Advertisement

ದಸರೆ ಸಿರಿ ಬೆಳಕಿನಲಿ, ಕಾವೇರಿ ತೆನೆ ಬಳುಕಿನಲಿ…ನಿತ್ಯೋತ್ಸವ

07:57 AM Sep 22, 2017 | |

ಮೈಸೂರು: ಜಗತ್ತಿನ ಎಲ್ಲ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮೈಸೂರು, ನವರಾತ್ರಿಯ ಸೊಬಗಿಗೆ ಕಣ್ತೆರೆದು ನಿಂತಿದೆ. ನಿತ್ಯೋತ್ಸವ ಕವಿ ಪ್ರೊ.ನಿಸಾರ್‌ ಅಹ್ಮದ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ 405ನೇ ದಸರೆಗೆ ಚಾಲನೆ ನೀಡಿದ್ದಾರೆ. ಗುರುವಾರ ಬೆಳಗ್ಗೆ 9.05, ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಬೆಳ್ಳಿರಥದಲ್ಲಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದ ಇವರಿಬ್ಬರೂ, ಹತ್ತುದಿನಗಳ ಸಂಭ್ರಮ, ಸಡಗರಕ್ಕೆ ನಾಂದಿ ಹಾಡಿದರು.

Advertisement

ಬೆಟ್ಟಕ್ಕೆ ಆಗಮಿಸಿದ ಅತಿಥಿಗಳನ್ನು ಕಲಾತಂಡಗಳ ಮೂಲಕ ಬರಮಾಡಿಕೊಳ್ಳಲಾಯಿತು. ಸಿಎಂ ಸಿದ್ದರಾಮಯ್ಯ ಮತ್ತು ಕವಿ ನಿಸಾರ್‌ ಅಹ್ಮದ್‌ ಅವರು, ಚಾಮುಂಡಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತ್‌ ಅವರು ಸಿದ್ದರಾಮಯ್ಯ ಹಾಗೂ ನಿಸಾರ್‌ ಅಹ್ಮದ್‌ ಅವರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಕ್ರೀಮ್‌ ಕಲರ್‌ನ ಹೊಸ ಸೂಟಿನಲ್ಲಿ ಮಿಂಚುತ್ತಿದ್ದ ನಿಸಾರ್‌ ಅಹ್ಮದ್‌ ಅವರು, ದೇವಸ್ಥಾನದಿಂದ ಹೊರಬಂದು ಸಮಾರಂಭದ ವೇದಿಕೆ ಮೇಲೆ ಬಂದಾಗಲೂ ಹೂವಿನ ಹಾರವನ್ನು ಹಾಕಿಕೊಂಡೇ ಇದ್ದರು. ಇದೇ ವೇಳೆ ದಸರಾ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಹಸ್ತಾಂತರಿಸಿದರು. ಇದನ್ನು ಚೆಸ್‌ಗ್ರಾಂಡ್‌ ಮಾಸ್ಟರ್‌ ತೇಜ್‌ಕುಮಾರ್‌ಗೆ ನೀಡಿದರು.

ಭಾವುಕರಾದ ನಿತ್ಯೋತ್ಸವ ಕವಿ: ಜಾತೀ, ಧರ್ಮ, ಧಾರ್ಮಿಕತೆಯನ್ನು ಮೀರಿದ ಸಾಂಸ್ಕೃತಿಕ ಆಚರಣೆ ಮೈಸೂರು ದಸರಾ ಎಂದು ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಬಣ್ಣಿಸಿದರು. ಮೈಸೂರು ದಸರಾ ಆಚರಣೆಯಲ್ಲಿ ಧಾರ್ಮಿಕತೆ ಮೀರಿದ ಸಾಂಸ್ಕೃತಿಕತೆ ಇದೆ. ಇದರ ಬೇರು ಧಾರ್ಮಿಕವಾದರೂ ಟಿಸಿಲಿನಲ್ಲಿ ಸಾಂಸ್ಕೃತಿಕತೆ ಇದೆ. ಹಜ್‌ ಯಾತ್ರೆಯನ್ನು ಕೇವಲ ಮುಸ್ಲಿಮರು ಮಾಡುತ್ತಾರೆ. ಆದರೆ, ಇಲ್ಲಿ ಜಾತಿ, ಧರ್ಮವನ್ನು ಮೀರಿ ಎಲ್ಲರೂ ದಸರೆ ಆಚರಿಸುವ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ಪರಂಪರೆಯನ್ನು ಜಗತ್ತಿನಾದ್ಯಂತ ಸಾರುತ್ತಾರೆ ಎಂದರು.

ನಿತ್ಯೋತ್ಸವ ತಾಯಿ ನಿತ್ಯೋತ್ಸವ!
ನಾಡದೇವಿ ಮುಂದೆ ನಾಡಿನ ಹಾಡಾಗಿ ದಸರೆಗೆ ಚಾಲನೆ ಕೊಟ್ಟ ಕವಿ ನಿಸಾರ್‌ ಅಹ್ಮದ್‌ “ಹಲವೆನ್ನದ ಹಿರಿಮೆ, ಕುಲವೆನ್ನದ ಗರಿಮೆ’ ಸಾರುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಜೋಗದ ಬೆಳಕಿನಂತೆ ಕೋರೈಸಿದ್ದ ದಸರೆಯ ಭಕುತಿಯಲಿ, ಲೋಕಾವೃತ ಸೀಮೆಗೆ ಹರಡಿದ ಅದರ ಕಂಪಿನಲಿ, ಗತಸಾಹಸ ಸಾರುವ ಶಾಸನಗಳಂತೆ ಸಾಲಾಗಿದ್ದ ಗಜಗಳ ಗಾಂಭೀರ್ಯದ ನಡುವೆ, ಸಾಮರಸ್ಯದ ತೆನೆಯನ್ನು ಬಳುಕಿಸಿದರು. ದಸರೆಯೆಂಬ ಸರ್ವಧರ್ಮದ ಶಾಂತಿಯ ಉತ್ಸವ, ಅಲ್ಲಿ ತೇಲುವ ಕನ್ನಡ ಮನಸ್ಸುಗಳ ಉತ್ಸಾಹಕೆ ಕವಿ ಮನ ಭಾವುಕವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next