Advertisement

ಸಂಸತ್ತಲ್ಲೂ ಹಿಜಾಬ್‌ ಬಿಸಿ ; ವಿಪಕ್ಷಗಳ ಸಭಾತ್ಯಾಗ , ಸರಕಾರದ ಪ್ರತಿಕ್ರಿಯೆಗೆ ಸಂಸದರ ಪಟ್ಟು

01:41 AM Feb 10, 2022 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್‌ ವಿವಾದ, ಬುಧವಾರದಂದು ಸಂಸತ್ತಿನ ಉಭಯ ಕಲಾಪಗಳಲ್ಲೂ ಪ್ರತಿಧ್ವನಿಸಿತು. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾ ಯಿತು. ಎರಡೂ ಸದನಗಳಲ್ಲಿ ಈ ಬಗ್ಗೆ ವಾದ- ವಿವಾದ, ಗದ್ದಲಗಳು ನಡೆದು, ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಘಟನೆಗಳೂ ನಡೆದವು.

Advertisement

ಲೋಕಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಹಿಜಾಬ್‌ ಪ್ರಕರಣವನ್ನು ಪ್ರಸ್ತಾವಿಸಿದರು. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಎಲ್ಲ ಧರ್ಮೀಯರು ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಲು ಅವಕಾಶವಿದೆ. ಅದಕ್ಕೆ ಯಾವುದೇ ನಿಷೇಧವಿಲ್ಲ. ಆದರೆ ಭಾರತದ ಕೆಲವು ಭಾಗಗಳಲ್ಲಿ ಮುಸ್ಲಿಂ ಅಕ್ಕ-ತಂಗಿಯರಿಗೆ ಹಿಜಾಬ್‌ ಧರಿಸುವುದಕ್ಕೆ ದಂಡ ವಿಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು. ಅಲ್ಲದೆ ಕರ್ನಾಟಕದ ಉಡುಪಿ ಕಾಲೇಜಿನಲ್ಲಿ ಹಿಜಾಬ್‌ ಕುರಿತಂತೆ ನಡೆದ ಘಟನೆಯ ಬಗ್ಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಬಿಜೆಪಿ ಸಂಸದ ಶಿವಕುಮಾರ್‌ ಉದಾಸಿ, ಇದು ರಾಜ್ಯ ಸರಕಾರ ನಿರ್ಧರಿಸಬೇಕಾದ ವಿಚಾರ. ಅಲ್ಲದೆ ಈ ವಿಚಾರ ಈಗ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹಾಗಾಗಿ ಕೇಂದ್ರ ಸರಕಾರ ಏನೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು. ಆದರೆ ಇದನ್ನು ವಿಪಕ್ಷಗಳ ಸದಸ್ಯರು ಒಪ್ಪಲಿಲ್ಲ. ಇದರಿಂದಾಗಿ, ಸದನದಲ್ಲಿ ಗದ್ದಲ ಏರ್ಪಟ್ಟಿತು. ಕಾಂಗ್ರೆಸ್‌, ಡಿಎಂಕೆ, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌, ಸಿಪಿಎಂ, ಸಿಪಿಐ, ವಿದುತಲೈ ಚಿರುತೈಗಲ್‌ ಕಚ್ಚಿ, ಝಾರ್ಖಂಡ್‌ ಮುಕ್ತಿ ಮೋರ್ಚಾ ಸದಸ್ಯರು ಸಭಾತ್ಯಾಗ ಮಾಡಿದರು.

ಹನುಮಂತಯ್ಯ ಭಾಷಣ: ರಾಜ್ಯಸಭೆಯಲ್ಲೂ ಹಿಜಾಬ್‌ ಪ್ರಕರಣ ಸದ್ದು ಮಾಡಿತು. ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಕರ್ನಾಟದ ಕಾಂಗ್ರೆಸ್‌ ಸಂಸದ ಎಲ್‌. ಹನುಮಂತಯ್ಯ ಪ್ರಸ್ತಾವಿಸಿ ಕರ್ನಾಟಕದ ಕೆಲವು ಭಾಗಗಳಲ್ಲಿ ಹಿಜಾಬ್‌ ಧರಿಸಿದ ಕಾರಣಕ್ಕಾಗಿಯೇ ಮುಸ್ಲಿಂ ಬಾಲಕಿಯರನ್ನು ಶಾಲೆಗಳ ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದರು. ಆದರೆ ಆಡಳಿತ ಪಕ್ಷದ ಸದಸ್ಯರು ಭಾಷಣದ ಮಧ್ಯೆ ವಾದ ಮಾಡಲು ನಿಂತಿದ್ದರಿಂದ ಹನುಮಂತಯ್ಯ ಅವರಿಗೆ ಭಾಷಣ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಹಾಗಾಗಿ ಹನುಮಂತಯ್ಯ ಅವರು, ಸಭಾಪತಿಗಳಿಗೆ ಭಾಷಣಕ್ಕೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೋರಿದರು. ಆದರೆ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, “ನಿಮ್ಮ ಭಾಷಣದ ಅವಧಿ ಮುಕ್ತಾಯವಾಗಿದೆ’ ಎಂದರು.

Advertisement

ಪ್ರಿಯಾಂಕಾ ಹೇಳಿಕೆ: “ಹೆಣ್ಣುಮಕ್ಕಳು ಬಿಕಿನಿಯಾದರೂ ತೊಡಲಿ, ಸೀರೆಯುಟ್ಟು ಮುಸುಕನ್ನಾ ದರೂ ಹಾಕಿಕೊಳ್ಳಲಿ. ಅದು ಆಕೆಯ ಸಾಂವಿಧಾನಿಕ ಹಕ್ಕು. ಹಾಗಾಗಿ, ಉಡುಗೆ – ತೊಡುಗೆಗಳ ವಿಚಾರ ದಲ್ಲಿ ಮಹಿಳೆ ಯರಿಗೆ ಕಿರುಕುಳ ಕೊಡುವುದನ್ನು ಬಿಡಿ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಕಮಲ್‌ ಟ್ವೀಟ್‌
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಗಲಾಟೆಯ ಬಗ್ಗೆ ಟ್ವೀಟ್‌ ಮಾಡಿರುವ ತಮಿಳು ನಟ, ರಾಜಕಾರಣಿ ಕಮಲ್‌ ಹಾಸನ್‌, “ಕರ್ನಾ ಟಕದಲ್ಲಿ ಹಿಜಾಬ್‌ ಹೆಸರಿನಲ್ಲಿ ಸಮಾಜವನ್ನು ಇಬ್ಭಾಗವಾಗಿ ಸುವಂಥ ಘಟನೆಗಳು ನಡೆ ಯು ತ್ತಿವೆ. ವಿದ್ಯಾರ್ಥಿ ಗಳನ್ನು ಸಮುದಾಯದ ಹೆಸರಿ ನಲ್ಲಿ ಒಡೆಯಲಾಗು ತ್ತಿದೆ. ಇಂಥ ಘಟನೆಗಳು ತಮಿಳುನಾಡಿಗೆ ಬರು ವುದು ಬೇಡ. ತಮಿಳುನಾಡಿನ ಪ್ರಗತಿಪರರು ಈ ಕುರಿತಂತೆ ಎಚ್ಚರಿಕೆಯಿಂದ ಇರಬೇಕು’ ಎಂದಿದ್ದಾರೆ.

ಮಲಾಲಾಳಿಗೆ ಕಪಿಲ್‌ ಮಿಶ್ರಾ ತಿರುಗೇಟು
ಮಲಾಲಾಳಿಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿಯ ಕಪಿಲ್‌ ಮಿಶ್ರಾ, “ಅಫ್ಘಾನಿಸ್ಥಾನ, ಪಾಕಿಸ್ಥಾನ, ಇರಾನ್‌ನಲ್ಲಿ ಹಿಜಾಬ್‌ ಧರಿಸದೆ ಇದ್ದಿದ್ದಕ್ಕೆ ಅನೇಕ ಮುಸ್ಲಿಂ ಬಾಲಕಿಯರನ್ನು ಹತ್ಯೆಗೈಯ್ಯಲಾಗಿದೆ. ಪಾಕಿಸ್ಥಾನದಲ್ಲೆ ಹಿಂದೂ, ಸಿಕ್ಖ್ ಬಾಲಕಿಯರನ್ನು ಅವರ ಧರ್ಮದ ಆಧಾರದಲ್ಲಿ ಕೊಲ್ಲಲಾಗಿದೆ. ಆಗೆಲ್ಲ ಮಲಾಲಾ ಅವರ ಮಾನವೀಯ ಪ್ರಜ್ಞೆ ಎಲ್ಲಿ ಹೋಗಿತ್ತು?” ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next