Advertisement

ಮುಖಭಂಗ ತಪ್ಪಿಸಲು ಮಹಾಭಿಯೋಗ ಅಸ್ತ್ರ ಹೂಡಿದ ಕಾಂಗ್ರೆಸ್‌!

10:34 AM Apr 25, 2018 | Harsha Rao |

ಕಾಂಗ್ರೆಸಿನ ನಡೆಗಳಲ್ಲಿ ಒಂದು ಉದ್ದೇಶ ಕಾಣಿಸುತ್ತಿದೆ. ಸಂವಿಧಾನವು ರಚಿಸಿ, ಜಾರಿಗೆ ತಂದಿರುವ ನ್ಯಾಯಾಂಗ, ಚುನಾವಣಾ ಆಯೋಗ ಹಾಗೂ ಭಾರತದ ಕಂಟ್ರೋಲರ್‌ ಹಾಗೂ ಆಡಿಟರ್‌ ಜನರಲ್‌ ಅವರ ಕಚೇರಿ – ಇತ್ಯಾದಿಗಳನ್ನು ಅವ್ಯವಸ್ಥಿತಗೊಳಿಸುವ ಪ್ರಯತ್ನ ಎಂಬುದು ಸ್ಪಷ್ಟ. ಜಮ್ಮು- ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ವಿರುದ್ಧ ಅಘೋಷಿತ ಸಮರ ಸಾರಿರುವ ಭಾರತೀಯ ಸೇನೆ ವಿರುದ್ಧವೂ ಕಾಂಗ್ರೆಸ್‌ ಮುಗಿಬಿದ್ದಿದೆ.

Advertisement

ಸವೊìàಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ ಮಹಾಭಿಯೋಗಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದ್ದಾರೆ. ಈ ನಿರ್ಧಾರವನ್ನು ಕಾಂಗ್ರೆಸ್‌ ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ತನಗೆ ನಂಬಿಕೆಯೇ ಇಲ್ಲದ ಸುಪ್ರೀಂ ಕೋರ್ಟಿನಲ್ಲಿ ರಾಜ್ಯಸಭೆಯ ಸಭಾಪತಿಗಳೂ ಆಗಿರುವ ಉಪರಾಷ್ಟ್ರಪತಿಗಳ ತೀರ್ಮಾನವನ್ನು ಪ್ರಶ್ನಿಸುವ ನಿರೀಕ್ಷೆಯಿದೆ. ಕಾಂಗ್ರೆಸ್‌ ಹಾಗೂ ಅದರ ಕೆಲವು ಮಿತ್ರಪಕ್ಷಗಳಿಗೆ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾತ್ರವಲ್ಲ, ಹಲವು ನ್ಯಾಯಮೂರ್ತಿಗಳ ವಿರುದ್ಧವೂ ಅಸಮಾಧಾನವಿದೆ.

ದೇಶದ ಇತಿಹಾಸದಲ್ಲಿ ಸಿಜೆಐ ಒಬ್ಬರ ವಿರುದ್ಧ ಮಹಾಭಿಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡಿದ ಮೊದಲ ನಿದರ್ಶನವಿದು. ಉಪರಾಷ್ಟ್ರಪತಿಗಳು ಇದನ್ನು ತಿರಸ್ಕರಿಸಿದ್ದು, ಈ ನಿರ್ಧಾರವನ್ನು ಕಾಂಗ್ರೆಸ್‌ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದೇ ಆದಲ್ಲಿ ಅದು ಒಂದು ಪೂರ್ವನಿದರ್ಶನವನ್ನು ಹುಟ್ಟು ಹಾಕಿದಂತಾಗುತ್ತದೆ. ಕಾಂಗ್ರೆಸ್‌ ಈಗ ಸಂಘರ್ಷದ ಮನಸ್ಥಿತಿಯಲ್ಲಿದ್ದು, ರಾಜ್ಯಸಭೆಯ ಸಭಾಪತಿ ಗಳೂ ಆಗಿರುವ ಉಪರಾಷ್ಟ್ರಪತಿಗಳನ್ನೇ ಆ ಹುದ್ದೆಯಿಂದ ಕಿತ್ತುಹಾಕಬೇಕೆಂದು ಕೇಳಿದರೂ ಅಚ್ಚರಿಯಿಲ್ಲ. ಆದರೆ, ಸುಪ್ರೀಂ ಕೋರ್ಟ್‌ ನಲ್ಲಿರುವ ಅತಿ ದುಬಾರಿ ವಕೀಲರ ಸಮೂಹದಲ್ಲಿ ಒಬ್ಬರಾಗಿರುವ, ಕೇಂದ್ರದಲ್ಲಿ ಕಾನೂನು ಮಂತ್ರಿಯೂ ಆಗಿದ್ದ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಅವರು ಈ ಮಹಾಭಿಯೋಗದ ಮುಂಚೂಣಿ ಯಲ್ಲಿರುವುದು ಚೋದ್ಯದ ಸಂಗತಿ.
ಈ ಅಂಕಣದಲ್ಲಿ ಮೊದಲೇ ಹೇಳಿದಂತೆ, ರಾಮಜನ್ಮಭೂಮಿ, ಆಧಾರ್‌ ಕಾರ್ಡ್‌ ಸಹಿತ ಕೆಲವು ಸೂಕ್ಷ್ಮ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡುವುದಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್‌ ನಿರ್ಧರಿಸಿದಂತಿದೆ. ಈ ಎರಡು ವಿಚಾರಗಳ ಜತೆಗೆ ಕಾಂಗ್ರೆಸನ್ನು ಹೆಚ್ಚು ಚಿಂತೆಗೀಡು ಮಾಡಿದ್ದು ಆ ಪಕ್ಷದ ಪ್ರಧಾನ ಕುಟುಂಬವಾದ ಸೋನಿಯಾ ಗಾಂಧಿ – ರಾಹುಲ್‌ ಗಾಂಧಿ ಅವರ ವಿರುದ್ಧದ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ. ಈ ಪ್ರಮುಖ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ದೀಪಕ್‌ ಮಿಶ್ರಾ ಅವರು ವ್ಯತಿರಿಕ್ತ ತೀರ್ಪು ನೀಡಿದರೆ ಏನು ಗತಿ ಎಂಬುದು ಕಾಂಗ್ರೆಸ್‌ ಆತಂಕ. ಮಿಶ್ರಾ ಈ ವರ್ಷದ ಅಕ್ಟೋಬರ್‌ನಲ್ಲಿ ನಿವೃತ್ತ ರಾಗಲಿದ್ದಾರೆ. ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಸಿಲುಕಿಸಲು ಕಾಂಗ್ರೆಸ್‌ ಯತ್ನಿಸಿತು. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ಕೋರ್ಟ್‌ ನ್ಯಾಯಾಧೀಶ ಲೋಯಾ ಅವರ ಸಾವಿನ ಕುರಿತಂತೆ ಸ್ವತಂತ್ರ ತನಿಖೆ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ತೀರ್ಪು ನೀಡಿದೆ. ಇದರಿಂದ ಪೆಟ್ಟು ತಿಂದಂತಾಗಿರುವ ಕಾಂಗ್ರೆಸ್‌, ನಿವೃತ್ತರಾಗುವ ತನಕ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನ್ಯಾಯಾಂಗದ ಕೆಲಸಗಳಿಂದ ಹೊರಗುಳಿಯುವಂತೆ ಮಾಡಲು ಮಹಾಭಿಯೋಗಕ್ಕೆ ಅರ್ಜಿ ಸಲ್ಲಿಸಿತ್ತು.

ತಾವೇ ಹುಟ್ಟುಹಾಕಿದ ಕಂಪನಿಯೊಂದರ ಮೂಲಕ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಪ್ರಕಾಶಕ ಸಂಸ್ಥೆಯಾದ ಅಸೋಸಿ ಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ನ‌ ಶೇರುಗಳನ್ನು ಖರೀದಿಸಲು ಸೋನಿಯಾ ಗಾಂಧಿ ಹಾಗೂ ರಾಜೀವ ಗಾಂಧಿಯವರು ವಂಚನೆ ಹಾಗೂ ಭೂಕಬಳಿಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ನಾಯಕ ಡಾ| ಸುಬ್ರಮಣಿಯನ್‌ ಸ್ವಾಮಿ ಅವರು ಸುಪ್ರೀಂ ಕೋರ್ಟಲ್ಲಿ ದಾವೆ ಹೂಡಿದ್ದಾರೆ. ಪತ್ರಿಕೆ ಅಲ್ಲದಿದ್ದರೂ ನ್ಯಾಷನಲ್‌ ಹೆರಾಲ್ಡ್‌ ಕಂಪೆನಿ ನೆಹರೂ-ಇಂದಿರಾ ಗಾಂಧಿ ಕುಟುಂಬಕ್ಕೆ ಆಪ್ತವಾಗಿದೆ. ಇದಕ್ಕೆ ಕಾರಣವಿದೆ, ಆ ಪ್ರಕಾಶಕ ಸಂಸ್ಥೆಯು ಹೊಸದಿಲ್ಲಿ ಹಾಗೂ ಇತರ ಕಡೆಗಳಲ್ಲಿ ಬಹುಕೋಟಿ ಮೌಲ್ಯದ ಜಮೀನು ಹೊಂದಿದೆ. ಹೀಗಾಗಿ 1938ರಲ್ಲಿ ಜವಾಹರಲಾಲ್‌ ನೆಹರು ಅವರೇ ಆರಂಭಿಸಿದ ಈ ಪತ್ರಿಕೆ ಗಾಂಧಿ ಕುಟುಂಬದ ಎರಡನೇ ಆದ್ಯತೆ ಆಗಿರುವಂತಿದೆ.

1994ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದೇನು?
ದೇಶದ ಉನ್ನತ ನ್ಯಾಯಾಲಯಗಳು ರಾಜಕೀಯ ಕಾರಣ ಗಳಿಗಾಗಿ ದುರ್ಬಳಕೆ ಆಗುತ್ತಿರುವುದು ದುರದೃಷ್ಟಕರ. ಪಿ.ವಿ. ನರಸಿಂಹರಾವ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೇಂದ್ರ ಸರಕಾರ ರಾಮಜನ್ಮಭೂಮಿ ವಿವಾದದಂತಹ ಸೂಕ್ಷ್ಮ ಪ್ರಕರಣ ಸುಪ್ರೀಂ ಕೋರ್ಟ್‌ ಪರಾಮರ್ಶೆಗೆ ಒಪ್ಪಿಸಿತ್ತು. ಇದಕ್ಕೆ ಸಂಬಂಧಿಸಿ ಅಧ್ಯಕ್ಷೀಯ ಉಲ್ಲೇಖಗಳಿಗೆ ಉತ್ತರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌, 1994ರ ಅಕ್ಟೋಬರ್‌ನಲ್ಲಿ ನೀಡಿದ ಹೇಳಿಕೆ ಇಲ್ಲಿ ಸ್ಮರಣೀಯ. ಆಗಿನ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾ ಚಲಯ್ಯ ಮುಖ್ಯಸ್ಥರಾಗಿದ್ದ ಐವರು ನ್ಯಾಯಮೂರ್ತಿ ಗಳಿದ್ದ ಪೀಠವು, “ರಾಜಕೀಯದ ವೇಗ ಅಚ್ಚರಿ ಮೂಡಿಸುತ್ತಿದೆ. ರಾಜಕೀಯ ಹಾಗೂ ಸ್ವಾರ್ಥ ಸಾಧನೆಯ ಉದ್ದೇಶಕ್ಕಾಗಿ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಸೆಕ್ಯುಲರಿಸಂ ಎಂಬುದು ರಾಜಕೀಯ ಘೋಷಣೆಗಿಂತ ಮಿಗಿಲಾದ ಅರ್ಥ ಪಡೆಯಬೇಕಿದೆ’ ಎಂದು ಹೇಳಿತು.

Advertisement

ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ, ರಾಮಜನ್ಮ ಭೂಮಿ ವಿವಾದವನ್ನು ಹೇಗೆ ಪರಿಹರಿಸಬೇಕು ಎಂಬ ಕುರಿತಾಗಿ ಸುಪ್ರೀಂ ಕೋರ್ಟ್‌ 23 ವರ್ಷಗಳ ಹಿಂದೆಯೇ ಸೂಚ್ಯವಾಗಿ ತೀರ್ಪು ನೀಡಿದಂತಾಗಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಅದಿನ್ನೂ ಇತ್ಯರ್ಥವಾಗದೆ ದೇಶಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮಹಾಭಿಯೋಗ ವಿಚಾರದಲ್ಲಿ ಕಾಂಗ್ರೆಸ್‌ ಅಥವಾ ಇತರ ಪಕ್ಷಗಳು ಏನು ಮಾಡುತ್ತವೆ ಎಂದು ಕಾಯುವ ಬದಲು ಕೇಂದ್ರದ ಎನ್‌.ಡಿ.ಎ. ಸರಕಾರವು ದೇಶದ ಉನ್ನತ ನ್ಯಾಯಾಂಗದ ವಿಚಾರದಲ್ಲಿ ತನ್ನ ಪ್ರತಿರೋಧಕ ನಿಲುವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕಿದೆ. ಹಲವು ಪ್ರಮುಖ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಜತೆಗೆ ಸರಕಾರವು ಸಹಮತ ಹೊಂದಿಲ್ಲದ ಕಾರಣ ನ್ಯಾಯಾಂಗದ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಇನ್ನಷ್ಟು ವಿಳಂಬವಿಲ್ಲದಂತೆ ಹುದ್ದೆ ಭರ್ತಿ ಅಧಿಸೂಚನೆಯನ್ನು ಅಂತಿಮ ಗೊಳಿಸಬೇಕು. ಉತ್ತಮ, ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ನ್ಯಾಯಾಧೀಶರ ನೇಮಕ ತ್ವರಿತವಾಗಿ ಆಗಬೇಕು. ಕೆಲವು ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಕೇಂದ್ರ ಕಾನೂನು ಸಚಿವಾಲಯದ ಹಸ್ತಕ್ಷೇಪ ಹಾಗೂ ತಡೆ ಅಪೇಕ್ಷಣೀಯವಲ್ಲ. ಕರ್ನಾಟಕದ ಜಿಲ್ಲಾ ನ್ಯಾಯಾಧೀಶರಲ್ಲಿ ಒಬ್ಬರಾದ ಕೃಷ್ಣಭಟ್‌ ಅವರ ವಿಚಾರವನ್ನೇ ಗಮನಿಸಿ. ಪ್ರಕರಣವೊಂದಕ್ಕೆ ಸಂಬಂಧಿಸಿ ಕೃಷ್ಣ ಭಟ್‌ ಅವರು “ನಿರ್ದೋಷಿ’ ಎಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸುಭೊÅà ಕಮಲ್‌ ಮುಖರ್ಜಿ ನೀಡಿರುವ ತೀರ್ಪನ್ನೇ ಪ್ರಶ್ನಿಸುವುದರಲ್ಲಿ ಅರ್ಥವಿದೆಯೇ? ಆದರೆ, ಕೃಷ್ಣ ಭಟ್ಟರಿಗೆ ಪದೋನ್ನತಿ ಬಾಕಿ ಉಳಿದಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಅವರಿನ್ನೂ ನೇಮಕಗೊಂಡಿಲ್ಲ.

ಕಾಂಗ್ರೆಸಿನ ನಡೆಗಳಲ್ಲಿ ಒಂದು ಉದ್ದೇಶ ಕಾಣಿಸುತ್ತಿದೆ. ಸಂವಿಧಾನವು ರಚಿಸಿ, ಜಾರಿಗೆ ತಂದಿರುವ ನ್ಯಾಯಾಂಗ, ಚುನಾವಣಾ ಆಯೋಗ ಹಾಗೂ ಭಾರತದ ಕಂಟ್ರೋಲರ್‌ ಹಾಗೂ ಆಡಿಟರ್‌ ಜನರಲ್‌ ಅವರ ಕಚೇರಿ – ಇತ್ಯಾದಿಗಳನ್ನು ಅವ್ಯವಸ್ಥಿತಗೊಳಿಸುವ ಪ್ರಯತ್ನ ಎಂಬುದು ಸ್ಪಷ್ಟ. ಜಮ್ಮು – ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ವಿರುದ್ಧ ಅಘೋಷಿತ ಸಮರ ಸಾರಿರುವ ಭಾರತೀಯ ಸೇನೆ ವಿರುದ್ಧವೂ ಕಾಂಗ್ರೆಸ್‌ ಮುಗಿಬಿದ್ದಿದೆ.

ಮಹಾಭಿಯೋಗದ ನಿಲುವಳಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, “ಆಡಳಿತದ ಕಂಬಗಳನ್ನು ದುರ್ಬಲವಾಗಿಸುವ ಯಾವುದೇ ವಿಚಾರ, ಮಾತು ಅಥವಾ ಕ್ರಿಯೆಗಳಿಗೆ ನಾವು ಅವಕಾಶ ನೀಡಬಾರದು’ ಎಂದು ಹೇಳಿರುವುದು ಸರಿಯಾಗಿದೆ. ಈ ಹಿಂದೆ ಉಪ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದ ಡಾ| ಎಸ್‌. ರಾಧಾಕೃಷ್ಣನ್‌, ಡಾ| ಝಾಕೀರ್‌ ಹುಸೇನ್‌, ಎಂ. ಹಿದಾಯತುಲ್ಲಾ, ಡಾ| ಶಂಕರ ದಯಾಳ್‌ ಶರ್ಮಾ ಅಥವಾ ಆರ್‌. ವೆಂಕಟರಾಮನ್‌ ಅವರಂತೆ ವೆಂಕಯ್ಯ ನಾಯ್ಡು ಪಂಡಿತರಲ್ಲದಿರಬಹುದು, ಮಾತುಗಾರ ಅಲ್ಲದಿರಬಹುದು, ಸಮಚಿತ್ತ ಹೊಂದಿಲ್ಲದಿರಬಹುದು. ಆದರೆ ಅವರದು ನೇರ ನಡೆ- ನೇರ ನುಡಿ. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಕಾಂಗ್ರೆಸ್‌ ಹೊರಿಸಿರುವ ಐದು ಆರೋಪಗಳಲ್ಲಿ ಹುರುಳಿಲ್ಲ ಎಂದು ಕಾರಣ ನಮೂದಿಸಿ ರಾಜ್ಯಸಭೆಯ ಅಧ್ಯಕ್ಷರು ಮಹಾಭಿಯೋಗದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಭೂಸೇನೆಯ ಹಾಲಿ ದಂಡನಾಯಕರಾದ ಜ| ಬಿಪಿನ್‌ ರಾವತ್‌ ಅವರನ್ನು ಕಾಂಗ್ರೆಸ್‌ ಬಹಿರಂಗವಾಗಿಯೇ ಟೀಕಿಸುತ್ತಿದೆ. ಕಾಂಗ್ರೆಸ್‌ ನಾಯಕರಲ್ಲಿ ಒಬ್ಬರಾದ ಸಂದೀಪ್‌ ದೀಕ್ಷಿತ್‌ ಅವರು, ರಾವತ್‌ ಅವರನ್ನು “ಬೀದಿ ಗೂಂಡಾ’ ಎಂದು ಸಂಬೋಧಿಸಿದ್ದರು. ಟೀಕೆಗಳು ಎದುರಾದ ಮೇಲೆ ಅನಿವಾರ್ಯವಾಗಿ ಕ್ಷಮೆ ಯಾಚಿಸಿದರು. ಮಾಜಿ ಕೇಂದ್ರ ಸಚಿವ ಜೈರಾಮ್‌ ರಮೇಶ್‌ ಅವರಂತೂ ಜ| ರಾವತ್‌ ಅವರನ್ನು ಜಲಿಯನ್‌ವಾಲಾಬಾಗ್‌ ಹತ್ಯಾಕಾಂಡ ಕುಖ್ಯಾತಿಯ ಬ್ರಿಗೇಡಿಯರ್‌ ಜನರಲ್‌ ಡಾಯರ್‌ ಅವರಿಗೆ ಹೋಲಿಸಿದ್ದಾರೆ. ಸಕಾರಣವಿಲ್ಲದೆಯೂ ಕಾಂಗ್ರೆಸ್‌ ಪಕ್ಷವು ಸೇನೆ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಟೀಕಿಸು ತ್ತಿದೆ. ಅಷ್ಟಲ್ಲದೆ, ಆಜಾದ್‌ ಕಾಶ್ಮೀರ ಭಾಗದ ಪಾಕಿಸ್ಥಾನದ ಸೇನಾ ನೆಲೆಗಳ ಮೇಲೆ ಭಾರತೀಯ ಸೇನೆ ಕೈಗೊಂಡ ನಿರ್ಣಾಯಕ ಸರ್ಜಿಕಲ್‌ ಸ್ಟ್ರೈಕ್‌ನ ಅಸಲಿತನವನ್ನೇ ಪ್ರಶ್ನಿಸಿತು.

ನ್ಯಾ| ರಾಜೀಂದರ್‌ ಸಾಚಾರ್‌
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ತಂದೆ ಭೀಮಸೇನ ಸಾಚಾರ್‌ ಅವರನ್ನೇ ಜೈಲಿಗಟ್ಟಿದ ಕಾಂಗ್ರೆಸ್‌ ಕುರಿತಾಗಿ ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಾಜೀಂದರ್‌ ಸಾಚಾರ್‌ ಅವರಿಗೆ ಯಾವುದೇ ಕಹಿ ಭಾವನೆ ಇರ ಲಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖೀಸಬೇಕಿದೆ. ಪಾಕಿಸ್ಥಾನದ ಮುಸ್ಲಿಂ ಮತಾಂಧರನ್ನೂ ಅವರು ಎಂದೋ ಕ್ಷಮಿಸಿಯಾಗಿತ್ತು. ಮುಸ್ಲಿಮರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತಾಗಿ 2006ರಲ್ಲಿ ನೀಡಿರುವ ವರದಿಯಿಂದ ನ್ಯಾ| ರಾಜೀಂದರ್‌ ಸಾಚಾರ್‌ ಪ್ರಸಿದ್ಧಿ ಪಡೆದಿದ್ದಾರೆ.

ಅವರ ನೇತೃತ್ವದ ಸಮಿತಿ ವಿಷಯದ ಆಳಕ್ಕೆ ಹೊಕ್ಕಿತ್ತು. ದೇಶ ವಿಭಜನೆಯ ಪೂರ್ವದಲ್ಲಿ ಮುಸ್ಲಿಂ ಮತಾಂಧರ ವಿರುದ್ಧ ಜ| ಸಾಚಾರ್‌ ಕುಟುಂಬ ನಿಂತಿತ್ತು ಎಂಬುದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಸ್ವಾತಂತ್ರ್ಯದ ಬಳಿಕ ಪಂಜಾಬ್‌ ರಾಜ್ಯದ ಮುಖ್ಯಮಂತ್ರಿಯಾದ ಭೀಮಸೇನ ಸಾಚಾರ್‌, ವಿಭಜನೆಯ ಬಳಿಕ ಪಾಕಿಸ್ಥಾನದಲ್ಲೇ ನೆಲೆಸಿದ್ದರು. ಪಾಕಿಸ್ಥಾನದ ರಾಷ್ಟ್ರೀಯ ಸಂಸತ್ತಿನಲ್ಲಿ ಅವರು ಕಾಂಗ್ರೆಸ್‌ ಗುಂಪಿನ ನಾಯಕರೂ ಆಗಿದ್ದರು. ಹಿಂದೂ ಮತ್ತು ಸಿಕ್ಖರನ್ನು ಭಾರತಕ್ಕೆ ಓಡಿಸುವುದನ್ನು ಪಾಕಿಸ್ತಾನ ಮುಂದುವರಿಸಿದಾಗ ಸಾಚಾರ್‌ ಕುಟುಂಬವೂ ಭಾರತಕ್ಕೆ ವಲಸೆ ಬಂತು. ವಿಭಜನೆಗೂ ಪೂರ್ವದಲ್ಲಿ ಸರ್ದಾರ್‌ ಸ್ವರಣ್‌ ಸಿಂಗ್‌ ಅವರೊಂದಿಗೆ ಭೀಮಸೇನ ಸಾಚಾರ್‌ ಅವರು ಪಂಜಾಬ್‌ ರಾಜ್ಯದ ಮಂತ್ರಿಯಾಗಿದ್ದರು. ವಿಭಜನೆಯನ್ನು ತಡೆಯುವುದಕ್ಕಾಗಿ ಕಾಂಗ್ರೆಸ್‌ ಹಾಗೂ ಅಕಾಲಿದಳ ಸೇರಿ ರಚಿಸಿಕೊಂಡಿದ್ದ ಸಂಯುಕ್ತ ರಂಗ ಅದಾಗಿತ್ತು. ಒಕ್ಕೂಟ ವ್ಯವಸ್ಥೆಯ ಪ್ರಬಲ ಪ್ರತಿಪಾದಕ ಸರ್‌ ಖೀಜರ್‌ ಹಯಾತ್‌ ತಿವಾನಾ ಅದರ ನಾಯಕರಾಗಿದ್ದರು. ಆದರೆ ತುರ್ತು ಪರಿಸ್ಥಿತಿಯ ವಿರುದ್ಧ ಮಾತನಾಡಿದರೆಂಬ ಕಾರಣಕ್ಕೆ ಭೀಮಸೇನ ಸಾಚಾರ್‌ ಅವರನ್ನು ಇಂದಿರಾಗಾಂಧಿ ಜೈಲಿಗಟ್ಟಿದರು. ಮುಸ್ಲಿಂ ಸಮುದಾಯದ ಸ್ಥಿತಿಗತಿ ಕುರಿತಾಗಿ ಜ| ಸಾಚಾರ್‌ ನೀಡಿರುವ ವರದಿಯ ಕುರಿತಾದ ಅಭಿಪ್ರಾಯಗಳು ಏನೇ ಇರಲಿ, ಅವರ ಕುಟುಂಬ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ನಾವು ಕೃತಜ್ಞತೆಯಿಂದ ಸ್ಮರಿಸಬೇಕಿದೆ.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next