Advertisement

ಕೋವಿಡ್ ಜಾಗೃತಿ: ಟಿಬೆಟಿಯನ್ನರ ಸಾರ್ಥಕ ಸೇವೆ

09:09 AM May 25, 2020 | Suhan S |

ಹುಬ್ಬಳ್ಳಿ: ಕೋವಿಡ್ ವಿರುದ್ಧ ಕ್ರಮ, ಪರಿಹಾರದ ನೆರವಿಗೆ ಪ್ರಧಾನಿ-ಮುಖ್ಯಮಂತ್ರಿ ಪರಿಹಾರ ನಿಧಿಗೆ 2.50 ಕೋಟಿ ರೂ.ಗಳ ನೆರವು, ಸಾವಿರಾರು ಕುಟುಂಬಗಳಿಗೆ ಆಹಾರಧಾನ್ಯ, ಜನರ ತಪಾಸಣೆಗೆ ಥರ್ಮಲ್‌ ಸ್ಕ್ರೀನಿಂಗ್‌ ಕಿಟ್‌, 79 ವಿದೇಶಿಯರಿಗೆ ಆತಿಥ್ಯ,ಅಗತ್ಯವಿದ್ದವರಿಗೆ ಊಟ, ಔಷಧಿ ಇತ್ಯಾದಿ ಸೌಲಭ್ಯ. -ಇದು ರಾಜ್ಯದಲ್ಲಿನ ಟಿಬೆಟಿಯನ್‌ ಸಮುದಾಯ ಕೈಗೊಂಡ ಹಾಗೂ ಕೈಗೊಳ್ಳುತ್ತಿರುವ ಸಾರ್ಥಕ ಸೇವೆಯ ಚಿತ್ರಣ.

Advertisement

ಕೋವಿಡ್ ದೇಶ-ರಾಜ್ಯದಲ್ಲಿ ತಾಂಡವಾಡುವ ಮೊದಲೇ ರಾಜ್ಯದಲ್ಲಿನ ಕೊಳ್ಳೆಗಾಲ, ಬೈಲುಕುಪ್ಪೆ , ಹುಣಸೂರು ಹಾಗೂ ಮುಂಡಗೋಡನಲ್ಲಿರುವ ಟಿಬೆಟಿಯನ್‌ ಸಮುದಾಯ, ಬೆಂಗಳೂರಿನಲ್ಲಿ ವಾಸವಾಗಿರುವ ಟಿಬೆಟಿಯನ್ನರು ಮಹಾಮಾರಿ ವಿರುದ್ಧ ಜಾಗೃತಿ, ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದ್ದಾರೆ. ಚೀನಾದ ಪೂರ್ಣ ಚಿತ್ರಣ ಅರಿತಿರುವ ಟಿಬೆಟಿಯನ್ನರು ಸರಕಾರಗಳು ಲಾಕ್‌ಡೌನ್‌ ಘೋಷಣೆ ಮೊದಲೇ, ರಾಜ್ಯದಲ್ಲಿನ ಕ್ಯಾಂಪ್‌ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅಗತ್ಯ ಜಾಗೃತಿ-ತಯಾರಿ ಕಾರ್ಯದ ಮೂಲಕ ಮಾದರಿಯಾಗಿದ್ದಾರೆ.

ರಾಜ್ಯದಲ್ಲಿನ ಟಿಬೆಟಿಯನ್ನರ ಪುನರ್ವಸತಿ ಕೇಂದ್ರಗಳು, ಬೌದ್ಧ ಮಠಗಳು, ಸನ್ಯಾಸಿಗಳು, ಟಿಬೆಟಿಯನ್‌ ನಾಗರಿಕರು ತೋರಿದ ಕಾಳಜಿ ಇತರರಿಗೆ ಪ್ರೇರಣೆದಾಯ ಹಾಗೂ ಮಾದರಿಯಾಗಿದೆ. ಸ್ವತಃ ಬೌದ್ಧ ಸನ್ಯಾಸಿಗಳು ಆಹಾರ ಧಾನ್ಯಗಳ ಮೂಟೆಗಳನ್ನು ಹೊತ್ತು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದೆ. ಕೋವಿಡ್ ತಡೆ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ರಾಜ್ಯದಲ್ಲಿನ ಐದು ಟಿಬೆಟಿಯನ್‌ ಪುನರ್ವಸತಿ ಕೇಂದ್ರಗಳು, ಬೌದ್ಧ ಮಠಗಳು ಹಾಗೂ ಟಿಬೆಟಿಯನ್‌ ನಾಗರಿಕರ ಒಟ್ಟುಗೂಡಿಸಿದ ಅಂದಾಜು 2.5ಕೋಟಿ ರೂ.ಗಳನ್ನು ಪ್ರಧಾನಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಅಷ್ಟೇ ಅಲ್ಲ ಟಿಬೆಟ್‌ ಸರಕಾರದ ಹಂತದ ಅಧಿಕಾರಿಗಳು, ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ.

ಪ್ರತ್ಯೇಕ ತಂಡ ರಚನೆ: ರಾಜ್ಯದ ಐದು ಟಿಬೆಟಿಯನ್‌ ಪುನರ್ವಸತಿ ಕೇಂದ್ರಗಳ ಸುತ್ತಮುತ್ತಲ ಗ್ರಾಮಗಳಿಗೆ ಆಹಾರ ಧಾನ್ಯಗಳ ಕಿಟ್‌ ಇನ್ನತರ ಸಲಕರಣೆ ವಿತರಣೆ, ಆಹಾರ, ಔಷಧಿ ನೀಡುವ ನಿಟ್ಟಿನಲ್ಲಿ ಟಿಬೆಟಿಯನ್‌ ವಿವಿಧ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರನ್ನೊಳಗೊಂಡ ವಿವಿಧ ತಂಡಗಳನ್ನು ರಚಿಸಲಾಗಿದೆ. ಸಮುದಾಯ ಅಡುಗೆ ಮನೆ ನಿರ್ವಹಣೆ, ನೀರು-ವಿದ್ಯುತ್‌ ನಿರ್ವಹಣೆ, ಸ್ವಚ್ಛತೆ, ಆಹಾರ ಧಾನ್ಯಗಳ ಕಿಟ್‌ ಹಂಚಿಕೆ, ಔಷಧಿ ಸಿಂಪರಣೆ, ವೈದ್ಯಕೀಯ ಸೇವೆ ಹೀಗೆ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಜನರಿಗೆ ನೆರವಾಗುವ ಕಾರ್ಯ ಮಾಡಿವೆ. ಅನೇಕ ಕಡೆಗಳಲ್ಲಿ ಮಾಸ್ಕ್ಗಳನ್ನು ಜನರಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಟಿಬೆಟಿಯನ್‌ ಪುನರ್ವಸತಿ ಕೇಂದ್ರಗಳಲ್ಲಿ ದೀಪ ಬೆಳಗಿಸುವಿಕೆ, ಕೊರೊನಾ ಸೇನಾನಿಗಳಿಗೆ ಗೌರವ ಸಮರ್ಪಣೆಯಂತಹ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಪ್ರವೇಶ ನಿರ್ಬಂಧ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿನ ಟಿಬೆಟಿಯನ್ನರ ಪುನರ್ವಸತಿ ಕೇಂದ್ರ ರಾಜ್ಯದಲ್ಲಿನ ಇತರೆ ಟಿಬೆಟಿಯನ್‌ ಕೇಂದ್ರಗಳಲ್ಲೇ ದೊಡ್ಡ ಪ್ರಮಾಣದಲ್ಲಿದೆ. ಇಲ್ಲಿಗೆ ಧಾರ್ಮಿಕ ಅಧ್ಯಯನಕ್ಕೆಂದು ಶ್ರೀಲಂಕಾ, ರಷ್ಯಾ, ಭೂತಾನ್‌ ಇನ್ನಿತರ ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ವಿವಿಧ ದೇಶಗಳ ಬೌದ್ಧ ಸನ್ಯಾಸಿಗಳು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮುಂಡಗೋಡದಲ್ಲಿನ ಟಿಬೆಟಿಯನ್‌ ಪುನರ್ವಸತಿ ಕೇಂದ್ರಗಳಲ್ಲಿ ಮಾರ್ಚ್‌ ಮೊದಲ ವಾರದಲ್ಲೇ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಒಳಗಿದ್ದವರು ಹೊರ ಹೋಗುವಂತಿಲ್ಲ, ಹೊರಗಿದ್ದವರು ಒಳ ಬರುವಂತಿಲ್ಲ. ಮಾರ್ಚ್‌ ವಾರದಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿತ್ತು.

Advertisement

ಟಿಬೆಟಿಯನ್ನರ ಹೊಸ ವರ್ಷ ಆಚರಣೆಗೆಂದು ಫೆಬ್ರವರಿಯಲ್ಲಿ ಮುಂಡಗೋಡ ಪುನರ್ವಸತಿ ಕೇಂದ್ರಗಳಿಗೆ ಆಗಮಿಸಿದ್ದ ವಿವಿಧ ದೇಶಗಳ 76 ಜನರು ಲಾಕ್‌ಡೌನ್‌ನಿಂದ ಇಲ್ಲಿಯೇ ಉಳಿಯಬೇಕಾಗಿ ಬಂದಿದ್ದರಿಂದ ಅವರಿಗೆ ಪ್ರತ್ಯೇಕವಾಗಿ ವಾಸ್ತವ್ಯ ವ್ಯವಸ್ಥೆ ಮೂಲಕ ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಪುನರ್ವಸತಿ ಕೇಂದ್ರಗಳಲ್ಲಿನ ಹಾಸ್ಟೆಲ್‌ ಇನ್ನಿತರ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಜತೆಗೆ ಒಂದು ವೇಳೆ ಅತಿಗಣ್ಯ ವ್ಯಕ್ತಿಗಳು ಕ್ವಾರಂಟೈನ್‌ಗೆ ಅವರು ಬಂದು ಉಳಿದುಕೊಳ್ಳುವುದಕ್ಕೂ ಎಲ್ಲ ಸೌಲಭ್ಯಗಳುಳ್ಳ ವಿಶೇಷ ವ್ಯವಸ್ಥೆಯ ಕೋಣೆಗಳನ್ನು ಸಿದ್ಧಪಡಿಸಲಾಗಿದೆ.

76 ವಿದೇಶಿಯರು ಸೇರಿದಂತೆ ಟಿಬೆಟಿಯನ್‌ ಪುನರ್ವಸತಿ ಕೇಂದ್ರಗಳಲ್ಲಿರುವ ಎಲ್ಲ ನಿರಾಶ್ರಿತರು, ಬೌದ್ಧ ಸನ್ಯಾಸಿಗಳನ್ನು ಆರೋಗ್ಯ ತಪಾಸಣೆಗೊಳಪಡಿಸಲಾಗಿತ್ತು. ಮುಂಡಗೋಡದಲ್ಲಿನ 11 ಕ್ಯಾಂಪ್‌ಗ್ಳಿಗೂ ಜನರ ತಪಾಸಣೆಗೆ ಥರ್ಮಲ್‌ ಸ್ಕ್ರೀನಿಂಗ್‌ ಕಿಟ್‌ಗಳನ್ನು ನೀಡಲಾಗಿದೆ. ಸಂಕಷ್ಟ ಸಂದರ್ಭದಲ್ಲಿ ನಮಗೆ ರಕ್ಷಣೆ ನೀಡಿದ, ಆಶ್ರಯ ನೀಡಿದ ಭಾರತದ ಬಗ್ಗೆ ನಮಗೆ ಅಪಾರ ಗೌರವವಿದೆ. ನಮಗೆ ರಕ್ಷಣೆ ನೀಡಿದ ದೇಶಕ್ಕೆ ಸಂಕಷ್ಟ ಎದುರಾದಾಗ ನಮ್ಮ ಶಕ್ತಿ ಮೀರಿ ಸಹಾಯ ಮಾಡುವುದು, ಸಾರ್ಥಕ ಸೇವೆಯಲ್ಲಿ ತೊಡಗುವುದು ನಮ್ಮೆಲ್ಲರ ಕರ್ತವ್ಯ. ಜತೆಗೆ ಭಗವಾನ ಬುದ್ಧ ಸಾರಿದ ಕರುಣೆಯ ಸಾರದ ಅಡಿಯಲ್ಲೇ ನಾವು ಸೇವಾ ಕಾರ್ಯದಲ್ಲಿ ತೊಡಗಿದ್ದೇವೆ ಎಂಬುದು ರಾಜ್ಯದಲ್ಲಿನ ಐದು ಟಿಬೆಟಿಯನ್‌ ಪುವರ್ನವಸತಿ ಕೇಂದ್ರಗಳಲ್ಲಿನ ಟಿಬೆಟಿಯನ್ನರ ಅನಿಸಿಕೆ.

ದೇಶದಲ್ಲಿನ ಟಿಬೆಟಿಯನ್‌ ಸಮುದಾಯ ಕೋವಿಡ್ ವಿರುದ್ಧ ಭಾರತೀಯರ ಹೋರಾಟದಲ್ಲಿ ತಮ್ಮದೇ ವಿಶಿಷ್ಟ ರೀತಿಯ ಸೇವೆಯೊಂದಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಕೇಂದ್ರಗಳಲ್ಲಿ ಶಿಸ್ತುಬದ್ಧ ಜಾಗೃತಿ, ಸಂರಕ್ಷಣೆ ಅಲ್ಲದೆ, ನೆರೆಹೊರೆಯ ಗ್ರಾಮಗಳ ಜನರಿಗೆ ಆಹಾರಧಾನ್ಯ ಕಿಟ್‌, ಔಷಧಿ ಇನ್ನಿತರ ನೆರವು ನೀಡಿದ್ದು, ಭಾರತದ ಬಗ್ಗೆ ಅವರಲ್ಲಿರುವ ಗುರುಭಕ್ತಿಯನ್ನು ಈ ರೂಪದಲ್ಲಿ ಸಮರ್ಪಿಸಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.-ಅಮೃತ ಜೋಶಿ, ಸಹ ಸಂಯೋಜಕ, ಕೋರ್‌ ಗ್ರುಪ್‌ ಫಾರ್‌ ಟಿಬೆಟಿಯನ್‌ ಕಾಸ್‌.

ಮುಂಡಗೋಡ ಟಿಬೆಟಿಯನ್‌ ಪುರ್ವಸತಿ ಕೇಂದ್ರಗಳಲ್ಲಿನ ಟಿಬೆಟಿಯನ್ನರು ಕೋವಿಡ್ ತಡೆ ಹಾಗೂ ನೆರವು ಕಾರ್ಯದಲ್ಲಿ ತೋರಿದ ಕಾರ್ಯ, ಸಹಕಾರ ಶ್ಲಾಘನೀಯ. ಮುಂಡಗೋಡ ತಾಲೂಕಿನಲ್ಲಿ ಸುಮಾರು 3,500ಕ್ಕೂ ಅಧಿಕ ಆಹಾರ ಕಿಟ್‌ಗಳನ್ನು ತಾಲೂಕು ಆಡಳಿತದ ಸಹಕಾರದೊಂದಿಗೆ ವಿತರಿಸಿದ್ದಾರೆ. ಕ್ಯಾಂಪ್‌ಗ್ಳಲ್ಲಿ ಕೊರೊನಾ ತಡೆ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಮೂಲಕ ಅವರು ಸೇಫ್ ಆಗಿದ್ದಾರೆ. ಜತೆಗೆ ತಾಲೂಕು ಆಡಳಿತಕ್ಕೂ ನಿತ್ಯ ವರದಿ ನೀಡುತ್ತಿದ್ದಾರೆ. – ಶ್ರೀಧರ ಮುಂದಲಮನೆ, ತಹಶೀಲ್ದಾರ್‌, ಮುಂಡಗೋಡ.

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next