Advertisement

ಕನಸು ಕಾಣುವ ಧೈರ್ಯ ಮಾಡಿ! ಆಕಾಶದಲ್ಲಿದೆ ಅನಂತ ಅವಕಾಶ…

02:21 AM Jul 25, 2017 | |

(ಪ್ರೊ. ಉಡುಪಿ ರಾಮಚಂದ್ರ ರಾವ್‌ ಅವರು ಹಲವು ವೇದಿಕೆಗಳಲ್ಲಿ ಮಾಡಿದ ಭಾಷಣ ಮತ್ತು ಸಂದರ್ಶನಗಳ ಆಯ್ದ ಭಾಗವಿದು. ತಮ್ಮ ಬಾಲ್ಯ, ಶಿಕ್ಷಣ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ಯಶಸ್ವಿ ಯಾನದ ಬಗ್ಗೆ ಅವರಾಡಿದ ಮಾತುಗಳಿಲ್ಲಿವೆ)

Advertisement

ನಾನು ಹುಟ್ಟಿದ್ದು ಅದಮಾರಿನಲ್ಲಿ. ಅದು ಅಮ್ಮನ ತವರು. ನನ್ನ ತಾಯಿಗೆ ನಾನು ಏನಾದರೂ ಮಾಡಿ ಬಹಳ ಮುಂದೆ ಬರಬೇಕು ಎನ್ನುವ ಆಸೆಯಿತ್ತು. ನಮ್ಮದು ಬಡ ಕುಟುಂಬವಾಗಿತ್ತು. ಆಗ ಅಪ್ಪನ ಬಳಿ ಸಂತೆಕಟ್ಟೆಯ ಕೆಳಗೆ ಎರಡು ಎಕರೆ ಗದ್ದೆ ಮತ್ತು ಒಂದು ಮನೆ ಮಾತ್ರ ಇತ್ತು. 

ನನ್ನ ಕುಟುಂಬದಲ್ಲಿ ಅದುವರೆಗೂ 8ನೇ ತರಗತಿ ಪಾಸು ಮಾಡಿದವರು ಯಾರೂ ಇರಲಿಲ್ಲ. ಆದರೆ ಅಮ್ಮ-ಅಪ್ಪನಿಗೆ ಹೇಗಾದರೂ ಮಾಡಿ ನನ್ನನ್ನು 10ನೇ ತರಗತಿ ಪಾಸು ಮಾಡಿಸಬೇಕೆಂಬ ಆಸೆಯಿತ್ತು. ಅದರ ಆಚೆಗೆ ಏನು ಓದಿಸಬೇಕೆಂದು ಪಾಪ ಅವರಿಬ್ಬರಿಗೆ ಗೊತ್ತೂ ಇರಲಿಲ್ಲ.  ನನಗಿನ್ನೂ ನೆನಪಿದೆ. ಬಳ್ಳಾರಿಯಲ್ಲಿದ್ದ ದಿನಗಳವು. ಅಲ್ಲಿ ಚೆನ್ನಬಸ್ಸಪ್ಪ ಎನ್ನುವ ಮಾಸ್ತರರಿದ್ದರು. ಸುಮಾರು 30-35 ಹುಡುಗರಿಗೆ ಪ್ರೈವೇಟ್‌ ಪಾಠ ಹೇಳಿಕೊಡುತ್ತಿದ್ದರು. ಬಹಳ ಒಳ್ಳೆಯ ಮನುಷ್ಯ. ಮನೆಯವರ ಜೊತೆ ಮಾತಾಡಿ ಒಳ್ಳೆಯ ಶಾಲೆಯೊಂದರಲ್ಲಿ ನನ್ನನ್ನು 4ನೇ ಕ್ಲಾಸಿಗೆ ಮುತುವರ್ಜಿ ವಹಿಸಿ ಸೇರಿಸಿದರು. ಆದರೆ ಅಡ್ಮಿಷನ್‌ ಮಾಡಿಸುವಾಗ ತುಸು ಎಡವಟ್ಟು ಮಾಡಿಬಿಟ್ಟರು. ನನ್ನ ತಂದೆಯ ಹೆಸರು ಲಕ್ಷ್ಮೀನಾರಾಯಣ ಆಚಾರ್ಯ. ಆದರೆ ನನ್ನ ಹೆಸರಿನ ಮುಂದೆ ಚೆನ್ನಪ್ಪ ಮಾಸ್ತರ್‌ “ರಾವ್‌’ ಅಂತ ಬರೆಸಿಬಿಟ್ಟರು. ಆಗಿನಿಂದ ನನ್ನ ಹೆಸರು ರಾವ್‌ ಆಗಿಹೋಯಿತು. ಮನೆಯವರೆಲ್ಲ ಆಚಾರ್ಯ, ನಾನೊಬ್ಬನೇ ರಾವ್‌. ಕೊನೆಯವರೆಗೂ ರಾಮಚಂದ್ರರಾವ್‌ ಎನ್ನುವ ಹೆಸರೇ ನನ್ನ ಜೊತೆಗೆ ಉಳಿದುಬಿಟ್ಟಿತು. 

ಒಮ್ಮೆ ನಾನು ಶಾಲೆಯಲ್ಲಿ ಮಾಸ್ತರರ ಹತ್ತಿರ ಬೈಯಿಸಿಕೊಂಡಿದ್ದೆ. ಇದೇ ಸಿಟ್ಟಿನಲ್ಲಿ “ಇನ್ನೊಮ್ಮೆ ಶಾಲೆಗೆ ಹೋಗೋದಿಲ್ಲ’ ಎಂದು ನಿರ್ಧರಿಸಿ ಮನೆಗೆ ಬಂದು ಕುಳಿತೆ. ಆಗ ಮೊದಲ ಬಾರಿ ಅಮ್ಮ ನನಗೆ ಪೆಟ್ಟುಕೊಟ್ಟಳು. ಮನೆಯಿಂದ ಶಾಲೆ ಸುಮಾರು 200 ಗಜ ಅಂತರದಲ್ಲಿತ್ತು. ನನ್ನನ್ನು ಮನೆಯಿಂದ ಶಾಲೆಯವರೆಗೂ ದರದರನೆ ಹೊಡೆಯುತ್ತಾ ಎಳೆದುಕೊಂಡು ಹೋದಳು. “”ನಿನ್ನನ್ನ ಶಾಲೆಗೆ ಕಳಿಸಿ ಮುಂದೆ ತರಬೇಕು ಅಂತ ಆಸೆ ಪಟ್ಟರೆ ನೀನು ಮನೆಯಲ್ಲಿ ಕುಳಿತು ಜೀವನ ಹಾಳು ಮಾಡಿಕೊಳ್ತೀಯಾ” ಅಂತ ಅಮ್ಮ ಅವತ್ತು ಬಹಳ ಸಿಟ್ಟಾದಳು. ಆ ಘಟನೆಯ ನಂತರ ನನ್ನ ತಲೆಯಲ್ಲಿ ಶಾಲೆ ಬಿಡಬೇಕು ಎಂಬ ಆಲೋಚನೆ ಮತ್ತೂಮ್ಮೆ ಬರಲೇ ಇಲ್ಲ. 

ಬಳ್ಳಾರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ನಾವು ಉಡುಪಿಗೆ ವಾಪಸ್‌ ಆದೆವು, ಉಡುಪಿಯಲ್ಲಿ ನಾನು ಕ್ರಿಶ್ಚಿಯನ್‌ ಹೈಸ್ಕೂಲ್‌ ಸೇರಿಕೊಂಡೆ. ಶಾಲಾ ದಿನಗಳಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್‌ ಏನೋ ಆಗುತ್ತಿದ್ದೆ. ಆದರೆ ನನ್ನ ಪರ್ಸೆಂಟೇಜ್‌  ಏನೂ ಹೇಳಿಕೊಳ್ಳುವಂತಿರಲಿಲ್ಲ. ನಾನು ಆಗ ಫ‌ಸ್ಟ್‌ ಗಿಸ್ಟ್‌ ಬಂದವನೂ ಅಲ್ಲ. ಜೀವನದಲ್ಲಿ ಏನೋ ದೊಡ್ಡದನ್ನು ಸಾಧಿಸಬೇಕು ಎನ್ನುವ ಇಚ್ಛೆಯೂ ಆಗ ನನಗಿರಲಿಲ್ಲ. 

Advertisement

ಸ್ನಾತಕ್ಕೋತ್ತರ ಪದವಿ ಪಡೆಯಲು ನಾನು ಕಾಶಿಗೆ ತೆರಳಿದೆ. ಅಲ್ಲಿ ಓದುತ್ತಿರುವಾಗ ನನಗೆ ಮೊದಲ ಬಾರಿಗೆ ವಿಶ್ವ ಕಿರಣಗಳ ಬಗ್ಗೆ ಸಂಶೋಧನೆ ನಡೆಸುವ ಮನಸ್ಸಾಯಿತು. ಈ ಆಸೆಗೆ ನೀರೆರೆದಿದ್ದು ಡಾ. ವಿಕ್ರಂ ಸಾರಾಭಾಯಿ ಅವರು. ಅವರ ಮಾರ್ಗದರ್ಶನದ ಅಡಿಯಲ್ಲಿ ಕಾಸ್ಮಿಕ್‌ ರೇಸ್‌ನಲ್ಲಿ ಪಿಎಚ್‌ಡಿ ಮಾಡಲು ಆರಂಭಿಸಿದೆ. ಆದರೆ ಆ ಸಮಯದಲ್ಲಿ ನನಗೆ ಸಿಗುತ್ತಿದ್ದ ಸ್ಕಾಲರ್‌ಶಿಪ್‌ ಅಲ್ಪವಿತ್ತು. ಹಣದ ಅನಿವಾರ್ಯತೆಯಿಂದಾಗಿ ಯಾವುದಾದರೂ ಒಳ್ಳೆಯ ನೌಕರಿಗೆ ಸೇರಿಕೊಳ್ಳಬೇಕೆನಿಸಿತು. ಏರ್‌ಫೋರ್ಸ್‌ನಲ್ಲಿ ಕಮಿಷನ್‌x ಆಫೀಸರ್‌ ಹುದ್ದೆಯ ಸಂದರ್ಶನಕ್ಕೆ ಅರ್ಜಿ ಸಲ್ಲಿಸಿದೆ. ಸಂದರ್ಶನಕ್ಕೆ ಕರೆ ಬಂದು, ಹಾಜರಾಗಿಯೂ ಬಂದೆ. ಈ ವಿಷಯ ಗೊತ್ತಾಗಿದ್ದೇ ಡಾ. ವಿಕ್ರಂ ಸಾರಾಭಾಯಿ ಗರಂ ಆಗಿಬಿಟ್ಟರು. “”ನೀನು ಭೌತಶಾಸ್ತ್ರದಲ್ಲಿ ಸಂಶೋಧನೆ ಮಾಡುತ್ತೀಯ ಅಂತ ಭಾವಿಸಿದ್ದೆ. ಆದರೆ ನೀನು ನೋಡಿದರೆ ಇಂಥವೆಲ್ಲ ಮಾಡ್ತಾ ಇದೀಯ! ನನ್ನ ಮಾತು ಕೇಳು. ಇಲ್ಲೇ ಇದ್ದು ಸಂಶೋಧನೆ ಮಾಡು” ಅಂದರು. ಆಗ ನಾನು “”ವಿಕ್ರಂ, ಇಲ್ಲಿ ಸ್ಕಾಲರ್‌ಶಿಪ್‌ ಕಡಿಮೆ ಸಿಗ್ತಾ ಇದೆ. ಇನ್ನು ಎಷ್ಟು ವರ್ಷ ಹೀಗೆ ಇರಬೇಕೋ ತಿಳಿಯದು.” ಎಂದು ಬೇಸರದಿಂದ ಹೇಳಿದೆ. 

ಆಗ ಸಾರಾಭಾಯಿ “”ನೀನು ಮುಂದೆ ಏನಾಗುತ್ತೀಯ ಅಂತ ನಿನಗೆ ಗೊತ್ತಿಲ್ಲ, ಆದರೆ ನನಗೆ ಗೊತ್ತಿದೆ. ಸುಮ್ಮನೇ ಸಂಶೋಧನೆಯಲ್ಲಿ ಮುಳುಗು” ಎಂದು ನನ್ನಿಂದ ಭಾಷೆ ತೆಗೆದುಕೊಂಡರು.  ಮುಂದಿನ ವರ್ಷಗಳಲ್ಲಿ ಅವರ ಸಲಹೆಯ ಮೇರೆಗೆ ನಾನು ಅಮೆರಿಕಕ್ಕೆ ಹೋಗಿ ಅಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಹೆಚ್ಚು ಅನುಭವ ಪಡೆದೆ. 

ಭಾರತಕ್ಕೆ ಹಿಂದಿರುಗಿ ಬಂದದ್ದೂ ಆಯಿತು. ವಿಕ್ರಂ ಸಾರಾಭಾಯಿ ಅವರಿಗೆ ದೇಶದಲ್ಲೇ ಪ್ರಥಮ ಉಪಗ್ರಹ ಕಾರ್ಯಕ್ರಮ ಆರಂಭಿಸಬೇಕೆಂಬ ಮನಸ್ಸಾಯಿತು. ಆಗ ಸ್ಯಾಟಲೈಟ್‌ಗಳ ಉಪಯೋಗದ ಬಗ್ಗೆ ನಮ್ಮಲ್ಲಿ ಅಷ್ಟಾಗಿ ಅರಿವಿರಲಿಲ್ಲ. ಹೀಗಾಗಿ ಅವರು  ನಮ್ಮ ದೇಶ ಹೇಗೆ ಉಪಗ್ರಹಗಳಿಂದ ಲಾಭ ಪಡೆಯಬಹುದು ಎನ್ನುವ ಬಗ್ಗೆ ಥೀಸೀಸ್‌ ರೀತಿಯಲ್ಲಿ ರೂಪದಲ್ಲಿ ಮಾಹಿತಿ ಬರಿ ಅಂತ ಹೇಳಿದರು. ಎರಡು ತಿಂಗಳಲ್ಲಿ ನಾನು ಉಪಗ್ರಹ ಕಾರ್ಯಕ್ರಮದ ಬಗ್ಗೆ ಥೀಸೀಸ್‌ ಬರೆದು, ಕೊನೆಗೊಂದು ದಿನ ಅವರ ಮುಂದಿಟ್ಟೆ. ಅದನ್ನು ಓದಿದ ಅವರು “”ಥೀಸೀಸ್‌ ಏನೋ ಚೆನ್ನಾಗಿದೆ. ಆದರೆ ಒಂದು ವಿಷಯ ನನಗೆ ಇಷ್ಟವಾಗಲಿಲ್ಲ.” ಅಂದರು. “”ಏನಿಷ್ಟವಾಗಲಿಲ್ಲ?” ನಾನು ಕೇಳಿದೆ. “”ಉಪಗ್ರಹ ತಯಾರಿ ಏನೋ ಸರಿ, ಅದರ ತಯಾರಿಯ ನೇತೃತ್ವ ನೋಡಿಕೊಳ್ಳುವವರು ಯಾರು ಅಂತ ಬರೆದೇ ಇಲ್ಲವಲ್ಲ?” ಎಂದು ಕೇಳಿದರು. 

ಆಗ ನಾನು “”ವಿಕ್ರಂ ಅದು ನಿಮ್ಮ ಸಮಸ್ಯೆ. ಥೀಸೀಸ್‌ ಬರೆಯೋದಕ್ಕೆ ಹೇಳಿದಿರಿ. ನಾನು ಬರೆದೆ ಅಷ್ಟೆ” ಎಂದೆ. ಆದರೆ ಅವರು “ನೀನೇ ನೋಡಿಕೊ’ ಅಂತ ನನ್ನ ಹೆಗಲ ಮೇಲೇ ಜವಾಬ್ದಾರಿ ಹೊರಿಸಲು ಮುಂದಾದರು. ಆದರೆ ನಾನು ಒಪ್ಪಲಿಲ್ಲ. ಸುಮಾರು ಒಂದು ವರ್ಷದವರೆಗೂ ನಾನು ಈ ನಿರಾಕರಿಸುತ್ತಲೇ ಹೋದೆ. ಆದರೆ ವಿಕ್ರಂ ಸಾರಾಭಾಯಿ ಪಟ್ಟು ಬಿಡಲಿಲ್ಲ. ಕೊನೆಗೂ ಅವರ ಮಾತಿಗೆ ಒಪ್ಪಿಕೊಳ್ಳಲೇಬೇಕಾಯಿತು ಚಿಕ್ಕದೊಂದು ತಂಡದೊಂದಿಗೆ ಉಪಗ್ರಹದ ತಯಾರಿಯಲ್ಲಿ ತೊಡಗಿದೆವು. ಆದರೆ ನಮ್ಮ ತಂಡದಲ್ಲಿದ್ದವರಿಗೆ ಇದು ಹೊಸ ಕೆಲಸ. ಅವರೆಂದೂ ಉಪಗ್ರಹ ನಿರ್ಮಾಣ ಮಾಡಿಯೇ ಇರಲಿಲ್ಲ. ಆದರೂ ನಾವೆಲ್ಲ ಒಗ್ಗೂಡಿ ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಸಿದ್ಧಗೊಳಿಸಿದೆವು…

ಈಗಂತೂ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ವಿಪರೀತ ಅವಕಾಶಗಳು ಸೃಷ್ಟಿಯಾಗಿವೆ. ಒಂದರ್ಥದಲ್ಲಿ ಆಕಾಶದಲ್ಲಿ ಅವಕಾಶದ ಬಾಗಿಲು ತೆರೆದುಕೊಂಡಿದೆ.  ಇವತ್ತಿನ ದಿನ ಐಟಿ, ಸೇರಿದಂತೆ ಜಗತ್ತಿನ ಅನೇಕ ವ್ಯವಹಾರಗಳಿಗೆ ಬೆನ್ನುಲುಬಾಗಿ ನಿಂತಿದೆ ಬಾಹ್ಯಾಕಾಶ ವಿಜ್ಞಾನ. ಬಾಹ್ಯಾಕಾಶ ವಲಯದಲ್ಲಿ ನಾವು ಪಾಲು ಪಡೆಯದಿದ್ದರೆ ದೇಶ ಮುಂದುವರಿಯಲು ಸಾಧ್ಯವಿಲ್ಲ. 

ನಾನು ಮೊದಲ ಬಾರಿಗೆ ರೈಲು ನೋಡಿದ್ದೇ ಬಳ್ಳಾರಿಯಲ್ಲಿ. ಅದೂ ಇಂಟರ್‌ಮೀಡಿಯೇಟ್‌ ಓದುತ್ತಿದ್ದಾಗ. ಅದನ್ನು ನೋಡಿದಾಗ ನನಗೆ “ಸಾಧ್ಯತೆಗಳ’ ಅರಿವಾಯಿತು. ಅದೇಕೋ ದೊಡ್ಡ ಕನಸು ಕಂಡರೆ ಮಾತ್ರ ಮುಂದುವರಿಯಲು ಸಾಧ್ಯ ಎನ್ನುವುದನ್ನು ನಾನು ಅದರಿಂದ ಕಲಿತೆ. 

ಜೀವನದಲ್ಲಿ ಅಸಾಧ್ಯವೆನ್ನುವ ಕೆಲಸ ಯಾವುದೂ ಇಲ್ಲ. ಆದರೆ ಸಾಧ್ಯತೆಗಳನ್ನು ಅನ್ವೇಷಿಸುವ ಗುಣ ನಮ್ಮಲ್ಲಿರಬೇಕು. ನಿಮಗೆಲ್ಲರಿಗೂ ನಾನು ಹೇಳಲು ಬಯಸುವುದು ಇಷ್ಟೆ. ದೊಡ್ಡ ಕನಸು ಕಾಣುವ ಧೈರ್ಯ ಮಾಡಿ! 

Advertisement

Udayavani is now on Telegram. Click here to join our channel and stay updated with the latest news.

Next