Advertisement

624 ಗ್ರಾಮಗಳ 3ಲಕ್ಷ ಮನೆಗಳಿಗೆ ನಿರಂತರ ನೀರು

09:52 AM May 15, 2020 | Suhan S |

ಬಾಗಲಕೋಟೆ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ ಮಿಷನ್‌ (ಜೆಜೆಎಂ) ಯೋಜನೆಯಡಿ ಗ್ರಾಮೀಣ ಪ್ರದೇಶದ 624 ಗ್ರಾಮಗಳ 3,07,314 ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಿ ನಿರಂತರ ನೀರು ಪೂರೈಕೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿ ಮನೆಗಳಿಗೂ ಒಂದು ನಳ ಜೋಡಣೆ ಮತ್ತು 55 ಎಲ್‌ಪಿಸಿಡಿ ನೀರು ಪೂರೈಕೆಗಾಗಿ ಕೇಂದ್ರ ಸರ್ಕಾರ ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮಗಳಲ್ಲಿ ಸಮಿತಿ ರಚಿಸಲಾಗುತ್ತಿದೆ. ಇದಕ್ಕಾಗಿ ಗ್ರಾಮ ಪಂಚಾಯತಿಯಿಂದ ಶೇ.10 ರಷ್ಟು ವಂತಿಗೆ ಪಡೆದು ದಿನ 24 ಗಂಟೆಗಳ ಕಾಲ ನೀರು ಪೂರೈಸಲು ಯೋಜನೆ ಜಾರಿಗೊಳಿಸಲಾಗುವುದು ಎಂದರು.

ಸುಸ್ಥಿರ ಜಲಮೂಲ ಹಾಗೂ ತಾಳುವಿಕೆ ಇರುವ ಜಲಮೂಲ ಒದಗಿಸುವುದು, ಮೊದಲ ಹಂತದಲ್ಲಿ 55 ಎಲ್‌ಪಿಸಿಡಿ ನೀರು ಪೂರೈಕೆ ಇರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. 55 ಎಲ್‌.ಪಿ.ಸಿ.ಡಿಗಿಂತ ಕಡಿಮೆ ನೀರು ಪೂರೈಕೆ ಇರುವ ಯೋಜನೆ ಪುನಶ್ಚೇತಗೊಳಿಸಿ ಅಂತಹ ಗ್ರಾಮಗಳಿಗೆ ಹೆಚ್ಚುವರಿ ಸ್ಥಿರ ಜಲಮೂಲ ಪ್ರಸ್ತಾಪಿಸಿ ಅವುಗಳನ್ನು ಸಹ ಜೆಜೆಎಂ ಯೋಜನೆ ವ್ಯಾಪ್ತಿಗೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು. ಕೇಂದ್ರ ಸರಕಾರದ ಜೆಜೆಎಂ ಯೋಜನೆಯನ್ನು ಕರ್ನಾಟಕದಲ್ಲಿ ಮನೆ- ಮನೆಗೆ ಗಂಗೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್‌ ಸಚಿವರು ಘೋಷಿಸಿದ್ದಾರೆ. ಈ ಯೋಜನೆಯಡಿ ಗ್ರಾಮ ಪಂಚಾಯತನ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯ ಜವಾಬ್ದಾರಿ ಹೆಚ್ಚಿಗೆ ಇದ್ದು, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕಾಗಿದೆ. ಈ ಯೋಜನೆಗೆ ಕೇಂದ್ರ ಸರಕಾರದಿಂದ ಶೇ. 45, ರಾಜ್ಯ ಸರಕಾರದಿಂದ ಶೇ. 45 ಹಾಗೂ ಗ್ರಾಮೀಣ ಸಮುದಾಯದಿಂದ ಶೇ. 10 ರಷ್ಟು ವಂತಿಕೆ ವಿಂಗಡಿಸಿದ್ದಾರೆ ಎಂದರು.

ಜಿಲ್ಲೆಯ ಒಟ್ಟು 6 ತಾಲೂಕುಗಳಲ್ಲಿ ಒಟ್ಟು 198 ಗ್ರಾಮ ಪಂಚಾಯತಿಗಳಿದ್ದು, 662 ಗ್ರಾಮಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಒಟ್ಟು 320877 ಮನೆಗಳಿವೆ. ಕ್ರೀಯಾತ್ಮಕ ನಳಗಳನ್ನು ಹೊಂದಿರುವ ಮನೆಗಳು 13563 ಇದ್ದು, ಕ್ರಿಯಾತ್ಮಕ ನಳಗಳ ಜೋಡಣೆ ಮಾಡಬೇಕಾದ ಮನೆಗಳ ಸಂಖ್ಯೆ 307314 ಇರುತ್ತವೆ. 2020-21ನೇ ಸಾಲಿಗೆ 47514,2021-22ನೇ ಸಾಲಿಗೆ 84765, 2022-23ನೇ ಸಾಲಿಗೆ 79075, 2023-24ನೇ ಸಾಲಿಗೆ 95960 ಮನೆಗಳ ಜೋಡಣೆಗೆ ಪ್ರಸ್ತಾಪಿಸಲಾಗಿದ್ದು, ಇದಕ್ಕಾಗಿ 366.935 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಆರ್‌. ಎನ್‌. ಪುರೋಹಿತ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

 ಶಾಲೆ-ವಸತಿ ನಿಲಯ ಆಯ್ಕೆ : ಜಿಲ್ಲೆಗೆ ದಿನದಿಂದ ದಿನಕ್ಕೆ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುತ್ತಿದ್ದು, ಸೋಂಕು ಕಾಣಿಸಿಕೊಂಡ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದವರನ್ನು ಇನ್ಸ್ಟಿಟ್ಯೂಶನ್‌ ಕ್ವಾರಂಟೈನ್‌ ಮಾಡಲು ಜಿಲ್ಲೆಯಲ್ಲಿ ಒಟ್ಟು 507 ಶಾಲೆಗಳನ್ನು ಗುರುತಿಸಲಾಗಿದ್ದು, ಒಟ್ಟು 2059 ಕೊಠಡಿ, 806 ಶೌಚಾಲಯಗಳು ಇವೆ. 6 ಲಾಡ್ಜಗಳನ್ನು ಸಹ ಗುರುತಿಸಲಾಗಿದೆ. ಅದರಲ್ಲಿ 93 ರೂಮ್‌, 93 ಶೌಚಾಲಯಗಳಿವೆ. 311 ಹಾಸ್ಟೇಲ್‌ಗ‌ಳನ್ನು ಸಹ ಗುರುತಿಸಲಾಗಿದ್ದು, 254 ರೂಮ್‌, 254 ಶೌಚಾಲಯಗಳ ವ್ಯವಸ್ಥೆ ಇವೆ. ಒಟ್ಟಾರೆಯಾಗಿ 2464 ರೂಮ್‌, 1153 ಶೌಚಾಲಯಗಳ ವ್ಯವಸ್ಥೆ ಇದ್ದು, ಒಟ್ಟು 1898 ಜನರನ್ನು ಕ್ವಾರಂಟೈನ್‌ ಮಾಡಲು ಸಿದ್ಧಪಡಿಸಲಾಗಿದೆ. ಕ್ವಾರಂಟೈನ್‌ ಶಾಲೆಗಳಲ್ಲಿ ಸ್ನಾನಗೃಹಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ 3 ಲಕ್ಷಗಳ ವೆಚ್ಚದಲ್ಲಿ ಕಟ್ಟಿಸಿಕೊಡಲಾಗುತ್ತಿದೆ ಎಂದು ಜಿಪಂ ಸಿಇಒ ಹೇಳಿದರು.

ಬೇರೆ ರಾಜ್ಯದಿಂದ 84 ಜನ ಆಗಮನ : ಬೇರೆ ರಾಜ್ಯಗಳಿಂದ ಬಾಗಲಕೋಟೆ ಜಿಲ್ಲೆಗೆ ಗುರುವಾರ ಒಟ್ಟು 84 ಜನ ಆಗಮಿಸಿದ್ದಾರೆ. 3 ಜನ ಮಾತ್ರ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದಾರೆ. ಬೇರೆ ರಾಜ್ಯಗಳಿಂದ ಬಾಗಲಕೋಟೆ ತಾಲೂಕಿಗೆ 39, ಬೀಳಗಿ 16, ಹುನಗುಂದ 15, ಮುಧೋಳ 7, ಜಮಖಂಡಿ ತಾಲೂಕಿಗೆ 7 ಜನ ಆಗಮಿಸಿದ್ದಾರೆ. ಇದರಲ್ಲಿ ಹೊರ ರಾಜ್ಯದಿಂದ ಬಂದವರನ್ನು ಇನ್ಸ್ಟಿಟ್ಯೂಶನ್‌ಕ್ವಾರಂಟೈನ್‌ ಹಾಗೂ ಬೇರೆ ಜಿಲ್ಲೆಗಳಿಂದ ಆಗಮಿಸಿದ 3 ಜನರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next