Advertisement

ಮುಂದುವರಿದ ಗಾಳಿ-ಮಳೆ ಆರ್ಭಟ

11:38 AM May 26, 2018 | Team Udayavani |

ಹಗರಿಬೊಮ್ಮನಹಳ್ಳಿ: ಬಿರುಗಾಳಿ ಹೊಡೆತಕ್ಕೆ ತಾಲೂಕಿನ ಸಿಗೇನಹಳ್ಳಿಯಲ್ಲಿ ಹೈಟೆನ್ಷನ್‌ ವಿದ್ಯುತ್‌ ಲೈನ್‌ನ ಕಂಬಗಳು ಶುಕ್ರವಾರ ನೆಲಕ್ಕರುಳಿದ್ದು ಅಪಾರ ಹಾನಿಯಾಗಿದೆ. ವಿಜಯಪುರ ಜಿಲ್ಲೆ ಕೂಡಗಿಯ ಕಲ್ಲಿದ್ದಲು ಉಷ್ಣ ವಿದ್ಯುತ್‌ ಸ್ಥಾವರದಿಂದ ತುಮಕೂರಿನ ಮಧುಗಿರಿವರೆಗಿನ ವಿದ್ಯುತ್‌ ಮಾರ್ಗ ಸಿಗೇನಹಳ್ಳಿ ಹೊರವಲಯದ ಹೊಲಗಳ ಮೂಲಕ ಹಾದು ಹೋಗಿದೆ.

Advertisement

ಬಿರುಗಾಳಿ ಹೊಡೆತಕ್ಕೆ ಸುಮಾರು 60 ಮೀಟರ್‌ ಎತ್ತರದ 5 ಕ್ಕೂ ಹೆಚ್ಚು ಟವರ್‌ಗಳು ನೆಲಕ್ಕಪ್ಪಳಿಸಿವೆ. ಇವೆಲ್ಲ 765 ಕೆವಿ ವಿದ್ಯುತ್‌ ಸರಬರಾಜು ಮಾಡುವ ಹೈಟೆನ್ಷನ್‌ ಲೈನ್‌ಗಳಿರುವ ಟವರ್‌ಗಳಾಗಿದ್ದು, ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮಕ್ಕೆ ಸೇರಿವೆ. ಗಾಳಿ ಜೋರಾಗುತ್ತಿದ್ದಂತೆ ವಿದ್ಯುತ್‌ ಸರಬರಾಜು ನಿಲ್ಲಿಸಲಾಗಿದ್ದು, ಭಾರೀ ಅನಾಹುತ ತಪ್ಪಿದೆ.

ಟವರ್‌ಗಳ ಹೈಟೆನ್ಷನ್‌ ಲೈನ್‌ ಗಳೆಲ್ಲ ಹರಿದು ಅಕ್ಕಪಕ್ಕದಲ್ಲಿದ್ದ ರೈತರ ಪರಿವರ್ತಕಗಳ ಮೇಲೆ ಬಿದ್ದಿರುವುದರಿಂದ ಪರಿವರ್ತಕಗಳು ಸುಟ್ಟು ಹೋಗಿವೆ. ಇದಲ್ಲದೆ ಗಾಳಿ ಹೊಡೆತಕ್ಕೆ 6 ವಿದ್ಯುತ್‌ ಕಂಬಗಳು, ತೆಂಗಿನ ಮರಗಳು ನೆಲಕ್ಕುರುಳಿವೆ. ಸೀಗೇನಹಳ್ಳಿ ಗ್ರಾಮಕ್ಕೆ ಕುಡಿವ ನೀರು ಸರಬರಾಜು ಮಾಡುವ ಕೊಳವೆಬಾವಿಯ ಪಂಪ್‌ಸೆಟ್‌
ಸಹ ಇಲ್ಲಿಯೇ ಇದ್ದು ಪರಿವರ್ತಕಗಳು ಸುಟ್ಟಿದ್ದರಿಂದ ಪಂಪ್‌ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ದೊಡ್ಡ ದೊಡ್ಡ ವಿದ್ಯುತ್‌ ಲೈನ್‌ಗಳು ನೆಲದ ಮೇಲೆ ಬಿದ್ದಿರುವುದರಿಂದ ರೈತರು ಅವರ ಹೊಲಗಳಿಗೆ ತೆರಳಲು ಹೆದರುತ್ತಿದ್ದ, ಕೆಲವಡೆ ದಾರಿಯೂ ಬಂದ್‌ ಆಗಿ ಸಮಸ್ಯೆಯಾಗಿದೆ. ಸ್ಥಳಕ್ಕೆ ಜೆಸ್ಕಾಂ ಎಇಇ ಮೋಟ್ಲನಾಯ್ಕ, ತಂಬ್ರಹಳ್ಳಿ ಶಾಖಾಧಿಕಾರಿ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಕಂಪ್ಲಿ: ಕೃತಿಕಾ ಮಳೆ ಹೋಗುವ ಮುನ್ನ ಸೃಷ್ಟಿಸಿದ ಅವಾಂತರಕ್ಕೆ ಬೃಹತ್‌ ಮರಗಳು ಧರೆಶಾಯಿಯಾದರೆ, ವಿದ್ಯುತ್‌ ಕಂಬಗಳು ನೆಲಕ್ಕುರಳಿವೆ. ಬಾಳೆ ತೋಟಗಳು, ರೇಷ್ಮೆ ಗಿಡಗಳು, ರೇಷ್ಮೆ ಶೆಡ್‌ಗಳು ನೆಲಕ್ಕುರಳಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ರಾಜ್ಯ ಹೆದ್ದಾರಿ 49ರ ರಾಮಸಾಗರ ಗ್ರಾಮದ ಸಿದ್ದೇಶ್ವರ ಕ್ರಾಸ್‌ ಬಳಿಯಲ್ಲಿ ಬೃಹತ್‌ ಆಲದ ಮರ ರಸ್ತೆ ಮೇಲೆ ಬಿದ್ದು ರಾತ್ರಿ 10.30ರಿಂದ ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೂ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿ ಹೊಸಪೇಟೆಗೆ ತೆರಳುವ ಪ್ರಯಾಣಿಕರು, ನೌಕರರು, ವಿದ್ಯಾರ್ಥಿಗಳು ಸುತ್ತುವರೆದು ಪ್ರಯಾಣಿಸುವ ಪರಿಸ್ಥಿತಿ ತಲೆದೋರಿತ್ತು.

Advertisement

ಕಳೆದ ರಾತ್ರಿ ಸುಮಾರು 9 ಗಂಟೆಗೆ ಆರಂಭವಾದ ಭಾರೀ ಗಾಳಿ ಮಳೆಗೆ ಸಮೀಪದ ರಾಮಸಾಗರ ಗ್ರಾಮದಲ್ಲಿ ಒಂದಲ್ಲಾ, ಎರಡಲ್ಲ ಅನೇಕ ಅನಾಹುತಗಳು ಸಂಭವಿಸಿವೆ. ಸುಮಾರು ಒಂದೂವರೆ ತಾಸು ಬೀಸಿದ ಬಿರುಗಾಳಿ ಹಾಗೂ ಭಾರೀ ಮಳೆಗೆ ರಾಮಸಾಗರ ಗ್ರಾಮದಲ್ಲಿ 500ಕ್ಕೂ ಅಧಿಕ ಎಕರೆ ಬಾಳೆ ತೋಟಗಳು ನೆಲಸಮವಾಗಿದ್ದರೆ, ಅಂದಾಜು 90 ಎಕರೆ ರೇಷ್ಮೆ ಬೆಳೆ ಹಾಳಾಗಿದೆ. ಜತೆಗೆ ರೇಷ್ಮೆ ಗೂಡುಗಳಿಗೆ ನಿರ್ಮಿಸಿದ 3 ಕಾಯಂ ಶೆಡ್‌ಗಳು, 12 ತಾತ್ಕಾಲಿಕ ಶೆಡ್‌ಗಳು ನೆಲಸಮವಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ರಾಮಸಾಗರ ಕ್ರಾಸ್‌ ಹತ್ತಿರದಿಂದ ಗ್ರಾಮದವರೆಗೂ ರಸ್ತೆಯ ಎರಡು ಬದಿಗಳಲ್ಲಿದ್ದ ಸುಮಾರು 80ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಬಿದ್ದಿರುವುದರಿಂದ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಕುಡಿವ ನೀರಿಗಾಗಿ ಪರದಾಡುವಂತಾಗಿದೆ.

ಇನ್ನು ಕಣವಿ ತಿಮ್ಮಲಾಪುರದಲ್ಲೂ ಸಹಿತ 40ಕ್ಕೂ ಅಧಿಕ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕಣವಿ ತಿಮ್ಮಲಾಪುರದಲ್ಲಿ ವಿದ್ಯುತ್‌ ಕಂಬಗಳು ಹಾಗೂ ಗಿಡಮರಗಳು ರಸ್ತೆಗಳ ಮೇಲೆ
ಬಿದ್ದಿದ್ದರಿಂದ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ವಿದ್ಯುತ್‌ ಪರಿವರ್ತಕಗಳು ಬಿದ್ದಿದ್ದು, ವಿದ್ಯುತ್‌ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುತ್ತಿದ್ದಾರೆ.

ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 498 ಎಕರೆ ಬಾಳೆ ತೋಟಗಳು ಗಾಳಿಗೆ ನೆಲಸಮವಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅಲ್ಲದೇ ಸುಮಾರು 15 ಮನೆಗಳ ಹಂಚಿನ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಸಿಡಿಲಿಗೆ 3 ಕುರಿಗಳು ಮೃತಪಟ್ಟಿವೆ. ಗ್ರಾಮದ ಗಂಡಿ ವಿಶ್ವನಾಥ್‌ ಎನ್ನುವವರ ಹೋಟೆಲ್‌ ಸಂಪೂರ್ಣ ನೆಲಸಮವಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಅಧಿಕಾರಿಗಳ ಭೇಟಿ ಅನಾಹುತ ಸಂಭವಿಸಿದ ರಾಮಸಾಗರ ಗ್ರಾಮದ ತೋಟಗಳಿಗೆ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಪಿ.ವಿರೂಪಾಕ್ಷಪ್ಪ, ರೇಷ್ಮೆ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆಯ ವೆಂಕಟೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಿ.ನಾರಾಯಣಪ್ಪ, ಮಂಜುನಾಥ್‌, ಆರ್‌. ಬಸವನಗೌಡ, ತಾಪಂ ಸದಸ್ಯ ಎಚ್‌. ಜಗದೀಶಗೌಡ ಸೇರಿದಂತೆ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next