Advertisement

ಜನರನ್ನು ಪ್ರಚೋದಿಸುತ್ತಿವೆಯೇ ಕಾಂಗ್ರೆಸ್‌-ಬಿಜೆಪಿ?

03:50 AM Jul 13, 2017 | |

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಎರಡು ಕೋಮಿನವರ ಮಧ್ಯೆ ಉದ್ಭವಿಸಿದ ತೆÌàಷಮಯ ವಾತಾವರಣದಿಂದಾಗಿ ಸುಮಾರು ಒಂದೂವರೆ ತಿಂಗಳಿನಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಇದರ ನಡುವೆ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪರಸ್ಪರ ಕೆಸರೆರಚಿಕೊಳ್ಳುತ್ತಿವೆ. ಎರಡೂ ಪಕ್ಷಗಳ ಮುಖಂಡರ ನಡುವಿನ ಮಾತಿನ ಸಮರದಲ್ಲಿ ಶಾಂತಿ ಸುವ್ಯವಸ್ಥೆಗಿಂತ ರಾಜಕೀಯ ಲಾಭದ ಲೆಕ್ಕಾಚಾರವೇ ಹೆಚ್ಚು ಎನ್ನುವಂತಿದೆ. ಇದರಿಂದಾಗಿ ಸಮಸ್ಯೆಗೆ ಪರಿಹಾರ ಸಿಗುವುದು ಬಿಟ್ಟು ಪರಸ್ಪರ ಎತ್ತಿಕಟ್ಟುವ ಕೆಲಸ ಆಗುತ್ತಿರುವಂತೆ ಕಾಣುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾದಂತೆ ಕಾಣುತ್ತಿದೆಯಾದರೂ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದು ಮಾತ್ರ ಸುಳ್ಳಲ್ಲ. ಈ ಎಲ್ಲಾ ವಿಚಾರಗಳ ಕುರಿತು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಮತ್ತು ಮಂಗಳೂರು ಕ್ಷೇತ್ರದ ಶಾಸಕರಾದ ಆಹಾರ ಸಚಿವ ಯು.ಟಿ.ಖಾದರ್‌ ಅವರೊಂದಿಗೆ ನೇರಾ ನೇರ ಮಾತಿಗಿಳಿದಾಗ…

Advertisement

ಮತ್ತೆ ದಕ್ಷಿಣ ಕನ್ನಡದಲ್ಲಿ ಕೋಮು ಸಂರ್ಷದ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇ ಪದೆ ಏಕೆ ಹೀಗೆ ನಡೆಯುತ್ತಿದೆ?
          ದಕ್ಷಿಣ ಕನ್ನಡದಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಅಹಿತಕರ ಘಟನೆಗಳು ನಡೆಯಲು ರಾಜ್ಯ ಸರ್ಕಾರದ ನಿಷ್ಕ್ರಿಯತೆಯೇ ಪ್ರಮುಖ ಕಾರಣ. ಮೇ 26ರಂದು ಕಾಂಗ್ರೆಸ್‌ನ ಯತಿನ್‌ ಮತ್ತು ಎಸ್‌ಡಿಪಿಐ ಕಾರ್ಯಕರ್ತ ಮುಸ್ಲಿಂ ಯುವಕರ ಜತೆ ಗಲಾಟೆಯಾಗಿದ್ದನ್ನೇ ಮುಂದಿಟ್ಟುಕೊಂಡು ಕಲ್ಲಡ್ಕದ ಎಲ್ಲಾ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಆಗ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಎಸ್ಪಿ, ಡಿಜಿಗೆ, ನಾನು ಮತ್ತು ಬಿ.ಎಸ್‌.  ಯಡಿಯೂರಪ್ಪ ಅವರು ಐಜಿಗೆ ಕರೆ ಮಾಡಿ ತಕ್ಷಣ ಇದಕ್ಕೆ ಕಡಿವಾಣ ಹಾಕಿ, ಕೋಮು ಗಲಭೆಯ ರೂಪ ಪಡೆದುಕೊಳ್ಳಲು ಅವಕಾಶ ನೀಡಬೇಡಿ ಎಂದು ಮನವಿ ಮಾಡಿದೆವು. ಆದರೆ, ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಅಲ್ಲಿ ದುರ್ಘ‌ಟನೆಗಳು ಸಂಭವಿಸು ವುದು ಮುಂದುವರಿಯಿತು. ಈ ಸಂದರ್ಭದಲ್ಲಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲೆಯ ಮತ್ತೂಬ್ಬ  ಸಚಿವ ಯು.ಟಿ.ಖಾದರ್‌ ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡದಂತೆ ನೋಡಿಕೊಂಡರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ ಹಿಂದೂಗಳನ್ನು ಓಲೈಸಲು ಬಿಜೆಪಿ ಇಂತಹ ಘಟನೆಗಳಿಗೆ ಕುಮ್ಮಕ್ಕು ಕೊಡುತ್ತಿದೆ ಎಂಬ ಆರೋಪವಿದೆಯಲ್ಲಾ?
       ಬಿಜೆಪಿ ಯಾವ ರೀತಿಯಲ್ಲಿ ಕುಮ್ಮಕ್ಕು ಕೊಟ್ಟಿದೆ ಎಂದು ತನಿಖೆ ಮಾಡಿಸಲಿ. ಕಲ್ಲಡ್ಕ ಘಟನೆ ನಡೆದು ನಿಷೇಧಾಜ್ಞೆ ಜಾರಿಯಾದ ಬಳಿಕ 42 ದಿನ ನಾವೆಲ್ಲರೂ ಸುಮ್ಮನಿದ್ದೆವು. ಯಡಿಯೂರಪ್ಪ ಅವರಿಗೆ‌ ಜನಸಂಪರ್ಕ ಯಾತ್ರೆ ಮಾಡಬೇಡಿ ಎಂದಾಗ ಅದರಂತೆ ನಡೆದುಕೊಂಡೆವು. ಆದರೆ, ಮುಖ್ಯಮಂತ್ರಿಯವರ ಪಕ್ಷದ ಕಾರ್ಯಕ್ರಮಕ್ಕೆ ನಿಷೇಧಾಜ್ಞೆ ಸಡಿಲಿಸಲಾಯಿತು. ಅಂದು ನಾವು ಮೊದಲು ಪ್ರತಿಭಟನೆ ಮಾಡಿದೆವು. ಮುಖ್ಯಮಂತ್ರಿಗಳು ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂಬುದು ಪ್ರತಿಭಟನೆಯ ಉದ್ದೇಶವಾಗಿತ್ತು. ಪೊಲೀಸರು ನಮ್ಮನ್ನು ಬಂಧಿಸಿದಾಗಲೂ ಶಾಂತಿಯುತವಾಗಿಯೇ ಬಂಧನಕ್ಕೊಳಗಾದೆವು. ಹೀಗಿದ್ದರೂ ಮುಸ್ಲಿಮರ ಮತಗಳನ್ನು ಕಾಂಗ್ರೆಸ್‌ ಪರವಾಗಿ ಧ್ರುವೀಕರಣಗೊಳಿಸಲು ಜಿಲ್ಲೆಯ ಇಬ್ಬರು ಸಚಿವರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಶೋಭಾ ಕರಂದ್ಲಾಜೆ ಅವರು ದಕ್ಷಿಣ ಕನ್ನಡ ಬಿಟ್ಟು ರಾಜಕೀಯವಾಗಿ ಬೇರೆ ಜಿಲ್ಲೆ ಆಶ್ರಯಿಸಿಕೊಂಡಿದ್ದಾರೆ. ಮತ್ತೇಕೆ ಅವರಿಗೆ ದಕ್ಷಿಣ ಕನ್ನಡದ ಉಸಾಬರಿ ಎಂಬ ಪ್ರಶ್ನೆ ಇದೆಯಲ್ಲಾ?
         ಬೇರೆ ಬೇರೆ ಕಾರಣಗಳಿಗಾಗಿ ಅನ್ಯ ಜಿಲ್ಲೆಯ ಕ್ಷೇತ್ರಗಳಿಂದ ವಿಧಾನಸಭೆ-ಲೋಕಸಭೆ ಚುನಾವಣೆಗೆ ನಿಲ್ಲಬೇಕಾಯಿತು. ಆದರೆ, ದಕ್ಷಿಣ ಕನ್ನಡ ಜಿಲ್ಲೆ ನಾನು ಹುಟ್ಟಿ ಬೆಳೆದ ಪ್ರದೇಶ. ಕುಟುಂಬದವರು ಅಲ್ಲೇ ಇದ್ದಾರೆ. ಅಲ್ಲದೆ, ಒಬ್ಬ ಸಂಸದೆಯಾಗಿ ದೇಶದ ಯಾವುದೇ ಭಾಗದಲ್ಲಿ ಸಮಸ್ಯೆಯಾದರೂ ಅದನ್ನು ಪ್ರಶ್ನಿಸುವ ಹಕ್ಕು ನನಗಿದೆ. ಜಿಲ್ಲೆಯಲ್ಲಿ ಮೃತಪಟ್ಟ ಇಬ್ಬರಲ್ಲಿ ಒಬ್ಬ ಸಂಘ ಪರಿವಾರದವನು, ಇನ್ನೊಬ್ಬ ಎಸ್‌ಡಿಪಿಐನವನು. ಗಾಯಗೊಂಡ ನಾಲ್ಕೈದು ಮಂದಿ ಸಂಘ ಪರಿವಾರದವರು. ನಾನು ಬೆಳೆದ ಜಿಲ್ಲೆಯ ಜನ ಸಮಸ್ಯೆಯಲ್ಲಿದ್ದಾರೆ. ಅವರ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡುವುದು ನನ್ನ ಕರ್ತವ್ಯ.

ಕಾಂಗ್ರೆಸ್‌ ಮುಸ್ಲಿಂ ತುಷ್ಠಿàಕರಣ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿಯವರು ಮುಸ್ಲಿಮರನ್ನು ವಿರೋಧಿಸುವುದೇಕೆ?
        ನಾವು ಮುಸ್ಲಿಮರ ವಿರುದ್ಧ ಅಲ್ಲ. ಭಯೋತ್ಪಾದಕತೆಯ, ಸಮಾಜದ್ರೋಹಿ ಸಂಘಟನೆಗಳ ವಿರುದ್ಧ, ಕೇರಳದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಿ ಜನರನ್ನು ಕೊಂದು ಈಗ ಕರ್ನಾಟಕಕ್ಕೂ ತನ್ನ ಕಾರ್ಯಾಚರಣೆ ವಿಸ್ತರಿಸುತ್ತಿರುವ ಕೆಎಫ್ಡಿ, ಪಿಎಫ್ಐನಂತಹ ಸಂಘಟನೆ ಗಳ ವಿರುದ್ಧ ಇದ್ದೇವೆ. ಹಿಂದೂಗಳನ್ನು ಅವರು ಕೊಲೆ ಮಾಡುತ್ತಿದ್ದಾರೆ. ರಾಜ್ಯದ ಮೈಸೂರು, ಬೆಂಗಳೂರು, ಬಿಸಿ ರೋಡ್‌ನ‌ಲ್ಲಿ ಇದೇ ರೀತಿಯ ಕೃತ್ಯ ನಡೆದಿದೆ. ಬೆಂಗಳೂರಿನ ರುದ್ರೇಶ್‌ ಕೊಲೆಯಲ್ಲಿ ಪಿಎಫ್ಐ ಕೈವಾಡವಿದೆ ಎಂಬುದು  ಎನ್‌ಐಎ ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ ಆ ಸಂಘಟನೆಗಳನ್ನು ನಿಷೇಧಿಸು ವಂತೆ ಒತ್ತಾಯಿಸುತ್ತಿದ್ದೇವೆ.

Advertisement

ಈ ರೀತಿಯ ಘಟನೆಗಳು ನಡೆದಾಗ ಶಾಂತಿಯ ಮಾತು ಬಿಟ್ಟು ಬಿಜೆಪಿ ಮತ್ತು ಕಾಂಗ್ರೆಸ್‌ ವಾಕ್ಸಮರದ ಮೂಲಕ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆಯಲ್ಲಾ?
       ಬಿಜೆಪಿಯವರು ಯಾರನ್ನೂ ಪ್ರಚೋದಿಸುತ್ತಿಲ್ಲ. ಇಂತಹ ಘಟನೆಗಳು ನಡೆದಾಗ ಸರ್ಕಾರ ತೊಂದರೆ ಗೊಳಗಾದ ಯುವಕರಿಗೆ ಶಕ್ತಿ ತುಂಬುವ, ಧೈರ್ಯ ಹೇಳುವ ಕೆಲಸ ಮಾಡಬೇಕಿತ್ತು. ಸರ್ಕಾರ ಆ ಕೆಲಸ ಮಾಡದ ಕಾರಣ ನಮ್ಮ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಘಟನೆ ನಡೆದ ಬಳಿಕ ಮಂಗಳೂರಿಗೆ ಬಂದ ಮುಖ್ಯಮಂತ್ರಿಗಳು ಎಲ್ಲಾ ಸಮುದಾಯಕ್ಕೂ ಧೈರ್ಯ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅವರಿಗೆ ಶಾಂತಿ ನೆಲೆಸುವುದು ಬೇಕಾಗಿಲ್ಲ. ಅಂತಹ ಮನಸ್ಥಿತಿ ಇದ್ದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 47 ದಿನ ನಿಷೇಧಾಜ್ಞೆ ಜಾರಿಯಲ್ಲಿರುತ್ತಿರಲಿಲ್ಲ. ನಮ್ಮವರ ರಕ್ಷಣೆ, ಶಕ್ತಿ ತುಂಬುವ ಕೆಲಸ ಮಾಡುವಾಗ ಅದಕ್ಕೆ ಪ್ರತಿಯಾಗಿ ಮತ್ತೂಂದು ಕೋಮಿನವರನ್ನು ಓಲೈಸಲು ಹಿಂದೂಗಳದ್ದೇ ತಪ್ಪು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆ ಮೂಲಕ ಜನರನ್ನು ಪ್ರಚೋದಿಸುತ್ತಿರುವವರು ಕಾಂಗ್ರೆಸ್ಸಿಗರು.

ದಕ್ಷಿಣ ಕನ್ನಡದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನಿಮ್ಮ ಸಲಹೆ ಏನು?
      ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ನನ್ನು ಕೊಂದವರು, ಪವನ್‌, ಚಿರಂಜೀವಿ ಮತ್ತಿತರರ ಮೇಲೆ ಕೊಲೆ ಯತ್ನ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಅವರಿಗೆ ಉಗ್ರ ಶಿಕ್ಷೆ ಕೊಡಬೇಕು. ಇಸ್ಲಾಂ ಮೂಲಭೂತ ವಾದಿಗಳಿಗೆ ರಕ್ಷಣೆ ನೀಡುವ ಜಿಲ್ಲೆಯ ಇಬ್ಬರು ಸಚಿವರಾದ ರಮಾನಾಥ ರೈ ಮತ್ತು ಯು.ಟಿ.ಖಾದರ್‌ ಅವರನ್ನು ಸಂಪುಟದಿಂದ ಕೈಬಿಡಬೇಕು. ಜಿಲ್ಲೆಗೆ ಪ್ರಾಮಾಣಿಕ, ನಿಷ್ಪಕ್ಷಪಾತ ಅಧಿಕಾರಿಗಳನ್ನು ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಆಡಳಿತ ನಡೆಸುವವರು ಒಂದು ಸಮುದಾಯವನ್ನು ಓಲೈಸುವ ಬದಲು ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸಭೆ ನಡೆಸಿ ಆ ಭಾಗದ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ತಕ್ಷಣ ಮಾಡಬೇಕು. 
– ಶೋಭಾ ಕರಂದ್ಲಾಜೆ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಮತ್ತೆ ದಕ್ಷಿಣ ಕನ್ನಡದಲ್ಲಿ ಕೋಮು ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇ ಪದೇ ಏಕೆ ಹೀಗೆ ನಡೆಯುತ್ತಿದೆ?
         ಖಂಡಿತವಾಗಿಯೂ ಜಿಲ್ಲೆಯಲ್ಲಿ ಕೋಮು ಸಂಘರ್ಷ ಇಲ್ಲ. ಜನರು ಪ್ರೀತಿ, ಸೋದರತೆಯಿಂದ ಇದ್ದಾರೆ. ಶರತ್‌ ಎಂಬಾತನ ಮೇಲೆ ಹಲ್ಲೆಯಾದಾಗ ರಕ್ಷಣೆಗೆ ನಿಂತಿದ್ದು ಅಬ್ದುಲ್‌ ರವೂಫ್ ಎಂಬ ಮುಸ್ಲಿಂ ಸಹೋದರ. ಅದೇ ರೀತಿ ರಿಯಾಜ್‌ ಎಂಬಾತನ ಮೇಲೆ ಚಾಕುವಿನಿಂದ ಇರಿದಾಗ ನೆರವಿಗೆ ಬಂದಿದ್ದು ಪ್ರಕಾಶ್‌ ಎಂಬ ಹಿಂದೂ ಸಹೋದರ. ಇದು ದಕ್ಷಿಣ ಕನ್ನಡದ ನಿಜವಾದ ಸಂಸ್ಕೃತಿ. ಸಣ್ಣ ಪುಟ್ಟ ಘಟನೆಗಳು ಆದಾಗ ಕೆಲವು ಸಂಘಟನೆಗಳು ಸ್ವಪ್ರತಿಷ್ಠೆಯಾಗಿ ತೆಗೆದುಕೊಂಡು ನಾವು ಮೇಲಾಗಬೇಕು ಎನ್ನುವಾಗ ಈ ರೀತಿ ಆಗುತ್ತದೆ.
     
ಕೋಮು ಸಂಘರ್ಷದ ಸ್ಥಿತಿ ಇಲ್ಲ ಎಂದಾದರೆ 47 ದಿನ ನಿಷೇಧಾಜ್ಞೆ ಹೇರುವ ಅಗತ್ಯವೇನಿತ್ತು?
         ಎರಡು ಸಮುದಾಯದ ಕೆಲವು ವ್ಯಕ್ತಿಗಳು ಸ್ವಪ್ರತಿಷ್ಠೆ ಯಿಂದ ಈ ರೀತಿಯ ಘಟನೆಗಳಿಗೆ ಕಾರಣವಾದಾಗ ಅದು ಸುತ್ತಮುತ್ತ ಹರಡದಿರಲಿ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಹೇರಿದ್ದಾರೆ. ನಿಷೇಧಾಜ್ಞೆ ನಡುವೆಯೂ ಜನಪ್ರತಿನಿಧಿಗಳು ಪ್ರತಿಭಟನೆ ಮಾಡಿ ಜನರನ್ನು  ಪ್ರಚೋದಿಸುವ ಪ್ರಯತ್ನ ಮಾಡಿದರು. ಹೀಗಾಗಿ ನಿಷೇಧಾಜ್ಞೆ ವಿಸ್ತರಿಸಬೇಕಾಯಿತು.

ಘಟನೆ ನಡೆದ ಪ್ರದೇಶಗಳು ಯು.ಟಿ.ಖಾದರ್‌ ಕ್ಷೇತ್ರದ ವ್ಯಾಪ್ತಿಯಲ್ಲಿಲ್ಲ. ಹೀಗಿದ್ದರೂ ನಿಮ್ಮ ಮೇಲೇಕೆ ಆರೋಪ ಬಂತು?
          ಗಲಭೆಗೆ ಸಂಬಂಧಿಸಿದಂತೆ ಯಾವುದೇ ವಿಚಾರ ಗೊತ್ತಿಲ್ಲದವರು ಆರೋಪ ಮಾಡುತ್ತಿದ್ದಾರೆಯೇ ಹೊರತು ನನ್ನ ಜಿಲ್ಲೆಯವರು ಮಾಡುತ್ತಿಲ್ಲ. ಅಶ್ರಫ್ ಕೊಲೆ ಪ್ರಕರಣದ ಆರೋಪಿ ಎರಡು ದಿನ ಮುಂಚೆ ಕಲ್ಲಡ್ಕ ಪ್ರಭಾಕರ ಭಟ್‌ ಜತೆ ಪತ್ರಿಕಾ ಗೋಷ್ಠಿಯಲ್ಲಿ ಕುಳಿತಿದ್ದ. ಇದನ್ನು ನಾನು ಬಹಿರಂಗವಾಗಿ ಪ್ರಶ್ನಿಸಿದೆ. ಹೀಗಾಗಿ ನನ್ನ ಹೆಸರು ಬಂದಿದೆ.

ಜಿಲ್ಲೆಯಲ್ಲಿ ಎಸ್‌ಡಿಪಿಐ ರಾಜಕೀಯವಾಗಿ ಪ್ರಬಲಗೊಳ್ಳುತ್ತಿದ್ದು, ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ ಆಗಿದ್ದ ಮುಸ್ಲಿಮರನ್ನು ಸೆಳೆದುಕೊಳ್ಳುತ್ತಿದೆ. ಮುಸ್ಲಿಮರನ್ನು ಸೆಳೆಯಲು ಕಾಂಗ್ರೆಸ್‌ ಅವರನ್ನು ಓಲೈಸುತ್ತಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ?
          ಅದು ರಾಜಕೀಯ ಆರೋಪ. ನಿಜವಾಗಿಯೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮತ್ತು ಎಸ್‌ಡಿಪಿಐ ಜಂಟಿ ಕಾರ್ಯಾಚರಣೆ ಮಾಡುತ್ತಿವೆ. ಬಿಜೆಪಿಯ ಕುಮ್ಮಕ್ಕಿನಿಂದ ಕಳೆದ ಚುನಾವಣೆಯಲ್ಲಿ ಎಸ್‌ಡಿಪಿಐ ಕಾಂಗ್ರೆಸ್‌ನವರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮುಂಬರುವ ವಿಧಾನಸಭೆ ಚುನಾವಣೆ ಯಲ್ಲೂ ಇದು ಪುನರಾವರ್ತನೆಯಾಗಲಿದೆ. ಈಗ ಗಲಾಟೆ ಮಾಡಿಸಿ ಎಸ್‌ಡಿಪಿಐನವರ ವಿರುದ್ಧ ಕೇಸ್‌ ಹಾಕಿಸುವುದು, ಚುನಾವಣೆ ಬಂದಾಗ ನೀವು ಕಾಂಗ್ರೆಸ್ಸನ್ನು ಸೋಲಿಸಿ, ಅಧಿಕಾರಕ್ಕೆ ಬಂದ ಮೇಲೆ ಕೇಸ್‌ ವಾಪಸ್‌ ಪಡೆಯುತ್ತೇವೆ ಎಂದು ಹೇಳುವುದು ಬಿಜೆಪಿಯವರು ಮಾಡುವ ಕೆಲಸ.

ಎರಡು ಕೋಮುಗಳ ನಡುವೆ ಸಂಘರ್ಷ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಎಸ್ಪಿಯನ್ನು ಕೂರಿಸಿಕೊಂಡು ಒಂದು ಕೋಮಿಗೆ ಸೇರಿದ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿ ಎಂದು ಹೇಳಿದ್ದು ಸರಿಯೇ?
         ಕಲ್ಲಡ್ಕದ ಘಟನೆ ನಡೆದ ನಂತರ ಪೊಲೀಸ್‌ ಇಲಾಖೆ ಆರೋಪಿಗಳನ್ನು ಪತ್ತೆಹಚ್ಚಲು ಸಮರ್ಪಕ ಕ್ರಮ ಕೈಗೊಂಡಿಲ್ಲ. ಕೆಲವರು ಆರೋಪಿಗಳ ಪರ ಒತ್ತಡ ಹಾಕುತ್ತಿದ್ದಾರೆ. ಅದರಿಂದ ಎರಡನೇ ಗಲಭೆಯಾಗಿ, ಕಲ್ಲು ತೂರಾಟವಾಯ್ತು ಎಂದು ದೂರು ಬಂದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್ಪಿಯನ್ನು ಕರೆಸಿ ಘಟನೆ ಹಿಂದೆ ಯಾರಿದ್ದರೂ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದ್ದಾರೆ. ಆ ಸಂದರ್ಭದಲ್ಲಿ ಸ್ಥಳೀಯ ಒಂದಿಬ್ಬರು ಮುಖಂಡರ ಹೆಸರು ಹೇಳಿರಬಹುದು. ಅದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.

ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ಹಿಂದೂಗಳು ಎಂದು ಹೇಳಿದ ಬಳಿಕ ಮುಸ್ಲಿಮರು ಎಂದು ಹೇಳುವ ಧೈರ್ಯ ತೋರದೆ ಅನ್ಯ ಕೋಮಿನವರು ಎಂದು ಹೇಳುವ ಮೂಲಕ ಸರ್ಕಾರ ಮುಸ್ಲಿಮರನ್ನು ಓಲೈಸಿ ಹಿಂದೂಗಳನ್ನು ದಮನ ಮಾಡಲು ಹೊರಟಿದೆ ಎಂಬುದು ಬಿಜೆಪಿಯವರ ಆರೋಪ.
         ಮುಖ್ಯಮಂತ್ರಿಗಳು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಮಾತಿನ ಮೂಲಕ ಮುಸ್ಲಿಮರನ್ನು ಓಲೈಕೆ ಮಾಡುವ ಅಗತ್ಯ ಮುಖ್ಯಮಂತ್ರಿಗಳಿಗೆ ಇಲ್ಲ. ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನ ಮೆಚ್ಚಿದ ಮುಖ್ಯ ಮಂತ್ರಿ ಆಗಿದ್ದಾರೆ. ಮಾತನಾಡುವಾಗ ಕೆಲವು ಪದಗಳು ತಕ್ಷಣ ಬಾರದೆ ಆ ರೀತಿ ಆಗಿರಬಹುದು. ಅದರಲ್ಲೂ ಬಿಜೆಪಿಯವರು ರಾಜಕೀಯ ಲಾಭ ಮಾಡಲು ಹೊರಟಿರುವುದು ದುರದೃಷ್ಟಕರ. ಮಂಗಳೂರಿಗೆ ಹೋಗಿದ್ದ ಮುಖ್ಯಮಂತ್ರಿಗಳು ಯಾವುದೇ ಧರ್ಮದ ಸಂಘಟನೆಗಳು ಅಶಾಂತಿ ಉಂಟುಮಾಡಿದರೆ ಮಟ್ಟ ಹಾಕಿ ಎಂದು ಹೇಳಿದ ಬಗ್ಗೆ ಏಕೆ ಅವರು ಮಾತನಾಡುತ್ತಿಲ್ಲ?

ಈ ರೀತಿಯ ಘಟನೆಗಳು ನಡೆದಾಗ ಶಾಂತಿಯ ಮಾತು ಬಿಟ್ಟು ಬಿಜೆಪಿ ಮತ್ತು ಕಾಂಗ್ರೆಸ್‌ ವಾಕ್ಸಮರದ ಮೂಲಕ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆಯಲ್ಲಾ?
        ನಾವು (ಕಾಂಗ್ರೆಸ್‌ನವರು)ಯಾರ ಮೇಲೂ ಆರೋಪ ಮಾಡುವುದಿಲ್ಲ. ಆದರೆ, ನಮ್ಮ ವಿರುದ್ಧ ವಿನಾ ಕಾರಣ ಆರೋಪ ಮಾಡಿದಾಗ ಅದಕ್ಕೆ ಉತ್ತರಿಸಬೇಕು. ಉತ್ತರಿಸದಿದ್ದರೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದಾಗುತ್ತದೆ. ನಾನಂತೂ ಯಾವುದೇ ಆರೋಪಗಳಿಗೆ ಉತ್ತರಿಸಿ ಜನರನ್ನು ಪ್ರಚೋದಿಸುವ ಕೆಲಸ ಮಾಡಿಲ್ಲ.

ದಕ್ಷಿಣ ಕನ್ನಡದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನಿಮ್ಮ ಸಲಹೆ ಏನು?
        ಅವರವರ ತಪ್ಪನ್ನು ಅವರವರು ಆತ್ಮಾವಲೋಕನ ಮಾಡಿ ಕೊಳ್ಳಬೇಕು. ನಿಜವಾಗಿ ಶಾಂತಿ ನೆಲೆಸಬೇಕು, ಸೋದರತೆ ಕೆಲಸ ನಿರ್ಮಾಣವಾಗಬೇಕು ಎಂಬುದು ಕಿಂಚಿತ್ತಾದರೂ ಹೃದಯದಲ್ಲಿದ್ದರೆ ಸಮಾಜಕ್ಕೆ ಪೂರಕವಾದ ಮಾತು ಹೇಳಬೇಕು. ಸಮಾಜ ಒಡೆಯುವ ಮಾತು ಯಾರು ಹೇಳಿದರೂ ಆತ ದೇಶಪ್ರೇಮಿಯಲ್ಲ. ಪ್ರತಿಯೊಂದಕ್ಕೂ ಸರ್ಕಾರ ಜನಪ್ರತಿನಿಧಿಗಳನ್ನು ದೂರುವ ಕೆಲಸ ಬಿಡಬೇಕು. ಆರೋಪಿಗಳು ಯಾರೇ ಆದರೂ ಅವರನ್ನು ಬೆಂಬಲಿಸಬಾರದು. ಪ್ರಮುಖವಾಗಿ ವಿದಾರ್ಥಿ ಸಮುದಾಯ ಭವಿಷ್ಯ ಆಲೋಚನೆ ಮಾಡಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು.
– ಯು.ಟಿ.ಖಾದರ್‌
ಆಹಾರ ಸಚಿವ 

ಸಂದರ್ಶನ: ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next