮಾತ್ರವಲ್ಲ; ಬಹು ಆಯಾಮಗಳಲ್ಲಿ ತೆರೆದುಕೊಂಡಿದೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next