Advertisement

20ರಿಂದ ನಿರ್ಬಂಧ ಭಾಗಶಃ ತೆರವು : ಕೇಂದ್ರ ಗೃಹ ಇಲಾಖೆಯಿಂದ ಮಾರ್ಗಸೂಚಿಗಳು ಬಿಡುಗಡೆ

12:58 PM Apr 16, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟಲು ಲಾಕ್ಡೌನ್ ಅವಧಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಉಂಟಾಗುವ ಕೆಲವು ಅಡಚಣೆಗಳನ್ನು ತಪ್ಪಿಸಲು ಕೇಂದ್ರ ಗೃಹ ಇಲಾಖೆ, ಕೆಲವು ಕ್ಷೇತ್ರಗಳಿಗೆ ಲಾಕ್ಡೌನ್ನಿಂದ ಕೆಲವು ವಿನಾಯ್ತಿಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

Advertisement

ಕೃಷಿ, ವಾಣಿಜ್ಯ, ಉತ್ಪಾದನೆ ಹಾಗೂ ಐಟಿ ವಲಯಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದೆ. ಆದರೆ, ಸಾರ್ವಜನಿಕ ಸಾರಿಗೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ತೆರೆಯುವುದಕ್ಕೆ ಇದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ. ಹೊಸ ಮಾರ್ಗಸೂಚಿಗಳು ಏ. 20ರಿಂದ ಜಾರಿಗೆ ಬರಲಿವೆ.

ಹಾಟ್ ಸ್ಪಾಟ್ ಗಳ ಮೆಲೆ ಕಟ್ಟೆಚ್ಚರ
ಕೋವಿಡ್ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದಿರುವ ಪ್ರದೇಶಗಳಲ್ಲಿ, ಲಾಕ್ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯ ಸರ್ಕಾರಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಆ ಭಾಗದಲ್ಲಿ ಸಾರ್ವಜನಿಕ ಸಂಚಾರ, ಸಾರಿಗೆ ಇತ್ಯಾದಿಗಳನ್ನು ನಿಷೇಧಿಸಬೇಕು. ಅಗತ್ಯ ವಸ್ತುಗಳ ಪೂರೈಕೆಯ ವಾಹನಗಳನ್ನು ಸೂಕ್ತ ತಪಾಸಣೆ ಮಾಡಿಯೇ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಮಾರ್ಗಸೂಚಿಗಳಲ್ಲಿ ಹೇಳಲಾಗಿರುವ ನಿಬಂಧಗಳ ಸಡಿಲಿಕೆ ಈ ವಲಯಗಳಿಗೆ ಅನ್ವಯವಾಗದು ಎಂದು ಹೇಳಿದೆ.

ಮದ್ಯ, ಗುಟ್ಕಾ ಇಲ್ಲ
ದೇಶದ ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಮದ್ಯ, ಗುಟ್ಕಾ, ಪಾನ್ ಮಸಾಲಾದಂಥ ವಸ್ತುಗಳ ಮಾರಾಟಕ್ಕೆ ಅವಕಾಶ ಕೊಡಬಾರದು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

Advertisement

ಇಂಥ ಚಟುವಟಿಕೆಗಳನ್ನು ನಿಗ್ರಹಿಸಲು ದಂಡ ಅಥವಾ ಮತ್ಯಾವುದೇ ಕಾನೂನಾನಾತ್ಮಕ ಶಿಕ್ಷೆಯನ್ನು ವಿಧಿಸುವ ಮೂಲಕ ಸಾರ್ವಜನಿಕರಲ್ಲಿ ಆ ಬಗ್ಗೆ ಎಚ್ಚರಿಕೆ ಮೂಡಿಸಬೇಕು. ನಗರಗಳಲ್ಲಿ ಉಗಿಯುವುದನ್ನು ನಿಲುಗಡೆ ಮಾಡಲೂ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ತೇಲುವ ವಾರ್ಡ್ ಆಗಲಿವೆ ಹೌಸ್ ಬೋಟ್ ಗಳು
ಕೇರಳದ ಸಮುದ್ರದ ಹಿನ್ನೀರಿನಲ್ಲಿನ್ನು ಬೋಟ್ಗಳು ತೇಲಲಿವೆ. ಆದರೆ, ಪ್ರವಾಸಿಗರನ್ನು ತುಂಬಿಕೊಂಡಲ್ಲ, ಕೋವಿಡ್ ಸೋಂಕಿತರನ್ನು ಹೊತ್ತು! ದೇಶ ವಿದೇಶಗಳ ಪ್ರವಾಸಿಗರನ್ನು ಕೇರಳದತ್ತ ಸೆಳೆಯುವಲ್ಲಿ ವಿಶೇಷ ಪಾತ್ರ ವಹಿಸಿದ್ದ ಹಿನ್ನೀರಿನ ಐಶಾರಾಮಿ ಹೌಸ್ ಬೋಟ್ ಗಳನ್ನು ಕೋವಿಡ್ ಸೋಂಕಿತರ ಐಸೋಲೇಷನ್ ವಾರ್ಡ್ ಗಳನ್ನಾಗಿ ಮಾರ್ಪಡಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಜಿಲ್ಲಾಡಳಿತ ಮಾಡಿದ್ದ ಮನವಿಗೆ ಬೋಟ್ ಗಳ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಹೌಸ್ ಬೋಟ್ ಗಳಲ್ಲಿ ಕನಿಷ್ಠ 2000 ವಾರ್ಡ್ ಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಮಾಸಾಂತ್ಯದ ವೇಳೆಗೆ ಬಹುತೇಕ ಐಸೋಲೇಷನ್ ವಾರ್ಡ್ ಗಳು ಸೇವೆಗೆ ಸಿದ್ಧವಾಗಲಿವೆ ಎಂದು ಕೇರಳ ಸಚಿವ ಜಿ.ಸುಧಾಕರನ್ ತಿಳಿಸಿದ್ದಾರೆ.

ಯಾವುದು ನಿಷೇಧ?
– ಸ್ಥೂಲವಾಗಿ ಹೇಳುವುದಾದರೆ, ಎಲ್ಲಾ ದೇಶೀಯ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿಷೇಧವಿದೆ. ರೈಲುಗಳು, ಬಸ್ಸುಗಳು, ಮೆಟ್ರೋ ರೈಲುಗಳ ಸಂಚಾರಕ್ಕೂ ನಿಷೇಧವಿದೆ. ಆದರೆ, ಭದ್ರತಾ ಸಿಬ್ಬಂದಿಯ ಸಂಚಾರಕ್ಕೆ ಅಥವಾ ಮಾರ್ಗಸೂಚಿಯನುಸಾರ ಆಗುವ ಪ್ರಯಾಣ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಇದರ ಜೊತೆಗೆ ಅಂತರ ಜಿಲ್ಲೆ, ಅಂತರ ರಾಜ್ಯಗಳ ಸಂಚಾರಕ್ಕೂ ನಿರ್ಬಂಧ ಇರಲಿದೆ. ಇದರಲ್ಲಿ ವೈದ್ಯಕೀಯ ಕಾರಣಗಳಿಗಾಗಿನ ಪ್ರಯಾಣ ಅಥವಾ ಮಾರ್ಗಸೂಚಿಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಚಾರಕ್ಕೆ ವಿನಾಯ್ತಿ ಇರಲಿದೆ.

– ಎಲ್ಲಾ ವಿದ್ಯಾಸಂಸ್ಥೆಗಳು, ತರಬೇತಿ ಕೇಂದ್ರಗಳು, ಕೋಚಿಂಗ್ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚಬೇಕಿದೆ.

– ನಿರ್ಮಾಣ ಹಾಗೂ ಕೆಲವು ವಲಯಗಳನ್ನು ಹೊರತುಪಡಿಸಿದಂತೆ ಎಲ್ಲಾ ವಾಣಿಜ್ಯ, ಕೈಗಾರಿಕಾ ವಲಯಗಳೂ ಬಂದ್.

– ಅತಿಥಿ ಉಪಚಾರ ಸೇವೆಗಳಲ್ಲಿ ಕೆಲವನ್ನು ಹೊರತುಪಡಿಸಿ ಮಿಕ್ಕವೆಲ್ಲಾ ಬಂದ್.

– ಟ್ಯಾಕ್ಸಿಗಳು, ಆಟೋ ರಿಕ್ಷಾಗಳು, ಸೈಕಲ್ ರಿಕ್ಷಾ ಹಾಗೂ ಇನ್ನಿತರ ಕ್ಯಾಬ್ ಮಾದರಿಯ ಸೇವೆಗಳು ನಿಲುಗಡೆ.

– ಸಿನಿಮಾ ಹಾಲ್ ಗಳು, ಮಾಲ್ ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಜಿಮ್ ಗಳು, ಕ್ರೀಡಾ ಸಮುಚ್ಛಯಗಳು, ಈಜು ಕೊಳಗಳು, ಮನರಂಜನೆ ಪಾರ್ಕ್ ಗಳು, ರಂಗ ಮಂದಿರಗಳು, ಬಾರ್ಗಳು, ಸಭಾ ಭವನಗಳು ಬಂದ್.

– ಎಲ್ಲಾ ರೀತಿಯ ಸಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳು ಹಾಗೂ ಸಮಾವೇಶಗಳಿಗೆ ಬ್ರೇಕ್.

– ಅಂತ್ಯಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ.

ಯಾವುದಕ್ಕೆ ನಿರ್ಬಂಧವಿಲ್ಲ?
– ಆರೋಗ್ಯ ಸೇವೆಗಳು: ಎಲ್ಲಾ ರೀತಿಯ ಆರೋಗ್ಯ ಸೇವೆಗಳು,

– ಸಾರ್ವಜನಿಕ ಪರೀಕ್ಷಾ ಕೇಂದ್ರಗಳು

– ಮೆಡಿಕಲ್ ಸ್ಟೋರ್ ಗಳು, ಔಷಧ ಉತ್ಪಾದನೆ, ಔಷಧಗಳ ಸಾಗಾಣಿಕೆ, ಔಷಧಗಳ ಜಾಹೀರಾತು ಪ್ರಕಟಣೆ

ಕೃಷಿ ಇಲಾಖೆ

– ಕೃಷಿ ಸಂಬಂಧಿತ ಸಾಮಗ್ರಿಗಳ ಸಾಗಾಣಿಕೆ-ಮಾರಾಟ-ಖರೀದಿ, ಕೃಷಿ ಮಾರುಕಟ್ಟೆಗಳು, ಮಂಡಿಗಳು, ಕೃಷಿ ಉತ್ಪನ್ನಗಳ ಕೇಂದ್ರೀಕೃತ, ವಿಕೇಂದ್ರೀಕೃತ ಮಾರಾಟ ವ್ಯವಸ್ಥೆ , ಕೀಟನಾಶಕಗಳ ವಿತರಣೆ ಹಾಗೂ ಮಾರಾಟ, ಕೃಷಿ ಬೀಜಗಳ ವಿತರಣೆ-ಮಾರಾಟ.

– ಮೀನುಗಾರಿಕೆ ಹಾಗೂ ಒಳನಾಡು ಮೀನುಗಾರಿಕೆ

– ಪಶು ಸಂವರ್ಧನೆ ಚಟುವಟಿಕೆಗಳು, ಹಾಲು-ಹಾಲಿನ ಉತ್ಪನ್ನಗಳು, ಪೌಲ್ಟ್ರಿ, ಕಾಫಿ, ಚಹಾ, ರಬ್ಬರ್ ಪ್ಲಾಂಟೇಷನ್ ಗೆ ಸಂಬಂಧಿಸಿದ ಕೆಲಸಗಳು.

– ಗ್ರಾಮೀಣ ಪ್ರದೇಶಗಳಲ್ಲಿನ ಆಹಾರ ಸಂಸ್ಕರಣೆ, ರಸ್ತೆ ನಿರ್ಮಾಣ, ನೀರಾವರಿ, ಕಟ್ಟಡ ಹಾಗೂ ಕೈಗಾರಿಕಾ ಯೋಜನೆಗಳು, ನರೇಗಾ ಅಡಿಯಲ್ಲಿ ಕೈಗೊಳ್ಳಲಾಗಿರುವ ಯೋಜನೆಗಳು, ಕೃಷಿ ಮತ್ತು ಜಲ ಸಂರಕ್ಷಣೆ ಕುರಿತ ಯೋಜನೆಗಳು, ಜನಸಾಮಾನ್ಯರ ಸೇವಾ ಕೇಂದ್ರಗಳು.

– ಮೀನುಗಾರಿಕೆ, ಜಲಚರಗಳ ಸಾಗಾಣಿಕೆ, ಮೀನುಗಳ ಆಹಾರ ಸಾಗಾಣಿಕೆ.

– ಟೀ, ಕಾಫಿ, ರಬ್ಬರ್ ಸಂಬಂಧಿತ ಕೇಂದ್ರಗಳಲ್ಲಿ ಗರಿಷ್ಠ 50 ಮಂದಿ ಕೆಲಸಗಾರರಿಗೆ ಮಾತ್ರ ಅವಕಾಶ.

– ಹಾಲು ಹಾಗೂ ಹಾಲಿನ ಉತ್ಪನ್ನ ಸಂಗ್ರಹಣೆ, ವಿತರಣೆ, ಮಾರಾಟ

– ಪಶು ಸಂಗೋಪನೆ, ಅನಿಮಲ್ ಶೆಲ್ಟರ್ ಹೋಂಗಳ ಸಾಮಗ್ರಿ ಸಾಗಾಣಿಕೆ

ಆರ್ಥಿಕ ವಲಯ

– ಆರ್.ಬಿ.ಐ., ಎಟಿಎಂಗಳು, ಬ್ಯಾಂಕುಗಳು, ಸೆಬಿಯಿಂದ ಸೂಚಿಸಲ್ಪಟ್ಟಿರುವ ಆರ್ಥಿಕ ಚಟುವಟಿಕೆಗಳು, ಸೆಬಿ ಕಚೇರಿಗಳು, ಸಾಲ ಮಾರುಕಟ್ಟೆ ಐ.ಆರ್.ಡಿ.ಎ.ಐ, ವಿಮಾ ಕಂಪನಿಗಳು

ಸಾಮಾಜಿಕ ವಲಯ

– ಮಕ್ಕಳು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರು, ನಿರ್ಗತಿಕರ ಕೇಂದ್ರಗಳ ಚಟುವಟಿಕೆಗಳಿಗೆ ವಿನಾಯ್ತಿ

– ಅಂಗನವಾಡಿ ಕೇಂದ್ರಗಳು, ಸಾಮಾಜಿಕ ಭದ್ರತಾ ಕೇಂದ್ರಗಳು.

– ಸಾಮಾಜಿಕ ಅಂತರದ ಅಡಿಯಲ್ಲಿ ನರೇಗಾ ಯೋಜನೆಗಳು.

ಸಾರ್ವಜನಿಕ ಸೇವೆ

– ಪೆಟ್ರೋಲ್ ಪಂಪ್ ಗಳು, ಎಲ್.ಪಿ.ಜಿ., ಪೆಟ್ರೋಲಿಯಂ, ಗ್ಯಾಸ್ ಸ್ಟೋರೇಜ್

– ಕೇಂದ್ರ, ರಾಜ್ಯ ಸರ್ಕಾರಗಳ ಅಡಿಯ ವಿದ್ಯುತ್ ಉತ್ಪಾದನೆ, ಪ್ರಸರಣ ಘಟಕಗಳು

– ಅಂಚೆ ಸೇವೆಗಳು, ಅಂಚೆ ಕಚೇರಿಗಳು

– ನಗರಸಭೆ, ಸ್ಥಳೀಯಾಡಳಿತ ಚಟುವಟಿಕೆ

– ಟೆಲಿಕಮ್ಯೂನಿಕೇಷನ್ ಹಾಗೂ ಅಂತರ್ಜಾಲ ಸೇವೆಗಳು

ಸರಕು, ಸಾರಿಗೆ

– ಸರಕು ಸಾಗಣೆ (ಅನಿವಾರ್ಯ ಅಥವಾ ಸಾಮಾನ್ಯ ಸರಕು ಸೇರಿ)

– ಸರಕು ಸಾಗಣೆಗಾಗಿ ರೈಲು, ವಿಮಾನ ಸೇವೆ

– ಹಣ್ಣು, ತರಕಾರಿ, ಪಡಿತರ, ನ್ಯಾಯ ಬೆಲೆ ಅಂಗಡಿಗಳು, ಡೈರಿ-ಹಾಲಿನ ಬೂತ್ ಗಳು, ಮಾಂಸ-ಮೀನು-ಮೊಟ್ಟೆ ಇತ್ಯಾದಿ ಅಂಗಡಿಗಳಿಗೆ ವಿನಾಯ್ತಿ.

– ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮ

– ಇ-ಕಾಮರ್ಸ್, ಆನ್ಲೈನ್ ಮಾರಾಟ ತಾಣ, ಕೊರಿಯರ್ ಸೇವೆಗಳು.

– ಕೋಲ್ಡ್  ಸ್ಟೋರೇಜ್ ಸೇವೆಗಳು.

– ಡೇಟಾ, ಕಾಲ್ ಸೆಂಟರ್ ಗಳು (ಸರ್ಕಾರಿ ಸೇವೆಗಳಿಗೆ ಮಾತ್ರ)

ಕೈಗಾರಿಕಾ ವಲಯ

– ಕಲ್ಲಿದ್ದಲು, ಗಣಿಗಾರಿಕೆ, ಖನಿಜಗಳು, ಪ್ಯಾಕೇಜಿಂಗ್, ನಾರಿನ ಉದ್ಯಮ, ಇಟ್ಟಿಗೆ ಉದ್ಯಮ.

– ವಿಶೇಷ ಆರ್ಥಿಕ ವಲಯದ ಕೈಗಾರಿಕೆಗಳು, ಐಟಿ ಹಾರ್ಡ್ ವೇರ್ ಗಳು.

ಕೆಂಪು ವಲಯದೊಳಗೆ ದೇಶದ 170 ಜಿಲ್ಲೆಗಳು

ಕೋವಿಡ್ ಸೋಂಕಿತರನ್ನು ಆಧರಿಸಿದ ದೇಶದ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ಅಂಗೀಕರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದರಂತೆ, ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳನ್ನು ಹಾಟ್ ಸ್ಪಾಟ್ (ಕೆಂಪು ವಲಯ) ಎಂದೂ, ಕಡಿಮೆ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳನ್ನು ನಾನ್-ಹಾಟ್ ಸ್ಪಾಟ್ ಮತ್ತು ಯಾವುದೇ ಪ್ರಕರಣ ಪತ್ತೆಯಾಗದೇ ಇರುವ ಪ್ರದೇಶಗಳನ್ನು ಹಸಿರು ವಲಯ ಎಂದು ವಿಂಗಡಿಸಲಾಗಿದೆ.

ಪ್ರಸ್ತುತ ದೇಶದಲ್ಲಿ 170 ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. 207 ಜಿಲ್ಲೆಗಳನ್ನು ಸಂಭಾವ್ಯ ಹಾಟ್ ಸ್ಪಾಟ್ ಅಥವಾ ನಾನ್-ಹಾಟ್ ಸ್ಪಾಟ್ ಎಂದೂ, ಉಳಿದ ಜಿಲ್ಲೆಗಳನ್ನು ಹಸಿರು ವಲಯವೆಂದು ವರ್ಗೀಕರಿಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಇದೇ ವೇಳೆ, ದೇಶದಲ್ಲಿ ಈವರೆಗೆ ಸಾಮುದಾಯಿಕ ಮಟ್ಟದಲ್ಲಿ ವೈರಸ್ ವ್ಯಾಪಿಸಿಲ್ಲ ಎಂದಿರುವ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಪ್ರಸ್ತುತ ನಾವು ನೋಡುತ್ತಿರುವುದು ಕ್ಲಸ್ಟರ್ ಮಟ್ಟದ ವ್ಯಾಪಿಸುವಿಕೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ದೇಶದಲ್ಲಿ ಮುಂದಿನ 2- 3 ವಾರಗಳು ಅತ್ಯಂತ ನಿರ್ಣಾಯಕವಾದದ್ದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next