Advertisement

ಕೊರೊನಾ: ಮೃತನ ಕುಟುಂಬದ ನಾಲ್ವರಿಗೆ ಪರೀಕ್ಷೆ

11:30 PM Mar 13, 2020 | Lakshmi GovindaRaj |

ಕಲಬುರಗಿ: ಭಾರತದಲ್ಲಿ ಕೋವಿಡ್‌-19 (ಕೊರೊನಾ) ಸೋಂಕಿಗೆ ಮೊದಲ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕಿನಿಂದಲೇ ಮೃತಪಟ್ಟ ನಗರದ 76 ವರ್ಷದ ವ್ಯಕ್ತಿಯ ಸಂಪರ್ಕದಲ್ಲಿದ್ದ ಒಟ್ಟು 46 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಆತನ ಕುಟುಂಬದ ನಾಲ್ವರ ರಕ್ತ, ಕಫದ ಮಾದರಿ ಸಂಗ್ರಹಿಸಿ, ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

Advertisement

ಮೃತನ ಸಂಪರ್ಕದಲ್ಲಿದ್ದ 46 ಜನರ ಪೈಕಿ 31 ಜನರನ್ನು ಗಂಭೀರ ಪರಿಣಾಮ (ಹೈ-ರಿಸ್ಕ್) ಮತ್ತು 15 ಜನರನ್ನು ಕಡಿಮೆ ಪರಿಣಾಮ (ಲೋ-ರಿಸ್ಕ್) ಎಂದು ವಿಂಗಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೈ-ರಿಸ್ಕ್ನ 31 ಜನರನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಘಟಕಕ್ಕೆ ದಾಖಲಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಶರತ್‌ ಬಿ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ 46 ಜನರ ಪೈಕಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಿದ ನಾಲ್ವರು ಆಸ್ಪತ್ರೆಯ ಸಿಬ್ಬಂದಿ ಸಹ ಸೇರಿದ್ದಾರೆ. ರಕ್ತ, ಕಫದ ಮಾದರಿ ಸಂಗ್ರಹಿಸಿದ ನಾಲ್ಕರು ಮೃತನ ಕುಟುಂಬದವರೇ ಆಗಿದ್ದು, ಅವರಲ್ಲಿ ಮೂವರಿಗೆ ಕೆಮ್ಮು ಹಾಗೂ ಒಬ್ಬರಿಗೆ ನೆಗಡಿ ಹೆಚ್ಚಾದ ಕಾರಣ ತಪಾಸಣೆ ನಡೆಸಿ, ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಶನಿವಾರ ಬೆಳಗ್ಗೆ ಪರೀಕ್ಷಾ ವರದಿ ಬರುವ ಸಾಧ್ಯತೆ ಇದೆ ಎಂದರು.

ಹೈ-ರಿಸ್ಕ್ನ 31 ಜನರ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಇವರಿಗೆ ತಲಾ ಒಬ್ಬರಂತೆ 31 ಅ ಧಿಕಾರಿಗಳನ್ನು ನೇಮಿಸಲಾಗಿದೆ. ಈ 31 ಜನರ ಸಂಪರ್ಕದಲ್ಲಿದ್ದ ಇತರ ವ್ಯಕ್ತಿಗಳ ಪತ್ತೆಗೆ ಆಯಾ ಅ ಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. ಜತೆಗೆ, ವಿದೇಶದಿಂದ ಮೃತ ವ್ಯಕ್ತಿಯೊಂದಿಗೆ ಯಾರಾದರೂ ಕಲಬುರಗಿಗೆ ಬಂದಿದ್ದಾರೆಯೇ ಎನ್ನುವ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಕಂಟೇನ್‌ಮೆಂಟ್‌ ಝೋನ್‌: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ವಾಸವಿದ್ದ ಪ್ರದೇಶವನ್ನು ಕಂಟೇನ್‌ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ. ಇಲ್ಲಿಂದ ಬೇರೆ ಪ್ರದೇಶಕ್ಕೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸ್ಕ್ರೀನಿಂಗ್‌ ಮತ್ತು ಅರಿವು ಮೂಡಿಸುವ ಐಇಸಿ ಚಟುವಟಿಕೆ ನಡೆಸಲಾಗುತ್ತಿದೆ. ಈ ಕಂಟೇನ್‌ಮೆಂಟ್‌ ಝೋನ್‌ ಸುತ್ತಮುತ್ತ ಐದು ಕಿಲೋ ಮೀಟರ್‌ ಪ್ರದೇಶವನ್ನು ಬಫರ್‌ ಝೋನ್‌ ಎಂದು ಗುರುತಿಸಲಾಗಿದೆ ಎಂದು ಶರತ್‌ ತಿಳಿಸಿದರು.

Advertisement

ವಿದೇಶದಿಂದ ಬಂದವರ ತಪಾಸಣೆ
ರಾಯಚೂರು: ಮಾ.9ರಂದು ಇಟಲಿಯಿಂದ ಹೈದರಾಬಾದ್‌ ಮಾರ್ಗವಾಗಿ ಆಗಮಿಸಿದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರಿಗೆ ಕೊರೊನಾ ಇಲ್ಲ ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ಗಲ್ಫ್  ದೇಶಗಳಿಂದ ಬಂದಿಳಿದ ದೇವದುರ್ಗ ಮೂಲದ ಒಬ್ಬರು, ಸಿಂಧನೂರು ಮೂಲದ ಮೂವರನ್ನು ತಪಾಸಣೆಗೆ ಗುರಿಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇವರನ್ನು 12 ದಿನ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಸ್ಪಷ್ಟಪಡಿದ್ದಾರೆ.

ಜಾತ್ರೆ ಮುಂದೂಡಿಕೆಗೆ ಮನವಿ
ಬಾಗಲಕೋಟೆ: ಕೂಡಲಸಂಗಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ|ಮಾತೆ ಮಹಾದೇವಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ. ಜಮಖಂಡಿಯಲ್ಲಿ ಶನಿವಾರ ನಡೆಯಬೇಕಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳವನ್ನು ಮುಂದೂಡಲಾಗಿದೆ. ಗುಳೇದಗುಡ್ಡ ತಾಲೂಕು ಕೆಲವಡಿಯಲ್ಲಿ ಮಾ.15 ಮತ್ತು 16ರಂದು ನಡೆಯಲಿರುವ ಕೆಲವಡಿ ರಂಗನಾಥ ದೇವರ ಅದ್ಧೂರಿ ಜಾತ್ರೆಯನ್ನು ಮುಂದೂಡುವಂತೆ ಜಿಲ್ಲಾಡಳಿತ, ದೇವಸ್ಥಾನದ ಕಮೀಟಿಗೆ ಮನವಿ ಮಾಡಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ “ಉದಯವಾಣಿ’ಗೆ ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಒಟ್ಟು 11 ಜನರು ವಿದೇಶಕ್ಕೆ ಹೋಗಿ ಮರಳಿ ಬಂದಿದ್ದು, ಅವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಶುಕ್ರವಾರ ಒಂದೇ ದಿನ ಆರು ಜನರು ವಿದೇಶದಿಂದ ಬಂದಿದ್ದು ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಮುಂದಿನ 14 ದಿನಗಳ ಕಾಲ ಮನೆಯಿಂದ ಹೊರಗೆ ಬರದಂತೆ ಹಾಗೂ ಆರೋಗ್ಯ ಕುರಿತು ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

ವರದಪುರದಲ್ಲಿ ಭಕ್ತರಿಗೆ ವಸತಿ ವ್ಯವಸ್ಥೆ ಸ್ಥಗಿತ
ಸಾಗರ: ಕೊರೊನಾ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ವರದಪುರದ ಶ್ರೀಧರಾಶ್ರಮದಲ್ಲಿ ವಸತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿ ಸಲಾಗಿದೆ. ಜತೆಗೆ, ಅನಿ ರ್ಧಿಷ್ಟ ಕಾಲದವರೆಗೆ ವರದಪುರ ಪರಿಸರದಲ್ಲಿ ಕೆಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಸದ್ಗುರು ಸನ್ನಿ ಧಿಗೆ ಹೋಗುವ ಮೊದಲು ಶ್ರೀಧರ ತೀರ್ಥದಲ್ಲಿ ಕೈ ಕಾಲು ಮುಖ ತೊಳೆದುಕೊಂಡು ಹೋಗಬೇಕು. ಆಶ್ರಮದ ಪರಿಸರದಲ್ಲಿ ಓಡಾಡುವಾಗ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜ್ವರ, ಕೆಮ್ಮು, ಶೀತ ಮುಂತಾ ದವುಗಳಿಂದ ಬಳಲುತ್ತಿರುವವರು ಶ್ರೀಧರಾಶ್ರಮಕ್ಕೆ ಬರುವುದನ್ನು ಮುಂದೂಡಬೇಕು. ಆಶ್ರಮಕ್ಕೆ ಭೇಟಿ ನೀಡಿದ ವೇಳೆ ಆರೋಗ್ಯದಲ್ಲಿ ಏರು-ಪೇರಾದರೆ ಆಶ್ರಮದ ಕಾರ್ಯಾಲಯಕ್ಕೆ ತಿಳಿಸಿದಲ್ಲಿ ಕೂಡಲೇ ವೈದ್ಯಕೀಯ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶ್ರೀಧರ ಸೇವಾ ಮಹಾಮಂಡಲದ ಕಾರ್ಯದರ್ಶಿ ಶ್ರೀಧರ ರಾವ್‌ ಕಾನ್ಲ ತಿಳಿಸಿದ್ದಾರೆ.

ವೃದ್ಧನ ಜೊತೆ ಬಂದ ದಂಪತಿ ಪರೀಕ್ಷೆ
ಹಾಸನ: ಕಲಬುರಗಿಯ ವೃದ್ಧ ಕೊರೊನಾದಿಂದ ಸಾವನ್ನಪ್ಪಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅವರೊಂದಿಗೆ ಮೆಕ್ಕಾದಿಂದ ಬಂದವರ ಮಾಹಿತಿ ಕಲೆ ಹಾಕಿದಾಗ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದಂಪತಿಯೂ ಮೆಕ್ಕಾದಿಂದ ವಾಪಸ್ಸಾಗಿದ್ದು ತಿಳಿದು ಬಂದಿದೆ. ಆ ದಂಪತಿ ಕೂಡ ಕಲಬುರಗಿಯ ವೃದ್ಧನ ಜೊತೆಯಲ್ಲಿಯೇ ವಾಪಸ್‌ ಬಂದಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್‌ ತಿಳಿಸಿದ್ದಾರೆ.

ಮೊದಲಿಗೆ ದಂಪತಿ ಚಿಕಿತ್ಸೆಗೆ ಬರಲು ನಿರಾಕರಿಸಿದರು. ಆದರೆ, ಅವರ ಮನವೊಲಿಸಿ ಕರೆ ತಂದು ಹಿಮ್ಸ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗೆ ದಾಖಲು ಮಾಡಲಾಗಿದೆ. ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದ್ದು, ವರದಿಗಾಗಿ ಕಾಯಲಾ ಗುತ್ತಿದೆ. ಈ ಮೊದಲು ಫ್ರಾನ್ಸ್‌ನಿಂದ ಬಂದ ಒಬ್ಬರು, ಮೆಕ್ಕಾದಿಂದ ವಾಪಸ್ಸಾಗಿದ್ದ ಮಹಿಳೆ, ದುಬೈನಿಂದ ಬಂದಿದ್ದ ಬೇಲೂರು ತಾಲೂಕಿನ ಒಬ್ಬ ಯುವಕನನ್ನು ಪರೀಕ್ಷೆಗೊಳಪಡಿಸಿದಾಗ ಆ ಮೂವರಲ್ಲೂ ನೆಗೆಟಿವ್‌ ವರದಿ ಬಂದಿದೆ. ಹಾಗಾಗಿ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಮನೆಯಲ್ಲಿದ್ದರೂ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next