Advertisement

ಸಾಂಸ್ಕೃತಿಕ ಕಲಾ ಮಹೋತ್ಸವ ಸಮಾರೋಪ

05:05 PM Mar 13, 2019 | Team Udayavani |

ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಒಂದು ಜಾತ್ಯತೀತ, ಭಾಷಾತೀತ ಸಂಸ್ಥೆಯಾಗಿದ್ದು, ವಿವಿಧ ಕ್ಷೇತ್ರಗಳ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಶೈಕ್ಷಣಿಕ ಮತ್ತು ಆರೋಗ್ಯ ನಿಧಿಯ ಮುಖಾಂತರ ಬಡ ಕಲಾವಿದರ  ಕಣ್ಣೀರೊರೆಸುವ ಕಾರ್ಯವೆಸಗುತ್ತಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಕಲಾವಿದರಲ್ಲಿ ಕಲಾ ಶ್ರೀಮಂತಿಕೆ ಇದ್ದರೂ ಅವರು ಆರ್ಥಿಕವಾಗಿ ಶ್ರೀಮಂತರಲ್ಲ. ಈ ನಿಟ್ಟಿನಲ್ಲಿ ಅವರ ಬಾಳಿಗೆ ಬೆಳಕಾಗುವ ಕಾರ್ಯವು ಈ ಪರಿಷತ್ತಿನ ಮುಖೇನ ಆಗುತ್ತಿದ್ದು, ಪರಿಷತ್ತಿಗೆ ಸ್ವಂತ ಕಚೇರಿಯ ಅಗತ್ಯವಿದ್ದು, ಕಲಾಭಿಮಾನಿಗಳ ಸಹಕಾರದೊಂದಿಗೆ ಅತಿ ಶೀಘ್ರವೇ ಈ ಕಾರ್ಯ ನೆರವೇರುವಂತಾಗಲಿ ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ನುಡಿದರು.

Advertisement

ಮಾ. 9ರಂದು ಸಾಂತಾಕ್ರೂಜ್‌ ಬಿಲ್ಲವ ಭವನದಲ್ಲಿ  ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಜಂಟಿ ಆಯೋಜನೆಯಲ್ಲಿ ನಡೆದ 12ನೇ ವಾರ್ಷಿಕ ಸಾಂಸ್ಕೃತಿಕ ಕಲಾ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಡಾ| ಆರ್‌. ಕೆ. ಶೆಟ್ಟಿ ಪ್ರಾಯೋಜಿತ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿದ ಎಚ್‌. ಬಿ. ರಾವ್‌ ಅವರ ಸಿದ್ಧಿ-ಸಾಧನೆಗಳು ಪ್ರಶಸ್ತಿಗೆ ಪೂರಕವಾಗಿದೆ. ಅವರಲ್ಲಿ ಜ್ಞಾನ ಸಾಧನೆ, ವಿದ್ವತ್ತು, ಸಾಧಿಸುವ ಛಲ ಇದೆ. ಅವರ ಸಂಶೋಧನಾ ಗ್ರಂಥ “ಅಣಿ ಅರದಾಳ   ಸಿರಿ ಸಿಂಗಾರ’ ತುಳುನಾಡ ಸಂಸ್ಕೃತಿ, ಭೂತಾರಾಧನೆಯ ಸುಮಾರು 400-500 ವರ್ಷಗಳ ಪುರಾತನ ಪರಂಪರೆಯನ್ನು ಸಂಶೋಧಿಸಿ ಪ್ರಕಟಿಸಲಾಗಿದ್ದು, ಇಂತಹ ಮಹಾನ್‌ ಸಾಧಕರಿಗೆ ಇಂತಹ ಪ್ರಶಸ್ತಿಯನ್ನಿತ್ತ ನಾವೇ ಧನ್ಯರು. ನಿಸ್ವಾರ್ಥ ಮನದಿಂದ ಕಾರ್ಯವೆಸಗುತ್ತಿರುವ ಕಾರ್ಯಕರ್ತರಿಗೆ ಮತ್ತು ಪರಿಷತ್ತಿನ ಸದಸ್ಯರಿಗೆ ವಂದನೆಗಳು ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ಸಂಘಟಕ ಎಚ್‌. ಬಿ. ಎಲ್‌. ರಾವ್‌ ಇವರಿಗೆ ಕಲಾಶ್ರೀ ಪ್ರಶಸ್ತಿಯನ್ನು ಪ್ರದಾನಿಸಿ, ಸ್ಮರಣಿಕೆ, ಫಲಪುಷ್ಪ, ಶಾಲು, ಮೈಸೂರು ಪೇಟ ತೊಡಿಸಿ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್‌ ಮಾತನಾಡಿ, ಮನೆ ಮನೆಯಲ್ಲಿಯೂ ವಿವಿಧ ಪ್ರಕಾರದ ಪ್ರತಿಭೆಗಳಿದ್ದಾರೆ. ಕಲ್ಲಿನೊಳಗೆ ಅವಿತಿರುವ ಶಿಲ್ಪದಂತೆ ಶಿಲ್ಪಿಯ ಉಳಿ ಪೆಟ್ಟು ಬಿದ್ದಾಗ ಮಾತ್ರ ಅದಕ್ಕೊಂದು ಸುಂದರ ರೂಪ ಪಡೆದು ಶಿಲ್ಪವಾಗುತ್ತದೆ. ಅದೇ ರೀತಿ ಎಲ್ಲರೂ ಶ್ರದ್ಧೆ, ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ಸಾಧನೆ ಸಾಧ್ಯ. ಇದಕ್ಕೆ ಸುರೇಂದ್ರ ಕುಮಾರ್‌ ಹೆಗ್ಡೆ ಇವರು ಮಾದರಿ. ದೀಪದಂತಿರುವ ಪ್ರತಿಭೆಗಳಿಗೆ ಎಣ್ಣೆಯಂತೆ ಪ್ರೋತ್ಸಾಹವನ್ನಿತ್ತು ಬೆಳಗಿಸುವ ಕಾರ್ಯ ಪರಿಷತ್ತು ಮಾಡುತ್ತಿದ್ದು ಶ್ಲಾಘನೀಯ ಎಂದರು.

ಕಲಾಶ್ರೀ ಪ್ರಶಸ್ತಿಯ ಪ್ರಾಯೋಜಕ ಡಾ| ಆರ್‌. ಕೆ. ಶೆಟ್ಟಿ ಅವರು ಮಾತನಾಡಿ, ಕಲಾವಿದರು ನಮ್ಮೊಂದಿಗಿದ್ದರೆ ಕಲೆ, ಸಂಸ್ಕೃತಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕಲಾವಿದರ ಸೇವೆ ಮಾಡುವ ಭಾಗ್ಯ ನನಗೆ ಒದಗಿ ಬರಲು ಪರಿಷತ್ತು ಕಾರಣವಾಗಿದೆ. ಸಹಕರಿಸಿದ ಸರ್ವರಿಗೂ ವಂದನೆಗಳು, ಕಲಾಭಿಮಾನಿಗಳೆಲ್ಲರ ಪ್ರೋತ್ಸಾಹ, ಸಹಕಾರ ಕನ್ನಡಿಗರ ಕಲಾವಿದರ ಪರಿಷತ್ತಿಗಿರಲಿ ಎಂದರು.

ಇನ್ನೋರ್ವ ಅತಿಥಿ ಉದ್ಯಮಿ ಅನಿಲ್‌ ಶೆಟ್ಟಿ ಏಳಿಂಜೆ ಅವರು ಮಾತನಾಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರಿರುವ  ಈ ವೇದಿಕೆಯನ್ನು ಕಂಡು ಸಂತಸವಾಯಿತು. ಕಲಾವಿದರ ಒಳಿತಿಗಾಗಿ ಶ್ರಮಿಸು ತ್ತಿರುವ ಕನ್ನಡಿಗ ಕಲಾವಿದರ ಪರಿಷತ್ತು ಸುರೇಂದ್ರ ಕುಮಾರ್‌ ಹೆಗ್ಡೆ ಅವರ ಸಾರಥ್ಯದೊಂದಿಗೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದು, ನಮ್ಮ ಪ್ರೋತ್ಸಾಹ ಸದಾಯಿದೆ ಎಂದರು.

Advertisement

ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮಾತನಾಡಿ, ಜೀವನದಲ್ಲಿ  ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಹವ್ಯಾಸಗಳಿರುತ್ತದೆ. ಅದರಲ್ಲಿ ಸಂಗೀತ, ನೃತ್ಯ, ಚಿತ್ರಕಲೆ, ಮೊದಲಾದ ಸಾಂಸ್ಕೃತಿಕ ಕಲೆಗಳ ಹವ್ಯಾಸಗಳು ನಮ್ಮ ಬಾಳನ್ನು ಸುಂದರ ಮತ್ತು ಆರೋಗ್ಯಪೂರ್ಣವಾಗಿಸುತ್ತದೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಪರಿಷತ್ತಿನ ಕಾರ್ಯ ಗಳು ಅಭಿನಂದನೀಯ ಮತ್ತು ನಿರಂತರವಾಗಿ ನಡೆಯುತ್ತಿರಲಿ ಎಂದರು.

ವಿವೇಕ ಕಾಮರ್ಸ್‌ ಆಫ್‌ ಕಾಲೇಜಿನ ಪ್ರಾಂಶುಪಾಲೆ ಡಾ| ವಿಜೇತಾ ಎಸ್‌. ಶೆಟ್ಟಿ ಅವರು ಮಾತನಾಡಿ, ಬದುಕಿನಲ್ಲಿ ಶಿಕ್ಷಣ ಕೇವಲ ವಿದ್ಯೆಯಾಗಬಾರದು. ಎಲ್ಲ ಅನುಭವಗಳೊಂದಿಗೆ ಮೈಗೂ ಡಿಕೊಂಡಿರಬೇಕು. ಮಾತ್ರವಲ್ಲದೆ ನಾನು ಕೂಡಾ ಕಲಾವಿದೆಯಾಗಿ ಬೆಳಕಿಗೆ ಬಂದವಳು. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿ
ಕೊಂಡಾಗ ವೇದಿಕೆಗಳು ತಾನಾಗಿಯೇ ದೊರೆಯುತ್ತವೆೆ. ಉತ್ತಮ ಸಂದೇಶ ನೀಡುವುದೇ ಕಲಾವಿದರ ಕರ್ತವ್ಯವು ಕೂಡಾ. ನಮ್ಮ ಮನೋಬಲವನ್ನು ಹೆಚ್ಚಿಸುವ ಕಾರ್ಯವನ್ನು ಕಲೆಯು ಮಾಡುತ್ತದೆ. ಈ ಸಂಸ್ಥೆಯ ಯಶಸ್ಸಿನ ಪಥದತ್ತ ಸಾಗಲಿ ಎಂದರು.

ಬಿಎಸ್‌ಕೆಬಿ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ವಾಮನ್‌ ಹೊಳ್ಳ ಮಾತನಾಡಿ, ಸಮಯದ ಕೊರತೆಯ ಹೊರತಾಗಿಯೂ ಕರ್ಮ, ವೃತ್ತಿಯ, ಜತೆಗೆ ಕಲಾವೃತ್ತಿಗೆ ಹೊಂದಿಸಿ ಕಲೆ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾರ್ಯ ಅಭಿನಂ ದನೀಯ. ಪರಿಷತ್ತಿನ ಜನಪರ ಹಾಗೂ ಸಾಂಸ್ಕೃತಿಕ ಕಾರ್ಯಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಅಭಿನಯ ಮಂಟಪ ಮುಂಬಯಿ ಅಧ್ಯಕ್ಷ ಬಾಲಕೃಷ್ಣ ಡಿ. ಶೆಟ್ಟಿ ಇವರು ಮಾತನಾಡಿ, 12 ವರ್ಷಗಳ ಹಿಂದೆ ಎಸ್‌. ಟಿ. ವಿಜಯಕುಮಾರ್‌ ಇವರ ನೇತೃತ್ವದಲ್ಲಿ ಸ್ಥಾಪನೆಯಾದ ಕನ್ನಡಿಗ ಕಲಾವಿದರ ಪರಿಷತ್ತು ಇಂದು ಸುರೇಂದ್ರ ಕುಮಾರ್‌ ಹೆಗ್ಡೆ ಅವರ ಸಾರಥ್ಯದಲ್ಲಿ ಪ್ರಗತಿಪರ ಬೆಳವಣಿಗೆಯೊಂದಿಗೆ ಸಾಗುತ್ತಿದೆ. ನಮ್ಮೆಲ್ಲರ ಸಹಕಾರ ಪರಿಷತ್ತಿನೊಂದಿಗಿದ್ದು, ಕಲಾವಿದರ ಒಳಿತಿಗಾಗಿ ಸಹಕಾರಿಯಾಗಲಿ ಎಂದರು.

ನವ ತರುಣ ಮಿತ್ರ ಮಂಡಳಿ ಮೀರಾರೋಡ್‌ ಇದರ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ, ತವರೂರಿನ ಋಣ ಸಂದಾಯ ಮಾಡುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿದ್ದೇನೆ. ಪರಿಷತ್ತಿಗೆ ಸದಾ ನನ್ನ ಅಳಿಲ ಸೇವೆ ಸಲ್ಲಿಸುವ ಎಂದರು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಕಲಾವಿದ ಸುನಿಲ್‌ ರಾವ್‌ ಇವರ ಪರಿವಾರಕ್ಕೆ ಆರೋಗ್ಯ ನಿಧಿಯನ್ನು ಸಮರ್ಪಿಸಲಾಯಿತು.
ಅತಿಥಿಗಳಾಗಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ  ಥಾಣೆ ಇದರ ಸಂಸ್ಥಾಪಕ ಶಿವಪ್ರಸಾದ್‌ ಪೂಜಾರಿ ಪುತ್ತೂರು, ಸಿಎ ಗಣಪತಿ ಎಂ. ಕಾಮತ್‌, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಾಬಾ ಪ್ರಸಾದ್‌ ಅರಸ, ಗೌರವ ಕೋಶಾಧಿಕಾರಿ ಪಿ. ಬಿ. ಚಂದ್ರಹಾಸ್‌, ಉಪಾಧ್ಯಕ್ಷ ಅರವಿಂದ ಶೆಟ್ಟಿ ಕೊಜಕ್ಕೊಳಿ, ಜತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜತೆ ಕೋಶಾಧಿಕಾರಿ ನವೀನ್‌ ಶೆಟ್ಟಿ ಇನ್ನಬಾಳಿಕೆ, ತಾರಾ ಬಂಗೇರ ಉಪಸ್ಥಿತರಿದ್ದರು. ಅರವಿಂದ ಶೆಟ್ಟಿ ಕೊಜಕ್ಕೊಳಿ ಅತಿಥಿಗಳನ್ನು ಪರಿಚಯಿಸಿದರು.

ಕಲಾ ಸಂಘಟಕ ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಬಾ ಪ್ರಸಾದ್‌ ಅವರ ವಂದಿಸಿದರು. ಕೊನೆಯಲ್ಲಿ ಪರಿಷತ್ತಿನ ಸದಸ್ಯ ಕಲಾವಿದರಿಂದ ರಮೇಶ್‌ ಶಿವಪುರ ನಿರ್ದೇಶನದಲ್ಲಿ ತಾಳಮದ್ದಳೆ ಕನ್ನಡ ನಾಟಕ ಪ್ರದರ್ಶನಗೊಂಡಿತು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸÇಸಾಗಿತ್ತು. ಕಲಾಭಿ ಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.      

ನನ್ನ ಜೀವನದಲ್ಲಿ ಕೀರ್ತಿ, ಹೆಸರು, ಚಪ್ಪಾಳೆಗಾಗಿ ಎಂದಿಗೂ ಸಾಧನೆ ಅಥವಾ ಕೆಲಸ ಮಾಡಿಲ್ಲ. ತಾನು ಬೆಳೆಯುವುದರ ಜೊತೆಗೆ ನಮ್ಮೊಂದಿಗೆ ಇದ್ದವರನ್ನು ಬೆಳೆಸಬೇಕು ಎಂಬ ಸದುದ್ಧೇಶದೊಂದಿಗೆ ಕೆಲಸ ಮಾಡುತ್ತಾ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡದೆ, ಬೆಳೆದು ಬಂದವನು. ಎಲ್ಲಾ ಕಾರ್ಯಕ್ಕೂ ಸೈ ಎನ್ನುವವನೇ ನಿಜವಾದ ಕಲಾವಿದ. ಈ ಗುಣ ಪರಿಷತ್ತಿನ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರಲ್ಲಿದೆ. ನೀವು ಪ್ರೀತ್ಯಾಧಾರಗಳಿಂದ ನನಗಿತ್ತ ಈ ಗೌರವಕ್ಕೆ ಋಣಿಯಾಗಿದ್ದೇನೆ. ಮುಂದಿನ ಬಾರಿ ಪರಿಷತ್ತಿನ ಕಾರ್ಯಕ್ರಮ ವಾಶಿಯಲ್ಲಿ ಸ್ಥಾಪನೆಯಾದ ಕನ್ನಡ ಭವನದಲ್ಲಿ ನೆರವೇರಿಸುವ ಭರವಸೆ ನೀಡುತ್ತೇನೆ. ಪರಿಷತ್ತಿನ ಮುಖಾಂತರ ಕಲಾವಿದರ ಪಾಲಿಗೆ ಇನ್ನಷ್ಟು ಉತ್ತಮ ಸೇವೆಗಳು ಬರುವಂತಾಗಲಿ.
 – ಎಚ್‌. ಬಿ. ಎಲ್‌. ರಾವ್‌ , ಕಲಾಶ್ರೀ ಪ್ರಶಸ್ತಿ ಪುರಸ್ಕೃತರು

 ಚಿತ್ರ-ವರದಿ :    ಪ್ರಭಾಕರ ಬೆಳವಾಯಿ

Advertisement

Udayavani is now on Telegram. Click here to join our channel and stay updated with the latest news.

Next