Advertisement

ಬೆಳೆ ಕಿತ್ತು ಬಿಸಾಡಿದ ಅನ್ನದಾತ

02:28 PM Aug 09, 2017 | |

ವಾಡಿ: ಕೆಂಡಕಾರುವ ಸೂರ್ಯನ ತಾಪಕಂಡು ಕಂಗೆಟ್ಟ ಕೃಷಿಕರು, ಬರ ಎಳೆದ ಬರೆಗೆ ಬಸವಳಿದು ಹೋಗಿದ್ದಾರೆ. ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ರೈತರು, ಬೆಳೆದ ಬೆಳೆಯನ್ನು ಕಿತ್ತು ಬಿಸಾಡಿ ಕಣ್ಣೀರಿಟ್ಟಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸೇರಿದಂತೆ ವಿವಿಧೆಡೆ ಬೆಳೆಯಲಾಗಿದ್ದ ಮುಂಗಾರು ಬೆಳೆ ಬಾಡಿ ಬೆಂಡಾಗಿವೆ. ಭೂಮಿಯಲ್ಲಿ ತೇವಾಂಶ ಕೊರತೆಯುಂಟಾಗಿ ಪೈರುಗಳು ಕೊಳೆತು ಕಾಯಿ ಕಟ್ಟುವ ಮುಂಚೆಯೇ ನೆಲಕಚ್ಚಿವೆ. ನೆತ್ತಿ ಸುಡುವ ರಣಬಿಸಿಲು ಮುಂಗಾರು ಬೆಳೆಗಳ
ಮಾರಣಹೋಮಕ್ಕೆ ಕಾರಣವಾಗಿದೆ. ಧಾರಾಕರವಾಗಿ ಸುರಿದು ಶುಭಾರಂಭ ನೀಡಿದ್ದ ಮುಂಗಾರು ಮಳೆ ನಂಬಿ ಅ ಧಿಕ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಹೆಸರು, ಉದ್ದು, ಎಳ್ಳು ಬಿತ್ತನೆ ಮಾಡಿದ್ದರು. ಹೇಳ ಹೆಸರಿಲ್ಲದಂತೆ ಮರೆಯಾದ ಮಳೆ ರೈತರ ಕಣ್ಣೀರಿಗೆ ಕಾರಣವಾಗಿದೆ. ತಿಳಿಮೋಡದ ಆಗಸದಲ್ಲಿ ನೇಸರನ ಪ್ರಕೋಪ ಕಂಡ ಈ ಭಾಗದ ರೈತರು, ಮಳೆ ಬೀಳುವ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಒಣಬೇಸಾಯವನ್ನೇ ನಂಬಿಕೊಂಡಿರುವ ವಾಡಿ, ರಾವೂರ, ಸನ್ನತಿ, ಮಾಲಗತ್ತಿ, ಲಾಡ್ಲಾಪುರ, ಅಣ್ಣಿಕೇರಾ, ಕುಂದನೂರ, ಇಂಗಳಗಿ, ಚಾಮನೂರ, ಮಾರಡಗಿ, ಬನ್ನೇಟಿ, ಸನ್ನತಿ, ಉಳಂಡಗೇರಾ, ಕೊಲ್ಲೂರ ಗ್ರಾಮಗಳ ಭಾಗದಲ್ಲಿನ ನೂರಾರು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದ್ದ ಉದ್ದು ಮತ್ತು ಹೆಸರು ಬೆಳೆಗಳನ್ನು ಹರಗುವ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದಾರೆ. ಕಾಯಿ ಕಟ್ಟುವ ಹಂತದಲ್ಲಿದ್ದ ಬೆಳೆಗಳು ಒಣಗಿನಿಂತಿದ್ದನ್ನು ಕಂಡು ರೈತರು ಮರುಗುವಂತಾಗಿದ್ದು, ಬರದ ಭೀಕರತೆ
ಅನಾವರಣಗೊಳಿಸಿದೆ.

Advertisement

ರಕ್ಷಿಸಿದ ಬೆಳೆಯನ್ನೇ ಹರಗುವ ಪ್ರಸಂಗ: ಮುಂಗಾರು ಮಳೆ ಸುರಿದ ಅಬ್ಬರ ಕಂಡು ಉತ್ತಮ ಲಾಭದ ನಿರೀಕ್ಷೆಯಲ್ಲಿ ಹೆಸರು ಮತ್ತು ಉದ್ದು ಬಿತ್ತನೆಗೆ ಆದ್ಯತೆ ನೀಡಿದ್ದೆವು. ಆರಂಭಕ್ಕೆ ಬಂದ ಮುಂಗಾರು ಕೈಕೊಟ್ಟಿತು. ಹೂ
ಬಿಟ್ಟು ಕಾಯಿ ಕಟ್ಟಿದ ಬೆಳೆ ಸಾಲುಗಳು ಕೈಗೆಟುಕದೆ ಬಾಡುವ ಮೂಲಕ ಹೀಗೆ ನಮ್ಮ ಬಾಯಿಗೆ ಮಣ್ಣು ಹಾಕುತ್ತವೆ ಎಂದು ಅಂದುಕೊಂಡಿರಲಿಲ್ಲ. ಸಾಲ ಮಾಡಿ ಬೀಜ, ರಸಗೊಬ್ಬರ ಖರೀದಿಸಿ ರಕ್ಷಣೆ ಮಾಡಿದ ಬೆಳೆಯನ್ನು ನಾವೇ ಹರಗಿ ಹೊರ ಚೆಲ್ಲುವ ಪ್ರಸಂಗ ಬಂದಿದೆ. ಒಟ್ಟು 18 ಎಕರೆ ಹೊಲದಲ್ಲಿನ ಹೆಸರು ಬೆಳೆ ಹರಗಿ ಸುಮಾರು ಎರಡು ಲಕ್ಷ ರೂ. ನಷ್ಟ ಉಂಟಾಗಿದೆ.

 ಮಹೆಬೂಬ ಮಿರ್ಜಾ, ಮಲ್ಲೇಶಿ, ಬೊಮ್ಮನ್‌, ರಾವೂರಿನ, ರೈತರು

ಬರಸಿಡಿಲಂತೆ ಬಂದ ಮುಂಗಾರಿನ ಬರ: ಹೋದ ವರ್ಷದಂತೆ ಈ ವರ್ಷವೂ ಮುಂಗಾರಿನ ಬರ ಬರಸಿಡಿಲಿನಂತೆ ಬಂದೆರಗಿದೆ.
ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಹೆಸರು ಮತ್ತು ಉದ್ದು ಸಂಪೂರ್ಣ ಬಾಡಿಹೋಗಿದೆ. ಹಿಂಗಾರಿನ ಬೆಳೆ ಜೋಳ ಬಿತ್ತುವ ಆಸೆಯಿಂದ ಹೆಸರು ಬೆಳೆ ಸಾಲುಗಳನ್ನು ಹರಗಲು ಆರಂಭಿಸಿದ್ದೇವೆ. ಒಂದು ಕಾಳು ಸಹ ಕೈಗೆ ಬರದಂತಾಗಿ ಕಷ್ಟದ
ಪರಿಸ್ಥಿತಿಯಲ್ಲಿದ್ದೇವೆ. ಬೆಳೆದು ನಿಂತ ತೊಗರಿಯೂ ನೀರಿಲ್ಲದೆ ಬಾಡುತ್ತಿವೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ತೊಗರಿಗೂ ಗಂಡಾಂತರ ತಪ್ಪಿದ್ದಲ್ಲ. ಸಾಲದ ಶೂಲಕ್ಕೆ ಸಿಕ್ಕ ನಮ್ಮನ್ನು ಸರಕಾರವೇ ಕಾಪಾಡಬೇಕು.

 ಇಸ್ಮಾಯಿಲ್‌ ಖಾನ್‌, ರೈತ

Advertisement
Advertisement

Udayavani is now on Telegram. Click here to join our channel and stay updated with the latest news.

Next