Advertisement

ಕಾಮನ್ ವೆಲ್ತ್ ಗೇಮ್ಸ್ ನ ‘ಚಿನ್ನದ ಬಾಲೆ’ ಮಣಿಕಾ ಬಾತ್ರಾ

04:15 PM Apr 18, 2018 | Harsha Rao |

ಆಕೆ ಟೇಬಲ್ ಟೆನ್ನಿಸ್ ಆಟವನ್ನು ತನ್ನ ನಾಲ್ಕನೇ ವಯಸ್ಸಿನಿಂದಲೇ ಆಡಲು ಪ್ರಾರಂಭಿಸಿದ್ದಳು, ಆಕೆಗೀಗ 22ರ ಹರೆಯ, ಈ 17-18 ವರ್ಷಗಳ ಅವಧಿಯುದ್ದಕ್ಕೂ ಆಕೆ ಕನಸು ಕಂಡಿದ್ದು ಬರೀ ಟಿ.ಟಿ. ಕುರಿತಾಗಿ. ಅದರಲ್ಲಿ ತಾನು ಯಾವ ರೀತಿಯಾಗಿ ನೈಪುಣ್ಯತೆಯನ್ನು ಸಾಧಿಸಬಹುದು ಎಂಬುದರ ಕುರಿತಾಗಿ. ಆಕೆಯ ತಪಸ್ಸಿಗೆ ತಕ್ಕ ಫಲವೆಂಬುದು ಸಿಕ್ಕಿದ್ದು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಅಂಗಳದಲ್ಲಿ!

Advertisement

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಟೇಬಲ್ ಟೆನ್ನಿಸ್ ತಂಡದ ಓರ್ವ ಸದಸ್ಯೆಯಾಗಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಗೆ ತೆರಳುವ ಮುನ್ನ ಮಣಿಕಾ ಬಾತ್ರ ಎಂಬ 22 ವರ್ಷದ ತರುಣಿ ತನ್ನ ಖಾಸಗಿ ತರಬೇತುದಾರ ಸಂದೀಪ್ ಗುಪ್ತಾ  ಅವರಿಗೆ ಕೊಟ್ಟ ಮಾತು ಹೇಗಿತ್ತು ಗೊತ್ತೇ…? “ಪಿಚ್ಲೀ ಬಾರ್ ಮೈ ಗ್ಲಾಸ್ಗೋ ಮೇ ಕ್ವಾರ್ಟರ್ ಫೈನಲ್ ಮೆ ಹಾರ್ ಗಯೀ ಥೀ ಪರ್ ಸರ್, ಇಸ್ ಬಾರ್ ಮೈ ಆಪ್ಕೋ ಮೆಡಲ್ ಜರೂರ್ ಲೇಕೆ ದೂಂಗಿ,” (ಗ್ಲಾಸ್ಗೋದಲ್ಲಿ ಈ ಹಿಂದೆ ನಾನು (ಮಹಿಳಾ ಸಿಂಗಲ್ಸ್) ಕ್ವಾರ್ಟರ್ ಫೈನಲ್ ನಲ್ಲಿ ಸೋತು ನಿಮಗೆ ನಿರಾಸೆ ಮೂಡಿಸಿದ್ದೆ, ಆದರೆ ಈ ಸಲ ಖಂಡಿತಾ ಪದಕ ಗೆದ್ದು ಬರುತ್ತೇನೆ,”. ಹೀಗೆ ಪದಕದ ಭರವಸೆ ನೀಡಿ ಗೋಲ್ಡ್ ಕೋಸ್ಟ್ ಗೆ ಹಾರಿಬಂದಿದ್ದ ಬಾತ್ರಾ ಕ್ರೀಡಾಕೂಟದ ಅಂತ್ಯದಲ್ಲಿ ತನ್ನ ಕೊರಳಿಗೆ ಏರಿಸಿಕೊಂಡಿದ್ದು 4 ಪದಕಗಳನ್ನು! ಮತ್ತು ಈ ಸಾಧನೆಯ ನಡುವೆ ಆಕೆ ಬರೋಬ್ಬರಿ ಎರಡು ಬಾರಿ ಇತಿಹಾಸವನ್ನೂ ಸೃಷ್ಟಿಸಿಬಿಟ್ಟಿದ್ದಳು!

ಮಹಿಳೆಯರ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಪ್ರಥಮ ಭಾರತೀಯಳೆಂಬ ಹೆಗ್ಗಳಿಕೆ ಈಕೆಯದಾಯಿತು. ಒಟ್ಟಿನಲ್ಲಿ ಬಾತ್ರ ತಾನು ಸ್ಪರ್ಧಿಸಿದ್ದ ಒಟ್ಟು 4 ವಿಭಾಗಗಳಲ್ಲಿ ನಾಲ್ಕರಲ್ಲಿಯೂ ಪದಕವನ್ನು ಗೆಲ್ಲುವ ಮೂಲಕ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾದರು. ಇವುಗಳಲ್ಲಿ 2 ಚಿನ್ನ 1 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿದೆ. ಮಾತ್ರವಲ್ಲದೆ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಸಿಂಗಾಪೂರ ಆಟಗಾರ್ತಿಯರ ಪಾರಮ್ಯವನ್ನು ಮುರಿಯುವಲ್ಲಿಯೂ ಬಾತ್ರಾ ನೇತೃತ್ವದ ಮಹಿಳಾ ತಂಡದ ಚಿನ್ನದ ಸಾಧನೆ ಗಮನಾರ್ಹವೇ ಸರಿ. ಈ ಯುವತಿಯ ಇನ್ನೊಂದು ಸಾಧನೆಯೆಂದರೆ ವಿಶ್ವದ 4ನೇ ಶ್ರೇಯಾಂಕಿತ ಫೆಂಗ್ ತೈನ್ವಾಯ್ ಅವರನ್ನು ಮಹಿಳೆಯರ ಡಬಲ್ಸ್ ನಲ್ಲಿ ಹಾಗೂ ಮಿಕ್ಸೆಡ್ ಡಬಲ್ಸ್ ನಲ್ಲಿ ಮಣಿಸುವ ಮೂಲಕ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಸಾಧನೆಯನ್ನೂ ಮೆರೆದರು.

ಬಾತ್ರಾ ಅವರ ಈ ಸಾಧನೆಯ ಹಿಂದೆ ಆಕೆಯ ತರಬೇತುದಾರ ಗುಪ್ತಾ ಅವರ ಅಪಾರ ಶ್ರಮವಿದೆ. ಟಿ.ಟಿ. ಆಟವೆನ್ನುವುದು ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಬಲವನ್ನು ಬಯಸುವ ಆಟವಾಗಿದ್ದು, ಬಾತ್ರ ಗೋಲ್ಡ್ ಕೋಸ್ಟ್ ಗೆ ತೆರಳುವುದಕ್ಕೂ ಮುಂಚಿತವಾಗಿ ಗುಪ್ತಾ ಆಕೆಯನ್ನು ಮಾನಸಿಕವಾಗಿ ಸಾಕಷ್ಟು ಗಟ್ಟಿಗೊಳಿಸಿದ್ದರು. ‘ಇಲ್ಲಿ ನೀನು ಕಳೆದುಕೊಳ್ಳುವುದು ಏನೂ ಇಲ್ಲ, ನೀನು ಕಲಿತಿರುವ ಆಟವನ್ನು ಆತ್ಮವಿಶ್ವಾಸದಿಂದ ಆಡು ; ನಿನ್ನ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಬೇಕಾದರೆ ಮುಂದಿನ ಪಾಯಿಂಟ್ ಕುರಿತಷ್ಟೇ ಯೋಚಿಸು…’ ಎಂಬ ಮಾತುಗಳನ್ನಾಡಿ ಬಾತ್ರ ಅವರನ್ನು ಗುಪ್ತಾ ಮಾನಸಿಕವಾಗಿ ಗಟ್ಟಿಗೊಳಿಸಿದ್ದರು. ಇದೆಲ್ಲದರ ಫಲಿತಾಂಶ ಇವತ್ತು ದೇಶದ ಮುಂದಿದೆ.

Advertisement

ಕಳೆದ ಬಾರಿಯ ಒಲಂಪಿಕ್ಸ್ ಕೂಟದ ಸಂದರ್ಭದಲ್ಲಿ ಪಿ.ವಿ.ಸಿಂಧು ಅವರ ಕೋಚ್ ಗೋಪಿಚಂದ್ ಅವರು ಫೈನಲ್ ಮ್ಯಾಚ್ ಮುಗಿಯುವವರೆಗೆ ಸಿಂಧು ಅವರನ್ನು ಬಾಹ್ಯ ಜಗತ್ತಿನ ಸಂಪರ್ಕದಿಂದ ಪ್ರತ್ಯೇಕವಾಗಿರಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ. ಅದೇ ತಂತ್ರವನ್ನು ಬಾತ್ರಾ ಅವರ ಕೋಚ್ ಸಹ ಈ ಬಾರಿ ಅನುಸರಿಸಿದ್ದರು. ಮತ್ತು ಬಾತ್ರಾ ಅವರನ್ನು ಕೂಟದುದ್ದಕ್ಕೂ ಉತ್ತೇಜಿಸಲು ತನ್ನ ಸಲಹೆ, ಸಂದೇಶಗಳನ್ನು (ಗುಪ್ತಾ ಆಸ್ಟ್ರೇಲಿಯಾಗೆ ತೆರಳಿರಲಿಲ್ಲ) ಆಕೆಯ ಸಹ ಆಟಗಾರ ಆಂಥೋಣಿ ಅಮಲ್ ರಾಜ್ ಮತ್ತು ಭಾರತೀಯ ಟಿ.ಟಿ. ಫೆಡರೇಶನ್ ಕಾರ್ಯದರ್ಶಿ ಎಂ.ಪಿ.ಸಿಂಗ್ ಅವರ ಮೂಲಕ ಆಗಾಗ ರವಾನಿಸುತ್ತಿದ್ದರು!

ಕ್ರಿಕೆಟ್ ಸರ್ವವ್ಯಾಪಿಯಾಗಿರುವ ಈ ದೇಶದಲ್ಲಿ ಟಿ.ಟಿ.ಯಂತಹ ಅಷ್ಟೇನೂ ಜನಪ್ರಿಯವಲ್ಲದ ಆಟದಲ್ಲಿ ಮಹೋನ್ನತ ಸಾಧನೆ ಮೆರೆಯುತ್ತಿರುವ ಮಣಿಕಾ ಬಾತ್ರಾ ಶಾಂತ ಸ್ವಭಾವ, ಸಹನಾ ಶಕ್ತಿಯ ಮೂಲಕ ನಿಜವಾದ ಸ್ತ್ರೀ ಶಕ್ತಿಯ ತಾಕತ್ತನ್ನು ದೂರದ ಗೋಲ್ಡ್ ಕೋಸ್ಟ್ ಅಂಗಳದಲ್ಲಿ ಪ್ರಕಟಗೊಳಿಸಿದ್ದಾರೆ. ಆ ಮೂಲಕ ಸಮಸ್ತ ಭಾರತೀಯ ಸ್ತ್ರೀ ಸಮೂಹಕ್ಕೆ ನೀಡಿರುವುದು ಒಂದೇ ಸಂದೇಶವನ್ನು, ಅದೇನೆಂದರೆ – “ಮಣಿಕಾಳಿಗೆ ಇದು ಸಾಧ್ಯವಾಗುತ್ತದೆಂದರೆ ; ನನಗೂ ಸಾಧ್ಯ..!!” ಈ ಸ್ಪೂರ್ತಿಗಾಥೆಯಿಂದ ಮುಂಬರುವ ದಿನಗಳಲ್ಲಿ ಒಲಂಪಿಕ್ಸ್ ಸಹಿತ ವಿಶ್ವಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾರತೀಯ ಮಹಿಳಾ ಮಣಿಗಳು ಇನ್ನಷ್ಟು ಪದಕಗಳನ್ನು ಗೆಲ್ಲುವಂತಾಗಲಿ…

– ಹರಿಪ್ರಸಾದ್ ನೆಲ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next