Advertisement

ಉದ್ದಿಮೆ ಪರವಾನಿಗೆ ನವೀಕರಣ ಪಕ್ರಿಯೆ ಸರಳೀಕರಣಕ್ಕೆ ತೀರ್ಮಾನ

11:35 PM Feb 24, 2021 | Team Udayavani |

ಲಾಲ್‌ಬಾಗ್: ನಗರದಲ್ಲಿ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಕೂಡಲೇ ಸರಳೀಕರಣಗೊಳಿಸುವಂತೆ ಮೇಯರ್‌ ದಿವಾಕರ್‌ ಪಾಂಡೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಬುಧವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಕೋರಿಕೆಗೆ ಪ್ರತಿಕ್ರಿ ಯಿಸಿದ ಅವರು, ಈ ಹಿಂದಿನ ತೆರಿಗೆ ಪಾವತಿ ರಶೀದಿಯನ್ನು ಹಾಜರುಪಡಿಸಿ ಪರವಾನಿಗೆ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉದ್ದಿಮೆ ಪರವಾನಿಗೆ ನವೀಕರಣ ಸಮಸ್ಯೆ ಕುರಿತು ವಿಷಯ ಪ್ರಸ್ತಾವಿಸಿದ ಆಡಳಿತ ಪಕ್ಷದ ಸುಧೀರ್‌ ಶೆಟ್ಟಿ ಕಣ್ಣೂರು ಅವರು, “ಪಾಲಿಕೆಯ ಹಲವಾರು ಸೇವೆಗಳನ್ನು ಕಾಗದ ರಹಿತವಾಗಿ ಆನ್‌ಲೈನ್‌ ಮುಖಾಂತರ ನಡೆಸಿರುವುದು ಉತ್ತಮ ನಿರ್ಧಾರ. ಆದರೆ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆ ಆನ್‌ಲೈನ್‌ ಮಾಡಿರುವುದರಿಂದ, ಮುಖ್ಯವಾಗಿ ತೆರಿಗೆ ಪಾವತಿ ರಶೀದಿ ಮತ್ತಿತತರ ಹಲವು ದಾಖಲೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಭಾರೀ ಸಮಸ್ಯೆಯಾಗಿದೆ ಎಂದು ಹೇಳಿದರು.

ಇದಕ್ಕೆ ವಿಪಕ್ಷದ ನವೀನ್‌ ಡಿ’ಸೋಜಾ, ಆಡಳಿತ ಪಕ್ಷದ ಭಾಸ್ಕರ ಚಂದ್ರ ಶೆಟ್ಟಿ ಮತ್ತಿತರರು ಧ್ವನಿಗೂಡಿಸಿದರು. “ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಗೆ ಹಲವು ದಾಖಲೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಈ ಬಾರಿ ತುಂಬಾ ಕಡಿಮೆ ಮಂದಿ ನವೀಕರಣ ಮಾಡಿಸಿಕೊಂಡಿದ್ದಾರೆ ಎಂದು ಎ.ಸಿ.ವಿನಯ್‌ರಾಜ್‌ ಹೇಳಿದರು.

“ತೆರಿಗೆ ಪಾವತಿಯ ರಶೀದಿಯನ್ನು ನೀಡುವುದಕ್ಕೆ ನಿಗದಿತ ಸಮಾಯಾವಕಾಶ ನೀಡಿ ಉದ್ದಿಮೆ ಪರವಾನಿಗೆ ನವೀಕರಣ ಮಾಡಬೇಕು’ ಎಂದು ಪ್ರೇಮಾನಂದ ಶೆಟ್ಟಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮೇಯರ್‌ ಅವರು “ಇನ್ನು ಮುಂದೆ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಕಳೆದ ಬಾರಿಯ ತೆರಿಗೆ ಪಾವತಿಯ ರಶೀದಿ ಇದ್ದರೆ ಸಾಕು. ಮಾಲಕರು ಮತ್ತು ಬಾಡಿಗೆದಾರರ ನಡುವೆ ಗೊಂದಲಗಳಿರುವ ಪ್ರಕರಣಗಳಲ್ಲಿ ಆಯುಕ್ತರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.

Advertisement

ನೀರಿನ ದರ ಇಳಿಕೆಗೆ ಆಗ್ರಹ
ಪ್ರವೀಣ್‌ಚಂದ್ರ ಆಳ್ವ ಅವರು ಮಾತನಾಡಿ, ನೀರಿನ ಬಿಲ್‌ ಕಟ್ಟುವಾಗ ಕಣ್ಣೀರು ಬರುತ್ತಿದೆ ಎಂದು ಜನರು ದೂರುತ್ತಿದ್ದಾರೆ. ಈ ಹಿಂದೆ 24,000 ಲೀಟರ್‌ಗೆ 65 ರೂ. ಇತ್ತು. ಈಗ 8,000 ಲೀಟರ್‌ಗೆ 65 ರೂ. ನಿಗದಿ ಮಾಡಲಾಗಿದೆ. ನೀರಿನ ದರ ಕಡಿಮೆ ಮಾಡುವುದಾಗಿ ಮೇಯರ್‌ ನೀಡಿದ ಭರವಸೆ ಈಡೇರಿಲ್ಲ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು, “ನಗರಾಭಿವೃದ್ಧಿ ಇಲಾಖೆ ನೀರಿಗೆ ಕನಿಷ್ಠ ದರವನ್ನು ನಿಗದಿ ಮಾಡಿದೆ. ಅದನ್ನು ಬದಲಾಯಿಸುವುದು ಪಾಲಿಕೆಯಿಂದ ಅಸಾಧ್ಯ. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು. ಆಗ ವಿಪಕ್ಷ ನಾಯಕ್‌ ಅಬ್ದುಲ್‌ ರವೂಫ್, “ಸರಕಾರಕ್ಕೆ ಕೋರಿಕೆ ಸಲ್ಲಿಸಿ ನಾಲ್ಕು ತಿಂಗಳಾಗಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದರು. “ಸರಕಾರಕ್ಕೆ ಮನವಿ ಸಲ್ಲಿಸಿ 3 ತಿಂಗಳವರೆಗೂ ಉತ್ತರ ಬಾರದಿದ್ದರೆ ಪಾಲಿಕೆ ತನ್ನ ನಿರ್ಧಾರ ತೆಗೆದುಕೊಳ್ಳಲು ಕಾಯ್ದೆಯಲ್ಲಿ ಅವಕಾ ಶವಿದೆ. ನೀರಿನಲ್ಲಿ ಲಾಭ ಮಾಡುವುದು ಸರಿಯಲ್ಲ’ ಎಂದು ಮಾಜಿ ಮೇಯರ್‌ ಶಶಿಧರ ಹೆಗ್ಡೆ ಹೇಳಿದರು. ಈ ಬಗ್ಗೆ ಪರಿ ಶೀಲನೆ ನಡೆಸುವುದಾಗಿ ಆಯುಕ್ತರು ಹೇಳಿದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಸ್ಥಗಿತ: ಗದ್ದಲ
ಸ್ಮಾರ್ಟ್‌ಸಿಟಿ ಕಾಮಗಾರಿ ಸ್ಥಗಿತ ಗೊಂಡಿರುವ ಬಗ್ಗೆ ಸಭೆಯಲ್ಲಿ ಭಾರೀ ಚರ್ಚೆ ನಡೆದು ಗದ್ದಲ ಉಂಟಾಯಿತು. ವಿನಯ್‌ರಾಜ್‌ ಅವರು ಮಾತನಾಡಿ “ಸ್ಮಾಟ್‌ ಸಿಟಿ ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆದಿವೆ. ನಗರದ ಪ್ರಮುಖ ಭಾಗಗಳಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಕಾಮಗಾರಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳದೆ ಸಮಸ್ಯೆಯಾಗಿದೆ’ ಎಂದು ಹೇಳಿದರು. ಆಗ ಸುಧೀರ್‌ ಶೆಟ್ಟಿ ಅವರು “ಸ್ಮಾರ್ಟ್‌ ಸಿಟಿ ಕಾಮಗಾರಿಗೆ ನ್ಯಾಯಾ ಲಯದ ತಡೆಯಾಜ್ಞೆ ಇದೆ. ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರ ತಡೆಯಾಜ್ಞೆ ತೆರವಾಗುವ ನಿರೀಕ್ಷೆ ಇದೆ’ ಎಂದರು. ಈ ಸಂದರ್ಭ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆದು ಗದ್ದಲಕ್ಕೆ ಕಾರಣವಾಯಿತು. “ಸ್ಮಾರ್ಟ್‌ ಸಿಟಿ ಕಾಮಗಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ’ ಎಂದು ವಿನಯರಾಜ್‌ ಪ್ರತಿಪಾ ದಿಸಿದರು. ಆಗ ವಿಪಕ್ಷ ಸದಸ್ಯರು ಹಾಗೂ ಆಯುಕ್ತರು “ಸದಸ್ಯರು ಸದನಕ್ಕೆ ತಪ್ಪು ಮಾಹಿತಿ ನೀಡಬಾರದು’ ಎಂದರು. ನ್ಯಾಯಾಲಯದಲ್ಲಿ ಈ ಬಗ್ಗೆ ಆದೇಶ ಬರಲಿರುವುದರಿಂದ ಈ ಕುರಿತು ಹೆಚ್ಚು ಚರ್ಚೆಯ ಅಗತ್ಯವಿಲ್ಲ ಎಂದ ಮೇಯರ್‌ ಅವರು ಈ ಕುರಿತಾದ ಚರ್ಚೆಗೆ ತೆರೆ ಎಳೆದರು.

ಕೇಬಲ್‌ ಸಮಸ್ಯೆ ಮತ್ತೆ ಪ್ರಸ್ತಾವ
ಪಾಲಿಕೆ ವ್ಯಾಪ್ತಿಯಲ್ಲಿ, ಮುಖ್ಯವಾಗಿ ಗ್ರಾಮಾಂತರ ಭಾಗದ ವಾರ್ಡ್‌ಗಳಲ್ಲಿ ವಿದ್ಯುತ್‌ ಕಂಬಗಳ ನಡುವೆ ಹಾಕಲಾಗಿರುವ ವಿವಿಧ ಕಂಪೆನಿಗಳ ನೆಟ್‌ವರ್ಕ್‌ ಕೇಬಲ್‌ಗ‌ಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ನವೀನ್‌ ಡಿ’ಸೋಜಾ ಅವರು ಮತ್ತೂಮ್ಮೆ ಪ್ರಸ್ತಾವಿಸಿದರು. ಇದಕ್ಕೆ ಪ್ರವೀಣ್‌ ಆಳ್ವ, ಲ್ಯಾನ್ಸಿ ಲಾಟ್‌ ಪಿಂಟೋ, ಶಶಿಧರ ಹೆಗ್ಡೆ ಮೊದಲಾದವರು ದನಿ ಸೇರಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿಗಳು, “ಈ ಬಗ್ಗೆ ಈಗಾಗಲೇ ಮೇಯರ್‌ ಅವರು ಸೂಚನೆ ನೀಡಿದ್ದು ಅನಧಿಕೃತ ಕೇಬಲ್‌ಗ‌ಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ ಎಂದರು. ಉಪ ಮೇಯರ್‌ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್‌ ಕುಮಾರ್‌, ಪೂರ್ಣಿಮಾ, ಕಿರಣ್‌ ಕುಮಾರ್‌, ಜಗದೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ನೀರಿನ ಬಿಲ್‌ ಗೊಂದಲ: ಪ್ರತ್ಯೇಕ ಕೌಂಟರ್‌
ವಿಪರೀತ ನೀರಿನ ಬಿಲ್‌ ಬಂದಿರುವ ಪ್ರಕರಣಗಳ ಬಗ್ಗೆ ನವೀನ್‌ ಡಿ’ಸೋಜಾ ಪ್ರಸ್ತಾವಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ದಿವಾಕರ್‌ ಪಾಂಡೇಶ್ವರ್‌ ಅವರು, “ನೀರಿನ ಬಿಲ್‌ಗ‌ಳ ಗೊಂದಲ ಪರಿಹರಿಸಲು ಪ್ರತ್ಯೇಕ ಕೌಂಟರ್‌ನ್ನು ತೆರೆಯುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಮೇಯರ್‌ ದಿವಾಕರ್‌ಗೆ ಕೊನೆಯ ಸಾಮಾನ್ಯಸಭೆ
ಮೇಯರ್‌ ದಿವಾಕರ್‌ ಪಾಂಡೇಶ್ವರ್‌ ಅವರ ಮೇಯರ್‌ ಅವಧಿ ಶೀಘ್ರ ದಲ್ಲಿ ಪೂರ್ಣಗೊಳ್ಳಲಿದ್ದು ಬುಧವಾರ ನಡೆದ ಸಾಮಾನ್ಯಸಭೆ ಅವರ ಅವಧಿಯ ಕೊನೆಯ ಸಭೆಯಾಗಿತ್ತು. ಸಭೆಯಲ್ಲಿ ಮಾತನಾಡಿದ ದಿವಾಕರ್‌ ಅವರು, “ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಸಂಕಷ್ಟ ಎದುರಾಯಿತು. ಆದರೂ ನಗರದ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನ ನಡೆಸಿದ್ದೇನೆ. ಕೊರೊನಾ ಕಾಲದಲ್ಲಿ ಪಾಲಿಕೆಯಿಂದ ದಿನಸಿ, ಇತರ ಆಹಾರ ವಸ್ತು ವಿತರಿಸಲಾಗಿದೆ. ಕಾರ್ಮಿಕರು ಊರಿಗೆ ವಾಪಸಾಗಲು ಬಸ್‌ ವ್ಯವಸ್ಥೆ ಮಾಡಲಾಯಿತು. ಪಾಲಿಕೆಯನ್ನು ಜನಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಗಿದ್ದು ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇನೆ. ಪಕ್ಷಬೇಧವಿಲ್ಲದೆ ಸದಸ್ಯರ ಮನವಿಗೆ ಸ್ಪಂದಿಸಿದ್ದೇನೆ. ಎಲ್ಲರ ಸಹಕಾರ ದೊರೆತಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next