Advertisement

Daaku Haseena; 8 ಕೋಟಿ ರೂ. ದರೋಡೆ- 10 ರೂ. ಜ್ಯೂಸ್‌ ಕುಡಿದು ಸಿಕ್ಕಿಬಿದ್ದ ದಂಪತಿ!

12:25 PM Jun 19, 2023 | Team Udayavani |

ಡೆಹ್ರಾಡೂನ್: 8 ಕೋಟಿ ರೂ. ದರೋಡೆಗೈದ ಪ್ರಕರಣದ ಪ್ರಮುಖ ಆರೋಪಿಗಳಾದ ದಂಪತಿಯನ್ನು ಪೊಲೀಸರು ಖೆಡ್ಡಾ ತೋಡಿ ಬಂಧಿಸಿದ್ದಾರೆ.

Advertisement

ಏನಿದು ಪ್ರಕರಣ?: ಜೂ.10 ರಂದು ರಾತ್ರಿ 2:30 ರ ಹೊತ್ತಿಗೆ ಲೂಧಿಯಾನದ ನ್ಯೂ ರಾಜ್‌ ಗುರು ನಗರ್ ನಲ್ಲಿರುವ ಸಿಎಂಎಸ್‌ ಸೆಕ್ಯುರಿಟೀಸ್ ಕಂಪೆನಿಗೆ (cash management company) 10 ಜನರ ದರೋಡೆಕೋರರ ಗುಂಪು ನುಗ್ಗಿತ್ತು. ಸೆಕ್ಯೂರಿಟಿ ಗಾರ್ಡ್‌ ಗಳನ್ನು ಶಸ್ತಾಸ್ತ್ರ ತೋರಿಸಿ ಬೆದರಿಸಿ, ಹಲ್ಲೆಗೈದು ಬಳಿಕ ಸುಮಾರು 8.49 ಕೋಟಿ ರೂ. ವನ್ನು ದರೋಡೆಗೈದು ಕಂಪೆನಿಯ ವಾಹನದೊಂದಿಗೆ  ಪರಾರಿಯಾಗಿದ್ದರು. ಈ ವೇಳೆ ದರೋಡೆಕೋರರ ತಂಡ ಡಿವಿಆರ್ (ಸಿಸಿಟಿವಿ ಕ್ಯಾಮೆರಾಗಳ ಡಿಜಿಟಲ್ ವಿಡಿಯೋ ರೆಕಾರ್ಡರ್) ನ್ನು ಸಹ ತೆಗೆದುಕೊಂಡು ಹೋಗಿದ್ದರು.

ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದ ಪೊಲೀಸರು, ಮೊದಲಿಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರ ವಿಚಾರಣೆ ನಡೆಸಿದ್ದಾರೆ. ಕಂಪೆನಿಯ ಎಟಿಎಂಗೆ ಹಣವನ್ನು ಲೋಡ್‌ ಮಾಡುತ್ತಿದ್ದ ಮಂಜಿಂದರ್ ಸಿಂಗ್ ಮಣಿ (27) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆತ ಮಂದೀಪ್ ಕೌರ್  ಎಂಬಾಕೆಯ ಹೆಸರನ್ನು ಹೇಳಿದ್ದು, ಅವಳೇ ದರೋಡೆಯ ಮಾಸ್ಟರ್‌ ಮೈಂಡ್‌ ಎನ್ನುವುದಾಗಿ ಹೇಳಿದ್ದಾನೆ.

ಈತನ ಮಾಹಿತಿಯನ್ನು ಪಡೆದು ಕೃತ್ಯದಲ್ಲಿ ಭಾಗಿಯಾದ ಮನದೀಪ್ ಸಿಂಗ್ ವಿಕ್ಕಿ (33), ಹರ್ವಿಂದರ್ ಸಿಂಗ್ ಲಂಬು (30), ಪರಮಜೀತ್ ಸಿಂಗ್ ಪಮ್ಮಾ (38), ಹರ್‌ಪ್ರೀತ್ ಸಿಂಗ್ (18), ನರೀಂದರ್ ಸಿಂಗ್ ಸಂತೋಷ(20) ಎಂಬುವವರನ್ನು ಬಂಧಿಸಿ ಅವರಿಂದ ನಗದನ್ನು ವಶ ಪಡಿಸಿಕೊಂಡಿದ್ದಾರೆ.

ಕೃತ್ಯದ ಮಾಸ್ಟರ್‌ ಮೈಂಡ್‌ ಆಗಿರುವ ಮಂದೀಪ್ ಕೌರ್ ಮತ್ತು ಅವರ ಪತಿ ಜಸ್ವಿಂದರ್ ಸಿಂಗ್ ಅವರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ‘Let’s catch the queen bee’ ಎಂದು ಪತ್ತೆ ಕಾರ್ಯಾಚರಣೆಗೆ ಹೆಸರಿಟ್ಟಿದ್ದಾರೆ. ದರೋಡೆ ಕೃತ್ಯದ ಮಾಸ್ಟರ್‌ ಮೈಂಡ್‌ ಮಂದೀಪ್ ಕೌರ್ ಳನ್ನು ಪೊಲೀಸರು ʼ ‘ಡಾಕು ಹಸೀನಾ’ ಎಂದು ಹೆಸರಿಟ್ಟಿದ್ದಾರೆ.

Advertisement

ದರೋಡೆ ಕೃತ್ಯ ನಡೆದ ಬಳಿಕ ಪೊಲೀಸರಿಗೆ ಮಂದೀಪ್ ಕೌರ್ ದಂಪತಿ ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ನಲ್ಲಿರುವ ಪವಿತ್ರ ಸಿಖ್ ದೇವಾಲಯಕ್ಕೆ ಹಾಗೂ ಇತರ ಧಾರ್ಮಿಕ ಸ್ಥಳಕ್ಕೆ ತೆರಳುತ್ತಿರುವುದು ಗೊತ್ತಾಗಿದೆ. ಇದಕ್ಕಾಗಿ ಪೊಲೀಸರು ಒಂದು ಮಾಸ್ಟರ್‌ ಪ್ಲ್ಯಾನ್‌ ನ್ನು ಸಿದ್ದಮಾಡಿದ್ದರು. ಧಾರ್ಮಿಕ ಸ್ಥಳದಲ್ಲಿ ತುಂಬಾ ಜನರಿರುವ ಕಾರಣ ಆರೋಪಿಗಳನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚುವುದು ಸಾಧ್ಯವಿಲ್ಲವೆಂದು ಪೊಲೀಸರು ಉಚಿತವಾಗಿ ಪಾನೀಯ(ಜ್ಯೂಸ್) ನೀಡುವ ಯೋಜನೆ ರೂಪಿಸಿದ್ದರು.

ತಂಪು ಪಾನೀಯ ನೀಡಿ ಖೆಡ್ಡಾ ತೋಡಿದ ಪೊಲೀಸರು: ದೇವಾಲಯಕ್ಕೆ ಸಾಗುವ ಮಾರ್ಗದಲ್ಲಿ ಪೊಲೀಸರೇ ವೇಷ ಬದಲಾಯಿಸಿಕೊಂಡು ತಂಪು ಪಾನೀಯ ನೀಡುವ ವ್ಯವಸ್ಥೆಯೊಂದನ್ನು ಮಾಡುತ್ತಾರೆ. ಸಾವಿರಾರು ಜನರು ತಂಪು ಪಾನೀಯವನ್ನು ಕುಡಿಯುತ್ತಾರೆ. ಮನದೀಪ್‌ ಕೌರ್‌ ಹಾಗೂ ಆಕೆಯ ಪತಿ ಜಸ್ವಿಂದರ್‌ ಕೂಡ ಜ್ಯೂಸ್‌ ನ್ನು ತೆಗೆದುಕೊಳ್ಳುತ್ತಾರೆ. ಈ ವೇಳೆ ಇಬ್ಬರು ಮುಖ ಮುಚ್ಚಿಕೊಂಡ ಇರುವುದರಿಂದ ಮೊದಲಿಗೆ ಅವರ ಪರಿಚಯ ಪೊಲೀಸರಿಗೆ ಆಗುವುದಿಲ್ಲ. ಆ ಬಳಿಕ ಜ್ಯೂಸ್‌ ಕುಡಿಯಲು ಮುಖಕ್ಕೆ ಅಡ್ಡಕಟ್ಟಿದ ಬಟ್ಟೆಯನ್ನು ತೆಗೆಯುತ್ತಾರೆ. ಮಂದೀಪ್ ಕೌರ್ ಅವರನ್ನು ನೋಡಿದ ಪೊಲೀಸರು ಆ ಕ್ಷಣಕ್ಕೆ ಅವರನ್ನು ಬಂಧಿಸದೇ ಹಾಗೆಯೇ ಬಿಡುತ್ತಾರೆ. ಮೊದಲು ದೇವಾಲಯಕ್ಕೆ ಹೋಗಿ ದರ್ಶನ ಮಾಡಲು ಅವಕಾಶ ಕೊಡುತ್ತಾರೆ. ಅಲ್ಲಿಂದ ವಾಪಸ್‌ ಆಗುವ ವೇಳೆ ಅದೇ ಪೊಲೀಸರು ದಂಪತಿಯನ್ನು ಚೇಸ್‌ ಮಾಡಿ ಬಂಧಿಸಿದ್ದಾರೆ.

ಮಂದೀಪ್ ಕೌರ್ ಅವರಿಂದ ದ್ವಿಚಕ್ರ ವಾಹನದಿಂದ 12 ಲಕ್ಷ ರೂ., ಪತಿ ಜಸ್ವಿಂದರ್ ಸಿಂಗ್ ಅವರ ಬರ್ನಾಲಾ ಮನೆಯಿಂದ 9 ಲಕ್ಷ ರೂ.ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದರೋಡೆ ಯಶಸ್ವಿಯಾದ ಕಾರಣದಿಂದ ದಂಪತಿ ಧಾರ್ಮಿಕ ಸ್ಥಳವಾದ ಹರಿದ್ವಾರ, ಕೇದಾರನಾಥಕ್ಕೆ ಭೇಟಿ ನೀಡುವ ಯೋಜನೆಯನ್ನು ಹಾಕಿಕೊಂಡು ಆ ಬಳಿಕ ನೇಪಾಳಕ್ಕೆ ಪರಾರಿಯಾಗುವ ಯೋಜನೆಯನ್ನು ಹಾಕಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ದಂಪತಿ ಜೊತೆ ಪೊಲೀಸರು ಗೌರವ್‌ ಎಂಬಾತನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 12 ಜನ ಭಾಗಿಯಾಗಿದ್ದಾರೆ. ಇದುವರೆಗೆ ಇದರಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ.

ಆಕೆ ಶ್ರೀಮಂತಳಾಗಲು ಬಯಸಿದ್ದಳು. ಅವಳಿಗೆ ಸಾಲವಿತ್ತು ಮತ್ತು ಮೊದಲು ವಿಮಾ ಏಜೆಂಟ್ ಮತ್ತು ವಕೀಲರ ಸಹಾಯಕರಾಗಿ ಕೆಲಸ ಮಾಡಿದ್ದಳು. ಆಕೆ  ಫೆಬ್ರವರಿಯಲ್ಲಿ ಜಸ್ವಿಂದರ್ ಸಿಂಗ್ ಅವರನ್ನು ವಿವಾಹವಾಗಿದ್ದಳು.

 

Advertisement

Udayavani is now on Telegram. Click here to join our channel and stay updated with the latest news.

Next