Advertisement

ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಗ್ಗತ್ತಲು!

10:07 AM May 09, 2018 | Team Udayavani |

ಬೈಕಂಪಾಡಿ: ವಾರ್ಷಿಕ 1 ಸಾವಿರ ಕೋ.ರೂ. ರಫ್ತು, 10 ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳು ಇರುವ ರಾಜ್ಯದಲ್ಲೇ 2ನೇ ಅತೀ ದೊಡ್ಡ ಕೈಗಾರಿಕಾ ವಲಯ ಎಂದು ಖ್ಯಾತಿಗೆ ಒಳಗಾಗಿರುವ ಬೈಕಂಪಾಡಿ ಕೈಗಾರಿಕಾ ಪ್ರದೇಶ ಬೀದಿ ದೀಪ ಸಮಸ್ಯೆಗಳಿಂದ ನರಳುತ್ತಿದೆ.

Advertisement

ಸಾವಿರಾರು ಕೋ.ರೂ. ಸರಕಾರಕ್ಕೆ ಆದಾಯ ತರುವ ಈ ಪ್ರದೇಶ ಮೂಲ ಸೌಕರ್ಯದಲ್ಲಿ ಮಾತ್ರ ಎಲ್ಲರನ್ನೂ ನಾಚುವಂತೆ ಮಾಡಿದೆ. ಜನರ ಹಕ್ಕೊತ್ತಾಯಕ್ಕೆ ಇದೀಗ ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಸಿದ್ದರೂ ಬೀದಿದೀಪವಿಲ್ಲದೆ ಮಹಿಳಾ ಕಾರ್ಮಿಕರ ಸಹಿತ ರಾತ್ರಿ ಪಾಳಿಯ ನೌಕರರು ಭಯದಿಂದಲೇ ಸಂಚರಿಸುವಂತಾಗಿದೆ. ರಾತ್ರಿ ಸಮಯ ವೇತನದೊಂದಿಗೆ ತೆರಳುವ ಕಾರ್ಮಿಕರನ್ನು ದೋಚುವ ಹಲವಾರು ಪ್ರಕರಣಗಳು ಸಂಭವಿಸಿದ್ದು, ಇದೀಗ ಇಲ್ಲಿನ ಬೀದಿದೀಪ ಉರಿಯದಿರುವುದು ಕಳ್ಳರಿಗೆ ವರದಾನವಾಗಿದೆ.

ಸುರಕ್ಷತೆ ಇಲ್ಲ
ಕೈಗಾರಿಕೆ ವಲಯದಲ್ಲಿ ಹಾಕಿದ ಬೀದಿ ದೀಪಗಳು ಇದ್ದೂ ಇಲ್ಲದಂತಾಗಿದೆ. ದೂರದಲ್ಲಿ ಅಲ್ಲೊಂದು ಇಲ್ಲೊಂದು ದೀಪಗಳು ಉರಿಯುತ್ತಿದ್ದರೂ ರಾತ್ರಿ ಹೊತ್ತು ಕಾರ್ಮಿಕರ ಸುರಕ್ಷತೆಯ ಭರವಸೆ ನೀಡುತ್ತಿಲ್ಲ. ರಾತ್ರಿ ಹೊತ್ತು ಅಪರಿಚಿತ ವ್ಯಕ್ತಿಗಳು ಕಾರ್ಮಿಕರ ಸೊತ್ತುಗಳನ್ನು ಲೂಟಿ ಮಾಡಿದ, ಗುಜರಿಗಾಗಿ ಕಳ್ಳತನದಂತಹ ಹಲವು ಘಟನೆಗಳು ನಡೆಯುತ್ತಿವೆ. ರಸ್ತೆ ಬದಿ ಹಾಕಿರುವ ವಿದ್ಯುತ್‌ ಕಂಬಗಳೂ ನಿರ್ವಹಣೆಯಿಲ್ಲದೆ ಧರಾಶಾಹಿಯಾಗುತ್ತಿವೆ. ಕೋಟ್ಯಂತರ ರೂ. ಟೆಂಡರ್‌ ವಹಿಸಿ ಬೀದಿ ದೀಪ ಅಳವಡಿಕೆ ಯೋಜನೆ ರೂಪಿಸಿದ್ದರೂ ದೀಪ ಮಾತ್ರ ಎಲ್ಲೂ ಕಾಣುತ್ತಿಲ್ಲ.

ಶುಚಿತ್ವಕ್ಕೂ ಧಕ್ಕೆ
ಕೆಐಎಡಿಬಿ ಅಧೀನದಲ್ಲಿ ಇರುವ ಈ ಕೈಗಾರಿಕಾ ವಲಯ ದೊಡ್ಡ ಹಾಗೂ ಸಣ್ಣ ಉತ್ಪಾದನೆ, ನಿರ್ವಹಣೆ, ಸೇವಾ ಕಂಪೆನಿಗಳನ್ನು ಹೊಂದಿದೆ. ಹಗಲು ರಾತ್ರಿ ಬರುವ ಲಾರಿಗಳು ನೋ ಪಾರ್ಕಿಂಗ್‌ ಪ್ರದೇಶದಲ್ಲಿ ತಂಗುತ್ತಿದ್ದು ನಿತ್ಯ ಕೆಲಸಕ್ಕೆ ಸಾಗುವ ಕಾರ್ಮಿಕರಿಗೆ ಅಡೆತಡೆ ಉಂಟು ಮಾಡುತ್ತಿವೆ. ಲಾರಿ ಚಾಲಕರಿಗೆ ನಿರ್ವಾಹಕರಿಗೆ ಶೌಚಾಲಯದ ವ್ಯವಸ್ಥೆಯಿಲ್ಲದೆ ರಸ್ತೆ ಬದಿಯೇ ನಿತ್ಯಕರ್ಮ ಪೂರೈಸುತ್ತಿರುವುದು ಶುಚಿತ್ವಕ್ಕೂ ಧಕ್ಕೆ ತರುತ್ತಿದೆ. 

ಡಿ.ಸಿ. ಆದೇಶಕ್ಕೆ ಕಿಮ್ಮತ್ತಿಲ್ಲ 
ಈ ಹಿಂದೆ ಕೈಗಾರಿಕಾ ವಲಯದಲ್ಲಿ ಘನವಾಹನಗಳ ಅನಧಿಕೃತ ಪಾರ್ಕಿಂಗ್‌ ನಿಷೇಧಿ ಸಿ ಹಿಂದಿನ ಜಿಲ್ಲಾ ಧಿಕಾರಿ ಎ.ಬಿ. ಇಬ್ರಾಹಿಂ ಆದೇಶ ಹೊರಡಿಸಿದ್ದರು. ಆದರೆ ಕೆಲವು ದಿನಗಳ ಕಾಲ ಮಾತ್ರ ಚಾಲ್ತಿಯಲ್ಲಿದ್ದ ಈ ಆದೇಶ ಇದೀಗ ಮೂಲೆ ಸೇರಿದೆ. ಯಥವತ್ತಾಗಿ ಮತ್ತೆ ಘನಲಾರಿಗಳು ರಸ್ತೆ ಬದಿಕಾಣಸಿಗುತ್ತವೆ. 

Advertisement

ನೀತಿ ಸಂಹಿತೆಯಿಂದ ವಿಳಂಬ
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಹತ್ತು ದಿನಗಳಿಂದ ಬೀದಿ ದೀಪದ ಸಮಸ್ಯೆ ಆಗಿದೆ. ಈಗಾಗಲೇ ಕೈಗಾರಿಕಾ ಪ್ರದೇಶದ ಪ್ರಮುಖ ಜಂಕ್ಷನ್‌ ಸಹಿತ ಎಲ್ಲೆಡೆ ಸುಮಾರು 180 ಎಲ್‌ಇಡಿ ಲೈಟ್‌ ಕಂಬ ಅಳವಡಿಸಿ ಬೀದಿ ದೀಪ ಒದಗಿಸಲು ಟೆಂಡರ್‌ ಆಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸ್ವಲ್ಪ ವಿಳಂಬವಾಗಿದೆ.
– ಗೌರವ್‌ ಹೆಗ್ಡೆ, ಅಧ್ಯಕ್ಷರು, ಸಣ್ಣ ಕೈಗಾರಿಕೆ ಸಂಘ

ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next