Advertisement

ಸಿ.ಟಿ.ರವಿ ಕಾರು ಡಿಕ್ಕಿ: ಯುವಕರ ಬಲಿ

07:29 AM Feb 20, 2019 | |

ಕುಣಿಗಲ್‌: ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು, ಇಬ್ಬರು ಯುವಕರು ಸ್ಥಳದಲ್ಲಿಯೇ ಧಾರಣವಾಗಿ ಮೃತಪಟ್ಟು, ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಉರ್ಕೆಹಳ್ಳಿ ಬೈಸ್‌ ಪಾಸ್‌ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಬುಧವಾರ ಬೆಳಗಿನ ಜಾವ 1.45ರಲ್ಲಿ ಸಂಭವಿಸಿದೆ.

Advertisement

ಕನಕಪುರ ತಾಲೂಕು, ಸಾತನೂರು ಹೋಬಳಿ ಸೂರನಹಳ್ಳಿ ಗ್ರಾಮದ ಎಸ್‌.ಪಿ.ಸುನೀಲ್‌ಗೌಡ (28), ಎಸ್‌.ಜಿ.ಶಶಿಕುಮಾರ್‌ (30) ಮೃತ ದುರ್ದೈವಿಗಳು. ಅದೇ ಗ್ರಾಮದ ಮುನಿರಾಜು, ಎಸ್‌.ಎನ್‌.ಜಯಚಂದ್ರ, ಎಸ್‌.ಆರ್‌.ಮಂಜುನಾಥ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ.

ಸಿ.ಟಿ.ರವಿ ಪಾರು: ರಸ್ತೆ ಬದಿಯಲ್ಲಿ ನಿಂತಿದ್ದ ಕಾರುಗಳಿಗೆ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಭೀಕರವಾಗಿ ಡಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು ಸಿ.ಟಿ.ರವಿ ಸೇರಿದಂತೆ ಅವರೊಂದಿಗೆ ಇದ್ದ ಗನ್‌ಮ್ಯಾನ್‌ ರಾಜಾನಾಯಕ್‌ ಹಾಗೂ ಕಾರು ಚಾಲಕ ಆಕಾಶ್‌ಗೆ ಸಣ್ಣಪುಟ್ಟ ಗಾಯವಾಗಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಐಪಿಸಿ 279, 337, 304 (ಎ)  ಪ್ರಕರಣ ದಾಖಲಾಗಿದೆ.

ಪ್ರತಿಭಟನೆ: ಘಟನೆಗೆ ಕಾರಣರಾದ ಶಾಸಕ ಸಿ.ಟಿ.ರವಿ ಸ್ಥಳಕ್ಕೆ ಆಗಮಿಸಬೇಕು ಹಾಗೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮೃತರ ಸಂಬಂಧಿಕರು ಕುಣಿಗಲ್‌ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಸಿ.ಟಿ.ರವಿ ವಿರುದ್ಧ ಧಿಕ್ಕಾರ ಕೂಗಿದರು. ಮೃತ ಸಂಬಂಧಿ ಪ್ರಸಾದ್‌ಗೌಡ ಮಾತನಾಡಿ, ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ನಮ್ಮ ಹುಡುಗರಿಗೆ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣವಾಗಿದೆ.

ಆದರೆ, ಕಾರಿನಲ್ಲಿದ್ದ ರವಿ ಸೌಜನ್ಯಕ್ಕಾದರೂ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ಅವರನ್ನು ಆಸ್ಪತ್ರೆಗೆ ಸೇರಿಸದೇ ತಮ್ಮ ಗೂಂಡಾಗಳನ್ನು ಬಿಟ್ಟು ಘಟನೆ ಮುಚ್ಚಿಹಾಕಲು ಯತ್ನಿಸಿ ಖಾಸಗಿ ವಾಹನದಲ್ಲಿ ಬೆಂಗಳೂರಿಗೆ ತೆರಳಿದರು. ಇವರಿಗೆ ಮಾನವೀಯತೆಯೇ ಇಲ್ಲ ಎಂದು ಆರೋಪಿಸಿದರು.

Advertisement

ಪೊಲೀಸರ ಎಡವಟ್ಟು: ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಶಶಿಕುಮಾರ ಕಾಲಿನ ಪಾದ ತುಂಡಾಗಿ ಸುಮಾರು 50 ಅಡಿ ದೂರಕ್ಕೆ ಬಿದ್ದಿತ್ತು. ಆದರೆ, ಪೊಲೀಸರು ಇದನ್ನು ಗಮನಿಸದೇ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದರು. ಆದರೆ, ತನಿಖೆಗೆ ಸಿಪಿಐ ಅಶೋಕ್‌ಕುಮಾರ್‌ ಸ್ಥಳಕ್ಕೆ ತೆರಳಿದ್ದಾಗ ಕಾಲು ತುಂಡಾಗಿ ಬಿದ್ದಿರುವುದನ್ನು ಗಮನಿಸಿ ಅದನ್ನು ಆಸ್ಪತ್ರೆಗೆ ಕಳಿಸಿಕೊಟ್ಟರು.

ಘಟನೆ ವಿವರ: ಕಾರಿನಲ್ಲಿದ್ದ ಎಸ್‌.ಪುನೀತ್‌ ಘಟನೆ ಬಗ್ಗೆ “ಉದಯವಾಣಿ’ಗೆ ವಿವರಿಸಿದ್ದು ಹೀಗೆ. ಮಂಡ್ಯ ಜಿಲ್ಲೆ ಅಡಿಷನಲ್‌ ಎಸ್ಪಿ ಬಲರಾಮೇಗೌಡ ಅವರ ಕುಟುಂಬದ ಕಾರು ಚಾಲಕ ಎಸ್‌.ಎನ್‌.ಜಯಚಂದ್ರನ ಹುಟ್ಟುಹಬ್ಬ ಆಚರಿಸಲು ಫೆ.15 ರಂದು 13 ಮಂದಿ ಸ್ನೇಹಿತರೊಂದಿಗೆ ಸ್ಕಾರ್ಪಿಯೋ ಹಾಗೂ ಶಿಫ್ಟ್ ಡಿಜೈರ್‌ ಎರಡು ಕಾರಿನಲ್ಲಿ ಸೂರನಹಳ್ಳಿ ಗ್ರಾಮದಿಂದ ಹೊರಟು, ಹೊರನಾಡು, ಶೃಂಗೇರಿ ಹಾಗೂ ಸಿರಿಮನೆ ಫಾಲ್ಸ್‌ ನೋಡಿಕೊಂಡು ಬಳಿಕ ಕುಂದಾಪುರಕ್ಕೆ ತೆರಳಿ ಅಲ್ಲಿ ಜಯಚಂದ್ರನ ಹುಟ್ಟು ಹಬ್ಬ ಆಚರಿಸಿದೆವು.

ಬಳಿಕ ಫೆ.18 ಸೋಮವಾರ ಸಂಜೆ 4 ಗಂಟೆಗೆ ಕುಂದಾಪುರ ಬಿಟ್ಟು ಹಾಸನ, ಎಡಿಯೂರು ಮಾರ್ಗವಾಗಿ ತಮ್ಮ ಗ್ರಾಮಗಳಿಗೆ ತೆರಳಲು ಕುಣಿಗಲ್‌ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿ 75ರ ಉರ್ಕಿಹಳ್ಳಿ ಗ್ರಾಮದ ಬಳಿಗೆ ಬಂದೆವು. ಕಾರಿನಲ್ಲಿ ಇದ್ದ ಕೆಲವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಬೆಂಗಳೂರು ಕಡೆ ಹೋಗಲು ಹಾಗೂ ಮತ್ತೆ ಕೆಲವರು ಮದ್ದೂರು ಮಾರ್ಗವಾಗಿ ಸೂರನಹಳ್ಳಿ ಕಡೆಗೆ ಹೊಗಬೇಕಾದ ಕಾರಣ ಎರಡು ಕಾರುಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಲಗೇಜನ್ನು ತೆಗೆದುಕೊಳ್ಳುತ್ತಿರಬೇಕಾದರೆ

ಇದೇ ಮಾರ್ಗದಲ್ಲಿ ಬಂದ ಕೆಎ 18 ಝಡ್‌ 7299 ನಂಬರ್‌ನ ಫಾಚೂನರ್‌ ಕಾರಿನ ಚಾಲಕ ಅತಿ ವೇಗದಿಂದ ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕಾರ್ಪಿಯೋ ಕಾರಿಗೆ ಮೊದಲು ಡಿಕ್ಕಿ ಹೊಡೆದು ಬಳಿಕ ಶಿಫ್ಟ್ ಡಿಜೈರ್‌ ಕಾರಿಗೆ ಅಪ್ಪಳಿಸಿ ಕಾರಿನ ಮುಂಭಾಗದಲ್ಲಿ ಲೇಗೇಜ್‌ ಹಿಡಿಕೊಂಡು ನಿಂತಿದ್ದ ಸುನೀಲ್‌ಗೌಡ, ಶಶಿಕುಮಾರ್‌, ಮುನಿರಾಜು, ಎಸ್‌.ಎನ್‌.ಜಯಚಂದ್ರ, ಎಸ್‌.ಆರ್‌.ಮಂಜುನಾಥ್‌ಗೆ ಡಿಕ್ಕಿ ಹೊಡೆಯಿತು. ಇದರಿಂದ ನಿಂತಿದ್ದ ಸುನೀಲ್‌ಗೌಡ, ಶಶಿಕುಮಾರ್‌ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟರು. ಉಳಿದ ಮೂರು ಮಂದಿ ಗಾಯಗೊಂಡರು ಎಂದು ವಿವರಿಸಿದ್ದಾರೆ.

ಪ್ರವಾಸಕ್ಕೆ ಮನೆಯವರ ವಿರೋಧ: ಪ್ರವಾಸಕ್ಕೆ ಹೊಗಬೇಡಿ ಎಂದು ನಮ್ಮ ಮನೆಯವರು ಹೇಳಿದ್ದರು. ಆದರೆ, ಅವರ ಮಾತು ಮೀರಿ ನಾವು ಪ್ರವಾಸಕ್ಕೆ ಹೋದೆವು. ಈ ಘಟನೆಯಲ್ಲಿ ನಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ. ಈ ಸಂಬಂಧ ಮನೆಯವರಿಗೆ ಏನು ಹೇಳಬೇಕು ಎಂದು ಕಣ್ಣೀರು ಹಾಕಿದ ಪುನೀತ್‌, ನಮಗೆ ಯಾವುದೇ ಪರಿಹಾರ ಬೇಡ. ಆದರೆ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಅಷ್ಟೇ ಎಂದು ಆಗ್ರಹಿಸಿದರು.

ಪೋಷಕರ ಅಕ್ರಂದನ: ಜವರಾಯನಂತೆ ಬಂದ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು, ಹುಟ್ಟುಹಬ್ಬದ ಸಂಭ್ರಮ ಮುಗಿಸಿಕೊಂಡು ಆಗ ತಾನೆ ತಮ್ಮ ಊರಿಗೆ ತೆರಳಲು ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮ ಹುಡುಗರ ಮೇಲೆ ಎರಗಿ ಇಬ್ಬರನ್ನು ಬಲಿ ತೆಗೆದುಕೊಂಡು ಮೂರು ಮಂದಿಯನ್ನು ಗಾಯಗೊಳಿಸಿ ನಮ್ಮನ್ನು ತಬ್ಬಲಿಯಾಗಿ ಮಾಡಿದ್ದಾರೆ ಎಂದು ಮೃತನ ಪೋಷಕರು ಇಲ್ಲಿನ ಸರ್ಕಾರಿ ಆಸ್ಪತ್ರೆ ಶವಾಗಾರದ ಬಳಿ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ರಾಜಕೀಯ ಪ್ರಭಾವಕ್ಕೆ ಮಣಿದ ಪೊಲೀಸರು!
ಕುಣಿಗಲ್‌:
ಉರ್ಕೆಹಳ್ಳಿ ಬಳಿ ಕಾರು ಅಪಘಾತಕ್ಕೆ ಸಂಬಂಧಿದಂತೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ವಿರುದ್ಧ ಕ್ರಮಕೈಗೊಂಡು ಅವರನ್ನು ಬಂಧಿಸಬೇಕೆಂದು ಮೃತನ ಸಂಬಂಧಿಗಳು ಹಾಗೂ ಸ್ನೇಹಿತರು ಬಲವಾಗಿ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ 75 ಹಾಗೂ ಕುಣಿಗಲ್‌ ಸರ್ಕಾರಿ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು.

ಆದರೆ, ಸಿ.ಟಿ.ರವಿ ಅವರನ್ನು ಬಂಧಿಸುವಂತೆ ಆಗ್ರಹಿಸಿದವ‌ರು ಠಾಣೆಗೆ ನೀಡಿರುವ ದೂರಿನಲ್ಲಿ ಸಿ.ಟಿ.ರವಿ ಅವರ ವಾಹನದ ಸಂಖ್ಯೆ ಹೊರತು ಪಡಿಸಿದರೆ, ಸಿ.ಟಿ.ರವಿ ಅವರಾಗಲಿ ಹಾಗೂ ಕಾರು ಚಾಲಕನ ಹೆಸರಾಗಲಿ, ದೂರಿನಲ್ಲಿ ಬರೆದಿರುವುದಿಲ್ಲ, ಎಫ್‌ಐಆರ್‌ನಲ್ಲಿ ದಾಖಲಿಸಿರುವುದಿಲ್ಲ. ರಾಜಕೀಯ ಪ್ರಭಾವಕ್ಕೆ ಪೊಲೀಸರು ಒಳಗಾಗಿ ದೂರುದಾರರಿಗೆ ಹೆದರಿಸಿ ಹೆಸರು ಕೈ ಬಿಡಿಸಿರಬಹುದು ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಂಗಳವಾರ ಕಾರು ಚಾಲಕ ಆಕಾಶ್‌ ಅವರನ್ನು ಬಂಧಿಸಲಾಗಿದೆ ಎಂದು ಖಚಿತ ಮಾಹಿತಿ ಇದ್ದರೂ ಪಿಎಸ್‌ಐ ಪುಟ್ಟೇಗೌಡ, ಸಿಪಿಐ ಅಶೋಕ್‌ಕುಮಾರ್‌, ಡಿವೈಎಸ್‌ಪಿ ರಾಮಲಿಂಗೇಗೌಡ ಬಂಧಿಸಿಲ್ಲ ಎಂದು ಹೇಳಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಾಮಾನ್ಯ ವ್ಯಕ್ತಿಗಳು ಈ ರೀತಿ ಅಪಘಾತ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವ ಪೊಲೀಸರು ಈ ಕೇಸ್‌ನಲ್ಲಿ ಏಕೆ ತಾರತಮ್ಯ ಮಾಡಿದ್ದಾರೆ ಎಂದು ನಾಗರೀಕರ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next