Advertisement

ಮುಂದುವರಿದ ಬ್ಯಾಂಕ್‌ ನೌಕರರ ಮುಷ್ಕರ

08:39 PM Feb 01, 2020 | Team Udayavani |

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ಕರೆನೀಡಿದ್ದ ಮುಷ್ಕರದ ಎರಡನೇ ದಿನ ಶನಿವಾರ ನಗರದ ವಿನೋಬಾ ರಸ್ತೆಯಲ್ಲಿರುವ ಕಾರ್ಪೋರೇಷನ್‌ ಬ್ಯಾಂಕ್‌ ವಲಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

Advertisement

ವೇತನ ಪರಿಷ್ಕರಣೆ, ಐದು ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿ, ಪಿಂಚಣಿ ಮತ್ತು ಕುಟುಂಬ ಪಿಂಚಣಿಯಲ್ಲಿ ಸುಧಾರಣೆ, ಹೊಸ ಪಿಂಚಣಿ ಯೋಜನೆ ರದ್ದುಪಡಿಸುವುದು, ವ್ಯವಹಾರದ ಸಮಯ, ಊಟದ ಸಮಯ ಮತ್ತು ಅಧಿಕಾರಿಗಳ ಕೆಲಸದ ಸಮಯವನ್ನು ನಿಗದಿಪಡಿಸುವುದು,

ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನ ಮಾಡಬಾರದು, ಬ್ಯಾಂಕ್‌ ಖಾಸಗೀಕರಣ ಮಾಡಬಾರದು, ನಿವೃತ್ತಿ ಸೌಲಭ್ಯಗಳ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ, ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸ-ಸಮಾನ ವೇತನ ಜಾರಿಗೊಳಿ ಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆಯು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತಿದ್ದು, 2017ರ ಮೇ ನಲ್ಲಿ ಬ್ಯಾಂಕ್‌ ನೌಕರರು ವೇತನ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದು, ಈವರೆಗೆ ಈ ಸಂಬಂಧ 36 ಸಭೆ ನಡೆದಿದ್ದರೂ ಐಬಿಎ ನಮ್ಮ ಮನವಿಗೆ ನಿಧಾನಗತಿಯ ಧೋರಣೆ ತೋರುತ್ತಿದ್ದು, ಈ ಕಾರಣದಿಂದಾಗಿ ಮುಷ್ಕರವನ್ನು ಹಮ್ಮಿಕೊಂಡಿರುವುದಾಗಿ ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯ ವಲಯ ಕಾರ್ಯದರ್ಶಿ ಅಮರ್‌ ತಿಳಿಸಿದರು.

2010ರ ಏಪ್ರಿಲ್‌ ಬಳಿಕ ಬ್ಯಾಂಕ್‌ ನೌಕರಿಗೆ ಸೇರಿದವರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿ, ಎಲ್ಲಾ ಹುದ್ದೆಗಳ ನೇಮಕಾತಿ, ಠೇವಣಿ ಮೇಲಿನ ಹೆಚ್ಚಿನ ಬಡ್ಡಿದರ ಹಾಗೂ ಹೆಚ್ಚಿದ ಸೇವಾ ಶುಲ್ಕಗಳನ್ನು ಇಳಿಸುವಂತೆ ಒತ್ತಾಯಿಸುತ್ತಿದ್ದು, ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು.

Advertisement

ನಮ್ಮ ಬೇಡಿಕೆಗಳನ್ನು ಬ್ಯಾಂಕ್‌ ಆಡಳಿತ ವರ್ಗಗಳು ಮತ್ತು ಐಬಿಎ ಈಡೇರಿಸಲು ಮುಂದಾಗದಿದ್ದಲ್ಲಿ ಮಾರ್ಚ್‌ 11, 12, 13ರಂದು ಮತ್ತೆ ಮುಷ್ಕರ ನಡೆಸಲಾಗುವುದು. ಆಗಲೂ ಬೇಡಿಕೆ ಈಡೇರದಿದ್ದರೆ ಏಪ್ರಿಲ್‌ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯ ಸಂಚಾಲಕ ಎಚ್‌.ಬಾಲಕೃಷ್ಣ, ಅಮರ್‌,ಜಯರಾಂ ಸೇರಿದಂತೆ ನೂರಾರು ಬ್ಯಾಂಕ್‌ ನೌಕರರು ಮುಷ್ಕರದಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next