Advertisement

ಬಸ್‌ಗಳಿಗೆ ಹಾನಿ: 7 ಸಾರಿಗೆ ನೌಕರರ ಬಂಧನ

06:19 PM Apr 17, 2021 | Team Udayavani |

ಕಲಬುರಗಿ: ರಾಜ್ಯಾದ್ಯಂತ ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಅನ್ವಯ ಸಂಬಳ ಜಾರಿಗೆ ಮಾಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಮುಷ್ಕರ ಶುಕ್ರವಾರ ಹತ್ತನೇ ದಿನಕ್ಕೆ ಪೂರೈಸಿದೆ. ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಸಾರಿಗೆ ಬಸ್‌ಗಳನ್ನು ಜಖಂಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಅಡ್ಡಿ, ಬಸ್‌ಗಳಿಗೆ ಹಾನಿ ಮತ್ತು ಮುಷ್ಕರಕ್ಕೆ ಪ್ರಚೋದನೆ ಕುರಿತಂತೆ 52 ನೌಕರರ ವಿರುದ್ಧ 22 ಪೊಲೀಸ್‌ ಕೇಸ್‌ ದಾಖಲಾಗಿವೆ. ಇದರಲ್ಲಿ ಬಸ್‌ ಗಳಿಗೆ ಹಾನಿ ಸಂಬಂಧ 12 ಪ್ರಕರಣಗಳು ದಾಖಲಾಗಿದ್ದು, ಕೃತ್ಯ ಎಸಗಿದ ಎಂಟು ಜನರ ಪೈಕಿ ಈಗಾಗಲೇ ಏಳು ಸಿಬ್ಬಂದಿ ಬಂಧಿಸಲಾಗಿದೆ.

ಅಲ್ಲದೇ, ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾದ ಆರೋಪದ ಮೇಲೆ ಇದುವರೆಗೆ 55 ಜನ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇದರಲ್ಲಿ 16 ಚಾಲಕರು, 6 ನಿರ್ವಾಹಕರು, 28 ಮಂದಿ ಚಾಲಕರು ಕಂ ನಿರ್ವಾಹಕರು ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿ ಸೇರಿದ್ದಾರೆ. ಜತೆಗೆ ಇದುವರೆಗೆ ಬೇರೆ-ಬೇರೆ 135 ನೌಕರರನ್ನು ವರ್ಗಾವಣೆ ಮಾಡಲಾಗಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಗೆ ಏ.7ರಿಂದ 16ರ ವರೆಗೆ 50 ಕೋಟಿ ರೂ. ಆದಾಯದಲ್ಲಿ ಕೊರತೆಯುಂಟಾಗಿದೆ. ಇದುವರೆಗೆ ಕರ್ತವ್ಯಕ್ಕೆ ಹಾಜರಾದ 9,262 ನೌಕರರಿಗೆ 17.96 ಕೋಟಿ ರೂ. ಗಳಷ್ಟು ಮಾರ್ಚ್‌ ತಿಂಗಳ ವೇತನ ಪಾವತಿಸಲಾಗಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next