Advertisement

ಆತ್ಮವಿಶ್ವಾಸ, ಆರೋಗ್ಯಕರ ಜೀವನಶೈಲಿ, ಕಲಿಕಾ ಕ್ರಮ ಯಶಸ್ಸಿನ ಮೆಟ್ಟಿಲು

01:00 AM Mar 04, 2019 | Harsha Rao |

ಪುತ್ತೂರು: ಶೈಕ್ಷಣಿಕ ವರ್ಷದ ಆರಂಭದಿಂದ ಇದುವರೆಗೆ ಕಲಿತ ವಿಷಯಗಳನ್ನು ಹಾಳೆಯ ಮೇಲೆ ಬರೆಯುವ ಹೊತ್ತು. ತಳಮಳ, ತಲ್ಲಣ, ಆತಂಕ, ಉದ್ವೇಗ ಎಲ್ಲವೂ ಒಮ್ಮೆಗೇ ದಾಳಿ ಮಾಡಲು ಆರಂಭಿಸತೊಡಗುತ್ತವೆ.

Advertisement

ಇವೆಲ್ಲವನ್ನು ನಿಭಾಯಿಸುವುದು ಹೇಗೆ?
ಜೀವನದಲ್ಲಿ ಗೆಲುವು ಪಡೆದುಕೊಂಡ ವ್ಯಕ್ತಿಗಳ ಮಾತುಗಳನ್ನೇ ಕೇಳಿ ನೋಡಿ. ಯಶಸ್ಸಿನ ಹಿಂದಿನ ಮೂಲಮಂತ್ರ ಆತ್ಮವಿಶ್ವಾಸ, ಧೈರ್ಯ, ಸಹನೆ ಎಂದೇ ಹೇಳುತ್ತಾರೆ. ಇವು ಮೂರು ಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಎದುರಾದ ಸವಾಲು ಅದೆಷ್ಟೇ ದೊಡ್ಡದಿರಲಿ, ಸುಲಭವಾಗಿ ಜಯಿಸಿ ಬಿಡಬಹುದು. ಪರೀಕ್ಷೆಯ ವಿಚಾರವನ್ನೇ ತೆಗೆದುಕೊಂಡರೆ, ಇಲ್ಲಿ ನೀವೆಷ್ಟು ಓದಿರುತ್ತೀರಿ ಎನ್ನುವುದಕ್ಕಿಂತ ಪ್ರಶ್ನೆಗಳನ್ನು ಎಷ್ಟು ಸಮರ್ಥವಾಗಿ ಎದುರಿಸುತ್ತೀರಿ ಎನ್ನುವುದು ಮುಖ್ಯ. ಜಾಣ್ಮೆಯ ಉತ್ತರ, ಸಂದರ್ಭಕ್ಕೆ ತಕ್ಕ ಉತ್ತರಗಳನ್ನು ನೀಡಬಲ್ಲ ವಿದ್ಯಾರ್ಥಿ ಯಶಸ್ಸಿನ ತುತ್ತತುದಿಯನ್ನು ಏರಬಹುದು.

ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಇದುವರೆಗೆ ತರಗತಿ ಕೊಠಡಿಯಲ್ಲಿ ಹಲವು ವಿಚಾರಗಳನ್ನು ಮನನ ಮಾಡಿಕೊಂಡಿರುತ್ತೀರಿ. ಇವೆಲ್ಲವನ್ನು ಕೊನೆ ಗಳಿಗೆಯಲ್ಲಿ ಸ್ಮೃತಿ ಪಟಲಕ್ಕೆ ತಂದುಕೊಂಡು, ಉತ್ತರ ಪತ್ರಿಕೆಯ ಮೇಲೆ ಪಡಿಮೂಡಿಸ ಬೇಕು. ಕೆಲವು ವಿದ್ಯಾರ್ಥಿಗಳು ಇದು ಕಷ್ಟ ಎಂದುಕೊಳ್ಳುತ್ತಾರೆ. ಆದರೆ ಇದನ್ನು ಸುಲಭವಾಗಿ ಪರಿವರ್ತಿಸಬಹುದು. ಇದಕ್ಕೆ ಕೊನೆಯ ಹಂತದ ತಯಾರಿ ಅತೀ ಅಗತ್ಯ.

ನಕಾರಾತ್ಮಕ ಯೋಚನೆ ಬೇಡ
ಇನ್ನೊಬ್ಬರ ಜತೆ ಹೋಲಿಕೆ, ಕೀಳರಿಮೆ ಬೆಳೆಸಿಕೊಳ್ಳು ವುದರಿಂದ ನಕಾರಾತ್ಮಕ ಯೋಚನೆಗಳು ದಾಳಿ ಮಾಡುತ್ತವೆ. ಇದರಿಂದಾಗಿ ಮೆದುಳಿನಲ್ಲಿ ನ್ಯೂರೊ ಹಾರ್ಮೋನ್‌ಗಳು ಬದಲಾಗುತ್ತವೆ. ತತ್‌ಕ್ಷಣ ನರಮಂಡಲ ಉದ್ವೇಗಕ್ಕೆ ಈಡಾಗುತ್ತದೆ. ಇದು ಹೆಚ್ಚುತ್ತಾ ಹೋಗುತ್ತದೆಯೇ ವಿನಾ ನಿಲ್ಲಿಸಲು ಸಾಧ್ಯವಿಲ್ಲ. ಆಗ ನೆನಪಿನ ಶಕ್ತಿ ಕುಂಠಿತಗೊಂಡು, ಭಾವನಾತ್ಮಕ ಬದಲಾವಣೆ ಉಂಟಾಗುತ್ತದೆ. ಆದ್ದರಿಂದ ನಕಾರಾತ್ಮಕ ಭಾವನೆಗಳಿಗೆ ಜಾಗವೇ ಕೊಡಬೇಡಿ.

 ನಿಗದಿತ ನಿದ್ರೆ
ದಿನಕ್ಕೆ 6ರಿಂದ 7 ಗಂಟೆ ನಿದ್ದೆ ಬೇಕೇ ಬೇಕು. ನಿದ್ರಾಹೀನತೆ ಉಂಟಾದರೆ ಮೆದುಳಿನ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಏಕಾಗ್ರತೆಗೆ ಭಂಗ ಉಂಟಾಗುತ್ತದೆ. ಸಕ್ರಿಯತೆ ಇರುವುದಿಲ್ಲ. ಓದಿದ್ದನ್ನು ನೆನಪಿಸಿಕೊಳ್ಳಲು ಸಾಧ್ಯವಾಗದು.

Advertisement

ನಿಯಮಿತ ಆಹಾರ
ಅಮ್ಮನ ಅಡುಗೆಗೆ ಹೆಚ್ಚು ಒತ್ತು ನೀಡಿ. ಜಂಕ್‌ ಫುಡ್‌, ಬಿಸ್ಕಿಟ್‌ ಮೊದಲಾದ ತಿನಿಸುಗಳಿಂದ ದೂರವಿರಿ. ಹಸಿವೆ ಆದಾಗಲೂ ತಿನ್ನದೆ ಇದ್ದರೆ ಹೈಪೋಗ್ಲೆಸಿಮಿಯಾ ಕಾಡುತ್ತದೆ. ಅಂದರೆ ರಕ್ತದಲ್ಲಿ ಗುÉಕೋಸ್‌ ಅಂಶ ಕಡಿಮೆ ಆಗುವುದು. ಇದರಿಂದ ಅಗತ್ಯ ಸಂದರ್ಭ ಓದಿದ್ದು ನೆನಪಿಗೆ ಬಾರದೇ ಹೋಗಬಹುದು. ಗ್ಯಾಸ್ಟ್ರಿಕ್‌ ಆಗಿ ಪರೀಕ್ಷಾ ಹಾಲ್‌ನಲ್ಲೇ ವಾಂತಿ ಮಾಡಿಕೊಂಡ ಉದಾಹರಣೆಯೂ ಇದೆ. 

ವೇಳಾಪಟ್ಟಿ
ಪರೀಕ್ಷೆಯ ಮೊದಲ ದಿನವೂ ವೇಳಾಪಟ್ಟಿ ಅಗತ್ಯ. ಕನಿಷ್ಠ ಸಮಯದಲ್ಲಿ ಅಗತ್ಯ ವಿಷಯಗಳನ್ನು ಮನನ ಮಾಡಿಕೊಳ್ಳಲು ಇದು ಬೇಕು. ಕಷ್ಟವಾದ ವಿಷಯಗಳಿಗೆ ಹೆಚ್ಚು ಸಮಯ ನೀಡಿ. 

ಪುನರಾವರ್ತನೆಗೆ ಕ್ರಮ
ಎಷ್ಟೇ ಬುದ್ಧಿವಂತನಾದರೂ ಕೊನೆಕ್ಷಣದಲ್ಲಿ ಮರೆತು ಬಿಡು ತ್ತಾನೆ. ಆದ್ದರಿಂದ ಪ್ರಾಮುಖ್ಯ ವಿಷಯಗಳನ್ನು ಪಾಯಿಂಟ್‌ ಮಾಡಿಟ್ಟುಕೊಳ್ಳಿ. ಪುನರಾವರ್ತನೆಗೆ ಇದು ಉತ್ತಮ.

ಉತ್ಸಾಹ, ಲವಲವಿಕೆಯಿಂದಿರಿ
ಪರೀಕ್ಷೆಯನ್ನು ಉತ್ಸಾಹದಿಂದ ಎದುರಿಸಿ. ಇದರಿಂದಲೇ ಶೇ. 5ರಷ್ಟು ಅಂಕ ಹೆಚ್ಚು ಗಳಿಸಬಹುದು. ಹ್ಯಾಪ್‌ ಮೋರೆ ಹಾಕಿಕೊಂಡು ಪರೀಕ್ಷಾ ಕೊಠಡಿ ಪ್ರವೇಶಿದರೆ, ಗೊತ್ತಿರುವ ವಿಷಯವನ್ನು ಮರೆತುಬಿಡುವ ಸಾಧ್ಯತೆ ಇದೆ.

ವಿಮರ್ಶೆ ಬೇಡ
ಹೆಚ್ಚಿನ ವಿದ್ಯಾರ್ಥಿಗಳಿಗೆ ಒಂದು ಅಭ್ಯಾಸ ಇದೆ- ಪರೀಕ್ಷೆ ಮುಗಿದ ತತ್‌ಕ್ಷಣ ಅಂಕಗಳ ಲೆಕ್ಕಾಚಾರ. ನಿರೀಕ್ಷೆಯಷ್ಟು ಅಂಕ ಬರುವುದಿಲ್ಲ ಎಂಬ ಭಾವನೆ ಮೂಡಿದರೆ, ಮುಂದಿನ ಪರೀಕ್ಷೆಯ ತಯಾರಿ ಮಂಕಾಗುತ್ತದೆ. ಎಲ್ಲ ಪರೀಕ್ಷೆಗಳು ಮುಗಿದ ಅನಂತರವೇ ವಿಮರ್ಶೆಗೆ ಮುಂದಾಗಿ.

ಚರ್ಚೆ ಬೇಡ
ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಚರ್ಚೆ ಮಾಡಬೇಡಿ. ಇದು ಅನಾವಶ್ಯಕ ಆತಂಕಕ್ಕೆ ಕಾರಣ ಆಗುತ್ತದೆ. 

ಪೋಷಕರಿಗೆ ಕಿವಿಮಾತು
ವಿದ್ಯಾರ್ಥಿ ಪರೀಕ್ಷೆಗೆ ತಯಾರಿ ಮಾಡುತ್ತಿರುವಾಗ, ಪೋಷಕರು ಕೈಲಾದ ಸಹಾಯ ಮಾಡಿ. ಧೈರ್ಯದ ಮಾತುಗಳನ್ನು ಹೇಳಿ. ಪರೀಕ್ಷೆಯ ಮುನ್ನ ದಿನ ಹಾಲ್‌ ಟಿಕೆಟ್‌, ಅಗತ್ಯ ಪರಿಕರಗಳನ್ನು ಜೋಡಿಸಿಡಲು ಸಹಾಯ ಮಾಡಿ. ನಿದ್ರೆ, ಆಹಾರದ ವಿಷಯದಲ್ಲೂ ಗಮನ ಕೊಡಿ. 

ನೆಗೆಟಿವ್‌ ಕಮೆಂಟ್‌ ಬೇಡ
ಇನ್ನೆಷ್ಟು ನೀನು ಓದಲು ಸಾಧ್ಯ… ನಿನ್ನ ಸಹಪಾಠಿ ನೋಡು ಎಷ್ಟು ಓದುತ್ತಿದ್ದಾನೆ… ಇನ್ನು 2 ದಿನ ಇರುವುದು, ಇನ್ನೇನು ಓದಲು ಸಾಧ್ಯ… ಇಂತಹ ಮಾತುಗಳನ್ನು ಹೇಳಿದರೆ ಅರ್ಧ ಸೋತ ಹಾಗೆ. ಬದಲು ಧೈರ್ಯದ ಮಾತುಗಳನ್ನು ಹೇಳಿ.

ಒಂದು ಘಟನೆಯ ಉದಾಹರಣೆ
ಪ್ರತಿಭಾವಂತ ವಿದ್ಯಾರ್ಥಿನಿಯೋರ್ವಳಿಗೆ ಪರೀಕ್ಷಾ ಭಯ. ಪರೀಕ್ಷಾ ಕೊಠಡಿಗೆ ಹೋಗುತ್ತಿದ್ದಂತೆ ಆತಂಕ, ಗಾಬರಿ, ಅತಿಯಾದ ಬೆವರುವಿಕೆ, ನಿಸ್ತೇಜ ಸ್ಥಿತಿಗೆ ಬರುತ್ತಿದ್ದಳು. ಇದು ಹೆಚ್ಚಾಗಿ ನಿದ್ದೆಯಲ್ಲೂ ಬೆಚ್ಚಿ ಬೀಳಲು ಆರಂಭಿಸಿದಳು. ತಲೆನೋವು ಶುರುವಾಯಿತು. 

ಆದ್ದರಿಂದ ಹೆತ್ತವರು ವೈದ್ಯರ ನೆರವು ಪಡೆದುಕೊಳ್ಳಲು ಮುಂದಾದರು. ಈಕೆ 8 ಮತ್ತು 9ನೇ ತರಗತಿಯಲ್ಲಿ ಟಾಪರ್‌. 10ನೇ ತರಗತಿಯ ಪರೀಕ್ಷೆಗೆ ತಯಾರಿ ಮಾಡುತ್ತಿದ್ದಳು. ಈಕೆಯನ್ನು ಆಪ್ತಸಮಾಲೋಚನೆಗೆ ಒಳಪಡಿಸಿದಾಗ- ತಾನೇ ತರಗತಿಗೆ ಪ್ರಥಮ ಬರಬೇಕು ಎಂಬುದು ಮನಸ್ಸಿನಲ್ಲಿ ದಟ್ಟವಾಗಿತ್ತು. ಒಂದು ವೇಳೆ ಬಾರದೆ ಇದ್ದರೆ ತಾನು ವೇಸ್ಟ್‌ ಬಾಡಿ ಎಂದುಕೊಂಡಿದ್ದಳು. ತಂದೆ-ತಾಯಿ ಏನು ಹೇಳುತ್ತಾರೋ ಎಂಬ ಭಯವೂ ಇತ್ತು. ವಾಸ್ತವದಲ್ಲಿ ತಂದೆ-ತಾಯಿ ಇಬ್ಬರು ಆಕೆಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. 

ಕೌನ್ಸೆಲಿಂಗ್‌ನಲ್ಲಿ ಆಕೆಗೆ ಮುಂದಿನ ಅವಕಾಶಗಳನ್ನು ತಿಳಿಹೇಳಲಾಯಿತು. ಆತಂಕ ನಿವಾರಣೆಗೆ ಕೆಲವು ಔಷಧಗಳನ್ನು ನೀಡಲಾಯಿತು. ಪರಿಣಾಮವಾಗಿ ಪರೀಕ್ಷೆ ಮುಗಿಯುತ್ತಿದ್ದಂತೆ ಮತ್ತೆ ಆಕೆ ತರಗತಿಗೆ ಪ್ರಥಮ ಸ್ಥಾನ ಪಡೆದಿದ್ದಳು.

ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ತರಗತಿಯ ಟಾಪರ್ಗೂ ಪರೀಕ್ಷಾ ಸಂದರ್ಭ ಭಯ ಕಾಡುವುದಿದೆ. ಆತ್ಮವಿಶ್ವಾಸ, ಆರೋಗ್ಯಕರ ಜೀವನಶೈಲಿ, ಕಲಿಕಾ ಕ್ರಮ, ಸಹಪಾಠಿ – ಪೋಷಕರ ಪ್ರೋತ್ಸಾಹದಿಂದ ಇದನ್ನು ಗೆಲ್ಲಬಹುದು. ಸಮಸ್ಯೆ ಎದುರಾಯಿತು ಎಂದಾಗ, ಹಿಂಜರಿಕೆ ಇಲ್ಲದೆ ವೈದ್ಯರನ್ನು ಭೇಟಿಯಾಗುವುದು ಬಹಳ ಮುಖ್ಯ.
– ಡಾ| ಗಣೇಶ್‌ ಪ್ರಸಾದ್‌ ಮುದ್ರಾಜೆ, ನರರೋಗ ಮತ್ತು ಮಾನಸಿಕ ತಜ್ಞ, ಪುತ್ತೂರು

ನನಗೆ ಬಹಳ ಬೇಗನೆ ಮರೆತು ಹೋಗುತ್ತದೆ. ಇದಕ್ಕೆ ಪರಿಹಾರವೇನು?
-ಓರ್ವ ವಿದ್ಯಾರ್ಥಿ
 

ನಾನು 10ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಕಲಿಕೆಯಲ್ಲಿ ಮುಂದಿದ್ದೇನೆ. ಸಮಸ್ಯೆಯೇನೆಂದರೆ, ಕೆಲವು ಅನವಶ್ಯಕ ಆಲೋಚನೆ ನನ್ನನ್ನು ಕಾಡುತ್ತವೆ. ಋಣಾತ್ಮಕ ಆಲೋಚನೆಗಳೇ ಇದಕ್ಕೆ ಕಾರಣ. ಇದ ರಿಂದ ಹೊರಬಂದು ಕಲಿಕೆಯಲ್ಲಿ ಏಕಾಗ್ರತೆ ಸಾಧಿ ಸಲು ಏನು ಮಾಡಬೇಕು?
-ಓರ್ವ ವಿದ್ಯಾರ್ಥಿ

ಉತ್ತರ: ನಿಮ್ಮಿಬ್ಬರ ಕಿರು ವಿವರಣೆಯಿಂದ ಆತಂಕದ ಸಮಸ್ಯೆ ಇರುವಂತೆ ಭಾಸವಾಗುತ್ತದೆ. ಹತ್ತಿರದ ಮನಶಾÏಸ್ತ್ರಜ್ಞರನ್ನು ಸಂಪರ್ಕಿಸಿ ವಿವರವಾಗಿ ಸಮಾಲೋಚನೆ ನಡೆಸಿದರೆ ಪರಿಹಾರ ಒದಗಿಸಲು ಸಾಧ್ಯ. ವರ್ತನಾತ್ಮಕ ಚಿಕಿತ್ಸೆ ಇಂತಹ ಪ್ರಕರಣಗಳಲ್ಲಿ ಉತ್ತಮ ಪರಿಣಾಮ ಉಂಟು ಮಾಡುತ್ತದೆ.

ನನ್ನ ಮಗ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಚೆನ್ನಾಗಿ ಕಲಿಯುತ್ತಾನೆ, ಶ್ರಮ ಪಡುತ್ತಾನೆ. ಆದರೆ ಅಂಕ ಬರುವುದಿಲ್ಲ, ಯಾಕೆ?
-ಓರ್ವ ಹೆತ್ತವರು

ಉತ್ತರ: ಮೊದಲು ನಿಮ್ಮ ಮಗನಿಗೆ ಕಲಿಕಾ ತೊಂದರೆ ಇದೆಯೇ ಎಂಬುದನ್ನು ಮನೋವೈದ್ಯರಲ್ಲಿ ಪರೀಕ್ಷಿಸಿ ತಿಳಿದುಕೊಳ್ಳಿ. ಅಗತ್ಯವಿದ್ದಲ್ಲಿ ಬುದ್ಧಿಶಕ್ತಿ ಪರೀಕ್ಷೆ ಮಾಡಬೇಕು. ಕಲಿಕಾ ತೊಂದರೆ ಇದ್ದಲ್ಲಿ ಪರಿಹಾರ ಬೋಧನೆಯ ಮುಖಾಂತರ ಸರಿಪಡಿಸಲು ಪ್ರಯತ್ನ ಮಾಡ ಬಹುದು.

ಮರೆಯುವುದು ಎಂದರೇನು?
-ಓರ್ವ ಹೆತ್ತವರು
ಮರೆಯುವುದು ಒಂದು ಸಾಮಾನ್ಯ ಪ್ರಕ್ರಿಯೆ. ಇದು ಎಲ್ಲರಲ್ಲಿಯೂ ಆಗುತ್ತದೆ. ನಮಗೆ ಅನಗತ್ಯ ಎನ್ನುವ ವಿಷಯಗಳು ಅಥವಾ ನೋವಿನ ಸಂಗತಿಗಳು ನಮ್ಮ ಜಾಗೃತ ಸ್ಥಿತಿಯಿಂದ ಮರೆಯಾಗುತ್ತವೆ. ಸಮಸ್ಯೆಯ ಬಗ್ಗೆ ಹೆಚ್ಚು ತಿಳಿಸಿದರೆ ಸಮರ್ಪಕ ಉತ್ತರ ನೀಡಬಹುದು.
ಡಾ| ನಾಗರಾಜಮೂರ್ತಿ ಮನಶಾÏಸ್ತ್ರಜ್ಞರು, ಉಡುಪಿ

- ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next