Advertisement

ಹೆಚ್ಚುತ್ತಿದೆ ಚೇತರಿಕೆ, ಸೋಂಕಿತರ ಸಂಖ್ಯೆಯೂ ಏರಿಕೆ

01:16 AM Jun 29, 2020 | Hari Prasad |

ಜಾಗತಿಕವಾಗಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 1 ಕೋಟಿ ದಾಟಿದ್ದರೆ, ಭಾರತದಲ್ಲಿ ಈ ಸಂಖ್ಯೆ 5 ಲಕ್ಷ ದಾಟಿದೆ.

Advertisement

ಆದರೆ ಈಗಲೂ ದೇಶದಲ್ಲಿನ ಒಟ್ಟು ಪ್ರಕರಣಗಳಲ್ಲಿ ಕೇವಲ ಎಂಟು ರಾಜ್ಯಗಳ ಪಾಲು 85.5 ಪ್ರತಿಶತವಿದೆ!

ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಚೇತರಿಕೆ ಹಾಗೂ ಟೆಸ್ಟಿಂಗ್‌ ಪ್ರಮಾಣದಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ.

ಮೊದಲ ಅಲೆ, ಎರಡನೇ ಅಲೆಯ ಚರ್ಚೆಯ ನಡುವೆ!
ಜಗತ್ತಿನ ಮೇಲೆ ಕೋವಿಡ್‌-19ನ ಪ್ರಹಾರ ಇನ್ನೂ ನಿಲ್ಲುತ್ತಿಲ್ಲ. ವಿಶ್ವಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ 1 ಕೋಟಿಯನ್ನು ದಾಟಿದೆ. ಏಳು ತಿಂಗಳಲ್ಲಿ ಈ ವೈರಸ್‌ 5 ಲಕ್ಷಕ್ಕೂ ಅಧಿಕ ಜನರನ್ನು ಬಲಿಪಡೆದಿದೆ. ಉತ್ತರ ಅಮೆರಿಕ, ಲ್ಯಾಟಿನ್‌ ಅಮೆರಿಕ ಹಾಗೂ ಯುರೋಪ್‌ನಲ್ಲೇ 25 ಪ್ರತಿಶತ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದರೆ, ಈಗ ಏಷ್ಯನ್‌ ರಾಷ್ಟ್ರಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 14 ಪ್ರತಿಶತ ದಾಟಿದೆ.

ಏಷ್ಯಾದ ರಾಷ್ಟ್ರಗಳಲ್ಲಿ ಭಾರತದಲ್ಲೇ ಅತಿಹೆಚ್ಚು ಸೋಂಕಿತರಿದ್ದಾರೆ. ಇನ್ನು 25 ಲಕ್ಷಕ್ಕೂ ಅಧಿಕ ಪ್ರಕರಣಗಳಿಗೆ ಸಾಕ್ಷಿಯಾಗಿರುವ ಅಮೆರಿಕದಲ್ಲಿ ಜೂನ್‌ ಮೊದಲೆರಡು ವಾರದಲ್ಲಿ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತಾದರೂ, ಈಗ ಅಲ್ಲಿ ಸೋಂಕಿತರ ಸಂಖ್ಯೆ ಹಿಂದೆಂದೂ ಕಾಣದ ರೀತಿಯಲ್ಲಿ ಏರುತ್ತಿದೆ.

ನಿತ್ಯ ಪ್ರಕರಣಗಳ ಸಂಖ್ಯೆ 25-40 ಸಾವಿರದ ನಡುವೆ ದಾಖಲಾಗುತ್ತಿದ್ದು, ಇದುವರೆಗೂ ನಗರ ಕೇಂದ್ರಿತವಾಗಿದ್ದ ವೈರಸ್‌ ಕಳೆದೊಂದು ವಾರದಿಂದ ಅಮೆರಿಕದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ವರದಿಯಾಗಲಾರಂಭಿಸಿರುವುದು ಟ್ರಂಪ್‌ ಆಡಳಿತಕ್ಕೆ ತಲೆನೋವು ತಂದಿದೆ. ಇನ್ನೊಂದೆಡೆ ಚೀನ ಹಾಗೂ ದಕ್ಷಿಣ ಕೊರಿಯಾದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಲೇ ಇದೆಯಾ­ದರೂ, ಪ್ರಕರಣಗಳು ಎರಡಂಕಿಯಲ್ಲೇ ವರದಿಯಾಗುತ್ತಿವೆ.

Advertisement

ದೇಶದಲ್ಲೀಗ ನಿತ್ಯ 2 ಲಕ್ಷಕ್ಕೂ ಅಧಿಕ ಪರೀಕ್ಷೆಗಳು
ಜೂನ್‌ 27ರ ವೇಳೆಗೆ ಭಾರತವು 82 ಲಕ್ಷ ಜನರನ್ನು ಪರೀಕ್ಷಿಸಿದೆ. ಮೇ 18ರಿಂದ ದೇಶದಲ್ಲಿ ನಿತ್ಯ ಒಂದು ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸುತ್ತಾ ಬರಲಾಗಿತ್ತು. ಜೂನ್‌ 23ರಿಂದ ನಿತ್ಯ ಪರೀಕ್ಷೆಗಳ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.


ಜೂನ್‌ ತಿಂಗಳಲ್ಲಿ ಹೆಚ್ಚು ಹಾನಿ
ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಒಟ್ಟು ಸಂಖ್ಯೆ 5 ಲಕ್ಷ 30 ಸಾವಿರ ದಾಟಿರುವುದು ಆತಂಕಕ್ಕೆ ದೂಡುತ್ತಿದೆಯಾದರೂ, ಚೇತರಿಕೆಯ ಪ್ರಮಾ­ಣವೂ 58 ಪ್ರತಿಶತ ದಾಟಿದ್ದು,  ಈಗಾಗಲೇ ಒಟ್ಟು ಸೋಂಕಿತರಲ್ಲಿ 3 ಲಕ್ಷ 11 ಸಾವಿರಕ್ಕೂ ಅಧಿಕ ಜನ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಜೂನ್‌ 27ರ ವೇಳೆಗೆ 2 ಲಕ್ಷ 3 ಸಾವಿರದಷ್ಟಿದೆ.

ಆದರೂ, ಕೇವಲ ಜೂನ್‌ ತಿಂಗಳೊಂದರಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿರುವುದು ಸಹ ಮುಂದಿನ ದಿನಗಳ ಬಗ್ಗೆ ಚಿಂತೆ ಮೂಡುವಂತೆ ಮಾಡಿದೆ. ಇದುವರೆಗೂ ಕೋವಿಡ್ 19 ವೈರಸ್ ನಿಂದಾಗಿ ಒಟ್ಟು 16 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರೆ, ಇದರಲ್ಲಿ ಜೂನ್‌ ತಿಂಗಳೊಂದರಲ್ಲೇ 10698 ಜನ ಮೃತಪಟ್ಟಿದ್ದಾರೆ!

ಪರಿಷ್ಕರಣೆಯ ಪರಿಣಾಮ: ಜೂನ್‌ ಆರಂಭದಿಂದ ನಿತ್ಯ ಸಾವಿನ ಸಂಖ್ಯೆ 200-300ರ ಆಸುಪಾಸಿನಲ್ಲಿ ಇತ್ತಾದರೂ, ಏಕಾಏಕಿ ಜೂನ್‌ 16ರಂದು ದೇಶದಲ್ಲಿ 2004 ಕೋವಿಡ್‌-19 ಸಾವುಗಳು ದಾಖಲಾದವು. ಆದರೆ, ಇಷ್ಟೊಂದು ಜನ ಅದೇ ದಿನ ಮೃತಪಟ್ಟಿರಲಿಲ್ಲ. ಆಗಿದ್ದೇನೆಂದರೆ, ಮಹಾರಾಷ್ಟ್ರ ಸರ್ಕಾರ ಮೃತರ ಸಂಖ್ಯೆಗೆ ಹಳೆಯ ಪ್ರಕರಣಗಳನ್ನೂ ಸೇರಿಸಿದ್ದರಿಂದ ಅಂದು ಈ ಬೃಹತ್‌ ಏರಿಕೆಯಾಯಿತು.

ಮಹಾರಾಷ್ಟ್ರದಲ್ಲಿ ಅದಕ್ಕೂ ಮುನ್ನ ಹಲವು ಪ್ರಕರಣಗಳನ್ನು ಕೋವಿಡ್‌-19 ಸಾವುಗಳೆಂದು ಪರಿಗಣಿಸಿರಲಿಲ್ಲ. ಆದರೆ ಪರಿಶೋಧನೆಯ ವೇಳೆ, ಈ ಹಿಂದೆ ದಾಖಲಿಸದಿದ್ದ 1328 ಸಾವಿನ ಪ್ರಕರಣಗಳನ್ನು ಸೇರಿಸಿದ ಕಾರಣ, ಆ ರಾಜ್ಯವಷ್ಟೇ ಅಲ್ಲದೇ, ದೇಶದ ಸರಾಸರಿ ಮರಣ ಪ್ರಮಾಣದ ಮೇಲೂ ಪರಿಣಾಮವುಂಟಾಯಿತು.

ಯಾವ ರಾಜ್ಯದಲ್ಲಿ ಹೆಚ್ಚು ಚೇತರಿಕೆ?
ಒಟ್ಟೂ ಪ್ರಕರಣಗಳ ಆಧಾರದಲ್ಲಿ ಪರಿಗಣಿಸಿದರೆ ಗುಜರಾತ್‌ ದೇಶದ 4ನೇ ಹಾಟ್‌ಸ್ಪಾಟ್‌ ಆದರೂ, ಕೆಲವೇ ದಿನಗಳಲ್ಲಿ ಅಲ್ಲಿ ಚೇತರಿಸಿಕೊಂಡವರ ಸಂಖ್ಯೆಯಲ್ಲೂ ಅಪಾರ ಏರಿಕೆ ಕಂಡುಬಂದಿದೆ. ಪರಿಣಾಮವಾಗಿ, ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಗುಜರಾತ್‌ ಈಗ 7ನೇ ಸ್ಥಾನಕ್ಕೆ ಇಳಿದಿದೆ. ಜೂನ್‌ 27ರ ವೇಳೆಗೆ ಅಲ್ಲಿ 30 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದರೆ, ಅದರಲ್ಲಿ  22,417 ಜನ ಗುಣಮುಖರಾಗಿದ್ದಾರೆ! ಇನ್ನು ಕರ್ನಾಟಕದಲ್ಲಿ ಜೂನ್‌ 1ರಿಂದ ಜೂನ್‌ 27ರವರೆಗೆ 8702 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಇದೇ ಅವಧಿಯಲ್ಲೇ 6071 ಜನರು ಗುಣಮುಖರಾಗಿದ್ದಾರೆ.


ಮಹಾನಗರಗಳಲ್ಲಿ ಕೋವಿಡ್ 19 ಹಾವಳಿ
ಕೋವಿಡ್‌-19 ಈಗಲೂ ನಗರ ಪ್ರದೇಶಗಳಿಗೆ ಹೆಚ್ಚು ತೊಂದರೆ ಉಂಟುಮಾಡುತ್ತಿದೆ. ಅದರಲ್ಲೂ ಮಹಾನಗರಗಳಲ್ಲೇ ಕೋವಿಡ್ 19 ಹಾವಳಿ ಅಧಿಕವಿದೆ. ಆದಾಗ್ಯೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಹಠಾತ್ತನೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆಯಾದರೂ, ಈಗಲೂ ದೇಶದ ಅನ್ಯ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಆದರೆ, ಬೆಂಗಳೂರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 75.54 ಪ್ರತಿಶತವಿದೆ.

Caution Fatigue ಅಧಿಕವಾದರೆ ಅಪಾಯ!
ಒಂದು ವಿಪತ್ತಿನ ಕುರಿತು ಆರಂಭದ ದಿನಗಳಲ್ಲಿ ಇರುವ ಆತಂಕ, ಎಚ್ಚರಿಕೆಯು ದಿನಗಳೆದಂತೆ ‘ಹಲವು ಕಾರಣ’ಗಳಿಂದಾಗಿ ಕಡಿಮೆಯಾಗುತ್ತಾ ಹೋಗುವುದನ್ನು ಮನಶ್ಯಾಸ್ತ್ರದಲ್ಲಿ Caution Fatigue ಎಂದು ಕರೆಯಲಾಗುತ್ತದೆ. ಅತಿಯಾದ ಮಾಹಿತಿಯ ಸೇವನೆ, ನಿರಂತರ ಭಯ-ಗೊಂದಲದ ಸ್ಥಿತಿಯಿಂದ ಒತ್ತಡ ಅಧಿಕವಾಗುತ್ತದೆ.

ಈ ಒತ್ತಡದಿಂದ ಮನಸ್ಸು ವಿಮುಖವಾಗಲು ಪ್ರಯತ್ನಿಸುವುದರಿಂದಲೇ ಈ ರೀತಿಯ ನಿರಾತಂಕದ ವರ್ತನೆಗೆ ಕಾರಣವಾಗುತ್ತದೆ. ಕಾಷನ್‌ ಫೆಟೀಗ್‌ ಅಧಿಕವಾದಷ್ಟೂ ಅಪಾಯ ಅಧಿಕ ಎಂದು ಮನಶ್ಯಾಸ್ತ್ರಜ್ಞರು ಎಚ್ಚರಿಸುತ್ತಿದ್ದಾರೆ. ಭಾರತದಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್‌ ಸಮಯದಲ್ಲಿ ಕೋವಿಡ್‌ ಬಗ್ಗೆ ಜನರಿಗಿದ್ದ ಆತಂಕ ಈಗ ದೂರವಾಗಿದಂತೆ ಅನ್ನಿಸುವ ಚಿತ್ರಣ ಎಲ್ಲೆಡೆ ಗೋಚರಿಸುತ್ತಿದೆ.

ಜನರು ಅನಗತ್ಯ ಹೊರಗೆ ಅಡ್ಡಾಡುವುದು, ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂ ಸುವುದು, ನೆಪಕ್ಕೆಂಬಂತೆ ಮಾಸ್ಕ್ ಧರಿಸುವುದು ವರದಿಯಾಗುತ್ತಿವೆ. ಇನ್ನು, ಗಂಟೆಗೊಮ್ಮೆಯಾದರೂ ಸ್ವತ್ಛವಾಗಿ ಸೋಪಿನಿಂದ ಕೈತೊಳೆಯುತ್ತಿದ್ದವರು, ಈಗ ನೆಪ ಮಾತ್ರಕ್ಕೆ ಕೈತೊಳೆಯುತ್ತಿದ್ದಾರೆ ಅಥವಾ ಅದೂ ಇಲ್ಲ ಎನ್ನುತ್ತದೆ ಹೈಜೀನ್‌ ನ್ಯಾಚುರಲ್‌ ಸಂಸ್ಥೆಯ ಸಮೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next