Advertisement

ಪ್ರವಾಸಿಗರನ್ನು ಕೈಬೀಸಿ ಕರೆಯೋ “ದಾರ್ಜಿಲಿಂಗ್” ಗಿರಿಧಾಮ

10:32 AM Jan 28, 2021 | Team Udayavani |

ಸಂಸಾರ ಸಮೇತ ಈಶಾನ್ಯ ಭಾರತಕ್ಕೆ ಪ್ರವಾಸ ಹೋಗುವ ಅವಕಾಶ ದೊರೆಯಿತು. ಖಂಡಿತ ನಾವು ಭೇಟಿ ಮಾಡಿದ ಕೆಲವು ಸ್ಥಳಗಳಲ್ಲಿನ ಪ್ರವಾಸಿ ತಾಣಗಳ
ವಿವರಗಳನ್ನು ನೀಡುವುದಿಲ್ಲ. ಈಗಂತೂ ಗೂಗಲಿಸಿದರೇ, ಎಲ್ಲ ವಿವರಗಳು ಕೈಗೆಟಕುತ್ತವೆ. ನಮ್ಮ ಪ್ರವಾಸದ ಕೆಲವು ಸಣ್ಣ, ಸಣ್ಣ ಸಂಗತಿಗಳತ್ತ ತಮ್ಮ ಚಿತ್ತವನ್ನು ತಿರುಗಿಸಲು ಪ್ರಯತ್ನಿಸುತ್ತೇನೆ.

Advertisement

ಕೆಲವು ತಿಂಗಳುಗಳಿಂದ “ಹಮ್‌ ಸಫ‌ರ್‌’ ಎಂಬ ಹೊಸ ರೈಲುಗಾಡಿಗಳ ಮೂಲಕ ಕೆಲವು ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಬೆಂಗಳೂರು- ನ್ಯೂ
ಜಲಪಾಯ್‌ಗಾರಿವರೆಗಿನ ನಮ್ಮ ಪಯಣ ಸದ್ಯ ಆಂಗ್ಲ ಭಾಷೆಯ “ಸಫ‌ರ್‌’ಗೆ ಒಳಗಾಗಲಿಲ್ಲ. ಗಾಡಿ ಬಿಡಲು ಹತ್ತು ನಿಮಿಷಗಳಿರುವಾಗ ಒಬ್ಬ ದಷ್ಟಪುಷ್ಟ ಮಧ್ಯವಯಸ್ಕ ವ್ಯಕ್ತಿ ನಮ್ಮೆದುರಿಗಿನ ಸೇಟಿನಲ್ಲಿ ದೊಪ್ಪನೆ ಕುಳಿತರು.

ರೈಲು ಹೊರಟ ಸುಮಾರು ಒಂದು ತಾಸಿನ ನಂತರ ನಮ್ಮೆದುರಿಗಿದ್ದ ವ್ಯಕ್ತಿ ಮೇಲಿನ ಬರ್ತ್‌ ನನ್ನದೆಂದು ತಿಳಿದು, “ಮೇಲೆ ಹೋಗಿ ಸ್ವಲ್ಪ ಮಲಗ್ತಿನಿ’ ಎಂದು ವಿನಂತಿಸಿದರು. ನಾನು ಹೂಂಗುಟ್ಟಿದೆ. ಪೂರ್ತಿ ಎರಡು ತಾಸಿನ ಗಡದ್ದಾದ ನಿದ್ದೆಯ ತರುವಾಯ ಕೆಳಗೆ ಇಳಿದು ಬಂದ ಆ ಮಹಾಶಯ ಊಟದ ಡಬ್ಬಿಯನ್ನು ತೆಗೆದು ಪೂರಿಭಾಜಿಯನ್ನು ಸವಿಯಲು ತೊಡಗಿದರು. ಅವರು ಆಸ್ವಾದನೆಯ ಸಾಕಾರಮೂರ್ತಿಯಂತಿದ್ದರು! ಚಪ್ಪರಿಸಿ ತಿನ್ನುವಾಗ ಅವರಿಂದ ಹೊರಬರುತ್ತಿದ್ದ ಸುನಾದಕ್ಕೆ ಮಾಯಾಬಜಾರ್‌ ತೆಲುಗು ಸಿನೆಮಾದ ಘಟೋತ್ಕಚನೂ ಆಹಾ ಎನ್ನುತ್ತಿದ್ದನೇನೋ! ನಂತರ ಎರಡು ಮೊಸರಿನ ಡಬ್ಬಿಗಳನ್ನು ಖಾಲಿ ಮಾಡಿದರು. ಸಂಜೆ ಅವರು ಚಹಾ ಸೇವಿಸುವ ಪರಿಯನ್ನು ಕಂಡಾಗ ಅಮೃತವನ್ನೇ ಸವಿಯುತ್ತಿದ್ದಾರೇನೋ ಎಂದೆನಿಸಿತು! ಪುನಃ ಒಂದು ರೌಂಡ್‌ ಗಡದ್ದಾದ ನಿದ್ದೆ ಮಾಡಿದ ಆ ಭೂಪ ಕೊಲ್ಕತಾ ತಲುಪುವವರೆಗೆ ನಮಗೆ ಪರಿಪರಿಯ ಆಸ್ವಾದನಾ ವಿಧಾನಗಳನ್ನು ತಿಳಿಸಿದ್ದರು! ಅವರ ದುಂಡಗಿನ ದೇಹದ, ಈಸಿ-ಗೊಯಿಂಗ್‌ ಪ್ರವೃತ್ತಿಯ ಹಿಂದಿದ್ದ ಕಾರಣ ನಮಗೆ ತಿಳಿಯಿತು!

ಡಾರ್ಜಿಲಿಂಗ್‌ನಲ್ಲಿ ಸೂಕ್ತ ಖಾನಾವಳಿಯ ಬೇಟೆಯಲ್ಲಿ¨ªಾಗ ಹೇಸ್ಟಿ-ಟೇಸ್ಟಿ ಎಂಬ ಗಮನ ಸೆಳೆಯುವ ರೆಸ್ಟೋರೆಂಟ್‌ ಗೋಚರಿಸಿತು. ರುಚಿಕರ ವಾದ ಖಾದ್ಯಗಳನ್ನು ಬೇಗನೆ ಕಬಳಿಸಿ ಜಾಗ  ಖಾಲಿಮಾಡಬೇಕೆಂದು ಸೂಚ್ಯವಾಗಿ ಹೆಸರಿನಲ್ಲಿ ತಿಳಿಸಲಾಗಿದೆಯೇನೋ ಎಂಬ ವಿಚಾರ ಮನದಲ್ಲಿ ಮೂಡಿತು. ಅದೊಂದು ದೊಡ್ಡ ದರ್ಶಿನಿಯಾಗಿತ್ತು (ಸ್ವಸಹಾಯ ಪದ್ಧತಿಯ ಖಾನಾವಳಿಯನ್ನು ಬೆಂಗಳೂರಿನ ಕಡೆ ದರ್ಶಿನಿ ಎಂದೇ ಕರೆಯುತ್ತಾರೆ). ನಾವು ಹಿಂದಿನ
ಬಾರಿ ಈಶಾನ್ಯ ಭಾರತದ ಕೆಲವು ಸ್ಥಳಗಳಿಗೆ ಭೇಟಿ ಮಾಡಿದಾಗ “ಮೊಮೊ’ಗಳನ್ನು ಸವಿದಿದ್ದೆವು. ಮೈದಾದಿಂದ ತಯಾರಿಸಲ್ಪಡುವ ಈ ಖಾದ್ಯವನ್ನು ಖಾರದ ಮೋದಕ ಎನ್ನಬಹುದು. ಹೂರಣದ ಬದಲು ಎಲೆಕೋಸು, ಕ್ಯಾರೆಟ್‌ ಇರುತ್ತವೆ. ಸರಿ, ನಾವು ಇತರ ಒಂದೆರಡು ಖಾದ್ಯಗಳ ಜೊತೆ ಮೊಮೊ ಆರ್ಡರ್‌ ಮಾಡಿದೆವು. ಮೊಮೊ ಹೆಸರು ಕೇಳಿದಾಕ್ಷಣ ಆ ರೆಸ್ಟೋರಂಟ್‌ನ ಮಾಲೀಕ “ಮೊಮೋನಾ?’ ಎಂದು ಉದ್ಗಾರ ತೆಗೆದು ಒಂದು ತರಹ ನಕ್ಕ! ಮತ್ತೂಂದು ಬಾರಿಯೂ ಹೀಗೇ ಆಯಿತು! ಮೊಮೊ ಆ ಭಾಗದ ಸ್ಟೇಪಲ್‌ ಫ‌ುಡ್‌ ಮತ್ತು  ಬೆಲೆಯೂ ಕಡಿಮೆ. ವ್ಯಾವಹಾರಿಕ ದೃಷ್ಟಿಯಿಂದ ಆತನಿಗೆ ಮೊಮೊ ಅಪಥ್ಯವಾಗಿತ್ತೋ ಏನೋ!

ನಾವು ಹುಲುಮಾನವರಲ್ಲವೆ, ಬೇರೊಂದು ಹೊಟೆಲ್‌ಗೆ ಹೋಗೋಣ ಎಂದು ನಿರ್ಧರಿಸಿ ಅದರ ತಲಾಶ್‌ನಲ್ಲಿ¨ªೆವು. ಮೊದಲನೆಯ ಅಂತಸ್ತಿನಲ್ಲಿದ್ದ ಒಂದು ರೆಸ್ಟೋರೆಂಟ್‌ನ ಒಳಹೊಕ್ಕೆವು. ಠಾಕುಠೀಕಾದ  ಸಮವಸ್ತ್ರಗಳನ್ನು ಧರಿಸಿದ ಸಿಬ್ಬಂದಿ, ಲಿಪ್‌ಸ್ಟಿಕ್‌ನಿಂದ ಕಂಗೊಳಿಸುತ್ತಿದ್ದ ಸ್ವಾಗತಕಾರಣಿಯ ಮುಗುಳ್ನಗು
ಕಂಡು ನಮಗೆ ಏನಪ್ಪಾ… ಇದು. ಈ ಹೋಟೆಲ್‌ ಮಚ್ಚಿನ ಪ್ರಹಾರ ನೀಡುತ್ತೋ ಅಥವಾ ಲಾಂಗೋ ಎಂಬ ಅಂಜಿಕೆ ಮನದಲ್ಲಿ ಮೂಡಿತು. ಸರಿ, ಒಳಗೆ
ಹೋಗಿ ಮೆನುಕಾರ್ಡ್‌ ನೋಡಿದಾಗ ಎದೆಯ ಡವಡವ ರಾಜಧಾನಿ ರೈಲಿನ ವೇಗವನ್ನು ಮೀರಿಸಿತ್ತು. ಸರಿ ಮೂರು ಬ್ರೆಡ್‌ ಪೀಸುಗಳನ್ನು ಬೆಣ್ಣೆ/ಕೆಚಪ್‌ ಜೊತೆ ಸೇವಿಸಿದೆವು. ಬರೋಬ್ಬರಿ 130 ರೂ. ಬಿಲ್ಲಾಗಿತ್ತು. ಅಲ್ಲಿನ ಸಪ್ಲಾಯರ್‌ ಮುಖದಲ್ಲಿ ನಗುವಿದ್ದರೂ ಉದಾಸ ಭಾವವೂ ಮನೆ ಮಾಡಿತ್ತು!

Advertisement

ಡಾರ್ಜಿಲಿಂಗ್‌ ಸಮೀಪದ ಘೂಮ್‌ ರೈಲು ನಿಲ್ದಾಣ ಒಂದು ಕಾಲಕ್ಕೆ ವಿಶ್ವದ ಅತಿ ಹೆಚ್ಚು ಎತ್ತರದ್ದು ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಅಂದ ಹಾಗೆ, ನ್ಯೂ
ಜಲಪಾಯ್‌ಗಾರಿಯಿಂದ ಡಾರ್ಜಿಲಿಂಗ್‌ಗಿರುವ ನಾರೊಗೇಜ್‌ ರೈಲ್ವೆ ವ್ಯವಸ್ಥೆಯನ್ನು ಒಳಗೊಂಡ ಡಾರ್ಜಲಿಂಗ್‌ ಹಿಮಾಲಯನ್‌ ರೈಲ್ವೆ ವಿಶ್ವ ಪಾರಂಪರಿಕ
ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಘೂಮ್‌ ರೈಲು ನಿಲ್ದಾಣದಲ್ಲಿ ಒಂದು ಸಣ್ಣ ವಸ್ತುಸಂಗ್ರಹಾಲಯವಿದೆ. ಇದು ಟೂರಿಸ್ಟ್‌ ಮ್ಯಾಪ್‌ನಲ್ಲಿ ಅಷ್ಟೇನೂ ಜನಪ್ರಿಯತೆ
ಪಡೆದಿಲ್ಲ. ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು, ಆತ ರೈಲ್ವೆ ಸಿಬ್ಬಂದಿಯಿರಬಹುದೆಂದು ಎಣಿಸಿ ವಸ್ತುಸಂಗ್ರಹಾಲಯದ ಬಗೆಗೆ ವಿಚಾರಿಸಿದೆವು. ನಮ್ಮ ಊಹೆ ಸರಿಯಾಗಿತ್ತು. ಆತ ಕಚೇರಿಯ ಒಳಗೆ ಹೊಕ್ಕು, ನಮಗೆ ಪ್ರವೇಶದ ಟಿಕೇಟುಗಳನ್ನು ನೀಡಿದರು. ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯ ಈ ಪರ್ವತ ಪ್ರದೇಶದ ರೈಲ್ವೆ ವ್ಯವಸ್ಥೆಯ ಝಳಕನ್ನು ವಸ್ತುಸಂಗ್ರಹಾಲಯದಲ್ಲಿ ಕಂಡೆವು. ಅಲ್ಲಿ ಪ್ರದರ್ಶಿಸಿದ್ದ ಛಾಯಾಚಿತ್ರಗಳು, ವಸ್ತುಗಳು ನಮ್ಮ ಮುಂದೆ ಗತಕಾಲವನ್ನು ತೆರೆದಿಟ್ಟವು. ಹೊರಬಂದಾಗ ನಮಗೆ ಟಿಕೆಟ್‌ ಕೊಟ್ಟ ವ್ಯಕ್ತಿ ಸಿಕ್ಕಿದರು. ನಾವು ವಸ್ತುಸಂಗ್ರಹಾಲಯದ ಬಗೆಗೆ ತಾರೀಫ್ ಮಾಡಿದೆವು. ಆ ಬಂಗಾಲಿ ಬಾಬು ತನಗೆ ಈ ಸಂಗತಿ ಸಂಬಂಧಿಸಿಲ್ಲವೆಂಬ ರೀತಿಯಲ್ಲಿ ಭಿಮ್ಮನೆ ಮುಖ ಹೊತ್ತು, “ಪಾನ್‌’ ಸವಿಯುತ್ತ ತನ್ನ ಸಹೋದ್ಯೋಗಿಗೆ ಏನೋ ಕೆಲಸ ಮಾಡಲು ತಿಳಿಸಿದರು. ಅವರ ಇಂಗಿತ ಅರಿತ ನಾವು ಜಾಗ ಖಾಲಿ ಮಾಡಿದೆವು!

ನಾವು ಗ್ಯಾಂಗ್ಟಕ್‌ನಲ್ಲಿದ್ದ ಸಮಯದಲ್ಲಿ ಅಲ್ಲಿನ ಆಡಳಿತ ಪಕ್ಷವಾದ ಸಿಕ್ಕಿಂ ಡೆಮೊಕ್ರೆಟಿಕ್‌ ಫ್ರಂಟ್‌ ತನ್ನ ರಜತ ಮಹೋತ್ಸವವನ್ನು ಆಚರಿಸುತ್ತಿತ್ತು. ನಮ್ಮ ವಾಸ್ತವ್ಯದ ಸಮೀಪದಲ್ಲಿದ್ದ ಸ್ಟೇಡಿಯಂನಲ್ಲಿ ಕೆಲವು ಕಾರ್ಯಕ್ರಮಗಳು ಜರುಗಿದವು. ಆದರೆ  ಅವುಗಳಿಂದ ಅಡಚಣೆಗಳೇನೂ ಆಗಲಿಲ್ಲ! ಒಂದು ರಾತ್ರಿ
ಅದೇ ಪ್ರದೇಶದಲ್ಲಿದ್ದ ಒಂದು ಸಣ್ಣ ಫ‌ಲಹಾರ ಮಂದಿರಕ್ಕೆ ಹೋದೆವು. ಸಸ್ಯಾಹಾರಿ ತಿಂಡಿ ಏನಿದೆಯೆಂದು ವಿಚಾರಿಸಿದಾಗ, ಮೇಲ್ವಿಚಾರಕ/ಬಾಣಸಿಗನಾಗಿದ್ದ ಹದಿಹರೆಯದ ಯುವಕ, “ವೆಜ್‌ ತುಕ್ಟ’ ತಯಾರಿಸಿ ಕೊಡುತ್ತೇನೆ ‘ಎಂದ. ನಾನು, “ತುಪ್ಕ’ ಕೊಡಿ ಎಂದೆ. ಆತ ನಸುನಕ್ಕು “ಅದು ತುಕ್ಟ³… ತುಪ್ಕ ಅಲ್ಲ’
ಎಂದು ಹೇಳಿ, ನಾನು ಸರಿಯಾಗಿ ಉಚ್ಚಾರಣೆ ಮಾಡುವವರೆಗೆ ಆತ ಬಿಡಲಿಲ್ಲ! ನಾವು ಬಿಸಿ ಬಿಸಿ ತುಕ್ಟ³ ಆಸ್ವಾದಿಸುತ್ತಿದ್ದಾಗ, ಐವರು ಸಿಕ್ಕೀಮಿ ವ್ಯಕ್ತಿಗಳು ಒಳಬಂದು ಯಾವುದೋ ನಾನ್‌ ವೆಜ್‌ ಡಿಶ್‌ ಆರ್ಡರ್‌ ಮಾಡಿದರು. ತುಸು ಸಮಯದ ಬಳಿಕ ಅವರಲ್ಲೊಬ್ಬರು, “ನಿಮಗೆ ಬಂಗಾಲಿ ಭಾಷೆ ಮಾತನಾಡಲು ಬರುತ್ತದೆಯೆ?’ ಎಂದು ಆಂಗ್ಲ ಭಾಷೆಯಲ್ಲಿ ವಿಚಾರಿಸಿದರು.

“ಇಲ್ಲ’ ಎಂದೆವು. ಕೂಡಲೇ ಆತ, “ಸಾರಿ, ನಿಮ್ಮನ್ನು ಉದ್ದೇಶಿಸಿ ನಾನು ಕೀಳು ಭಾಷೆಯನ್ನು ಬಳಸಿದೆ!’ ಎಂದರು. ನಮಗೆ ತಲೆಬುಡ ತಿಳಿಯಲಿಲ್ಲ. ಮಿಕಮಿಕ ನೋಡಿದೆವು. ಆತ ನಾವು ಎಲ್ಲಿಂದ ಬಂದಿದ್ದೇವೆಂದು ವಿಚಾರಿಸಿದರು. “ಬೆಂಗಳೂರು’ ಎಂದರಿತು, “ನಾನು ನಿಮ್ಮ ಟೇಬಲ್‌ಗೆ ಬರಬಹುದಾ?’ ಎಂದು ವಿನಂತಿಸಿದರು. ತನ್ನ ಪ್ಲೇಟನ್ನು ಹಿಡಿದು ನಮ್ಮ ಟೇಬಲ್‌ ನಲ್ಲೇ ಕುಳಿತರು. ತನ್ನಿಂದಾದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಹೀಗೆ ಮಾಡಿದರೋ ಅಥವಾ ಸಿಕ್ಕಿಂ ಜನರ ಸ್ನೇಹ ಪ್ರವೃತ್ತಿಯನ್ನು ಪ್ರದರ್ಶಿಸಿದರೋ ತಿಳಿಯಲಿಲ್ಲ. ಆತ ಮಾತನಾಡುತ್ತ, “ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಬಂದಿದ್ದೆ. ಅಲ್ಲಿನ ರಾಕ್‌ ಸಂಗೀತದ ಕಾರ್ಯಕ್ರಮಗಳೆಂದರೇ ನನಗೆ ಇಷ್ಟ. ನಿಮ್ಮ ಕನ್ನಡ ಚಲನಚಿತ್ರರಂಗದ ಹೀರೊ ಗಣೇಶ್‌ ಕೂಡ ಗೊತ್ತು’ ಎಂಬಿತ್ಯಾದಿ ಮಾತುಗಳನ್ನು ಆಡಿದರು. ಆತ ಸಿಕ್ಕಿಂನ ಹಳ್ಳಿಯೊಂದರ ರೈತರಾಗಿದ್ದರು. ಆತನ ವೇಷಭೂಷಣ ನೋಡಿದರೇ ಹಾಗೆಂದು ತಳಿಯುತ್ತಿರಲಿಲ್ಲ. ವಿದೇಶಗಳಲ್ಲಿ ಸುತ್ತಿದ ಅನುಭವವಿದ್ದ ಆತ ಸಿಕ್ಕೀಂ ಡೆಮೊಕ್ರೆಟಿಕ್‌ ಫ್ರಂಟ್‌ನ ಕಾರ್ಯಕರ್ತರಾಗಿದ್ದರು. ಕೊನೆಗೆ ಟಿಪಿಕಲ್‌ ಕನ್ನಡ ಶೈಲಿಯಲ್ಲಿ ನನ್ನ ಹೆಂಡತಿಯನ್ನುದ್ದೇಶಿಸಿ, “ಅಮ್ಮ… ನಾನು ಹೋಗಿ ಬರುತ್ತೇನೆ’ ಎಂದ್ಹೇಳಿ ವಿದಾಯ ಹೇಳಿದರು. ಅಂದು ಚಳಿ ಇದ್ದರೂ, ಈ ಪ್ರಸಂಗ ಬೆಚ್ಚನೆ ಅನುಭವ ನೀಡಿತ್ತು!

*ಮ. ಶ್ರೀ. ಮುರುಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next