Advertisement
ಭಾನುವಾರ ನಾನು ಸಂಸ್ಥೆಯ ಸ್ಥಾಪಕರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಏನೇ ಸಮಸ್ಯೆಯಿದ್ದರೂ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಮಾಧ್ಯಮಗಳ ಮೂಲಕ ಹೋಗುವುದು ಬೇಡ ಎಂಬ ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ ಎಂದು ಮಂಗಳವಾರ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕಂಪನಿ ಮುಖ್ಯಸ್ಥ ಆರ್ ಶೇಷಸಾಯಿ ಹೇಳಿದ್ದಾರೆ. ಜತೆಗೆ, ನಮ್ಮ ಕಂಪನಿಯು ಕಾರ್ಪೊರೇಟ್ ಆಡಳಿತದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಾರುಕಟ್ಟೆ ವಿಶ್ಲೇಷಕರು ಹೇಳುವ ಪ್ರಕಾರ ಸದ್ಯ ಉಂಟಾಗಿರುವ ವಿವಾದಕ್ಕೆ ಪೂರ್ಣ ವಿರಾಮ ಬೀಳದು. ಅದು ಇನ್ನೂ ಮುಂದುವರಿಯುವ ಲಕ್ಷಣಗಳು ಇವೆ ಎಂದು ಹೇಳುತ್ತಾರೆ ತಜ್ಞರು. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಹಾಲಿ ಆಡಳಿತ ಮಂಡಳಿ ಮತ್ತು ಸಂಸ್ಥಾಪಕರ ನಡುವಿನ ಬಿಕ್ಕಟ್ಟು ಶಮನವಾದೀತೆ ಎಂದು ಅವರು ಪ್ರಶ್ನಿಸಿದ್ದಾರೆ. ಸೋಮವಾರ ಮುಂಬೈನಲ್ಲಿ ಸಿಇಒ ವಿಶಾಲ್ ಸಿಕ್ಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವೇಳೆ ಕಂಪನಿ ಸಂಸ್ಥಾಪಕರು ಎತ್ತಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮತ್ತೆ ಕೆಲವು ವಿಚಾರಗಳಿಗೆ ಮೌನವಾಗಿದ್ದರು. ಈ ಅಂಶಗಳನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬ ವಿಚಾರಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಮುಂಬೈ ಮೂಲದ ಷೇರು ಪೇಟೆ ಮಾರುಕಟ್ಟೆ ವಿಶ್ಲೇಷಕರೊಬ್ಬರು ಹೇಳುತ್ತಾರೆ. ಮತ್ತೂಂದೆಡೆ ಹೂಡಿಕೆದಾರರು ಸಿಇಓ ವಿಶಾಲ್ ಸಿಕ್ಕಾ ಅವರಿಗೆ ಬೆಂಬಲ ಸೂಚಿಸಿದ್ದಾರೆಂದು “ಮನಿ ಕಂಟ್ರೋಲ್.ಕಾಮ್’ ವರದಿ ಮಾಡಿದೆ. ಕಂಪನಿ ಸಂಸ್ಥಾಪಕರು ಈಗ ಇನ್ಫೋಸಿಸ್ ಅವರ ಸಂಸ್ಥೆ ಅಲ್ಲವೆಂದು ತಿಳಿದುಕೊಳ್ಳಬೇಕೆಂದು ಅವರು ಪ್ರತಿಪಾದಿಸುತ್ತಿದ್ದಾರೆ.