Advertisement

ಮನೆ ನಿರ್ಮಿಸಲು ಮಾಲೀಕರಿಗೆ ಸೌಕರ್ಯ

12:42 PM Sep 26, 2018 | Team Udayavani |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿ ಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆದವರು ತಕ್ಷಣವೇ ಮನೆ ನಿರ್ಮಿಸಲು ಯಾವುದೇ ಸಮಸ್ಯೆ ಇಲ್ಲದಂತೆ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ರ್‍ಯಾಂಡಮೈಸೇಷನ್‌ ಮೂಲಕ ನಿವೇಶನ ಹಂಚಿಕೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಚರಂಡಿ, ಮಳೆ ನೀರು ಕಾಲುವೆ, ವಿದ್ಯುತ್‌ ಸಂಪರ್ಕ ಇತರೆ ಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆ ಕೆಲ ಬಡಾವಣೆಗಳಲ್ಲಿ ಮೂಲ ಸೌಕರ್ಯ ಸಮಸ್ಯೆ ಉಂಟಾಗಿತ್ತು. ಆ ರೀತಿ ಆಗದಂತೆ 3000 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿ ಸಚಿವರಾದ ಡಾ.ಜಿ.ಪರಮೇಶ್ವರ್‌, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಹಂಚಿಕೆಗೆ ಚಾಲನೆ ನೀಡಲಾಗಿದೆ. ಶೇ.20ರಷ್ಟು ನಿವೇಶನಗಳನ್ನು ಶೇ.50ರಷ್ಟು ರಿಯಾಯ್ತಿ ದರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಹಂಚಿಕೆ ಮಾಡಲಾಗಿದೆ. 2,770 ಕೋಟಿ ರೂ. ವೆಚ್ಚದಲ್ಲಿ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಬಿಡಿಎ ವತಿಯಿಂದ 5000 ನಿವೇಶನ ಹಂಚಿಕೆಯಿಂದ 1,400 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೈಸೂರು ರಸ್ತೆಯಿಂದ ಸಂಪರ್ಕ ಕಲ್ಪಿಸುವ ಕಾರ್ಯಕ್ಕೂ ಒತ್ತು ನೀಡಲಾಗಿದೆ. ಒಟ್ಟು 15,220 ಸ್ವೀಕೃತ ಅರ್ಜಿಗಳಿದ್ದವು. ನಿವೇಶನ ಹಂಚಿಕೆಯಾಗದ ಅರ್ಜಿದಾರರಿಗೆ ತಿಂಗಳಲ್ಲಿ ಮುಂಗಡ ಠೇವಣಿ ವಾಪಸ್‌ ನೀಡಲಾಗುವುದು ಎಂದು ತಿಳಿಸಿದರು.

ಸಚಿವರಾದ ಬಿ.ಜಡ್‌.ಜಮೀರ್‌ ಅಹಮ್ಮದ್‌ ಖಾನ್‌, ಪ್ರಿಯಾಂಕ್‌ ಖರ್ಗೆ, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಇತರರು ಉಪಸ್ಥಿತರಿದ್ದರು. ನಿವೇಶನ ಹಂಚಿಕೆ ವಿವರಗಳಿಗೆ ಸಂಪರ್ಕ ವೆಬ್‌ಸೈಟ್‌ ವಿಳಾಸ: www.bdabangalore.org ಸಂಪರ್ಕಿಸಬಹುದು.

Advertisement

ಹಳೆಯ ದರದಲ್ಲೇ ನಿವೇಶನ: ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್‌, ರೀಡು ಸೇರಿದಂತೆ ಇತರೆ ಪ್ರಕ್ರಿಯೆ ಹಾಗೂ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮೂಲದಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ವಾಪಸ್‌ ನೀಡುವಂತಾಯಿತು.

ಹಂಚಿಕೆಯಾದ 3,500 ಮಂದಿಗೂ ನಿವೇಶನ ನೀಡಲು ಸಾಧ್ಯವಾಗಲಿಲ್ಲ. ಅವರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಹಳೆಯ ದರದಲ್ಲೇ ನಿವೇಶನ ನೀಡಲಾಗುತ್ತಿದೆ. ಹಾಗೆಯೇ ಅರ್ಕಾವತಿ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಸೌಕರ್ಯವನ್ನು 220 ಕೋಟಿ ರೂ. ವೆಚ್ಚದಲ್ಲಿ ಕಲ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಅರ್ಜಿದಾರರ ನಿರಾಸಕ್ತಿ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಕೋರಿ 15,220 ಸ್ವೀಕೃತ ಅರ್ಜಿಗಳಿದ್ದು, ಮೊದಲ ಹಂತಕ್ಕೆ ಹೋಲಿಸಿದರೆ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆ ನಿವೇಶನದ ಬೆಲೆ ಹೆಚ್ಚಳವೂ ಕಾರಣವಿರಬಹುದು. ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಕಾಯ್ದೆಯಿಂದಾಗಿ ವೆಚ್ಚ ಹೆಚ್ಚಾಗಿದೆ. ಹಾಗಾಗಿ ಅರ್ಜಿಗಳ ಸಂಖ್ಯೆ ಇಳಿಕೆಯಾಗಿರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ನಿವೇಶನದಾರರ ಅಳಲು: ನಿವೇಶನದಾರರು, ನಿವೇಶನ ಹಂಚಿಕೆ ನಿರೀಕ್ಷೆಯಲ್ಲಿರುವವರು ಮುಖ್ಯಮಂತ್ರಿಗಳಿಗೆ ಹಲವು ಸಮಸ್ಯೆ, ನಿರೀಕ್ಷೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಎರಡನೇ ಹಂತದ ನಿವೇಶನ ಹಂಚಿಕೆ ನಿರೀಕ್ಷೆಯಲ್ಲಿರುವ ಸಾಯಿರಾಂ, 60 ದಿನದಲ್ಲಿ ಶುಲ್ಕ ಪಾವತಿಸುವುದು ಕಷ್ಟವಾಗಲಿದೆ.

ಉಳಿತಾಯ, ಸಾಲವನ್ನೆಲ್ಲಾ ಒಟ್ಟುಗೂಡಿಸಿ ಪಾವತಿಸಬೇಕಾಗುತ್ತದೆ. ಹೀಗಿರುವಾಗ ವಿಳಂಬ ಪಾವತಿಗೆ ಶೇ.18, ಶೇ.21ರಷ್ಟು ಬಡ್ಡಿ ವಿಧಿಸಿದರೆ ಹೊರೆಯಾಗಲಿದೆ. ಹಾಗಾಗಿ ಶುಲ್ಕ ಪಾವತಿಗೆ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನ ಮಾಲೀಕರ ಸಂಘದ ಕಾರ್ಯದರ್ಶಿ ನುಗ್ಗೇಹಳ್ಳಿ ಶ್ರೀಧರ್‌, ಆರೇಳು ಪ್ರಯತ್ನದ ಬಳಿಕ ನಿವೇಶನ ಹಂಚಿಕೆಯಾಗಿದೆ. ಚಿಕ್ಕ ವಯಸ್ಸಿನಲ್ಲಿದ್ದಾಗ ಅರ್ಜಿ ಸಲ್ಲಿಸಲಾರಂಭಿಸಿದ ನನಗೆ 65ನೇ ವಯಸ್ಸಿನಲ್ಲಿ ನಿವೇಶನ ಹಂಚಿಕೆಯಾಗಿದೆ. ಹಾಗಾಗಿ ಶುಲ್ಕ ಪಾವತಿಗೆ ಕಾಲಾವಕಾಶ ವಿಸ್ತರಿಸಬೇಕು. ಸಾಲ ಸೌಲಭ್ಯ ಕಲ್ಪಿಸಬೇಕು. ನಿವೇಶನ ಮಾರಾಟ ಗುತ್ತಿಗೆ ಅವಧಿಯನ್ನು 10 ವವರ್ಷದಿಂದ ಐದು ವರ್ಷಕ್ಕೆ ಇಳಿಕೆ ಮಾಡಬೇಕು ಎಂದು ಕೋರಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ಸಂಬಂಧ ಮನವಿ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದು ಹೇಳಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಶುಲ್ಕ ಪಾವತಿ ಕಾಲಾವಕಾಶ ಸಂಬಂಧ ಬಿಡಿಎ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು. ಸಾಲ ಮೇಳ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.

* 4,043.27 ಎಕರೆ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಗುರುತಿಸಿರುವ ಪ್ರದೇಶ- 
* 40,539 ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಒಟ್ಟು ನಿವೇಶನ 
* 2383 ಎಕರೆ ಎಂಜಿನಿಯರ್‌ ವಿಭಾಗಕ್ಕೆ ಹಸ್ತಾಂತರವಾಗಿರುವ ಭೂಮಿ 
* 17,920 ಅಭಿವೃದ್ಧಿಪಡಿಸಿರುವ ನಿವೇಶನ 
* 2,157 ಭೂಮಾಲೀಕರಿಗೆ ಮೊದಲ ಹಂತದಲ್ಲಿ ಹಂಚಿಕೆ ಮಾಡಿದ ನಿವೇಶನ 
* 3,800 ಭೂಮಾಲೀಕರಿಗೆ ಎರಡನೇ ಹಂತದಲ್ಲಿ ಹಂಚಿಕೆ ಮಾಡಿದ ನಿವೇಶನ 
* 849 ಅರ್ಕಾವತಿ ಬಡಾವಣೆಯ ನಿವೇಶನರಹಿತರಿಗೆ ಹಂಚಿಕೆಯಾದ ನಿವೇಶನ 

ನಿವೇಶನ, ದರ ವಿವರ
ನಿವೇಶನ ಸಂಖ್ಯೆ    ಅಳತೆ (ಚ.ಮೀ.)    ದರ ಪ್ರತಿ ಚ.ಮೀ.ಗೆ (ರೂ.ಗಳಲ್ಲಿ)    ಸ್ವೀಕರಿಸಿದ್ದ ಅರ್ಜಿ

-1000    6 ಮತ್ತು 9 (ಇಡಬ್ಲೂಎಸ್‌)        9,688    7,429
-500    6 ಮತ್ತು 9 (ಸಾಮಾನ್ಯ)    19,375    1,271
-2,500    9 ಮತ್ತು 12    21,258    4,799
-700    12 ಮತ್ತು 18    24,219    1,450
-300    15 ಮತ್ತು 24    26,910    271

Advertisement

Udayavani is now on Telegram. Click here to join our channel and stay updated with the latest news.

Next