Advertisement

ಜೋಕು ಮಾಡಿ ಓನರನ್ನು ಒಪ್ಪಿಸಿದ್ದೆ!

04:31 PM Sep 16, 2017 | |

ಬಾಡಿಗೆ ಮನೆಗೆ ಬಂದು ಆಗಲೇ ಹನ್ನೊಂದು ತಿಂಗಳು ಮುಗಿದಿತ್ತು. ಅಲ್ಲೇ ಮುಂದುವರಿಯುವುದಾದರೆ ಮತ್ತೆ ಕರಾರು ಆಗಲೇ ಬೇಕೆಂದು ಓನರ್‌ ಮಹಾಶಯ ಮೊದಲೇ ಹೇಳಿದ್ದ. ಆ ತಿಂಗಳ ಬಾಡಿಗೆ ಕೊಡಲು ಓನರ್‌ ಮನೆಗೆ ಹೋದೆ. ಲೆಕ್ಕಾಚಾರದಿಂದ, ಲೋಕಾಭಿರಾಮದತ್ತ ಮಾತು ಹೊರಳಿತು. ಅವರು ನಿವೃತ್ತರು, ಅಂದ ಮೇಲೆ ಮಾತಿಗೆ ಬರವೇ..!?  ಮೊನ್ನೆ ತಾನೇ ತಾವು ಮಾಡಿದ ತೀರ್ಥಯಾತ್ರೆಯ ಕುರಿತು ಹೇಳತೊಡಗಿದರು. ಸಾಕ್ಷಿ ಹೇಳುವಂತೆ ದೇವಸ್ಥಾನದ ಪ್ರಸಾದ ಕೂಡಾ ಟಿಪಾಯ… ಮೇಲೆ ಇತ್ತು.  ಕೇಳುವಷ್ಟು ಕೇಳಿದ ನಾನು, ಅವರ ಮಾತು ತುಂಡರಿಸುತ್ತಾ, ಮುಂದೆ ಕೂಡಾ ಈಗಿನ ಮನೆಯಲ್ಲೇ ಮುಂದುವರಿಯುವ ಇಚ್ಛೆ ಇರುವುದಾಗಿ ಮಾತು ಸೇರಿಸಿದೆ. ನಮ್ಮಿಬ್ಬರ ನಡುವೆ ಸೌಹಾರ್ದ ವಾತಾವರಣ ಇದ್ದುದರಿಂದ ಅವರಿಗೂ ಆ ಮಾತು ಹಿತವೇ ಆಯಿತು. 

Advertisement

ಅಲ್ಲಿಯೇ ಮುಂದುವರಿಯುವುದಾದರೆ ಹೇಗೆ…? ಬಾಡಿಗೆ, ಅಡ್ವಾನ್ಸ್‌ಗಳ ಮಾತು ಮೊದಲಾಯಿತು. ಅವರು ಬಾಡಿಗೆಯ ಬಗ್ಗೆ ಒಲವು ಹೊಂದಿದ್ದರೆ, ನನ್ನದು ಲೀಸಿಗೆ ಆದೀತೆನ್ನುವ ನಿಲುವು. ಅದೇನೋ…! ನನ್ನ ಅವರ ಮಧ್ಯೆ ಕೊಂಚ ಸಲಿಗೆಯೂ ಬೆಳೆದಿತ್ತು. ಹೀಗಾಗಿ ಗಂಭೀರವಾಗಬಹುದಾಗಿದ್ದ ಮಾತನ್ನು ಕೊಂಚ ಹಾಸ್ಯದ ದಾಟಿಗೆ ಹೊರಳಿಸಿದೆ. “ಸಾರ್‌ ಮೊನ್ನೆ ತಾನೆ ನೀವು ಕಷ್ಟಪಟ್ಟು ಬೆಟ್ಟ ಹತ್ತಿ ದೇವರ ದರ್ಶನ ಮಾಡಿ, ಕಾಣಿಕೆ ಹಾಕಿ ಚೆನ್ನಾಗಿ ಬಾಡಿಗೆ ಬರಲಿ ಅಂತ ಕೇಳ್ಕೊಂಡು, ಆಶೀರ್ವಾದ ತಗೊಂಡ್‌ ಬಂದ್ರಿ! ಈಗ ನಾನು ದೇವರ ದರ್ಶನ ಮಾಡಿ, ಯಜಮಾನ್ರು ಮನೇನ ಲೀಸಿಗೆ ಕೊಡೋ ಹಂಗ್‌ ಮಾಡು ತಂದೆ ಅಂತ ಕೇಳ್ತೀನಿ. ಆತ ದಯಾಮಯ, ನನಗೂ- ನಿಮಗೂ ಇಬ್ಬರಿಗೂ ತಥಾಸ್ತು ಅಂತಾನೆ. ನಾವು ಯಾಕೆ ಆತನ ಏಕಾಂತಕ್ಕೆ ಭಂಗ ತರೋಣ? ನಾವು ಇಲ್ಲೇ ಹೇಗೋ  ಹೊಂದಿಕೊಂಡು ಹೋಗಿಬಿಟ್ಟರೆ ಒಳ್ಳೆಯದಲ್ವಾ?’ ಅಂದೆ. ಓನರ್‌ ಮುಖದಲ್ಲಿ ನಗೆ ಬಿರಿಯಿತು. ಅವರು ಆ…! ಅಂತ ಉದ್ಗರಿಸಿದವರೇ… “ನಿಮೊªಳ್ಳೇ ತಮಾಷಿ!’ ಅಂತ ನಗುವಿನ ವಾಲ್ಯೂಂ ಏರಿಸಿದವರೇ… ಒಂದು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮುದ್ರೆಯಲ್ಲಿ ಕುಳಿತರು. ಘನ ಗಂಭೀರತೆಯ ನೀರವ ವಾತಾವರಣ. 

ಕೆಲ ಕ್ಷಣದ ನಂತರ ಮೆಲ್ಲನೆ ಕಣ್ಣು ತೆರೆಯುತ್ತಾ, “ಲೀಸ್‌ನಿಂದ ನನಗೇನೂ ಅನುಕೂಲವಾಗದು…! ಆದ್ರೂ…’ ಆಂತ ರಾಗವೆಳೆದವರೇ, “ಸರಿ ನೀವು ನಮಗೆ ಇಷ್ಟವಾಗಿದ್ದೀರಿ. ನಿಮಗೂ ನಮ್ಮ ಮನೆ ಇಷ್ಟವಾಗಿದೆ ಅಂದ್ಮೇಲೆ ಅವನಿಚ್ಚೆಯಂತೆ ಆಗ್ಲಿ…!’ ಎಂದು ತುಟಿ ಅರಳಿಸಿದರು. ಇತ್ತ ಕುರ್ಚಿಯ ತುದಿಯಲ್ಲಿ ಅವರ ಗ್ರೀನ್‌ ಸಿಗ್ನಲ್‌ಗೆ ಕಾದು ಕುಳಿತಿದ್ದ ನಾನು, ದೀರ್ಘ‌ ಉಸಿರು ತೆಗೆದುಕೊಂಡೆ. ಅಲ್ಲಿಂದಾಚೆಗೆ ಸುಮಾರು ಇಪ್ಪತ್ತು ವರ್ಷ ಮನೆ ಬದಲಾಯಿಸುವ ಯೋಚನೆಯನ್ನೇ ಮಾಡಲಿಲ್ಲ. ಮುಂದೆ ಸಂಸಾರ ದೊಡ್ಡದಾಯ್ತು, ಅನಿವಾರ್ಯವಾಗಿ ಮನೆ ಬದಲಾಯಿಸಿದೆ. ಅಲ್ಲಿಂದ ಬರುವಾಗ ಇಬ್ಬರ ಕಣ್ಣಲ್ಲೂ ತೆರೆ ನೀರು…! ಇವತ್ತಿಗೂ ನನ್ನ ಮತ್ತು ಆ ಮನೆ ಯಜಮಾನರ ಮಧುರ ಸಂಬಂಧ ಹಾಗೇ ಇದೆ. ನೈಜ ಘಟನೆಗಳು ಕೆಲವು ಸಾರಿ ವಾಸ್ತವತೆಗೆ ಹೊರತಾಗಿರುತ್ತವೆ; ಕೇಳುಗರಿಗೆ ಅದು ಅತಿಶಯ ಅನ್ನಿಸಿದರೆ ಅಚ್ಚರಿಯಿಲ್ಲ. ಮನುಷ್ಯನ ಮನಸ್ಸು ಹೀಗೂ ವರ್ತಿಸುವ ಸಾಧ್ಯತೆ ಇದೆ ಎಂಬುದು ವೇದ್ಯವಾದಾಗ ಮಾತ್ರ ನಂಬಿಕೆ ಮೂಡುತ್ತದೆ.

ಹೊಸ್ಮನೆ ಮುತ್ತು

Advertisement

Udayavani is now on Telegram. Click here to join our channel and stay updated with the latest news.

Next