Advertisement

ಜೆಕ್‌ ಬಾಕ್ಸಿಂಗ್‌ ಟೂರ್ನಮೆಂಟ್‌: ಭಾರತ ಭರ್ಜರಿ ಬೇಟೆ

08:58 AM Jul 31, 2017 | |

ಹೊಸದಿಲ್ಲಿ: ಜೆಕ್‌ ಗಣರಾಜ್ಯದಲ್ಲಿ ನಡೆದ 48ನೇ ಉಸ್ತಿ ನಾಡ್‌ ಲ್ಯಾಬೆಮ್‌ ಗ್ರ್ಯಾನ್‌ಪ್ರಿ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಪರ್ಧಿಗಳು ಭರ್ಜರಿ ಪ್ರದರ್ಶನ ನೀಡಿ 4 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ.

Advertisement

ಕಳೆದ ರಾತ್ರಿಯ ಸ್ಪರ್ಧೆಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಶಿವ ಥಾಪ (60 ಕೆಜಿ), ಕಾಮನ್ವೆಲ್ತ್‌ ಬಂಗಾರ ವಿಜೇತ ಮನೋಜ್‌ ಕುಮಾರ್‌ (69 ಕೆಜಿ), ಅಮಿತ್‌ ಫಾಂಗಲ್‌ (52 ಕೆಜಿ), ಗೌರವ್‌ ಬಿಧುರಿ (56 ಕೆಜಿ) ಮತ್ತು ಸತೀಶ್‌ ಕುಮಾರ್‌ (+91 ಕೆಜಿ) ಚಿನ್ನದ ಪದಕ ಗೆದ್ದಿದ್ದಾರೆ. 

ಕವಿಂದರ್‌ ಬಿಷ್ಟ್ (52 ಕೆಜಿ), ಮನೀಷ್‌ ಪನ್ವಾರ್‌ (81 ಕೆಜಿ) ಬೆಳ್ಳಿ ಪದಕ ಜಯಿಸಿದರೆ, ಸುಮಿತ್‌ ಸಂಗ್ವಾನ್‌ (91 ಕೆಜಿ) ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತರಾದರು.

ಆಲ್‌ ಇಂಡಿಯನ್‌ ಫೈನಲ್‌ನಲ್ಲಿ ಅಮಿತ್‌ ಮತ್ತು ಕವಿಂದರ್‌ ಎದುರಾಗುವ ಮೂಲಕ ಭಾರತದ ಪದಕ ಬೇಟೆ ಆರಂಭಗೊಂಡಿತ್ತು. ಈ ಫ್ಲೈವೇಟ್‌ ಸ್ಪರ್ಧೆಯಲ್ಲಿ ಅಮಿತ್‌ 3-2ರ ಜಯ ಸಾಧಿಸಿದರು. ಅನಂತರ ಗೌರವ್‌ ಬಿಧುರಿ ಏಕಪಕ್ಷೀಯ ಹೋರಾಟದಲ್ಲಿ ಪೋಲೆಂಡಿನ ಐವಾನೊ ಜರೊಸ್ಲಾ ಅವರನ್ನು 5-0 ಅಂಕಗಳಿಂದ ಉರುಳಿಸಿದರು. ಇತ್ತೀಚೆಗಷ್ಟೇ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶಿವ ಥಾಪ ಕೂಡ 5-0 ಅಂತರದ ಗೆಲುವು ಸಾಧಿಸಿದರು. ಇವರ ಎದುರಾಳಿಯಾಗಿ ಅಖಾಡಕ್ಕಿಳಿದವರು ಸ್ಲೊವಾಕಿಯಾದ ಫಿಲಿಪ್‌ ಮೆಜರೋಸ್‌. 

ಮತ್ತೂಂದು 5-0 ವಿಕ್ರಮಕ್ಕೆ ಸಾಕ್ಷಿಯಾದವರು ಮನೋಜ್‌ ಕುಮಾರ್‌. ಅವರು ಆತಿಥೇಯ ನಾಡಿನ ನೆಚ್ಚಿನ ಬಾಕ್ಸರ್‌ ಡೇವಿಡ್‌ ಕಾರ್ಕ್‌ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದರು. ಸತೀಶ್‌ ಕುಮಾರ್‌ ಮಾತ್ರ ಜರ್ಮನಿಯ ಮ್ಯಾಕ್ಸ್‌ ಕೆಲ್ಲರ್‌ ವಿರುದ್ಧ ಒಂದಿಷ್ಟು ಪ್ರತಿರೋಧ ಎದುರಿಸಿದರು. ಮನೀಷ್‌ ಪನ್ವಾರ್‌ ಜರ್ಮನಿಯ ಇಬ್ರಾಜಿಮ್‌ ಬಝೇವ್‌ ವಿರುದ್ಧ ಪರಾಭವಗೊಂಡು ಬೆಳ್ಳಿಗೆ ಸಮಾಧಾನಪಟ್ಟರು.

Advertisement

ಇದರೊಂದಿಗೆ ಆ. 25ರಿಂದ ಸೆ. 2ರ ತನಕ ನಡೆಯಲಿರುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ ಭಾರತೀಯರ 15 ದಿನಗಳ ಸುದೀರ್ಘ‌ ಅಭ್ಯಾಸ ಹಾಗೂ ಸ್ಪರ್ಧೆ ಮುಕ್ತಾಯಗೊಂಡಿದೆ. ಇಲ್ಲಿ ಪಾಲ್ಗೊಂಡ ಅಮಿತ್‌, ಕವಿಂದರ್‌, ಗೌರವ್‌, ಶಿವ, ಮನೋಜ್‌, ಸುಮಿತ್‌ ಮತ್ತು ಸತೀಶ್‌ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜತೆಗೆ ವಿಕಾಸ್‌ ಕೃಷ್ಣನ್‌ ಕೂಡ ಇವರನ್ನು ಸೇರಿಕೊಳ್ಳಲಿದ್ದಾರೆ. ವಿಕಾಸ್‌ ಜೆಕ್‌ ಸ್ಪರ್ಧೆಯಿಂದ ಹೊರಗುಳಿದು ಪುಣೆಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next