Advertisement

ಬಿಎಂಆರ್‌ಸಿಎಲ್‌ನಿಂದ ಸಮೂಹ ಸಾರಿಗೆ ಮಾರ್ಗ ನಿರ್ಮಾಣ?

12:24 AM Dec 11, 2019 | Team Udayavani |

ಬೆಂಗಳೂರು: ಒಟ್ಟಾರೆ 2031ರ ವೇಳೆಗೆ ನಗರದಲ್ಲಿ 803 ಕಿ.ಮೀ. ಉದ್ದದ ಸಮೂಹ ಸಾರಿಗೆ ಮಾರ್ಗ ನಿರ್ಮಾಣ, ಇದರಲ್ಲಿ 317 ಕಿ.ಮೀ. ಉದ್ದದಲ್ಲಿ ಮೆಟ್ರೋ ಮತ್ತು 202 ಕಿ.ಮೀ. ಬಸ್‌ ಆದ್ಯತಾ ಪಥ ಬರಬೇಕು, ಬಸ್‌ಗಳ ಸಂಖ್ಯೆ 15 ಸಾವಿರಕ್ಕೆ ಏರಿಕೆ ಆಗಬೇಕು, ಸಂಚಾರ ಆಧಾರಿತ ಅಭಿವೃದ್ಧಿ (ಟಿಒಡಿ)ಗೆ ಒತ್ತುಕೊಡಬೇಕು, ಈ ಮೂಲಕ ವಾಯುಮಾಲಿನ್ಯ ಪ್ರಮಾಣ ಈಗಿರುವುದಕ್ಕಿಂತ ಶೇ. 50ರಷ್ಟು ತಗ್ಗಿಸಬೇಕು…

Advertisement

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಯುಕ್ತವಾಗಿ ಸಿದ್ಧಪಡಿಸಿದ ನಗರ ಸಮಗ್ರ ಸಂಚಾರ ಯೋಜನೆ (ಸಿಎಂಪಿ)ಯ ಕರಡಿನಲ್ಲಿ ಮಾಡಿದ ಶಿಫಾರಸುಗಳು ಇವು. ಇದರ ಒಟ್ಟು ಗುರಿ ಸಮೂಹ ಸಾರಿಗೆ (ಮೆಟ್ರೋ, ಬಸ್‌, ಆಟೋ, ಕ್ಷಿಪ್ರ ಸಾರಿಗೆ ಇತ್ಯಾದಿ) ಬಳಕೆದಾರರ ಪ್ರಮಾಣವನ್ನು ಶೇ. 70ಕ್ಕೆ ಹೆಚ್ಚಿಸುವುದಾ ಗಿದ್ದು, ಶೇ. 60 ಜನ ಟಿಒಡಿ ವಲಯದಲ್ಲಿ ಬರುವಂತೆ ಮಾಡುವುದಾಗಿದೆ.

ನಗರದ ಸಂಚಾರದಟ್ಟಣೆ ನಿವಾರಣೆಗೆ ಸಮೂಹ ಸಾರಿಗೆಗೆ ಅತಿ ಹೆಚ್ಚು ಆದ್ಯತೆ ನೀಡುವ ಅವಶ್ಯಕತೆ ಇದೆ. ಇದಕ್ಕಾಗಿ ಮುಂದಿನ ಒಂದು ದಶಕದಲ್ಲಿ ಮೆಟ್ರೋ, ಉಪನಗರ ರೈಲು, ಬಸ್‌ ಸೇರಿದಂತೆ ಎಲ್ಲ ಪ್ರಕಾರದ ಸಾರ್ವಜನಿಕ ಸಾರಿಗೆ ಮಾರ್ಗವನ್ನು 803 ಕಿ.ಮೀ.ಗೆ ವಿಸ್ತರಿಸುವ ಕೆಲಸ ಆಗಬೇಕು ಎಂದು ಹದಿನೈದು ಅಂಶಗಳ ಕಾರ್ಯಸೂಚಿಗಳನ್ನು ಒಳಗೊಂಡ ಶಿಫಾರಸು ಮಾಡಲಾಗಿದ್ದು, ಇದರಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 10 ಕಿ.ಮೀ. ಉದ್ದದ “ಬಸ್‌ ಆದ್ಯತಾ ಪಥ’ (ಬಿಪಿಎಲ್‌)ವನ್ನು 202 ಕಿ.ಮೀ.ಗೆ ಹೆಚ್ಚಿಸಬೇಕು. ಅದು 11 ಅತ್ಯಧಿಕ ದಟ್ಟಣೆ ಮಾರ್ಗಗಳಲ್ಲಿ ವಿಸ್ತರಿಸಬೇಕು ಎಂದು ಉಲ್ಲೇಖೀಸಲಾಗಿದೆ.

ಸದ್ಯ 45 ಘಟಕಗಳಲ್ಲಿ 6,634 ಬಸ್‌ಗಳಿದ್ದು, 2,500 ಮಾರ್ಗಗಳಲ್ಲಿ ಅವುಗಳು ಕಾರ್ಯಾಚರಣೆ ಮಾಡುತ್ತಿವೆ. ಹಲವು ವರ್ಷಗಳಿಂದ ಈ ಸಂಖ್ಯೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಳ ಆಗಿಲ್ಲ. ಆದರೆ, ಜನಸಂಖ್ಯೆಯಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ. ಅದಕ್ಕೆ ಅನುಗುಣವಾಗಿ ಬಸ್‌ಗಳ ಪ್ರಮಾಣ ಹೆಚ್ಚಬೇಕಿದ್ದು, 2021ಕ್ಕೆ 8,634, 2025ಕ್ಕೆ 12,134 ಹಾಗೂ 2031ರ ವೇಳೆಗೆ 15,134 ಬಸ್‌ಗಳು ರಸ್ತೆಗಿಳಿಯಬೇಕು.

ಅವೆಲ್ಲವೂ ವಿದ್ಯುತ್‌ಚಾಲಿತ, ಸ್ಟಾಂಡರ್ಡ್‌, ಕಡಿಮೆ ಸಾಮರ್ಥ್ಯದ (10ರಿಂದ 20 ಸೀಟುಗಳುಳ್ಳ), ಹವಾನಿಯಂತ್ರಿತ ಹೀಗೆ ವಿವಿಧ ಪ್ರಕಾರದವು ಆಗಿರಬೇಕು. ಇದರ ಜತೆಗೆ ಬಿಎಂಟಿಸಿಯು ಮಾರ್ಗಗಳ ಮರುವಿನ್ಯಾಸ ಮಾಡಬೇಕು. ಸಾಂಪ್ರದಾಯಿಕ ಕಾರ್ಯಾಚರಣೆ ಪದ್ಧತಿಯಿಂದ ಹೊರಬಂದು, ಪ್ರಯಾಣಿಕರಿಗೆ ನಿಖರ ಮಾಹಿತಿ ಆಧಾರಿತ ಸೇವೆ ಕಲ್ಪಿಸಬೇಕು. ರೈಲು, ಮೆಟ್ರೋ ಕಾರ್ಯಾಚರಣೆ ಇಲ್ಲದ ಹಾಗೂ ಕೊನೆಯ ಮತ್ತು ಮೊದಲ ಕನೆಕ್ಟಿವಿಟಿಯತ್ತ ಒತ್ತುಕೊಡಬೇಕು ಎಂದೂ ಸಮಗ್ರ ಸಂಚಾರ ಯೋಜನೆಯಲ್ಲಿ ಶಿಫಾರಸು ಮಾಡಲಾಗಿದೆ.

Advertisement

ಇದರ ಜತೆಗೆ ಸ್ವಯಂಚಾಲಿತ ಪ್ರಯಾಣ ದರ ಸಂಗ್ರಹ ವ್ಯವಸ್ಥೆ, ಐಟಿ ಕಂಪನಿಗಳಿಗೆ ಚಾರ್ಟರ್‌ ಸೇವೆ (ಗುತ್ತಿಗೆ ಸೇವೆ)ಗಳನ್ನು ಹೆಚ್ಚಿಸಬೇಕು, ನಿರ್ವಾಹಕ ರಹಿತ ಬಸ್‌ಗಳು, ಲೀಸ್‌ನಲ್ಲಿ ಬಸ್‌ಗಳನ್ನು ಪಡೆಯುವುದು ಇಂತಹ ಹಲವು ಪೂರಕ ಕ್ರಮಗಳ ಮೂಲಕ ಬಿಎಂಟಿಸಿಯು ತನ್ನ ಆರ್ಥಿಕ ಸಂಕಷ್ಟದಿಂದ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ಮೆಟ್ರೋದಲ್ಲೂ ಸುಧಾರಣೆ ಅಗತ್ಯ: “ನಮ್ಮ ಮೆಟ್ರೋ’ ಸೇವೆ ಇನ್ನಷ್ಟು ಉತ್ತಮಗೊಳ್ಳುವ ಅವಶ್ಯಕತೆ ಇದೆ. ಪ್ರಯಾಣಿಕರನ್ನು ಸೆಳೆಯಲು ಮಾಸಿಕ ಚಂದಾದಾರ, ಗುಂಪು ಟಿಕೆಟ್‌ಗಳ ಖರೀದಿಗೆ ರಿಯಾಯ್ತಿ ಸೇರಿದಂತೆ ಹಲವು ಕೊಡುಗೆಗಳನ್ನು ಪರಿಚಯಿಸಬೇಕು. ಮೆಟ್ರೋ ನಿಲ್ದಾಣದ ನಿರ್ಗಮನ ದ್ವಾರಗಳಿಂದ ಬಸ್‌ ನಿಲ್ದಾಣಗಳು ಪಾರ್ಕಿಂಗ್‌ ಜಾಗಕ್ಕಿಂತ ಸಮೀಪದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಮೆಟ್ರೋ ಮತ್ತು ಬಸ್‌ ನಿಲ್ದಾಣಗಳ ನಡುವೆ ಟ್ರಾನ್ಸಿಟ್‌ ಹಬ್‌ಗಳನ್ನು ನಿರ್ಮಿಸಬೇಕು. ಸಂಚಾರ ಆಧಾರಿತ ಅಭಿವೃದ್ಧಿ ನೀತಿ ಪರಿಚಯಿಸುವ ಮೂಲಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸಂಪನ್ಮೂಲ ಕ್ರೋಡೀಕರಿಸಬೇಕು. ಈ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಬೇಕು. ಸರ್ಕಾರದ ಇತರೆ ಸ್ಥಳೀಯ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಹೊಂದುವ ಅವಶ್ಯಕತೆ ಇದೆ ಎಂದೂ ಕರಡಿನಲ್ಲಿ ಹೇಳಲಾಗಿದೆ.

30 ದಿನಗಳ ಆಕ್ಷೇಪಣೆ ಅವಕಾಶ: ಡಿ.6ರಂದು ಬಿಎಂಆರ್‌ಸಿಎಲ್‌ ವೆಬ್‌ಸೈಟ್‌: https://www.bmrc.co.in/ ನಲ್ಲಿ ಈ ಕರಡನ್ನು ಪ್ರಕಟಿಸಲಾಗಿದ್ದು, ಪ್ರಕಟಗೊಂಡ ದಿನದಿಂದ 30 ದಿನಗಳಲ್ಲಿ ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸಲ್ಲಿಸಬಹುದು.

ಸಮೂಹ ಸಾರಿಗೆ ಪ್ರಕಾರ ಮತ್ತು ಮಾರ್ಗದ ವಿವರ ಹೀಗಿದೆ (2031ಕ್ಕೆ)
ಸಮೂಹ ಸಾರಿಗೆ ಪ್ರಕಾರ ಮಾರ್ಗದ ಉದ್ದ (ಕಿ.ಮೀ.ಗಳಲ್ಲಿ)
ಮೆಟ್ರೋ 317
ಉಪನಗರ ರೈಲು 177
ಬಸ್‌ ಆದ್ಯತಾ ಪಥ 202
ಬಿಆರ್‌ಟಿಎಸ್‌ 107
ಒಟ್ಟಾರೆ 803

ಸಮೂಹ ಸಾರಿಗೆ ವ್ಯವಸ್ಥೆಗೆ ಇರುವ ಸಾಮರ್ಥ್ಯ
ಸಾರಿಗೆ ಪ್ರಕಾರ ಪ್ರಯಾಣಿಕರ ಸಾಮರ್ಥ್ಯ (ಪ್ರತಿ ಗಂಟೆ ಪ್ರತಿ ದಿಕ್ಕು)
ಬಿಆರ್‌ಟಿಎಸ್‌ 8,000
ಮೆಟ್ರೋಲೈಟ್‌ 15,000
ಮೋನೊ ರೈಲು 15,000
ಮೆಟ್ರೋ 40,000
ಭಾರಿ ಮೆಟ್ರೋ 60,000

Advertisement

Udayavani is now on Telegram. Click here to join our channel and stay updated with the latest news.

Next