Advertisement

ಚೇತರಿಕೆಯ ಹಾದಿಯಲ್ಲಿ ಕಾಂಗ್ರೆಸ್‌

10:41 AM Oct 17, 2017 | |

2014ರ ಲೋಕಸಭೆ ಚುನಾವಣೆಯ ಬಳಿಕ ಸಂಪೂರ್ಣವಾಗಿ ನೆಲಕಚ್ಚಿದ್ದ ಕಾಂಗ್ರೆಸ್‌ ನಿಧಾನವಾಗಿ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಕಳೆದೊಂದು ವಾರದಲ್ಲಿ ಬಂದಿರುವ ಮೂರು ಚುನಾವಣಾ ಫ‌ಲಿತಾಂಶಗಳು ಕಾಂಗ್ರೆಸ್‌ನಲ್ಲಿ ಇನ್ನೂ ಹೋರಾಟದ ಕಸುವು ಉಳಿದುಕೊಂಡಿದೆ ಎನ್ನುವುದನ್ನು ಸಾಬೀತುಪಡಿಸಿವೆ. ವಿನೋದ್‌ ಖನ್ನಾ ಸಾವಿನಿಂದ ತೆರವಾಗಿದ್ದ ಗುರುದಾಸಪುರ ಲೋಕಸಭಾ ಕ್ಷೇತ್ರದಲ್ಲಿ ದಕ್ಕಿರುವ ಅಭೂತಪೂರ್ವ ಗೆಲುವು ಕಾಂಗ್ರೆಸ್‌ಗೆ ಬದುಕುಳಿಯಲು ಅಗತ್ಯವಾಗಿದ್ದ ಆಮ್ಲಜನಕ ಒದಗಿಸಿದೆ. ಬಿಜೆಪಿಯ ಭದ್ರಕೋಟೆಯೆಂದೇ ಪರಿಗಣಿತವಾಗಿದ್ದ ಗುರುದಾಸಪುರವನ್ನು ನಾಲ್ಕು ಬಾರಿ ವಿನೋದ್‌ ಖನ್ನಾ ಪ್ರತಿನಿಧಿಸಿದ್ದರು. ಆದರೆ ಅವರ ನಿಧನದ ಬಳಿಕ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ವಿಫ‌ಲಗೊಂಡಿದೆ. ಖನ್ನಾ ನಿಧನದ ಅನುಕಂಪದ ಅಲೆಯೂ ಬಿಜೆಪಿ ನೆರವಿಗೆ ಬಂದಿಲ್ಲ. ಅದರಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ಕುಮಾರ್‌ ಜಾಖಡ್‌ ಅವರ ಗೆಲುವಿನ ಅಂತರ ಬಿಜೆಪಿಯ ನಿದ್ದೆಗೆಡಿಸಿದೆ. ಈ ಫ‌ಲಿತಾಂಶ ಒಂದು ಅಂಶವನ್ನು ಸ್ಪಷ್ಟಪಡಿಸಿದೆ, ಅದು ಬಿಜೆಪಿ ಸೋಲಿಸಲಾಗದ ಪಕ್ಷವಲ್ಲ. ಶಕ್ತಿಮೀರಿ ಪ್ರಯತ್ನಿಸಿದರೆ ಬಿಜೆಪಿಯನ್ನು ದೊಡ್ಡ ಅಂತರದಲ್ಲೇ ಸೋಲಿಸಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಕಳೆದ ವಾರ ಪ್ರಕಟವಾದ ಮಹಾರಾಷ್ಟ್ರದ ನಾಂದೇಡ್‌-ವಾಘಲ ಮಹಾನಗರಪಾಲಿಕೆ ಫ‌ಲಿತಾಂಶ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಹೊರತಾಗಿಯೂ ಈ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಮುಖಭಂಗ ಅನುಭವಿಸಿದೆ. ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ತವರೂರಾದ ನಾಂದೇಡ್‌ ನಗರಪಾಲಿಕೆಯ 81 ಸೀಟುಗಳ ಪೈಕಿ 71ರಲ್ಲಿ ಕಾಂಗ್ರೆಸ್‌ ಗೆದ್ದು ನಿಚ್ಚಳ ಬಹುಮತ ಸಾಧಿಸಿದೆ. ಇದು ಪರಂಪರಾಗತವಾಗಿ ಕಾಂಗ್ರೆಸ್‌ ಕೋಟೆ ಹಾಗೂ ಚವಾಣ್‌ ವಂಶದ ರಾಜಕೀಯ ಕಾರ್ಯಕ್ಷೇತ್ರ ಎನ್ನುವುದು ನಿಜವಾಗಿದ್ದರೂ ಆಡಳಿತದಲ್ಲಿರುವ ಹೊರತಾಗಿಯೂ ಬಿಜೆಪಿಗೆ ಇಲ್ಲಿ ತನ್ನ ಸಾಧನೆಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಕೇರಳದ ವೆಂಗರ ವಿಧಾನಸಭೆ ಕ್ಷೇತ್ರದ ಫ‌ಲಿತಾಂಶದಲ್ಲಿ ಕಾಂಗ್ರೆಸಿನ ಸಾಧನೆಯೇನೂ ಇಲ್ಲ. ಇದು ಮುಸ್ಲಿಂ ಲೀಗ್‌ನ ಭದ್ರಕೋಟೆಯಾಗಿದ್ದು, ಸಹಜವಾಗಿಯೇ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಯುಡಿಎಫ್ ಮೈತ್ರಿಕೂಟದ ಹಿರಿಯಣ್ಣ ಎಂಬ ನೆಲೆಯಲ್ಲಿ ಕಾಂಗ್ರೆಸ್‌ ಈ ಗೆಲುವನ್ನು ಸಂಭ್ರಮಿಸಬಹುದಷ್ಟೆ. 

Advertisement

ಬೆನ್ನುಬೆನ್ನಿಗೆ ದಕ್ಕಿರುವ ಈ ಚುನಾವಣಾ ಗೆಲುವುಗಳು ರಾಹುಲ್‌ ಪಟ್ಟಾಭಿಷೇಕಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿದೆ. ದೀಪಾವಳಿ ಹಬ್ಬದ ಬಳಿಕ ಕಾಂಗ್ರೆಸ್‌ ಚುಕ್ಕಾಣಿ ರಾಹುಲ್‌ ಗಾಂಧಿ ಕೈಗೆ ಬರುವ ನಿರೀಕ್ಷೆಯಿದೆ. ಒಂದು ದೊಡ್ಡ ಗೆಲುವಿನ ಬಳಿಕವೇ ಪಕ್ಷದ ಅಧ್ಯಕ್ಷ ಹುದ್ದೆಗೇರಬೇಕೆಂಬ ಉದ್ದೇಶದಿಂದ ಕಳೆದ ಸುಮಾರು ಎರಡು ವರ್ಷದಿಂದ ಪಟ್ಟಾಭಿಷೇಕವನ್ನು ಮುಂದೂಡಿಕೊಂಡು ಬಂದಿದ್ದ ರಾಹುಲ್‌ಗೆ ಈಗಿನ ಪರಿಸ್ಥಿತಿ ಅನುಕೂಲಕರವಾಗಿದೆ. ಕಾಂಗ್ರೆಸ್‌ ಸ್ಥಿತಿಯನ್ನು ನೋಡಿದರೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಕಾಂಗ್ರೆಸ್‌ ಮುಕ್ತ ಭಾರತ ಕನಸು 2019ರಲ್ಲೂ ನನಸಾಗುವ ಸಾಧ್ಯತೆಯಿಲ್ಲ. ವೈಯಕ್ತಿಕವಾಗಿ ಕೂಡ ರಾಹುಲ್‌ ಸಾಕಷ್ಟು ಸುಧಾರಿಸಿದ್ದಾರೆ. ಅವರ ಕಾರ್ಯಶೈಲಿ, ಮಾತಿನ ಶೈಲಿ, ಹೋರಾಟದ ಶೈಲಿಯಲ್ಲಿ ಭಾರೀ ಬದಲಾವಣೆಗಳು ಗೋಚರವಾಗುತ್ತಿವೆ. ಸಂವಹನದಲ್ಲಿ ಮೋದಿಯ ಸಮವಲ್ಲದಿದ್ದರೂ ಕನಿಷ್ಠ ಆ ಮಟ್ಟಕ್ಕೇರಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಅಂತೆಯೇ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಪದೇ ಪದೆ ಹೋಗಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ವಿದೇಶ ಪ್ರವಾಸವನ್ನು ಆದಷ್ಟು ಕಡಿಮೆ ಮಾಡಿ ಪಕ್ಷದ ಸಂಘಟನೆಯತ್ತ ಹೆಚ್ಚು ಗಮನ ಹರಿಸಿದ್ದಾರೆ. ದೇಶದ ಸಮಸ್ಯೆಗಳ ಬಗ್ಗೆ ಹೆಚ್ಚು ಗಂಭೀರವಾಗಿ ಮಾತನಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಒಟ್ಟಾರೆಯಾಗಿ ಮೋದಿಗೆ ಪರ್ಯಾಯವಾಗಿ ಬೆಳೆಯಲು ಭಾರೀ ಶ್ರಮ ಪಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಕಾಂಗ್ರೆಸ್‌ನಲ್ಲಿ ಹೊಸದೊಂದು ಲವಲವಿಕೆ ಮೂಡಿರುವುದು ಸುಳ್ಳಲ್ಲ. 

ಪಕ್ಷದ ಎದುರು ಇನ್ನು ಬೆಟ್ಟದಷ್ಟು ಸವಾಲು ಇದೆ. ಸದ್ಯದಲ್ಲೇ ನಡೆಯುವ ಹಿಮಾಚಲಪ್ರದೇಶ, ನಂತರ ಗುಜರಾತ್‌ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅಗ್ನಿಪರೀಕ್ಷೆ. ಅದರಲ್ಲೂ ಗುಜರಾತಿನಲ್ಲಿ ಪ್ರಬಲ ಆಡಳಿತವಿರೋಧಿ ಅಲೆ ಬೀಸುತ್ತಿದ್ದು, ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಎಷ್ಟು ಯಶಸ್ವಿಯಾಗುತ್ತದೆ ಎಂದು ಕಾದು ನೋಡಬೇಕು. ಮುಂದಿನ ವರ್ಷ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಇದರ ಫ‌ಲಿತಾಂಶ 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸಾಧನೆ ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಕ್ಕೆ ಸಮಾನ ಮಹತ್ವವಿದೆ. ಆದರೆ ವಿರೋಧ ಪಕ್ಷ ಪ್ರಬಲವಾಗಿರಬೇಕು. ಈ ದೃಷ್ಟಿಯಲ್ಲಿ ಕಾಂಗ್ರೆಸ್‌ ಚೇತರಿಕೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next