Advertisement

ಗ್ರಾಹಕರ ನೆರವಿಗೆ ಸಶಕ್ತ ಕಾಯ್ದೆ; ಕೇಂದ್ರ ಸರಕಾರದ ಗ್ರಾಹಕ ರಕ್ಷಣಾ ಕಾಯ್ದೆ-2019

01:07 AM Aug 16, 2020 | mahesh |

ಕೇಂದ್ರ ಸರಕಾರ 2019ರಲ್ಲಿ ರೂಪುಗೊಳಿಸಿ, ಅಂಗೀ ಕರಿಸಿದ್ದ ಗ್ರಾಹಕ ರಕ್ಷಣಾ ಕಾಯ್ದೆ ಜು.20ರಿಂದ ಜಾರಿ ಯಾಗಿದೆ. ಪೂರ್ಣರೂಪದಲ್ಲಿ ಅಲ್ಲದಿದ್ದರೂ, ಬಹುತೇಕ ಅಂಶಗಳು ಜಾರಿಯಾಗಿವೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಇದು ಮೈಲು ಗಲ್ಲಾಗ­ಬಹುದು ಎಂಬ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಮುಖ್ಯಾಂಶಗಳು ಇಲ್ಲಿವೆ.

Advertisement

ಗ್ರಾಹಕ ರಕ್ಷಣಾ ಕಾಯಿದೆ 2019
ಮೂಲ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು 1986ರಲ್ಲಿ. ಅದನ್ನು 2019ರಲ್ಲಿ ಬದಲಾಯಿಸಲಾಯಿತು. 2019, ಜು.8ರಂದು ಮೊದಲು ರಾಜ್ಯಸಭೆಯಲ್ಲಿ ಮಂಡಿಸಲಾ­ಯಿತು. ಆನಂತರ ಜು.30ರಂದು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಆ.6ರಂದು ಮತ್ತೆ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ (ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ) ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದರು. ಆ.9ರಂದು ಅದಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕುವ ಮೂಲಕ ಅದು ಕಾಯ್ದೆಯಾಗಿ ಬದಲಾಯಿತು.

ಕಾಯ್ದೆ ಒಳಗೊಂಡಿರುವ ಅಂಶಗಳೇನು?
ಸದ್ಯ ಕೇಂದ್ರಸರಕಾರ ತಾನು ಜಾರಿ ಮಾಡುವ ಗ್ರಾಹಕ ರಕ್ಷಣಾ ಕಾಯ್ದೆಯ ಅಂಶಗಳನ್ನು ಗುರ್ತಿಸಿದೆ. ಗ್ರಾಹಕ ರಕ್ಷಣಾ ಆಯೋಗಗಳ ರಚನೆ, ಗ್ರಾಹಕ ವಿವಾದಗಳ ನಿವಾರಣೆ ವೇದಿಕೆ ರಚನೆ, ಮಧ್ಯವರ್ತಿಗಳಾಗಿ ಕೆಲಸ ಮಾಡುವುದು ಅಥವಾ ಸಂಪರ್ಕಸೇತುವಾಗುವುದು ಇವೆಲ್ಲ ಒಂದು ಭಾಗ. ಒಪ್ಪಿಕೊಂಡಂತೆ ಸೇವೆ ಮತ್ತು ಉತ್ಪನ್ನ ನೀಡದಿ­ರುವುದು, ಹಾಳಾದ ಅಥವಾ ಕಲಬೆರಕೆ ಮಾಡಿದ ಉತ್ಪನ್ನಗಳನ್ನು ತಯಾರಿಸುವುದು, ಮಾರುವುದು, ವಿತರಿಸುವುದಕ್ಕೆ ದಂಡ ವಿಧಿಸುವುದು ಇವೆಲ್ಲ ಇನ್ನೊಂದು ಭಾಗವಾಗಿವೆ.

ಸನಿಹದ ಗ್ರಾಹಕ ಆಯೋಗಗಳಲ್ಲೇ ದೂರು
ಗ್ರಾಹಕರಿಗಿರುವ ಒಂದು ಅಮೂಲ್ಯ ಅವಕಾಶವೆಂದರೆ ಅವರು ದೂರು ಸಲ್ಲಿಸಲು ಅಲ್ಲಿ, ಇಲ್ಲಿ ಎಂದು ಅಲೆಯಬೇಕಿಲ್ಲ. ತಾವು ಎಲ್ಲಿಯೇ ವಸ್ತುಗ­ಳನ್ನು ಖರೀದಿಸಿದ್ದರೂ, ತಮ್ಮ ವಾಸ್ತವ್ಯತಾಣಕ್ಕೆ ಹತ್ತಿರವಾದ ಜಿಲ್ಲಾ, ರಾಜ್ಯ ಗ್ರಾಹಕ ಆಯೋಗಗಳಲ್ಲಿ ದೂರು ಸಲ್ಲಿಸಬಹುದು. ಒಂದು ವೇಳೆ ಪ್ರಕರಣ ಗ್ರಾಹಕ ಆಯೋಗಗಳಲ್ಲಿ ಇತ್ಯರ್ಥವಾಗದಿದ್ದರೆ, ಅದು ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ನಿರ್ಣಯವಾಗುತ್ತದೆ.

ಗ್ರಾಹಕ ಮೃತಪಟ್ಟರೆ ಆಜೀವ ಕಾರಾಗೃಹ
ಒಂದು ವೇಳೆ ಗ್ರಾಹಕರಿಗೆ ಹಾನಿಯಾದರೆ, 5 ಲಕ್ಷ ರೂ.ವರೆಗೆ ದಂಡ, ಜತೆಗೆ 7 ವರ್ಷ ­ದವರೆಗೆ ಕಾರಾಗೃಹ ಶಿಕ್ಷೆಯನ್ನು ಉತ್ಪಾದಕರು/ಮಾರಾಟಗಾರರು/ವಿತರಕರಿಗೆ ವಿಧಿಸಬಹುದು. ಆಕಸ್ಮಾತ್‌ ಇಂತಹ ವಸ್ತುಗಳ ಬಳಕೆ­ಯಿಂದ ಗ್ರಾಹಕ ಸತ್ತೇ ಹೋದರೆ, ಕನಿಷ್ಠ 10 ಲಕ್ಷ ರೂ. ದಂಡ ಮತ್ತು 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದು. ಈ ಶಿûಾವಧಿಯನ್ನು ಆಜೀವ ಮಟ್ಟಕ್ಕೆ ವಿಸ್ತರಿಸುವ ಅಧಿಕಾರವೂ ಗ್ರಾಹಕ ನ್ಯಾಯಾಲಯಗಳಿಗಿದೆ.

Advertisement

ಕಲಬೆರಕೆ, ಕಳಪೆ ವಸ್ತುಗಳಿಗೆ 6 ತಿಂಗಳವರೆಗೆ ಜೈಲು
ಹೊಸ ಕಾಯ್ದೆಯಲ್ಲಿ ಗ್ರಾಹಕ ನ್ಯಾಯಾಲಯಗಳಿಗೆ ಅಧಿಕಾರ ನೀಡಲಾಗಿದೆ. ಸಮಸ್ಯೆಗಳನ್ನು ಬಗೆಹರಿಸುವ, ಕಠಿನ ಶಿಕ್ಷೆ ವಿಧಿಸುವ ಅವಕಾಶ ನೀಡುವ ಮೂಲಕ ವ್ಯವಸ್ಥೆಯನ್ನು ಶಕ್ತಿಪೂರ್ಣ ಮಾಡಲಾ­ಗಿದೆ. ಒಂದು ವೇಳೆ ಉತ್ಪಾದಕರು, ಮಾರಾಟ­ಗಾರರು, ವಿತರಕರು ಕಲಬೆರಕೆ ಮಾಡಿದ ಅಥವಾ ಹಾಳಾದ ವಸ್ತುಗಳನ್ನು ಮಾರಾಟ ಮಾಡಿದರೆ, ಅಂತಹವರನ್ನು ನ್ಯಾಯಾಲಯಕ್ಕೆಳೆದು ಪರಿಹಾರ ಕೇಳುವ ಅಧಿಕಾರ ಗ್ರಾಹಕರಿಗಿದೆ. ಕಳಪೆ ವಸ್ತುಗಳನ್ನು ಬಳಸಿದ ಗ್ರಾಹಕರಿಗೆ ಹಾನಿಯಾಗದಿದ್ದರೂ, ಮಾರಿದಾತನಿಗೆ 6 ತಿಂಗಳವರೆಗೆ ಬಂಧನ ಅಥವಾ 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next