Advertisement

ಮಳೆಗೆ ಕೊಳೆಯುತ್ತಿವೆ ತೋಟದ ಬೆಳೆ

05:09 PM Aug 18, 2020 | Suhan S |

ವಿಜಯಪುರ: ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಶ್ರಾವಣ ಮಳೆ ರೈತರ ಬದುಕನ್ನು ಹೈರಾಣಾಗಿಸಿದೆ. ಹಲವೆಡೆ ಅತಿಯಾದ ಮಳೆಗೆ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳು ಸೇರಿದಂತೆಹಲವು ಜಲ ಮೂಲಗಳು ಕೊಚ್ಚಿಕೊಂಡು ಹೋಗಿ ಹಾನಿಗೀಡಾಗಿವೆ.

Advertisement

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಎನಿಸಿದ ದ್ರಾಕ್ಷಿ, ಲಿಂಬೆಬೆಳೆಗಳು ರೋಗಬಾಧೆ,  ಹಾನಿಗೆ ಸಿಲುಕಿವೆ. ಪರಿಣಾಮ ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರದ ಕಡೆ ನೆರವಿಗೆ ಆಸೆಗಣ್ಣು ನೆಟ್ಟು ಕುಳಿತಿದ್ದಾರೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಎನಿಸಿದ ದ್ರಾಕ್ಷಿ, ಲಿಂಬೆ ಬೆಳೆಗಳಿಗೆ ರೋಗಬಾಧೆ ಆವರಿಸಿದ್ದು, ಇಳುವರಿ ಕುಸಿತ ಹಾಗೂ ಹಾನಿಗೆ ಸಿಲುಕಿವೆ. ರಾಜ್ಯದಲ್ಲಿ 31,600 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಇದರಲ್ಲಿ ದ್ರಾಕ್ಷಿ ಬೆಳೆಯುವ ಅರ್ಧದಷ್ಟು ಪ್ರದೇಶ ವಿಜಯಪುರ ಜಿಲ್ಲೆಯಲ್ಲೇ ಇದೆ. ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್‌, ಬಾಗಲಕೋಟೆ ಜಿಲ್ಲೆಯಲ್ಲಿ 3,500 ಹೆಕ್ಟೇರ್‌, ಬೆಳಗಾವಿ ಜಿಲ್ಲೆಯಲ್ಲಿ 2700 ಹೆಕ್ಟೇರ್‌ ಮಾತ್ರವಲ್ಲದೇ ಕೊಪ್ಪಳ, ಗದಗ, ಯಾದಗಿರಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇತರೆಡೆಯೂ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ.

ಈ ವರ್ಷಾರಂಭದಲ್ಲಿ ಕಟಾವು ಹಂತದಲ್ಲಿ ಕಾಣಿಸಿಕೊಂಡ ಕೋವಿಡ್‌ ಕೊರೊನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ ದೇಶಾದ್ಯಂತ ಜಾರಿಗೆ ಬಂದ ಲಾಕ್‌ಡೌನ್‌ ಕಟಾವು ಹಾಗೂ ಮಾರುಕಟ್ಟೆ ಅವಕಾಶ ಕಿತ್ತುಕೊಂಡಿತು. ರಫ್ತು ಗುಣಮಟ್ಟದ ತೋಟಗಾರಿಕೆ ಬೆಳೆ ಬೆಳೆಯುವ ಜಿಲ್ಲೆಯ ಲಕ್ಷಾಂತರ ರೈತರನ್ನು ಅದರಲ್ಲೂ ತೋಟಗಾರಿಕೆ ಬೆಳೆಗಾರರನ್ನು ಲಾಕ್‌ಡೌನ್‌ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಇದೀಗ ಪ್ರಕೃತಿ ವೈಪರಿತ್ಯ ತೋಟಗಾರಿಕೆ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ದ್ರಾಕ್ಷಿ ಬೆಳೆಗೆ ಪ್ರಖರ ಬಿಸಿಲು ಬೇಕು. ಕೊಂಚವೇ ತೇವಾಂಶದ ಶೀತಗಾಳಿ, ನಿರಂತರ ತುಂತುರು ಮಳೆ, ಮಂಜು ಆವರಿಸುವಿಕೆ, ಮೋಡ ಕವಿಯುವಂಥ ವಾತಾವರಣ ಇದ್ದರೂ ದ್ರಾಕ್ಷಿ ಬೆಳೆಗೆ ಹಾನಿ ಉಂಟಾಗುತ್ತದೆ. ಇದರಿಂದ ರೈತರು ಲಕ್ಷಾಂತರ ರೂ. ನಷ್ಟವಾಗಲಿದ್ದು, ಭವಿಷ್ಯದಲ್ಲಿ ಭಾರಿ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ಕುಸಿತದ ಭೀತಿ ಎದುರಾಗಿದೆ. ದ್ರಾಕ್ಷಿ ಬೆಳೆ ಚಾಟ್ನಿ (ಫ್ರೂನಿಂಗ್‌) ಮಾಡುವ ಈ ಹಂತದಲ್ಲಿ ಕಳೆದ ಸುಮಾರು ಒಂದೂವರೆ ತಿಂಗಳಿಂದ ಮೋಡ ಕವಿದ ಹಾಗೂ ತುಂತುರು ಮಳೆ ಸುರಿಯುವುದು ಸಾಮಾನ್ಯವಾಗಿದೆ. ಇದರಿಂದ ರಾಕ್ಷಿ ಬೆಳೆಗೆ ದಾವಣಿ ಎಂಬ ಎಲೆ ಉದುರುವಿಕೆ ರೋಗ ಬಾಧಿಸುತ್ತಿದೆ.

ಪರಿಣಾಮ ಭವಿಷ್ಯದಲ್ಲಿ ದ್ರಾಕ್ಷಿ ಇಳುವರಿ ಕುಂಠಿತ, ಇಲ್ಲವೇ ಗುಣಮಟ್ಟ ಕುಸಿತವಾಗುವ ಭೀತಿ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದನ್ನರಿತ ಜಿಲ್ಲೆಯ ತೋಟಗಾರಿಕೆ ಇಲಾಖೆ ದ್ರಾಕ್ಷಿ ಬೆಳೆಯ ರೋಗ ಹಾಗೂ ಸಂಭವನೀಯ ಭಾರಿ ಹಾನಿ ತಡೆಗೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ತಜ್ಞರನ್ನು ಕರೆಸಿ ಜಿಲ್ಲೆಯ ತೋಟಗಳಿಗೆ ಭೇಟಿ ಮಾಡಿಸಿದೆ. ರೋಗದ ಅಧ್ಯಯನ ನಡೆಸಿರುವ ವಿಜ್ಞಾನಿಗಳು ನೀಡುವ ವರದಿ ಹಾಗೂ ಕೊಡುವ ಸಲಹೆ ಆಧರಿಸಿ ಮುಂದಿನ ಕ್ರಮಕ್ಕೆ ಅಧಿಕಾರಿಗಳು ಕಾಯುತ್ತಿದ್ದಾರೆ. ಮತ್ತೂಂದೆಡೆ ಗುಣಮಟ್ಟದ ಈರುಳ್ಳಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ಶ್ರಾವಣದ ತುಂತುರ ಮಳೆ ಹಾಗೂ ಶೀತ ವಾತಾವರಣ ರೈತರನ್ನು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ.

Advertisement

ಲಾಕ್‌ಡೌನ್‌ ಸಂದರ್ಭದಲ್ಲಿ ಮಾರುಕಟ್ಟೆ ಕೊರತೆ, ಬೆಲೆ ಕುಸಿತದ ಕಾರಣ ಭವಿಷ್ಯದಲ್ಲಿ ಉತ್ತಮ ದರದ ನಿರೀಕ್ಷೆಯಿಂದಾಗಿ ರೈತರು ಈರುಳ್ಳಿ ದಾಸ್ತಾನು ಮಾಡಿದ್ದರು. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಉಗ್ರಾಣಗಳಲ್ಲಿ ದಾಸ್ತಾನು ಮಾಡಲಾಗಿದ್ದ ಬಹುತೇಕ ಈರುಳ್ಳಿ ಕೊಳಯುತ್ತಿದೆ. ಇದರಿಂದ ಗುಣಮಟ್ಟ ಕುಸಿತವಾಗಿ, ಮಾರುಕಟ್ಟೆಯಲ್ಲಿ ಸಾಗಾಣಿಕೆ ವೆಚ್ಚವೂ ಬಾರದ ದುಸ್ಥಿತಿ ಎದುರಾಗಿದ್ದು, ರೈತರಕಣ್ಣಲ್ಲಿ ನೀರು ತರಿಸಿರುವ ಈರುಳ್ಳಿ ತಿಪ್ಪೆಗೆ ಸೇರುವ ಸ್ಥಿತಿ ತಲುಪಿದೆ.

ಹೀಗೆ ಜಿಲ್ಲೆಯಲ್ಲಿ ಸುಮಾರು ಒಂದೂವರೆ ತಿಂಗಳಿಂದ ಕಾಡುತ್ತಿರುವ ಮೋಡ ಕವಿದ ಹಾಗೂ ತುಂತುರು ಮಳೆಯ ವಾತಾವರಣ ತೋಟಗಾರಿಕೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಸರ್ಕಾರ ತಕ್ಷಣ ನೆರವಿಗೆ ಬರುವಂತೆ ಆಗ್ರಹಿಸುತ್ತಿದ್ದರೂ ಸಮೀಕ್ಷೆ ಮಾಡಿ ಪರಿಹಾರ ನಿಡುವ ಭರವಸೆ ಹೊರತಾಗಿ ತಕ್ಷಣ ಸರ್ಕಾರ ತಮ್ಮ ನೆರವಿಗೆ ಬಂದಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ರಾಜ್ಯದಲ್ಲಿ ದ್ರಾಕ್ಷಿ ಬೆಳಗಾರ ಅದರಲ್ಲೂ ವಿಜಯಪುರ ಜಿಲ್ಲೆಯ ರೈತರು ಪ್ರಕೃತಿ ವಿಕೋಪದಿಂದ ಕಳೆದ ಒಂದು ದಶಕದಿಂದ ನಿರಂತರ ನಷ್ಟದಲ್ಲಿದ್ದು, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾನೆ. ಕೂಡಲೇ ಇತರೆ ತೋಟಗಾರಿಕೆ ಬೆಳೆಗಳಿಗೆ ಇರುವಂತೆ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಸರ್ಕಾರ ತಕ್ಷಣ ನಮ್ಮ ನೆರವಿಗೆ ಬರಬೇಕು. -ಅಭಯಕುಮಾರ ನಾಂದ್ರೇಕರ, ಅಧ್ಯಕ್ಷಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ

ಹವಾಮಾನ ವೈಪರಿತ್ಯದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ವಿವಿಧ ರೋಗ ಬಾಧಿತವಾಗಿವೆ. ದ್ರಾಕ್ಷಿ ಬೆಳೆ ಸಂಭವನೀಯ ಹಾನಿ ತಪ್ಪಿಸಲು ತೋಟಗಾರಿಕೆ ವಿವಿಯ ವಿಜ್ಞಾನಿಗಳನ್ನು ಕರೆಸಿ ಸ್ಥಾನಿಕ ಅಧ್ಯಯನ ಮಾಡಿಸಲಾಗಿದೆ. ಈ ವಾರಾಂತ್ಯದಲ್ಲಿ ವರದಿ ಬರುವ ನಿರೀಕ್ಷೆ ಇದ್ದು, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. -ಸಂತೋಷ ಇನಾಮದಾರ, ಉಪ ನಿರ್ದೇಶಕತೋಟಗಾರಿಕೆ ಇಲಾಖೆ, ವಿಜಯಪುರ

ಕೋಯ್ಲು ಮಾಡಿ ದಾಸ್ತಾನು ಮಾಡಿದ್ದ ಗುಣಮಟ್ಟದ ಈರುಳ್ಳಿ ಮಳೆಯಿಂದಾಗಿ ಕೊಳೆತು ಹಾನಿಗೀಡಾಗಿದೆ. ನನ್ನೊಬ್ಬನಿಗೆ ಸುಮಾರು 10-15 ಲಕ್ಷ ರೂ. ನಷ್ಟವಾಗಿದ್ದು, ಸರ್ಕಾರ ನಾನು ಸೇರಿದಂತೆ ಎಲ್ಲ ಈರುಳ್ಳಿ ಬೆಳೆಗಾರರಿಗೆ ಹಾನಿಗೆ ತಕ್ಕಂತೆ ತಕ್ಷಣ ಪರಿಹಾರ ನೀಡಬೇಕು. -ಭೀಮನಗೌಡ ಪಾಟೀಲ ಚಂದ್ರಶೇಖರ ನಾಟೀಕರ,ಕರಭಂಟನಾಳ ರೈತರು

 

-ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next