ಬೆಂಗಳೂರು: ಸಂಕ್ರಾಂತಿ ವೇಳೆ ನಿಗಮ ಮಂಡಳಿಗಳಿಗೆ ಆಯ್ಕೆಪಟ್ಟಿ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಕಾಂಗ್ರೆಸ್ ನಾಯಕರೇ ಹೇಳಿದ್ದರು. ಅದರಂತೆ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. 2-3 ದಿನಗಳಲ್ಲಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್, ಯಾವುದೇ ಕ್ಷಣದಲ್ಲಿ ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟವಾಗಬಹುದು, ಮುಂದೂಡುವುದಿಲ್ಲ ಎಂದಿದ್ದಾರೆ.
ಕಾರ್ಯಕರ್ತರ ಸೇರ್ಪಡೆ ಹಿನ್ನೆಲೆಯಲ್ಲಿ ತುಸು ವಿಳಂಬವಾಗಿರುವುದು ನಿಜ. ಆದರೆ ಈಗ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ಸಣ್ಣ-ಪುಟ್ಟ ಮಾರ್ಪಾಡುಗಳೊಂದಿಗೆ ಶೀಘ್ರ ಅಂಕಿತ ಬೀಳಲಿದೆ. ಅದರ ಬೆನ್ನಲ್ಲೇ ಪಟ್ಟಿಯನ್ನು ಪ್ರಕಟಿಸಲಾಗುವುದು.
ಇದರೊಂದಿಗೆ ಈ ಸಂಬಂಧದ ಕುತೂಹಲಕ್ಕೂ ತೆರೆಬೀಳಲಿದೆ ಎಂದು ಮೂಲಗಳು ಹೇಳಿವೆ. ಮೊದಲ ಹಂತದಲ್ಲಿ ಮೂರು, ನಾಲ್ಕು ಬಾರಿ ಶಾಸಕ ರಾದವರಿಗೆ ಆದ್ಯತೆ ನೀಡಲಾಗುತ್ತದೆ. ಎರಡು ಬಾರಿ ಶಾಸಕರಾದವರಿಗೆ ಅನಂತರದ ಆದ್ಯತೆ. ಇದರ ಜತೆಗೆ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿದ್ದು, 10- 12 ಜನ ಈ ವರ್ಗದಲ್ಲಿ ಬರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರು, ಪದಾಧಿಕಾರಿಗಳಿಗೆ ಈ ಕಾರ್ಯಕರ್ತರ ಕೋಟಾದಲ್ಲಿ “ಅಧಿಕಾರ ಭಾಗ್ಯ’ ನೀಡುವ ಮೂಲಕ ಸಮಾಧಾನಪಡಿಸುವ ತಂತ್ರ ಇದರ ಹಿಂದಿದ್ದು, ಒಟ್ಟು 40-42 ಜನರಿಗೆ ಅವಕಾಶ ಸಿಗಲಿದೆ ಎನ್ನಲಾಗಿದೆ.
ಜಾತಿ ಸಮೀಕರಣ, ಲೋಕಸಭಾ ಚುನಾವಣೆ ಮೇಲಿನ ಪ್ರಭಾವ ಮತ್ತಿತರ ಎಲ್ಲ ಅಂಶಗಳನ್ನು ಅಳೆದು-ತೂಗಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಪಕ್ಷದ ಎಲ್ಲ ಕಾರ್ಯಕರ್ತರಿಗೂ ಅವಕಾಶ ಸಿಗಬೇಕು ಎನ್ನುವ ದೃಷ್ಟಿಯಿಂದ ಅಧಿಕಾರಾವಧಿ ಎರಡು ವರ್ಷಕ್ಕೆ ಸೀಮಿತವಾಗಿರಲಿದೆ. ಅನಂತರದ ಎರಡು ವರ್ಷವನ್ನು ಇತರರಿಗೆ ಬಿಟ್ಟು ಕೊಡಬೇಕು ಎಂಬ ಸ್ಪಷ್ಟ ಸೂಚನೆಯೊಂದಿಗೆ ಪಟ್ಟಿ ಬಿಡುಗಡೆಯಾಗಲಿದೆ. “ಮಕರ ಸಂಕ್ರಾಂತಿ ಆಯಿತು. ಆದರೆ ಹೈಕಮಾಂಡ್ನಿಂದ ಮಾತ್ರ ಇನ್ನೂ ಸಿಹಿಸುದ್ದಿ ಬಂದಿಲ್ಲ. ಈ ಮಧ್ಯೆ ಲೋಕಸಭಾ ಚುನಾವಣೆ ಸಮೀಪಿ ಸುತ್ತಿದ್ದು, ಅದಕ್ಕೆ ನಾಂದಿ ಹಾಡುವಂತೆ ರಾಷ್ಟ್ರೀಯ ನಾಯಕರ ಭಾರತ್ ಜೋಡೋ ನ್ಯಾಯ ಯಾತ್ರೆ ಕೂಡ ಆರಂಭಗೊಂಡಿದೆ. ಎಲ್ಲರೂ ಅಲ್ಲಿ ವ್ಯಸ್ತರಾಗಿರುವುದರಿಂದ ಪಟ್ಟಿ ಕೈಬಿಟ್ಟಂತೆಯೇ. ಚುನಾವಣೆ ಅನಂತರವೇ ನಮಗೆ ಅಧಿಕಾರ ಭಾಗ್ಯ ಎಂಬ ಕೊರಗು ಆಕಾಂಕ್ಷಿಗಳನ್ನು ಕಾಡತೊಡಗಿತ್ತು. ಆ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ನಾಯಕರು ಪಟ್ಟಿ ಸಿದ್ಧಗೊಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂದೂಡುವುದಿಲ್ಲ; ಡಿಕೆಶಿ
ಸದಾಶಿವನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಯಾವ ಕ್ಷಣ ದಲ್ಲಿ ಬೇಕಾದರೂ ನಿಗಮ, ಮಂಡಳಿ ಆಯ್ಕೆಪಟ್ಟಿ ಪ್ರಕಟ ವಾಗಬಹುದು. ಮುಂದೂಡುವ ಸಾಧ್ಯತೆ
ಇಲ್ಲ. ಚುನಾ ವಣೆ ಸಮಯದಲ್ಲಿ ನಾವು ಯಾರಿಗೆ ಮಾತು ಕೊಟ್ಟಿದ್ದೇವೋ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ. ಇದರಲ್ಲಿ ಅನುಮಾನವೇ ಬೇಡ’ ಎಂದು ಭರವಸೆ ನೀಡಿದ್ದಾರೆ.