Advertisement

ನಷ್ಟಕ್ಕೆ ಬೆಳೆ ವಿಮೆ ಸೂಕ್ತ ಪರಿಹಾರ: ಡಿಸಿ

12:47 PM Feb 16, 2017 | Team Udayavani |

ಮೈಸೂರು: ಬರ ಪರಿಸ್ಥಿತಿಯ ಸಂದರ್ಭದಲ್ಲಿ ರೈತರು ಬೆಳೆ ನಷ್ಟ ಪರಿಹಾರವನ್ನು ನಂಬಿ ಕೂರದೆ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡರೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಸಲಹೆ ನೀಡಿದರು.

Advertisement

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಕರೆದಿದ್ದ ರೈತ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರಧಾನಮಂತ್ರಿ ಫ‌ಸಲ್‌ ಭಿಮಾ ಯೋಜನೆ 2016-17ನೇ ಸಾಲಿನಿಂದ ಜಾರಿಗೆ ಬಂದಿದ್ದು, ಬೇರೆ ಬೇರೆ ರಾಜ್ಯಗಳು ಇದರ ಲಾಭ ಪಡೆಯುತ್ತಿವೆ. ಕಡಿಮೆ ಹಾಗೂ ಏಕರೂಪದ ವಿಮಾ ಕಂತು ಪಾವತಿಸಬೇಕಿದೆ. ಮುಂಗಾರು ಬೆಳೆಗೆ ಶೇಕಡ 2, ಹಿಂಗಾರು ಬೆಳೆಗೆ ಶೇ.1.5, ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು ಕಂತು ಪಾವತಿಸಿದರೆ ಸಂಪೂರ್ಣ ವಿಮಾ ಮೊತ್ತ ರೈತರಿಗೆ ಸಂದಾಯವಾಗುತ್ತದೆ ಎಂದರು.

ಸದ್ಯದ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಮಳೆ ಆಶ್ರಿತ ಕೃಷಿಯಲ್ಲಿ ಪ್ರತಿ ಹೆಕ್ಟೇರ್‌ಗೆ 6,800 ರೂ., ನೀರಾವರಿಗೆ 13 ಸಾವಿರ ರೂ. ಹಾಗೂ ತೋಟಗಾರಿಕೆ ಬೆಳೆಗಳಿಗೆ 18 ಸಾವಿರ ರೂ. ಬೆಳೆ ನಷ್ಟ ಪರಿಹಾರ ದೊರಕುತ್ತದೆ. ಹೀಗಾಗಿ ರೈತರು ಪ್ರಧಾನಮಂತ್ರಿ ಫ‌ಸಲ್‌ ವಿಮೆ ಮಾಡಿಸಿಕೊಳ್ಳಿ ಎಂದ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಕೇವಲ 2 ಸಾವಿರ ರೈತರು ವಿಮೆ ಮಾಡಿಸಿದ್ದರೆ, ಜಿಲ್ಲಾಡಳಿತ ವಿಶೇಷ ಆಸಕ್ತಿವಹಿಸಿದ್ದರಿಂದ ಹಿಂಗಾರು ಹಂಗಾಮಿಗೆ 33,600 ರೈತರು ವಿಮೆ ಮಾಡಿಸಿದ್ದಾರೆ ಎಂದರು.

ಬೆಳೆ ನಷ್ಟ ಪರಿಹಾರ ಸಂಬಂಧ ಕೇಂದ್ರ ಸರ್ಕಾರ ರಾಜ್ಯಕ್ಕೆ ಸದ್ಯ 450 ಕೋಟಿ ರೂ. ಬಿಡುಗಡೆ ಮಾಡಿರುವ ಮಾಹಿತಿ ಇದೆ. ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಜಿಲ್ಲೆಗೆ 90 ಕೋಟಿ ಪರಿಹಾರ ಕೇಳಲಾಗಿದೆ. ಭೂಮಿ ತಂತ್ರಾಂಶದಲ್ಲಿ ಹಾಗೂ ಆಧಾರ್‌ ಡೇಟಾ ಬೇಸ್‌ನಲ್ಲಿರುವ ಮಾಹಿತಿಯನ್ನು ತಾಳೆ ನೋಡಿ, ಹೊಂದಾಣಿಕೆ ಇರುವ ರೈತರಿಗೆ ಪರಿಹಾರ ಧನ ನೀಡಲಾಗುತ್ತದೆ. ಈ ಡೇಟಾ ಬೇಸ್‌ನಲ್ಲಿ 1.51 ಲಕ್ಷ ನೋಂದಣಿಯ ಗುರಿ ಇದೆ.

ಈವರೆಗೆ 1.20 ಲಕ್ಷ ನೋಂದಣಿಯಾಗಿದೆ. ಈ ಪೈಕಿ 20 ಸಾವಿರ ನೋಂದಣಿ ಹೊಂದಾಣಿಕೆ ಆಗುತ್ತಿಲ್ಲ. 1 ಲಕ್ಷ ನೋಂದಣಿ ಸರಿ ಇದೆ. ಅವರಿಗೆ ಬೆಳೆ ಪರಿಹಾರದ ಹಣ ನೀಡಲು ಸಮಸ್ಯೆ ಇಲ್ಲ ಎಂದರು. ಜತೆಗೆ ಇತ್ತೀಚೆಗೆ ಮೈಸೂರಿನಲ್ಲಿ ಮುಖ್ಯ ಮಂತ್ರಿಗಳು ಕೆಡಿಪಿ ಸಭೆ ನಡೆಸಿದಾಗ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ನೀರು ಕೊಡಲಾಗದೆ ಬೆಳೆ ಹಾಳಾಗಿರುವುದರಿಂದ ಅಂತಹ ರೈತರ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದರು. ಇನ್ನೊಂದು ವಾರದಲ್ಲಿ ಸಮೀಕ್ಷೆ ಪೂರ್ಣ ಗೊಳ್ಳಲಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

Advertisement

ಭಿತ್ತನೆ ಬೀಜ ಕೊಡುವಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ವಿಮೆ ಕಂತು ಪಡೆದುಕೊಂಡರೆ, ರೈತರು ವಿಮೆ ನೋಂದಣಿಗೆ ಬ್ಯಾಂಕ್‌ಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಕೆಲ ರೈತರು ಸಲಹೆ ನೀಡಿದರು. ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌, ಈ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯಿಂದ ವರದಿ ತರಿಸಿಕೊಂಡಿದೆ ಎಂದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್‌, ಬಡಗಲಪುರ ನಾಗೇಂದ್ರ, ಅತ್ತಹಳ್ಳಿ ದೇವರಾಜ್‌, ಹೊಸೂರು ಕುಮಾರ್‌, ಹೊಸಕೋಟೆ ಬಸವರಾಜು ಮತ್ತಿತರರು ಭಾಗವಹಿಸಿದ್ದರು.

ಬಣ್ಣಾರಿ ಕಾರ್ಖಾನೆ ವಿರುದ್ಧ ರೈತರ ತೀವ್ರ ಆಕ್ರೋಶ 
ನಂಜನಗೂಡಿನ ಬಣ್ಣಾರಿ ಸಕ್ಕರೆ ಕಾರ್ಖಾನೆ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಕ್ಕರೆ ಇಳುವರಿಯ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಯಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಶೇ.10.5ರಿಂದ ಶೇ.11 ರಷ್ಟು ಸಕ್ಕರೆ ಇಳುವರಿ ಬರುತ್ತಿತ್ತು. ಈಗ ಶೇ.8.9ರಷ್ಟು ಇಳುವರಿ ತೋರಿಸ ಲಾಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಒಂದೇ ಕಾರ್ಖಾನೆ ಮೈಸೂರಿನಲ್ಲಿ ಎರಡು ರೀತಿಯ ದರ ನೀಡುತ್ತಿದೆ.

ಒಂದು ಕಡೆ ಪ್ರತಿ ಟನ್‌ ಕಬ್ಬಿಗೆ 2500 ರೂ. ನೀಡಿದರೆ ಮತ್ತೂಂದು ಕಾರ್ಖಾನೆಯಲ್ಲಿ 2300 ರೂ. ನೀಡುತ್ತಿದೆ. ಈ ತಾರತಮ್ಯ ಹೋಗಲಾಡಿಸಬೇಕು ಎಂದು ರೈತರು ಹೇಳಿದರು. ಬಣ್ಣಾರಿ ಸಕ್ಕರೆ ಕಾರ್ಖಾನೆಯ ಮೂರು ವರ್ಷದ ಅಂಕಿ-ಅಂಶಗಳನ್ನು ಪಡೆದು, ಸಕ್ಕರೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಚುಂಚನ ಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ಬಗ್ಗೆ ಸರ್ಕಾರಕ್ಕೆ ಎರಡು ಪುಟಗಳ ವರದಿ ನೀಡಿದ್ದು, ಸಚಿವ ಸಂಪುಟದಲ್ಲಿ ಆ ಬಗ್ಗೆ ನಿರ್ಧಾರ ಕೈಗೊಳ್ಳ ಬೇಕಿದೆ ಎಂದು ಸಬೆಗೆ ಮಾಹಿತಿ ನೀಡಿದರು.

ಕೃಷಿ ಉತ್ಪನ್ನದ ಹಣ ಸಾಲಕ್ಕೆ ವಜಾ: ಖಂಡನೆ
ಕಬ್ಬು ಮಾರಾಟದ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತದೆ. ಈ ಹಣವನ್ನು ಬ್ಯಾಂಕುಗಳು ರೈತರ ಸಾಲಕ್ಕೆ ಹೊಂದಿಸಿಕೊಳ್ಳುತ್ತಿವೆ. ಇದರಿಂದ ರೈತರಿಗೆ ಕೃಷಿ ಉತ್ಪನ್ನದ ಹಣ ಸಿಗುತ್ತಿಲ್ಲ. ರೈತ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ ಎಂದು ರೈತ ಮುಖಂಡರು ಹೇಳಿ ದಾಗ, ಅಂತಹ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ಜಿಲ್ಲಾಧಿಕಾರಿ, ರೈತರ ಬ್ಯಾಂಕ್‌ ಖಾತೆಗೆ ಬರುವ ಕೃಷಿ ಉತ್ಪನ್ನ ಮಾರಾಟದ ಹಣ ಹಾಗೂ ಬೆಳೆ ಪರಿಹಾರದ ಹಣವನ್ನು ಬ್ಯಾಂಕುಗಳು ಬಲವಂತವಾಗಿ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ. ಈ ಬಗ್ಗೆ ಸದ್ಯದಲ್ಲೇ ಬ್ಯಾಂಕರುಗಳ ಸಭೆ ಕರೆದು ಸೂಚನೆ ನೀಡ ಲಾಗುವುದು ಎಂದು ರಂದೀಪ್‌ ಹೇಳಿದರು.

2 ಹಂತದಲ್ಲಿ  7 ಗಂಟೆ ವಿದ್ಯುತ್‌
ಸದ್ಯದ ಪರಿಸ್ಥಿತಿಯಲ್ಲಿ ಹಗಲು 4 ಗಂಟೆ, ರಾತ್ರಿ ವೇಳೆ 3 ಗಂಟೆ ಕಾಲ ತ್ರಿಪೇಸ್‌ ವಿದ್ಯುತ್‌ ನೀಡಲಾಗುತ್ತಿದ್ದು, ಇದರ ಬದಲಿಗೆ ಒಂದೇ ಅವಧಿಗೆ 7 ಗಂಟೆಗಳ ಕಾಲ ತ್ರಿಪೇಸ್‌ ವಿದ್ಯುತ್‌ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಈ ಪದ್ಧತಿ ಜಾರಿಯಾದರೆ ಮೈಸೂರು ಭಾಗದ 199 ವಿದ್ಯುತ್‌ ಸ್ಟೇಷನ್‌ಗಳ ಪೈಕಿ 99 ಸ್ಟೇಷನ್‌ಗಳಲ್ಲಿ ನೀರಾವರಿಗೆ ವಿದ್ಯುತ್‌ ಕೊಡಲಾಗುತ್ತಿದ್ದು, ಇದರಲ್ಲಿ 50 ಸ್ಟೇಷನ್‌ಗಳಲ್ಲಿ ಎರಡು ಹಂತಗಳಲ್ಲಿ 7 ಗಂಟೆಗಳ ಕಾಲ ವಿದ್ಯುತ್‌ ನೀಡಲಾಗುವುದು ಎಂದು ಸೆಸ್ಕ್ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next