Advertisement

ಜಗತ್ತಿಗೆ ಎದುರಾಗಲಿದೆ ಮತ್ತೊಂದು ಕಂಟಕ ! ಹಿಮನದಿಗಳಲ್ಲಿ ಅಡಗಿದೆ ಪ್ರಾಚೀನ ವೈರಸ್‌

12:02 AM Oct 23, 2022 | Team Udayavani |

ಕೋವಿಡ್‌ ಅನಂತರ ಮತ್ತೊಂದು, ಮಗದೊಂದು… ಸಾಂಕ್ರಾಮಿಕಗಳು ವಿಶ್ವವನ್ನೇ ಬಾಧಿಸಲಿದೆಯೇ…? ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಯಾಕೆಂದರೆ ಇದಕ್ಕೆ ಕಾರಣವಾಗುವುದು ಪ್ರಾಣಿ, ಪಕ್ಷಿಗಳಲ್ಲ. ಕೊರೊನಾದಂತಹ ಭಯಾನಕ ಸಾಂಕ್ರಾಮಿಕವು ಯಾರೂ ಊಹೆ ಮಾಡದ ಜಾಗದಲ್ಲಿರುವುದು ಈಗ ಪತ್ತೆಯಾಗಿದೆ. ಪ್ರಾಚೀನ ಕಾಲದ ಬಹುತೇಕ ಅಪಾಯಕಾರಿ ವೈರಸ್‌, ಬ್ಯಾಕ್ಟೀರಿಯಾಗಳು, ಕೊರೊನಾದ ರೂಪಾಂತರಗಳು ಹಿಮನದಿಗಳಲ್ಲಿ ಅಡಗಿರುವುದು ಅಧ್ಯಯನದಲ್ಲಿ ದೃಢಪಟ್ಟಿದೆ. ಇವುಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಉತ್ತರ ಧ್ರುವದ ಆಕ್ಟಿಕ್‌ ಸರೋವರಗಳಲ್ಲಿದ್ದು, ಹವಾಮಾನ ಬದಲಾವಣೆ ಯಿಂದಾಗಿ ಕರಗುವ ಹಿಮನದಿಗಳು ಈಗ ಅಪಾಯವನ್ನು ಆಹ್ವಾನಿಸುತ್ತಿದೆ.

Advertisement

ಏನು?
ಕೊರೊನಾ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಜಗತ್ತಿಗೆ ಮತ್ತೂಂದು ಅಘಾತಕಾರಿ ಸುದ್ದಿ. ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಬಾವಲಿ ಅಥವಾ ಇತರ ಪಕ್ಷಿಗಳಿಂದ ಮಾತ್ರವಲ್ಲ ಕರಗುವ ಹಿಮನದಿಗಳಿಂದಲೂ ಬರುತ್ತವೆ. ಬಹುತೇಕ ಅಪಾಯಕಾರಿ ವೈರಸ್‌, ಬ್ಯಾಕ್ಟೀರಿಯಾಗಳು ಮತ್ತು ಕೊರೊನಾದ ರೂಪಾಂ ತರಗಳು ಹಿಮನದಿಗಳಲ್ಲಿ ಇರುವುದು ಪತ್ತೆಯಾಗಿವೆ.

ಎಲ್ಲಿ?
ಉತ್ತರ ಧ್ರುವದ ವಿಶ್ವದ ಅತೀ ದೊಡ್ಡ ಆಕ್ಟಿಕ್‌ ಸಿಹಿ ನೀರಿನ ಮೂಲವಾದ ಹ್ಯಾಜೆನ್‌ ಸರೋವರದ ದಡದ ಮಣ್ಣು ಮತ್ತು ನೀರೊಳಗಿನ ಕೆಸರಿನ ವಿಶ್ಲೇಷಣೆಯ ವೇಳೆ ವೈರಲ್‌ ಸೋಂಕಿನ ಅಪಾಯವಿರುವುದು ದೃಢಪಟ್ಟಿದೆ. ಇದಕ್ಕೆ ಕಾರಣವಾಗುವ ವೈರಸ್‌ಗಳು ಕರಗುತ್ತಿರುವ ಮಂಜುಗಡ್ಡೆ ಸಮೀಪವಿರುವುದು ಗೋಚರಿಸಿವೆ.

ಹೇಗೆ?
ಹಿಮ ನದಿಗಳಲ್ಲಿರುವ ಮಂಜುಗಡ್ಡೆಗಳು ಕರಗಿದಾಗ ಅದರಲ್ಲಿರುವ ವೈರಸ್‌, ಬ್ಯಾಕ್ಟೀರಿಯಾಗಳು ತಮ್ಮ ಉಳಿವಿಗಾಗಿ ಪ್ರಾಣಿ, ಪಕ್ಷಿಗಳ ದೇಹ ಸೇರುತ್ತವೆ. ಅವುಗಳ ಸಂಪರ್ಕಕ್ಕೆ ಬರುವವರಿಗೆ ವರ್ಗಾವಣೆಯಾಗಿ ಮಾನವನ ದೇಹ ಸೇರುವ ಅಪಾಯವಿದೆ.

ಕಾರಣ?
ಹಿಮನದಿಗಳು ಕರಗಲು ಮುಖ್ಯ ಕಾರಣ ಹವಾಮಾನ ವೈಪರಿತ್ಯ. ಏರುತ್ತಿರುವ ಜಾಗತಿಕ ತಾಪಮಾನದಿಂದಾಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಭೂಮಿಯ ಒಳ ಭಾಗದ ಮಣ್ಣಿನ ದಪ್ಪ ಪದರಗಳಲ್ಲಿ ಹಲವು ಮಿಲಿಯನ್‌ ವರ್ಷಗಳಿಂದ ಇರುವ ವೈರಸ್‌, ಬ್ಯಾಕ್ಟೀರಿಯಾಗಳು ಇಲ್ಲೇ ತಮ್ಮ ಸಂತಾನಾಭಿವೃದ್ಧಿ ಮಾಡುತ್ತಿದ್ದವು. ಇದರಿಂದ ಹೊರಬರುವ ವೈರಸ್‌ಗಳು ಎಬೋಲಾ, ಇನ್‌ಫ‌ುಯೆನಾದಂತಹ ಭಯಾನಕ ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆ.

Advertisement

ಏನಾಗಬಹುದು?
ವೈರಸ್‌ಗಳು ಯಾವುದೇ ಪ್ರಾಣಿ, ಸಸ್ಯ, ಮಾನವನ ದೇಹ ಪ್ರವೇಶಿಸಿ ತನ್ನ ಉಳಿವಿಗೆ ಪ್ರಯತ್ನಿಸುವ ಗುಣ ಹೊಂದಿವೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ತಾಪಮಾನದಿಂದ ಹಿಮನದಿಗಳು ಅತ್ಯಂತ ವೇಗವಾಗಿ ಕರಗುತ್ತಿವೆ. ಹೀಗಾಗಿ ಇಲ್ಲಿರುವ ಪ್ರಾಚೀನ ವೈರಸ್‌, ಬ್ಯಾಕ್ಟೀರಿಯಾಗಳಿಂದ ಹರಡುವ ಸಾಂಕ್ರಾಮಿಕ ರೋಗದ ಅಪಾಯ ಮತ್ತು ತೀವ್ರತೆ ಹೆಚ್ಚಾಗಿರುತ್ತದೆ.

ಈಗಾಗಲೇ ಕೋವಿಡ್‌-19 ಸಾಂಕ್ರಾಮಿಕ ಉಂಟು ಮಾಡಿದ ಸಾವು, ನೋವುಗಳನ್ನು ಕಣ್ಣಾರೆ ನೋಡಿದ್ದೇವೆ. ಇದಕ್ಕೆ ಕಾರಣವಾಗುವ ಕೊರೊನಾ ವೈರಸ್‌ನ ಹಲವು ರೂಪಾಂತರಗಳ ಬಗ್ಗೆಯೂ ಕೇಳಿದ್ದೇವೆ. ಆಗ ಕೆಲವರು ಇನ್ನು ಮುಂದೆ ಸಾಂಕ್ರಾಮಿಕಗಳು ಪ್ರಾಣಿ, ಪಕ್ಷಿಗಳಿಂದ ಬರುವುದಿಲ್ಲ. ಅದಕ್ಕೆ ಬೇರೆಯೇ ಕಾರಣವಿರುತ್ತದೆ ಎಂದರು. ಆ ಕಾರಣ ಈಗ ದೃಢಪಟ್ಟಿದೆ. ಅದುವೇ ಕರಗುವ ಹಿಮನದಿಗಳು. ಇದರ ಅಡಿಯಲ್ಲಿ ಪ್ರಾಚೀನ ಕಾಲದ ಬ್ಯಾಕ್ಟೀರಿಯಾ, ವೈರಸ್‌ಗಳು ಇರುವುದು ಪತ್ತೆಯಾಗಿದೆ. ಅವುಗಳು ಅಲ್ಲಿಂದ ಬಿಡುಗಡೆಯಾದರೆ ಮೊದಲು ಸಮುದ್ರ ಜೀವಿಗಳಿಗೆ ಸೋಂಕು ತಗಲುತ್ತದೆ. ಬಳಿಕ ಪ್ರಾಣಿ, ಪಕ್ಷಿಗಳು,ಮಾನವರಿಗೆ ಹರಡುತ್ತದೆ. ಈ ಮೂಲಕ ಭೂಮಿಯ ಮೇಲಿರುವ ಸಕಲಜೀವರಾಶಿಗಳು ವಿನಾಶವಾಗುವುದು ಬಹುತೇಕ ಖಚಿತ.

ಅಧ್ಯಯನದಲ್ಲೇನಿದೆ?
ಆಕ್ಟಿಕ್‌ನ ಉತ್ತರದಲ್ಲಿರುವ ಲೇಕ್‌ ಹ್ಯಾಜೆನ್‌ನ ಮಣ್ಣು, ಕೆಸರನ್ನು ಪರಿಶೀಲಿಸಿ, ಅದರಿಂದ ಡಿಎನ್‌ಎ, ಆರ್‌ಎನ್‌ಎ ವಿಂಗಡಿಸಿದ ಬಳಿಕ ವೈರಸ್‌, ಬ್ಯಾಕ್ಟೀರಿಯಾಗಳು ಈ ಪ್ರದೇಶದ ಶಿಲೀಂಧ್ರದಲ್ಲಿರುವುದು ಪತ್ತೆಯಾಗಿದೆ. ಇಲ್ಲಿಂದ ವೈರಸ್‌ ಬಿಡುಗಡೆಯಾದರೆ ಅಪಾಯ ಹೆಚ್ಚು ಎಂಬುದನ್ನು ಕೆನಡಾದ ಒಟ್ಟಾವ ವಿಶ್ವವಿದ್ಯಾನಿಲಯದ ಡಾ| ಸ್ಟೀಫ‌ನ್‌ ಅರಿಸ್‌ ಬ್ರೋಸೌ ಮತ್ತು ತಂಡ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ತಾಪಮಾನ ಏರಿಕೆಯಿಂದಾಗಿ ಸ್ವೀಡನ್‌ನಲ್ಲಿರುವ ಅತ್ಯುನ್ನತ ಏಕೈಕ ಪರ್ವತ ಹಿಮನದಿ ಕಬ್ನೆಕೈಸ್‌ 2019ರ ವರೆಗೆ ತನ್ನ ಎತ್ತರದಲ್ಲಿ ಎರಡು ಮೀಟರ್‌ ಕಳೆದುಕೊಂಡಿದೆ ಎಂದು ಸ್ಟಾಕ್‌ಹೋಮ್‌ ವಿಶ್ವವಿದ್ಯಾನಿಲಯ ಹೇಳಿದೆ. ಕಳೆದ ವರ್ಷ ಚೀನದ ಟಿಬೇಟಿಯನ್‌ ಪ್ರಸ್ಥಭೂಮಿಯಿಂದ ತೆಗೆದ ಮಂಜುಗಡ್ಡೆ ಮಾದರಿಗಳನ್ನು ಪರಿಶೀಲಿಸಿರುವ ಯುಎಸ್‌ನ ಒಹಾಯೋ ವಿಶ್ವವಿದ್ಯಾನಿಲಯದ ಸಂಶೋ ಧನಕಾರರಿಗೆ ಅದರಲ್ಲಿ ಸುಮಾರು 33 ವೈರಸ್‌ ಮತ್ತು 28 ರೂಪಾಂತರ ವೈರಸ್‌ಗಳು ಪತ್ತೆಯಾಗಿವೆ. ಅವುಗಳ ಸ್ಥಳವನ್ನು ಆಧರಿಸಿ ಅವುಗಳು ಸುಮಾರು 15 ಸಾವಿರ ವರ್ಷ ಹಳೆಯವು ಎಂದು ಅಂದಾಜಿಸಲಾಗಿದೆ.

ಏಕ್ಸ್‌ ಆ್ಯಂಡ್‌ ಮರ್ಸೆಲ್ಲೆಯಲ್ಲಿರುವ ಫ್ರಾನ್ಸ್‌ನ ನ್ಯಾಶನಲ್‌ ಸೆಂಟರ್‌ ಫಾರ್‌ ಸೈಂಟಿಫಿಕ್‌ ರಿಸರ್ಚ್‌ನ ವಿಜ್ಞಾನಿಗಳು 2014ರಲ್ಲಿ ಸೈಬೀರಿಯನ್‌ ಹಿಮನದಿಗಳ ಭೂಪದರದಲ್ಲಿದ್ದ ವೈರಸ್‌ಗೆ ಮರುಜೀವ ನೀಡಿದ್ದರು. ಇದು 30 ಸಾವಿರ ವರ್ಷಗಳಲ್ಲೇ ಮೊದಲ ಬಾರಿಗೆ ಸಾಂಕ್ರಾಮಿಕ ರೋಗವನ್ನು ಹರಡಿಸಿತ್ತು. ಇಂತಹ ಮಂಜುಗಡ್ಡೆಗಳ ಪದರಗಳನ್ನು ಪತ್ತೆ ಹಚ್ಚುವುದೆಂದರೆ “ದುರಂತ ಪಾಕವಿಧಾನ’ ಎಂದು ಅಧ್ಯಯನಕಾರರಾದ ಜೀನ್‌ ಮೈಕಲ್‌ ಕ್ಲಾವೆರಿ ಹೇಳಿದ್ದಾರೆ.

ಪರಿಹಾರ ಏನು?
ಹೆಚ್ಚುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣಕ್ಕಾಗಿ ಕಳೆದೆರಡು ದಶಕಗಳಿಂದ ಚರ್ಚೆಗಳು ನಡೆಯುತ್ತಿವೆಯಾದರೂ ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಶ್ವ ಸಮುದಾಯ ವಿಫ‌ಲವಾಗಿದೆ. ತಾಪಮಾನ ಏರಿಕೆಯ ದುಷ್ಪರಿಣಾಮಗಳು ಈಗಾಗಲೇ ಗೋಚರಿಸಲಾರಂಭಿಸಿದ್ದು ವರ್ಷಗಳುರುಳಿದಂತೆಯೇ ನಾನಾ ತೆರನಾದ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಲೇ ಸಾಗಿವೆ. ಮುಂದಿನ ಕೆಲವೇ ದಶಕಗಳಲ್ಲಿ ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ವಿಶ್ವ ಸಮುದಾಯ ಒಗ್ಗೂಡಿ ಪ್ರಯತ್ನಿಸದೇ ಹೋದಲ್ಲಿ ಕೇವಲ ಸಾಂಕ್ರಾಮಿಕ ರೋಗಗಳು, ಪ್ರಾಕೃತಿಕ ವಿಕೋಪಗಳು ಮಾತ್ರವಲ್ಲದೆ ಕಡಲತಡಿಯ ಬಹುತೇಕ ನಗರಗಳು, ಪ್ರದೇಶಗಳನ್ನು ಸಮುದ್ರ ಆವರಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಸಮುದಾಯ ಇನ್ನಾದರೂ ತನ್ನ ಬದ್ಧತೆ, ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇಬೇಕಿದೆ. ಈ ವಿಚಾರದಲ್ಲಿ ಜನತೆಯ ಸಹಕಾರ ಕೂಡ ಬಲುಮುಖ್ಯವಾಗಿದೆ.

ಹಿಂದೆ ಏನಾಗಿತ್ತು?
ಬಿಸಿಲಿನ ಶಾಖದ ಪರಿಣಾಮವಾಗಿ ಭೂಮಿಯ ಒಳಭಾಗದ ಮಣ್ಣಿನ ದಪ್ಪ ಪದರಗಳಲ್ಲಿ ಕಾಣಸಿಗುವ ಬ್ಯಾಕ್ಟೀರಿಯಾವೊಂದು ಉತ್ತರ ಸೈಬೀರಿಯಾದಲ್ಲಿ ಪತ್ತೆಯಾಗಿತ್ತು. ಇದರಿಂದ ಕಾಣಿಸಿಕೊಂಡ ಆಂಥಾಕ್ಸ್‌ ಸೋಂಕು ಏಳು ಜನರಿಗೆ ತಗಲಿದ್ದು, ಮಗುವೊಂದು ಬಲಿಯಾಗಿತ್ತು. ಇದೇ ಭಾಗದಲ್ಲಿ 1941ರಲ್ಲೊಮ್ಮೆ ಈ ಸೋಂಕು ಕಾಣಿಸಿಕೊಂಡಿತ್ತು.

ಹಿಮನದಿಗಳು ಎಷ್ಟಿವೆ?
2020ರಲ್ಲಿ ಪ್ರಕಟವಾದ ವರದಿಯನ್ವಯ 1990- 2018ರ ವರೆಗಿನ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಹಿಮನದಿಗಳ ಪ್ರಮಾಣ ಶೇ.53ರಷ್ಟು ಹೆಚ್ಚಾಗಿದೆ. ಈ ಸರೋವರಗಳು ಭೂಮಿಯ ಶೇ. 51ರಷ್ಟು ಪ್ರಮಾಣವನ್ನು ವ್ಯಾಪಿಸಿದೆ. ಭೂಮಿಯ ಮೇಲ್ಮೆ„ಯಲ್ಲಿ ಸುಮಾರು 9 ಸಾವಿರ ಚದರ ಕಿ.ಲೋ. ಮೀಟರ್‌ಗಳಲ್ಲಿ 14,394 ಹಿಮನದಿಗಳಿವೆ. ಪ್ರಸ್ತುತ ಸುಮಾರು 156.5 ಘನ ಕಿ.ಮೀ. ನೀರನ್ನು ಹೊಂದಿದೆ.

ಹೇಗಿದೆ ಪರಿಸ್ಥಿತಿ?
ಏಷ್ಯಾ, ದಕ್ಷಿಣ ಅಮೆರಿಕ ಸಹಿತ ವಿಶ್ವಾದ್ಯಂತ ಸಿಹಿ ನೀರಿನ ಪ್ರಮುಖ ಮೂಲವೇ ಹಿಮನದಿಗಳು. ಇವುಗಳು ತುಂಬಾ ಅಪಾಯಕಾರಿಯಾಗಿವೆ. ಯಾಕೆಂದರೆ ಇದರಲ್ಲಿರುವ ನೀರಿನ ಪ್ರಮಾಣ ಒಂದು ಗ್ರಾಮವನ್ನು ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಸ್ಕ್ಯಾಂಡಿನೇವಿಯಾ, ಐಲ್ಯಾಂಡ್‌ ಮತ್ತು ರಷ್ಯಾದಲ್ಲಿರುವ ಹಿಮ ಸರೋವರಗಳು ವೇಗವಾಗಿ ಬೆಳೆಯುತ್ತಿವೆ. ಇದು ಗಾತ್ರದಲ್ಲಿ ಬಹುತೇಕ ದ್ವಿಗುಣಗೊಂಡಿದೆ. ಪ್ಯಾಟಗೋನಿಯಾ ಮತ್ತು ಅಲಾಸ್ಕಾದಲ್ಲಿರುವ ಸರೋವರಗಳು ನಿಧಾನವಾಗಿ ಬೆಳೆಯುತ್ತಿವೆ. ಈ ಪ್ರದೇಶದಲ್ಲಿ ಅನೇಕ ಸರೋವರಗಳು ಈಗಾಗಲೇ ವಿಶಾಲವಾಗಿ ಬೆಳೆದಿದೆ. ಗ್ರೀನ್‌ಲ್ಯಾಂಡ್ ನ‌ ಉತ್ತರದಲ್ಲಿರುವ ಸರೋವರಗಳು ವೇಗವಾಗಿ ಬೆಳೆಯುತ್ತಿದ್ದು, ನೈಋತ್ಯ ಭಾಗದಲ್ಲಿರುವ ಸರೋವರಗಳು ಬಹುತೇಕ ಬರಿದಾಗಿವೆ.

- ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next