ಕುಂದಾಪುರ: ಹಿಂದಿನ ಕಾಲದಲ್ಲಿದ್ದ ಎಲ್ಲಾ ವ್ಯವಸ್ಥೆಗಳು ಬದಲಾಗಿದೆ. ಅದಕ್ಕೆ ಪೂರಕವಾಗಿ ಜನಸಂಖ್ಯೆ, ಭೌಗೋಳಿಕ ಸನ್ನಿವೇಶ ಹಾಗೂ ಗ್ರಾಮದಲ್ಲಿನ ವ್ಯವಸ್ಥೆಗಳು ಬದಲಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಅಪರಾಧ ಮುಕ್ತ ಸಮಾಜ ಚಾಲನೆಗೆ ಚಿಂತನೆ ನೀಡಿ ಶಾಂತಿ ನೆಲೆಸುವಂತೆ ಶ್ರಮಿಸುವುದೇ ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಸುನೀಲ್ ಕುಮಾರ್ ಎಂ.ಎಸ್. ಹೇಳಿದರು.
ಅವರು ಹಾಲಾಡಿ ಗ್ರಾ.ಪಂ. ಸಭಾಭವನದಲ್ಲಿ ಜರಗಿದ ಸುಧಾರಿತ ಗ್ರಾಮಗಸ್ತು ಪಡೆ ಮತ್ತು ಅದರ ಕರ್ತವ್ಯದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ನಾಗರಿಕರು ಆಯಾ ವಾರ್ಡಿಗೆ ನೇಮಿಸಲ್ಪಟ್ಟ ಗಸ್ತು ಪಡೆ ಪೊಲೀಸರಿಗೆ ಯಾವುದೇ ಸಂಭವನೀಯ ಅಹಿತಕರ ಘಟನೆಗಳು ನಡೆಯುವುದಿದ್ದಲ್ಲಿ ಮುಂಚಿತವಾಗಿ ತಿಳಿಸಿದಲ್ಲಿ ಮಾಹಿತಿ ಕರಾರುವಾಕ್ಕಾದಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಾಗರಿಕರು ಪೂರ್ಣ ಸಹಕಾರ ನೀಡಬೇಕಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಹಾಲಾಡಿ ಗ್ರಾ.ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ವಹಿಸಿ ಇಲಾಖೆಯ ಕಾರ್ಯದಲ್ಲಿ ಯಾರ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದೆಂದು ಹೇಳಿ ಇಲಾಖೆಯೊಂದಿಗೆ ಪೂರ್ಣ ಸಹಕರಿಸುವಂತೆ ಕರೆ ನೀಡಿದರು. ಸಭೆಯಲ್ಲಿ ತಾ.ಪಂ. ಸದಸ್ಯೆ ಸವಿತಾ ಸಂತೋಷ ಮೊಗವೀರ, ಗ್ರಾ.ಪಂ. ಸದಸ್ಯ ಚೋರಾಡಿ ಅಶೋಕ ಕುಮಾರ್ ಶೆಟ್ಟಿ, ಗ್ರಾ.ಪಂ ಸದಸ್ಯರು ನಾಗರಿಕರು ಉಪಸ್ಥಿತಿರಿದ್ದರು.ಗ್ರಾ.ಪಂ. ಪಿಡಿಒ ವಸಂತ ಕುಮಾರ್ ಸ್ವಾಗತಿಸಿ, ವಂದಿಸಿದರು.