Advertisement

3ನೇ ಅಲೆ ನಿರ್ವಹಣೆಯೇ ದೊಡ್ಡ ಸವಾಲು

02:54 PM Aug 06, 2021 | Team Udayavani |

ಬೆಂಗಳೂರು: ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕೋವಿಡ್‌ ನಿರ್ವಹಣೆ ಸವಾಲು ಎದುರಾಗಿದೆ. ಕೋವಿಡ್‌ ರಾಷ್ಟ್ರ ರಾಜಧಾನಿ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ ಬೆಂಗಳೂರಿನಲ್ಲಿ ಎರಡನೇ ಅಲೆಯ ದೊಡ್ಡ ಅನಾಹುತವನ್ನು ಮುಂಬರುವ ಮೂರನೇ ಅಲೆಯಲ್ಲಿ ತಪ್ಪಿಸುವ ದೊಡ್ಡ ಹೊಣೆಗಾರಿಕೆಯು ಬೆಂಗಳೂರು ಕೋವಿಡ್‌ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಸಚಿವ ಆರ್‌.ಅಶೋಕ್‌ ಮೇಲಿದೆ.

Advertisement

ಈ ನಿಟ್ಟಿನಲ್ಲಿ ಶೀಘ್ರವೇ ಮುಂಜಾಗ್ರತಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಿದೆ.ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರಕ್ಕೆ ಮೂರನೇ ಅಲೆ ಆತಂಕ ಎದುರಾಗಿದೆ. ಜುಲೈ ಕೊನೆಯವಾರ ನಿತ್ಯ ಸರಾಸರಿ 250 ಇದ್ದ ಪ್ರಕರಣಗಳು ಆಗಸ್ಟ್‌ ಮೊದಲ ವಾರ 450ಕ್ಕೆ ಹೆಚ್ಚಳ ‌ವಾಗಿವೆ. ಇದಕ್ಕೆ ಪೂರಕವಾಗಿ ಮೂರನೇ ಅಲೆಯು ನಿಗದಿಗಿಂತಮೊದಲೇ(ಸೆಪ್ಟೆಂಬರ್‌ ಮೊದಲ ವಾರ) ಶುರುವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಕೋವಿಡ್‌  ಮೊದಲೆರಡು ಅಲೆಯಗಳಿಂದ ಕಲಿತ ಅನುಭವ ಪಾಠವನ್ನು ಈ ಸದ್ಬಳಕೆ
ಮಾಡಿಕೊಳ್ಳಬೇಕು. ಆರಂಭದಲ್ಲೇಸಿದ್ಧತೆ ನಡೆಸುವ ಮೂಲಕ ಹತ್ತಿಕ್ಕಲು ಪ್ರಯತ್ನಿಸಬೇಕಿದೆ.

ಅನುಭವದಿಂದ ಪಾಠ ಕಲಿಬೇಕು:
ಜಿಲ್ಲಾ ಮಟ್ಟಕ್ಕೆಹೋಲಿಸಿದರೆ ರಾಜಧಾನಿಯಲ್ಲಿ ಕೋವಿಡ್‌ ಆರ್ಭಟ ಹೆಚ್ಚಿರುತ್ತದೆ. ಆಹಾರ, ಪಡಿತರ ಹಾಗೂ ಮಾಸ್ಕ್ ಹಂಚಿಕೆಗೆ ಸೀಮಿತ
ವಾಗುವಂತಿಲ್ಲ. ಎರಡನೇ ಅಲೆಯಲ್ಲಿ ಗರಿಷ್ಠ ಒಂದೇ ದಿನ 26 ಸಾವಿರ ಮಂದಿಗೆ ಸೋಂಕು ತಗುಲಿದ್ದು,375 ಸೋಂಕಿತರು ಸಾವಿಗೀಡಾಗಿದ್ದರು. ಸಕ್ರಿಯ ಪ್ರಕರಣಗಳು 3.2 ಲಕ್ಷದಷ್ಟು ಇದ್ದವು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ಹಾಸಿಗೆಗಳು, ಆ್ಯಂಬುಲೆನ್ಸ್‌, ವೈದ್ಯಕೀಯ ಸಿಬ್ಬಂದಿ, ಔಷಧ, ರೋಗಿಗಳ ನಿರ್ವಹಣೆಗೆ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.ಈನಿಟ್ಟಿನಲ್ಲಿ ಕೋವಿಡ್‌ ಮೂರನೇ ಅಲೆ ಸಂಬಂಧಿಸಿದಂತೆ ಡಾ.ದೇವಿ ಶೆಟ್ಟಿ ತಂಡ ನೀಡಿರುವ ವರದಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ಮುಂದಾಗಬೇಕಿದೆ.

ಕೋವಿಡ್‌ ಹಾಸಿಗೆ ಕೊರತೆಯಾಗದಿರಲಿ:
ಎರಡನೇ ಅಲೆ ಉಚ್ಛಾಯ ಸ್ಥಿತಿಯಲ್ಲಿ ನಗರದಲ್ಲಿ ಶೇ.50 ರಷ್ಟು ಹಾಸಿಗೆ ಕೊರತೆ ಎದುರಾಗಿತ್ತು. ಮೇ ತಿಂಗಳಲ್ಲಿ ನಿತ್ಯ ಸರಾಸರಿ 20
ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲುವ ಮೂಲಕ 35 ಸಾವಿರ ಹಾಸಿಗೆಗಳ ಬೇಡಿಕೆ ಇತ್ತು. ಆದರೆ, ಸರ್ಕಾರದಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿ 15 ಸಾವಿರ ಹಾಸಿಗೆಗಳ ವ್ಯವಸ್ಥೆಯನ್ನು ಮಾತ್ರ ಮಾಡಲಾಗಿತ್ತು. ಹೀಗಾಗಿಯೇ ಹಾಸಿಗೆಗಳ ಹಾಹಾಕಾರ ಎದುರಾಗಿ, ಸಾವಿರಾರು ಮಂದಿ ಮನೆಗಳಲ್ಲಿಯೇ ಸಾವಿಗೀಡಾದರು.ಮುಂಜಾಗ್ರತ ಕ್ರಮವಾಗಿ ಖಾಸಗಿ ಆಸ್ಪತ್ರೆಗಳೊಟ್ಟಿಗೆ ಸಭೆ ನಡೆಸಿ ಹೆಚ್ಚು ವರಿ ಹಾಸಿಗೆಗಳಿಗೆ ಸಹಕಾರ ಪಡೆಯಬೇಕಿದೆ. ಕಳೆದ ಬಾರಿ ಖಾಸಗಿ ಆಸ್ಪತ್ರೆಗಳು ಎದುರಿಸಿದ್ದ ಸಮಸ್ಯೆಗಳನ್ನು ಮುಖ್ಯಸ್ಥರೊಟ್ಟಿಗೆ ಚರ್ಚಿಸಿ ಬಗೆಹರಿಸಬೇಕಿದೆ.

ಸರ್ಕಾರಿ ಆಸ್ಪತ್ರೆ ಸಜ್ಜುಗೊಳಿಸಬೇಕು: ಎರಡನೇ ಅಲೆ ಆರ್ಭಟ ಕಡಿಮೆಯಾಗಿ ಎರಡು ತಿಂಗಳಾಗಿದೆ. ಸದ್ಯ ನಗರದಲ್ಲಿ ಮೆಡಿಕಲ್‌ ಕಾಲೇಜು ಸೇರಿದಂತೆ 12 ಪ್ರಮುಖ ಸರ್ಕಾರಿ ಆಸ್ಪತ್ರೆಗಳಿದ್ದು, ಅವುಗಳಿಗೆ ಭೇಟಿ ನೀಡಿ ಮೂರನೇ ಅಲೆಗೆ ಯಾವೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂಬುದನ್ನು ಪರಿಶೀಲಿಸಬೇಕು.ಈಮೂಲಕ ಆಸ್ಪತ್ರೆ ಆಕ್ಸಿಜನ್‌ ಕೊರತೆ, ಐಸಿಯು ಯಂತ್ರೋಪಕರಣ ನಿರ್ವಹಣೆಗೆ ಸಿಬ್ಬಂದಿ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಶೀಘ್ರವೇ ಪತ್ತೆ ಮಾಡಿ ಕಳೆದ ಬಾರಿಯ ಸಮಸ್ಯೆಗಳಿಗೆ ಕಡಿವಾಣಹಾಕಬೇಕಿದೆ.

Advertisement

ಸ್ಥಳೀಯ ಜನಪ್ರತಿನಿಧಿಗಳ ಬಳಕೆ; ಸಮನ್ವಯ ಆದ್ಯತೆ
ನಗರದಲ್ಲಿ ಸೋಂಕಿ ಹತೋಟಿ ವಾರ್ಡ್‌ಮಟ್ಟದಲ್ಲಿ ಉತ್ತಮ ನಿರ್ವಹಣೆ ಅಗತ್ಯವಾಗಿದೆ ಎಂಬುದು ತಜ್ಞರ ಸಲಹೆ.ಈನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಬಿಬಿಎಂಪಿ ಮಾಜಿ ಸದಸ್ಯರ ನೆರವು ಪಡೆದು ಪಡೆಯಬೇಕಿದೆ. ವಾರ್ಡ್‌ ಅಥವಾ ವಿಧಾನಸಭಾಕ್ಷೇತ್ರದ ಕೋವಿಡ್‌ ಆಸ್ಪತ್ರೆ, ಆಸ್ಪತ್ರೆ,ಕೋವಿಡ್‌ ಆರೈಕೆ ಕೇಂದ್ರ, ಟ್ರಯಾಜಿಂಗ್‌ ಸೆಂಟರ್‌,ಕಂಟೈನ್ಮೆಂಟ್‌ ಝೋನ್‌, ಸೀಲ್‌ಡೌನ್‌ ಪ್ರದೇಶ, ಸೋಂಕು ಪರೀಕ್ಷಾ ಕೇಂದ್ರಾ, ಲಸಿಕಾ ಕೇಂದ್ರಗಳಲ್ಲಿ ಸಮಸ್ಯೆಗಳು ಎದುರಾದಂತೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳೊಟ್ಟಿಗೆ ಕ್ರಮವಹಿಸುವ ಜವಾಬ್ದಾರಿಯನ್ನು ನೀಡಬೇಕಿದೆ

3ನೇ ಅಲೆಯನ್ನೇ ತಡೆಯಲು ಪ್ರಯತ್ನ ಇರಲಿ
ಪ್ರಮುಖವಾಗಿ ನಗರಕ್ಕೆ ಕೇರಳ ಪ್ರಯಾಣಿಕರಿಂದ ಕೋವಿಡ್‌ಸೋಂಕು ಹೆಚ್ಚಳವಾಗುತ್ತಿದೆ. ಹೀಗಾಗಿ, ಜಿಲ್ಲಾ ಗಡಿಭಾಗದಲ್ಲಿ ತಪಾಸಣೆ ಆರಂಭಿ
ಸುವುದು, ಸೋಂಕು ಪರೀಕ್ಷಾ ಕೇಂದ್ರ ತೆರೆಯುವ ಕ್ರಮಕೈಗೊಳ್ಳಬೇಕು. ಜನ ದಟ್ಟಣೆ ಪ್ರದೇಶಗಳನ್ನು ಗುರುತಿಸಿ ಕಟ್ಟು ನಿಟ್ಟಾದ ನಿಯಮ ಪಾಲನೆಗೆ ಒತ್ತು ಕೊಡಬೇಕು. ಒಂದು ಕೋಟಿಗೂ ಅಧಿಕ ಜನರಿರುವ ಬೆಂಗಳೂರು ಮಹಾನಗರಕ್ಕಾಗಿಯೇ ಪ್ರತ್ಯೇಕ ಕ್ರಮಕೈಗೊಳ್ಳಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next