Advertisement

ಉಚಿತ ನಳ್ಳಿ  ನೀರಿಗಾಗಿ ದಲಿತರ ಆಗ್ರಹ

09:59 AM Jul 26, 2018 | Team Udayavani |

ಮೂಡಬಿದಿರೆ : ದಲಿತರಿಗೆ ಉಚಿತವಾಗಿ ನಳ್ಳಿ ನೀರು ನೀಡಬೇಕು. ನಾವು ನೀರಿನ ಬಿಲ್‌ ಪಾವತಿಸುವುದಿಲ್ಲ ಎಂದು ವಾಲ್ಪಾಡಿಯ ಶಂಕರ ಅವರು ಬುಧವಾರ ಶಿರ್ತಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ವಾಲ್ಪಾಡಿ ಗ್ರಾಮ ಸಭೆಯಲ್ಲಿ ಬೇಡಿಕೆ ಇಟ್ಟರು.

Advertisement

ನೀರಿನ ಬಿಲ್ಲು ಪಾವತಿಸದೇ ಇರುವವರಿಗೆಲ್ಲ ನೋಟಿಸ್‌ ನೀಡಲಾಗಿದೆ; ದಲಿತರ ಮೀಸಲು ಅನುದಾನವನ್ನು ನೀರಿನ ಬಿಲ್‌ ಪಾವತಿಗೆ ಸರಿದೂಗಿಸಲು ಅಸಾಧ್ಯ. ಈಗಾಗಲೇ ನಳ್ಳಿ ಜೋಡಣೆಗೆ ತಲಾ ರೂ. 1,000 ಒದಗಿಸಲಾಗಿದೆ. ಇನ್ನೂ ಈ ನಿಧಿಯನ್ನು ಬಳಸಿದರೆ ನಿಮ್ಮ ಇತರ ಅಗತ್ಯ, ಅಭಿವೃದ್ಧಿ ಕಾರ್ಯ ನಡೆಸಲು ಕಷ್ಟವಾಗುತ್ತದೆ ಎಂದು ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಅರುಣ್‌ ಶೆಟ್ಟಿ ಉತ್ತರಿಸಿದರು.

ಪಂಚಾಯತ್‌ ಅಧ್ಯಕ್ಷೆ ವಸಂತಿ ಅಧ್ಯಕ್ಷತೆ ವಸಿದ್ದರು. ಶಂಕರ ಅವರು ಮುಂದುವರಿದು, ದಲಿತರಿಗೆ ಜಾಗ ನೀಡುತ್ತಿಲ್ಲ, ದಲಿತರ ಮದುವೆಗೆ ನೀಡಲಾಗುವ ಸಹಾಯ ಧನ 5,000 ರೂ. ಕೊಡುತ್ತಿಲ್ಲ ಎಂದು ಆರೋಪಿಸಿದಾಗ ಪಿಡಿಒ ಉತ್ತರಿಸಿ, ದಲಿತರಿಗೆ ಶೌಚಾಲಯ ನಿರ್ಮಿಸಿ ಕೊಡಲು ಈ ಮೊತ್ತವನ್ನು ಬಳಸಲಾಗಿದೆ. ಇನ್ನೂ ಅನೇಕ ಮಂದಿ ದಲಿತರು ಶೌಚಾಲಯ ರಹಿತರು ಪಂಚಾಯತ್‌ ವ್ಯಾಪ್ತಿಯಲ್ಲಿದ್ದು ಕೂಡಲೇ ಅವರು ಅರ್ಜಿ ಸಲ್ಲಿಸಬೇಕು ಎಂದರು. ದಲಿತರನ್ನು ಗ್ರಾಮ ಪಂಚಾಯಿತಿ ಕಡೆಗಣಿಸುತ್ತಿದೆ ಎಂದು ಶಂಕರ ಆರೋಪಿಸಿದಾಗ, ನಾವು ಕಡೆಗಣಿಸಿಲ್ಲ, ವಿನಾ ಕಾರಣ ಹೋರಾಟ ಮಾಡಿದರೆ ನಮ್ಮ ನಿರ್ಣಯಗಳಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಸದಸ್ಯ ಗಣೇಶ್‌ ಸ್ಪಷ್ಟಪಡಿಸಿದರು.

ಜೇನುಗೂಡು ಕೊಡಿ
ಜೇನುಗೂಡಿಗಾಗಿ ಅರ್ಜಿ ಹಾಕಿದವರಿಗಿನ್ನೂ ಗೂಡು ಕೊಟ್ಟಿಲ್ಲ ಎಂದು ಗ್ರಾಮಸ್ಥರಾದ ಜಯಂತ ಹೇಳಿದಾಗ ಅರಣ್ಯ ಇಲಾಖೆಯಿಂದ 4 ಪೆಟ್ಟಿಗೆ ನೀಡಲಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ ಪಿ. ಪೋಳ್‌ ಹೇಳಿದರು. ರಬ್ಬರ್‌ ತೋಟ ಇರುವ ಪರಿಸರದಲ್ಲಿ ಮಾರಕ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಜಾಗರೂಕರಾಗಿರಿ ಎಂದು ಗ್ರಾಮಕರಣಿಕೆ ಉಷಾ ಸೂಚಿಸಿದರು. ಅಳಿಯೂರು- ಬೆಳುವಾಯಿ ರಸ್ತೆಯ ಬದಿಗಳಲ್ಲಿ ಮೆಸ್ಕಾಂ ವತಿಯಿಂದ ಮರದ ಕೊಂಬೆಗಳನ್ನು ಕಡಿದು ಹಾಗೆಯೇ
ಬಿಡಲಾಗಿದೆ ಎಂದಾಗ ಈ ಬಗ್ಗೆ ಕೂಡಲೇ ಕ್ರಮತೆಗೆದುಕೊಳ್ಳುವುದಾಗಿ ಮೆಸ್ಕಾಂ ಆಧಿಕಾರಿ ಉತ್ತರಿಸಿದರು.

ಪಶುಸಂಗೋಪನೆಗಾಗಿ ಹುಲ್ಲಿನ ಬೀಜಗಳನ್ನು ಪ.ಜಾತಿ, ಪ. ಪಂಗಡ ದವರಿಗೆ ಮಾತ್ರ ನೀಡುವುದೇ, ಬೇರೆಯವರಿಗೆ ಇಲ್ಲವೇ? ಎಂದು ವಿವೇಕ್‌ ಫೆರ್ನಾಂಡಿಸ್‌ ಕೇಳಿದಾಗ ಪಶುವೈದ್ಯಾಧಿಕಾರಿ ಇಲ್ಲ ಎಂದರು. ಸಿಬಂದಿ ಮಂಜುಳಾ ವರದಿ, ಸೌಮ್ಯಾ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಪಿಡಿಒ ಸುನಂದಾ ಜೈನ್‌ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

ನಾವೇ ಸಂಪರ್ಕ ಕೊಡುತ್ತೇವೆ 
ದೀನ್‌ದಯಾಳ್‌ ಉಪಾಧ್ಯಾಯ ಯೋಜನೆಯನ್ವಯ ಇನ್ನೂ ವಿದ್ಯುತ್‌ ಸಂಪರ್ಕ ಕೊಟ್ಟಿಲ್ಲ, ಇನ್ನು ನಾವೇ ಸಂಪರ್ಕ ಕೊಡಬೇಕಾಗುತ್ತದೆ ಎಂದು ಪಂ. ಸದಸ್ಯ ಗಣೇಶ್‌ ಹೇಳಿದಾಗ, ಮಳೆಗಾಲದಲ್ಲಿ ಲೈನ್‌ಮನ್‌ಗಳು ತುಂಬ ಬ್ಯುಸಿ ಇರುತ್ತಾರೆ. ಒಂದು ವೇಳೆ ನೀವೇ ಸಂಪರ್ಕ ಕಲ್ಪಿಸಿಕೊಂಡರೆ ಸಂಭಾವ್ಯ ಅಪಾಯಕಾರಿ ಸನ್ನಿವೇಶಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿ ಉತ್ತರಿಸಿದರು.

ಮೆಸ್ಕಾಂ ಸಮಸ್ಯೆ 
ಮೆಸ್ಕಾಂ ಕಚೇರಿಗೆ, ಸಿಬಂದಿಗೆ ಕರೆ ಮಾಡಿದರೆ ಸಂಪರ್ಕ ಕಡಿತ ಮಾಡುತ್ತಾರೆ, ಉದ್ಧಟತನದಿಂದ ಮಾತನಾಡುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಈ ಭಾಗದಲ್ಲಿ ಬಿಎಸ್‌ಎನ್‌ಎಲ್‌ ರೇಂಜ್‌ ಸಿಗುವುದಿಲ್ಲ. ಕೆಲಸದ ಒತ್ತಡದಿಂದಲೂ ನಮಗೆ ಮಾತನಾಡಲು ಅಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next