Advertisement

ಜಾನಪದ ವಿವಿಯಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

05:22 PM May 17, 2018 | Team Udayavani |

ಹಾವೇರಿ: ದೇಶದ ಪ್ರಸಿದ್ಧ ಜನಪದ ಕಲೆಗಳ ಸಮ್ಮೇಳನ ಮಾಡುವ ಮೂಲಕ ಸಾಂಸ್ಕೃತಿಕ ವಿನಿಮಯ ಮಾಡುವ ಕಾರ್ಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ನಡೆಯಲಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಡಿ.ಬಿ. ನಾಯಕ ತಿಳಿಸಿದರು.

Advertisement

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಎತ್ನಿಕ್‌ ಆರ್ಟ್‌ ಕೌನ್ಸಿಲ್‌ ಆಫ್‌ ಇಂಡಿಯಾ ಹಾಗೂ ಭಾರತೀಯ ಜಾನಪದ ಸಂಶೋಧಕರ ಸಂಸ್ಥೆಗಳ ಸಹಯೋಗದಲ್ಲಿ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೇರಳದ ಜನಪ್ರಿಯ ರಂಗ ಕಲೆಯಾದ ತೆರಿಯಟ್ಟಂ ಕಲೆಯ ಪ್ರಾತ್ಯಕ್ಷಿಕೆ ಹಾಗೂ ವಿಚಾರ ಗೋಷ್ಠಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಎಲ್ಲಾ ಕಲೆಗಳನ್ನು ಇಲ್ಲಿಗೆ ಬರಮಾಡಿಕೊಳ್ಳುವ ಮೂಲಕ ಅನ್ಯ ರಾಜ್ಯಗಳ ಜನಪದ ಕಲೆಗಳ ಪ್ರಾತ್ಯಕ್ಷಿಕೆ ಮಾಡಿಸಿ ಅವುಗಳ ಬಗ್ಗೆ ಸಂಶೋಧನಾತ್ಮಕ ಅಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಲಾಗುವುದು. ಈ ಬಗೆಯ ಸಾಕಷ್ಟು ಕಾರ್ಯಗಳನ್ನು ಹಿಂದಿನಿಂದಲೂ ವಿವಿ ಮಾಡುತ್ತಾ ಬಂದಿದೆ ಎಂದು ಈ ಹಿಂದಿನ ವಿಶಿಷ್ಟ ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು.

ಸಾಂಸ್ಕೃತಿಕ ವಿನಿಮಯದೊಂದಿಗೆ ದೇಶದಲ್ಲಿ ಜಾನಪದ ಸಂಶೋಧನಾ ಕೇಂದ್ರಗಳೊಂದಿಗೆ ಸಂಬಂಧ ಬೆಸೆಯುವ ಕಾರ್ಯ ಮಾಡಲಾಗುತ್ತಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಜಾನಪದ ಅಧ್ಯಯನದ ಬಗ್ಗೆ ಸಮಗ್ರ ಜ್ಞಾನ ತಲುಪುವಂತೆ ಮಾಡಿ, ಜಾಗತಿಕ ಸವಾಲುಗಳನ್ನು ಎದುರಿಸುವಷ್ಟು ಸಮರ್ಥರನ್ನಾಗಿಸುವ ಉದ್ದೇಶ ವಿವಿಯದ್ದಾಗಿದೆ ಎಂದರು. 

ಆನ್ವಯಿಕ ನೆಲೆಯಲ್ಲಿ ಬಹುಶಿಸ್ತೀಯ ಅಧ್ಯಯನದ ಬಗ್ಗೆ ಜಾನಪದ ಅಧ್ಯಯನದ ಎಲ್ಲ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಮತ್ತು ಆ ಬಗೆಯ ಅವಕಾಶ ಕಲ್ಪಿಸುವ ಪೂರಕ ವಾತಾವರಣವನ್ನು ವಿವಿಯಲ್ಲಿ ಈಗಾಗಲೇ ನಿರ್ಮಾಣ ಮಾಡಲಾಗಿದೆ ಎಂದರು.

Advertisement

ಪ್ರಾತ್ಯಕ್ಷಿಕೆ ಹಾಗೂ ವಿಚಾರ ಗೋಷ್ಠಿ ಉದ್ಘಾಟಿಸಿದ ಕ್ಯಾಲಿಕಟ್‌ ವಿಶ್ವವಿದ್ಯಾಲಯದ ಜಾನಪದ ವಿಭಾಗದ ನಿವೃತ್ತ ಪ್ರಾಧ್ಯಾಪಕರು, ಖ್ಯಾತ ಜಾನಪದ ವಿದ್ವಾಂಸರಾದ ಡಾ| ಇ.ಕೆ. ಗೋವಿಂದ ವರ್ಮ ರಾಜಾ ಮಾತನಾಡಿ, ತೆರಿಯಟ್ಟಂ ಕಲೆ ಕೇರಳದಲ್ಲಿ ಭಾವನಾತ್ಮಕವಾಗಿ ಜನರಲ್ಲಿ ಇಂದಿಗೂ ರೂಢಿಯಲ್ಲಿದೆ. ಪರಿವಣ್ಣನ್‌ ಎಂಬ ತಳಸ್ತರದ ಪರಿಶಿಷ್ಟ ಸಮುದಾಯ ಈ ಆರಾಧನಾ ಕಲೆಯನ್ನು ಮುಂದುವರಿಸಿಕೊಂಡು ಬಂದಿದೆ. ಈ ಜನಪದ ಆರಾಧನಾ ಕಲೆಯ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ ಎಂದರು. 

ತೆರಿಯಟ್ಟಂ ಆರಾಧನಾ ಕಾರ್ಯಕ್ರಮ ನಿರ್ವಹಣೆ, ಅಧ್ಯಾತ್ಮಿಕ ಅಂಶ, ನೈಸರ್ಗಿಕ ಬಣ್ಣಗಳ ಬಳಕೆ, ವಾದ್ಯ ಪರಿಕರ, ಆಂಗಿಕ ಅಭಿನಯ (ಅಶಾಬ್ದಿಕ ಸಂವಹನ), ಕುಣಿತ, ಕಥಾವಸ್ತು ಹಾಗೂ ಕಲೆಯ ಮನೋವೈಜ್ಞಾನಿಕ ನೆಲೆಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳಬಹುದಾಗಿದೆ. ತೆರಿಯಟ್ಟಂ ನೃತ್ಯವು ಚಂಡೆ ಮತ್ತು ಕಂಚಿನ ವಾದ್ಯಗಳನ್ನು ಬಳಸಿಕೊಂಡು ಆಂಗಿಕ ಅಭಿನಯದ ಮೂಲಕ ಕಲಾವಿದ ಅಭಿವ್ಯಕ್ತಿಗೊಳಿಸುವ ಸಂದೇಶಗಳು ನೆರೆದ ಜನರಿಗೆ ಅರ್ಥವಾಗುತ್ತದೆ. ಪೌರಾಣಿಕ ಹಿನ್ನೆಲೆಯ ಕಥೆಗಳಲ್ಲಿ ಬರುವ ಪ್ರಮುಖ ಸನ್ನಿವೇಶಗಳನ್ನು ಉಲ್ಲೇಖೀಸಿ ತೆರಿಯಟ್ಟಂ ಕಲೆಯ ಪ್ರದರ್ಶನ ನಡೆಯುತ್ತದೆ ಎಂದು ಹೇಳಿದರು.

ಕರ್ನಾಟಕ ಜಾನಪದ ವಿವಿ ಕುಲಸಚಿವ ಪ್ರೊ| ಚಂದ್ರಶೇಖರ, ಭಾರತೀಯ ಜಾನಪದ ಸಂಶೋಧಕರ ಸಂಸ್ಥೆಯ ಕಾರ್ಯದರ್ಶಿ ಡಾ| ಭೈರೇಗೌಡ ವೇದಿಕೆಯಲ್ಲಿದ್ದರು. ವಿವಿಯ ಮೌಲ್ಯಮಾಪನ ಕುಲಸಚಿವ ಡಾ| ಎಂ.ಎನ್‌. ವೆಂಕಟೇಶ ಪ್ರಾಸ್ತಾವಿಕ ಮಾತನಾಡಿದರು. ನಂತರ ತೆರಿಯಟ್ಟಂ ಪ್ರದರ್ಶನ ಕಲೆಯ ಪ್ರಕಾರಗಳಾದ ಕರುವಿಳ್ಳಿ ವೆಳ್ಳಾಟ್ಟು, ಕುಡಿವೆಚ್ಚಾ ಥೈರಾ-ಗುರು, ಮೋರ್ಥಿ ಥೈರಾ ಹಾಗೂ ಕರೀಯಾತಾನ ಥೈರಾ ಅವುಗಳ ಪ್ರಾತ್ಯಕ್ಷಿಕೆ ಜರುಗಿತು ಮತ್ತು ಅದರ ಕುರಿತು ಚರ್ಚೆ ನಡೆಯಿತು.

ವಿಚಾರಗೋಷ್ಠಿ: ಕುಡಿವೆಚ್ಚಾ ಥೈರಾ-ಗುರು ನೃತ್ಯ ವಿಷಯವಾಗಿ ಡಾ| ಪಿ.ಸಿ. ರತಿಥಂಪತಿ ಮಾತನಾಡಿ, ಮನೆಗಳಲ್ಲಿ ನಡೆಯು ಶುಭ ಸಮಾರಂಭಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವಂತೆ ಕುಡಿವೆಚ್ಚಾ ಥೈರಾ-ಗುರು ಎಂಬ ಪ್ರಕಾರದ ತೆರಿಯಟ್ಟಂನ ಪ್ರದರ್ಶನ ಹಮ್ಮಿಕೊಳ್ಳುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಪೌರಾಣಿಕ ಕಥೆಯಾಧಾರಿತ ಸನ್ನಿವೇಶಗಳು ಪ್ರದರ್ಶನಗೊಳ್ಳುತ್ತವೆ. ರಾಸಾಯನಿಕ ಬಣ್ಣಗಳನ್ನು ಬಳಸದೆ ನೈಸರ್ಗಿಕವಾಗಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಪರಿಸರ- ಆರೋಗ್ಯ ಸ್ನೇಹಿ ಬಣ್ಣಗಳನ್ನು ಬಳಸುವ ರೂಢಿ ಇದೆ ಎಂದರು.

ಮೋರ್ಥಿ ಥೈರಾ ನೃತ್ಯ ವಿಷಯವಾಗಿ ಡಾ| ಪಿ. ವಿಜಿಷಾ ಮಾತನಾಡಿ, ಸೌಂದರ್ಯವನ್ನು ವಿಜೃಂಭಿಸುವ ಪ್ರದರ್ಶನ ಕಲೆಯಾಗಿರುವ ಮೋರ್ಥಿ ಥೈರಾ ಎಂಬುದು ತೆರಿಯಟ್ಟಂ ಕಲಾ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಕೇರಳದಲ್ಲಿ 50ಕ್ಕೂ ಹೆಚ್ಚು ಕಲಾ ತಂಡಗಳು ಇಂದು ಪ್ರದರ್ಶನ ಕಾರ್ಯದಲ್ಲಿ ತೊಡಗಿಕೊಂಡಿವೆ. ನಿಸರ್ಗ ದೇವತೆ ಅಂದರೆ ಮರ, ಗಿಡ, ಬಳ್ಳಿ ಹಾಗೂ ನಾಗ ದೇವತೆಗಳ ಕುರಿತ ಆರಾಧನೆ ಈ ಪ್ರದರ್ಶನಗಳಲ್ಲಿ ಕಂಡುಬರುತ್ತದೆ. ಆ ಮೂಲಕ ಪರಿಸರ ಕಾಳಜಿ ವ್ಯಕ್ತಪಡಿಸುವ ಬಗ್ಗೆ ವಿವರಿಸಿದರು.

ಸಂಜೆ 4:30ಕ್ಕೆ ವಿಚಾರಗೊಷ್ಠಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು. ಜನಪದ ಕಲಾ ಅಧ್ಯಾಪಕ ಶರೀಫ್‌ ಮಾಕಪ್ಪನವರ ಮತ್ತು ಅವರ ತಂಡ ಪ್ರಾರ್ಥಿಸಿದರು. ಸಹಾಯಕ ಕುಲಸಚಿವ ಶಹಜಾಹನ್‌ ಮುದಕವಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ| ವಿಜಯ ಲಕ್ಷ್ಮೀಗೇಟಿಯವರ ಮತ್ತು ಅಭಿನಯ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕ ನಿಸಾರ್‌ ಆಹಮ್ಮದ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next