Advertisement

Daily Dose: ಟಿಕೆಟ್‌ ಹೇಗೆ ಸಿಕ್ತು ಎನ್ನೋದೇ ಮುಖ್ಯವಲ್ಲ…

11:48 PM Apr 09, 2023 | Team Udayavani |

ತನ್ನ ಸ್ಟಾರ್‌ ಸಿನೆಮಾನಾ ಫ‌ಸ್ಟ್‌ ಡೇ ಫ‌ಸ್ಟ್‌ ಷೋ ನೇ ನೋಡಬೇಕೂ ಅಂತ ಈ ಸೀತಾರಾಮು ಬೆಳಗ್ಗೆ 7ಕ್ಕೇ ಹೋಗಿ ಥಿಯೇಟರ್‌ನಲ್ಲಿ ಸಾಲಿನಲ್ಲಿ ನಿಂತುಕೊಂಡಿದ್ದ. ಅಂದಾಜಿನಲ್ಲಿ ಹೇಳುವುದಾದರೆ ಇವನದ್ದು 45 ನೆ ನಂಬರ್‌ ಇರಬಹುದು.

Advertisement

ಥಿಯೇಟರ್‌ನಲ್ಲಿ 200 ಕ್ಕೂ ಹೆಚ್ಚು ಸೀಟುಗಳಿವೆ. ಸೀತಾರಾಮು ಸಿನಿಮಾದ ಪೋಸ್ಟರ್‌ ನೋಡ್ತಾ ನಿಂತ. ಒಂದು ಗಂಟೆಯ ಬಳಿಕ ಟಿಕೆಟ್‌ ಕೊಡಲಾರಂಭಿಸಿದರು. ಮಧ್ಯೆ ಪೊಲೀಸರೂ ಬಂದು ಸರದಿ ಸಾಲು ಸರಿ ಮಾಡುತ್ತಿದ್ದರು. ಅಂದಾಜು 20 ಟಿಕೆಟ್‌ ಕೊಟ್ಟಿರಬಹುದು, ಟಿಕೆಟ್‌ ಕ್ಲೋಸ್‌ ಎಂದರು. ಒಮ್ಮೆಲೆ ಜನರೆಲ್ಲ ಕೌಂಟರ್‌ಗೆ ಮುತ್ತಿಗೆ ಹಾಕಿ, ಕೊಟ್ಟಿದ್ದೇ 20 ಟಿಕೆಟ್‌, ಅಷ್ಟರಲ್ಲಿ ಹೇಗೆ ಕ್ಲೋಸ್‌, ಮೋಸ ಎಂದೆಲ್ಲ ದಬಾಯಿಸತೊಡಗಿದರು. ಇದನ್ನೆಲ್ಲ ಕಂಡ ಸೀತಾರಾಮು ಕಷ್ಟ ಎಂದುಕೊಂಡು ವಾಪಸು ಹೊರಟಾಗ ಊರಿನವನೇ ಮತ್ತೂಬ್ಬ ಥಿಯೇಟರ್‌ ಒಳಗೆ ನುಗ್ಗುತ್ತಿದ್ದ. “ಲೋ, ಎಷ್ಟೊತ್ತಿಗೆ ಬಂದೆಯೋ, ಎಲ್ಲಿ ಟಿಕೆಟ್‌ ಸಿಕ್ತು’ ಎಂದು ಕೇಳಿದ ಸೀತಾರಾಮು. “ಲೋ, ಬ್ಲಾಕ್‌ನಲ್ಲಿ ಟಿಕೆಟ್‌ ಸಿಗೋವಾಗ ಬೇಗ ಯಾಕೋ ಬರಬೇಕು? 50 ರೂ ಜಾಸ್ತಿ ಕೊಡಬೇಕಷ್ಟೇ’ ಎಂದ ನಿರಾಯಾಸವಾಗಿ.

ನಾವೆಲ್ಲ ಸೂರ್ಯ ಹುಟ್ಟೋ ಮೊದಲೇ ಕೆಲಸ ಬಿಟ್ಟು ನಮ್ಮ ಸ್ಟಾರ್‌ ನೋಡೋದಿಕ್ಕೆ ಬಂದ್ರೆ ಇವರದ್ದು ಈ ಕಳ್ಳಾಟ ಎಂದು ಮನೆಗೆ ಹೊರಟ.
ಇಲ್ಲಿ ಸಾಹೇಬ್ರು ಮನೆ ಮುಂದೆ ಜನ ಜಮಾಯಿಸಿದ್ದರು. ಅಭಿಮಾನಿಗಳಿಗೆ ನಾಯಕರು ತಮ್ಮ ಟಿಕೆಟ್‌ ಪ್ರಹಸನ ವಿವರಿಸಿ, “ಕೊನೆಗೂ ಟಿಕೆಟ್‌ ಗಿಟ್ಟಿಸಿಕೊಂಡೆ. ನನ್ನನ್ನು ಗೆಲ್ಲಿಸಲೇಬೇಕು. ಈಗ ಗೆಲ್ಸಿದ್ದರೆ ಮಂದಿನ ಎಲೆಕ್ಷನ್‌ನಲ್ಲಿ ಮತ್ತೆ ಟಿಕೆಟ್‌ ಕೊಡ್ತಾರೆ, ಆಗ ನಿಮಗೇ ಒಳ್ಳೆಯದಾಗುತ್ತದೆೆ’ ಎಂದರು. ಎನರು ಮುಖ ಮುಖ ನೋಡ್ಕೊಂಡರು.

ಈ ಗುಂಪಿನ ಮಧ್ಯೆ ಇಣುಕಿ ನೋಡಿದ ಸೀತಾರಾಮು ಪಕ್ಕದವರಲ್ಲಿ, “ಸ್ವಾಮಿ, ಇದೂ ಬ್ಲಾಕಾ? ಒರಿಜಿನಲಾ?’ ಎಂದು ಕೇಳಿದ.
ಸಾಹೇಬ್ರ ಭಾಷಣ ಜೋರಾಗಿತ್ತು- “ಟಿಕೆಟ್‌ ಯಾರು ಕೊಡಿಸಿದರು, ಹೇಗೆ ಸಿಕ್ತು ಎಲ್ಲ ಮುಖ್ಯವಲ್ಲ, ಟಿಕೆಟ್‌ ಗಿಟ್ಟಿಸಿಕೊಳ್ಳೋದು ಹಾಗೂ ಗೆಲ್ಲೋದಷ್ಟೇ ಮುಖ್ಯ’ ಎಂದರು. ಜನರೆಲ್ಲ ಜೋರಾಗಿ ಚಪ್ಪಾಳೆ ತಟ್ಟಿದರು.

Advertisement

Udayavani is now on Telegram. Click here to join our channel and stay updated with the latest news.

Next