Advertisement

“ವಿಮಾ ಜಿಲ್ಲೆ’ಯಾಗಿ ಘೋಷಿಸಲು ಸಹಕಾರ ಕೊಡಿ

01:57 AM Dec 23, 2021 | Team Udayavani |

ಮಂಗಳೂರು: ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ದಕ್ಷಿಣ ಕನ್ನಡವನ್ನು ಶೇಕಡಾ ನೂರರಷ್ಟು “ವಿಮಾ ಜಿಲ್ಲೆ’ ಎಂದು ಘೋಷಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕಾರ್ಯೋನ್ಮುಖವಾಗ ಬೇಕು ಎಂದು ದ.ಕ. ಜಿ. ಪಂ. ಸಿಇಒ ಡಾ| ಕುಮಾರ್‌ ಸೂಚನೆ ನೀಡಿದ್ದಾರೆ.

Advertisement

ಜಿ. ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಲೀಡ್‌ ಬ್ಯಾಂಕ್‌ ವತಿಯಿಂದ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ (ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ), ಪಿಎಂಎಸ್‌ಬಿವೈ (ಪ್ರಧಾನ ಮಂತ್ರಿ ಸುರಕ್ಷಾÒ ಬಿಮಾ ಯೋಜನೆ) ಹಾಗೂ ಎಪಿವೈ (ಅಟಲ್‌ ಪಿಂಚಣಿ ಯೋಜನೆ) ಗಳಿಗೆ ಕೆಲವು ಬ್ಯಾಂಕ್‌ಗಳು ಆದ್ಯತೆ ನೀಡಿಲ್ಲ. ಈ ಯೋಜನೆಗಳ ಬಗ್ಗೆ ಮಾಹಿತಿ ಯನ್ನು ಜನತೆಗೆ ತಲುಪಿಸದಿದ್ದರೆ, ಜನತೆ ಬ್ಯಾಂಕಿನಿಂದ ದೂರವಾಗಬಹುದು.

ಆರ್‌ಬಿಐ ಕೂಡ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಶೇ.100 ಗುರಿ ಸಾಧಿಸುವಂತೆ ಸೂಚನೆ ನೀಡಿದೆ. ಬ್ಯಾಂಕ್‌ ಮೆನೇಜರ್‌ಗಳು ಈ ಬಗ್ಗೆ ಗಮನ ಹರಿಸಿ ಗ್ರಾಮೀಣ ಜನತೆಗೆ ಈ ಯೋಜನೆಗಳು ತಲುಪುವಂತೆ ಮಾಡಬೇಕೆಂದರು.

ಜನರನ್ನು ಅಲೆದಾಡಿಸ ಬೇಡಿ:
ಕ್ಲೇಮ್‌ಗಳ ವಿಚಾರದಲ್ಲಿ ಸಾಕಷ್ಟು ದೂರುಗಳು ಬಂದಿದ್ದು, ಬ್ಯಾಂಕ್‌ಗಳು ಈ ಬಗ್ಗೆ ಎಚ್ಚರ ವಹಿಸಬೇಕು. ವಿನಾಃ ಕಾರಣ ಜನತೆಯನ್ನು ಸತಾಯಿಸದೆ, ಗ್ರಾಹಕ ಸ್ನೇಹಿಯಾಗಿ ಬ್ಯಾಂಕ್‌ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗ ಮಹಿಳೆಯರಿಗೆ ಕನಿಷ್ಠ 10 ಲಕ್ಷ ರೂ.ಗಳಿಂದ ಗರಿಷ್ಠ 1 ಕೋಟಿ ರೂ. ವರೆಗೆ ಉದ್ಯೋಗಕ್ಕೆ ನೀಡುವ ಸಾಲ ಯೋಜನೆಗೆ ಯಾವುದೇ ಅಡ್ಡಿಪಡಿಸದೆ ತ್ವರಿತವಾಗಿ ಸಾಲ ನೀಡಬೇಕು. ಇದನ್ನು ಸ್ಟಾಂಡ್‌ ಅಪ್‌ ಇಂಡಿಯಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕೆಂದರು.

Advertisement

ಎಂಎಸ್‌ಎಂಇ (ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮ)ಯೋಜನೆಯಡಿ ಗರಿಷ್ಠ 2 ಕೋಟಿ ರೂ. ವರೆಗೆ ಸಾಲ ಸೌಲಭ್ಯಕ್ಕೆ ಅವಕಾಶ ಇದೆ. ಗ್ರಾಹಕರಿಗೆ ಈ ಯೋಜನೆ ಯಲ್ಲಿ ಸಾಲ ನೀಡುವಲ್ಲಿ ಒತ್ತಡ ಹಾಕುವಂತಿಲ್ಲ ಎಂದರು.

ಇದನ್ನೂ ಓದಿ:ಆನ್‌ಲೈನ್‌ ಗೇಮ್‌ ನಿಷೇಧ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಬ್ಯಾಂಕ್‌ ಸೌಲಭ್ಯಗಳ ಮಾಹಿತಿ ಕೊಡಿ
ಕೃಷಿ, ಶಿಕ್ಷಣ ಹಾಗೂ ಗೃಹ ನಿರ್ಮಾಣ ವಿಭಾಗಗಳಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ವಿಭಾಗಗಳಲ್ಲಿ ಸಾಲ ನೀಡಿಕೆ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಕೃಷಿಯಲ್ಲಿ ಶೇ.35.27, ಶಿಕ್ಷಣದಲ್ಲಿ ಶೇ.35.40 ಹಾಗೂ ಗೃಹ ಸಾಲದಲ್ಲಿ ಶೇ.22.34 ಮಾತ್ರ ನಿರ್ವಹಣೆ ಇದೆ. ಕನಿಷ್ಠ ಗುರಿಯನ್ನೂ ಸಾಧಿಸದ ಬ್ಯಾಂಕ್‌ಗಳ
ಅಧಿಕಾರಿಗಳು, ಗ್ರಾಮೀಣ ಭಾಗಗಳಿಗೆ ತೆರಳಿ ಬ್ಯಾಂಕಿಂಗ್‌ ಸೌಲಭ್ಯಗಳ ಬಗ್ಗೆ ಜನತೆಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕೆಂದರು.

ಆರ್‌ಬಿಐ ಎಜಿಎಂ ಟಿ.ಆರ್‌. ಆಚಾರ್ಯ, ನಬಾರ್ಡ್‌ ಅಭಿವೃದ್ಧಿ ಅಧಿಕಾರಿ ಸಂಗೀತ ಕಾರ್ತ್‌, ಕೆನರಾ ಬ್ಯಾಂಕ್‌ ಜಿಎಂ ಶ್ರೀಕಾಂತ್‌, ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌ ಉಪಸ್ಥಿತರಿದ್ದರು.

88,100.12 ಕೋಟಿ ರೂ. ವ್ಯವಹಾರ
ಸೆಪ್ಟಂಬರ್‌ ಅಂತ್ಯದವರೆಗಿನ ತ್ತೈಮಾಸಿಕ ಅವಧಿಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 88,100.12 ಕೋಟಿ ರೂ. ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 9.32ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಲೀಡ್‌ ಬ್ಯಾಂಕ್‌ ಮೆನೇಜರ್‌ ಪ್ರವೀಣ್‌ ತಿಳಿಸಿದರು.

ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ಠೇವಣಿ 54,600.93 ಕೋಟಿ ರೂ. (ವಾರ್ಷಿಕ ಶೇ. 7.07ರಷ್ಟು ವೃದ್ಧಿ) ಮತ್ತು ಒಟ್ಟು ಸಾಲ 33,499.10 ಕೋಟಿ ರೂ. (ಶೇ.13.18 ವೃದ್ಧಿ) ಇತ್ತು. ಸಾಲದ ಅನುಪಾತ ಶೇ.61.35 ಆಗಿದ್ದು, ಹಿಂದಿನ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.3.31ರಷ್ಟು ವೃದ್ಧಿಸಿದೆ. 2021-22ರ ಮೊದಲ ಅರ್ಧ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು 11,352.75 ಕೋಟಿ ರೂ. ಸಾಲ ವಿತರಿಸಲಾಗಿದ್ದು, ವಾರ್ಷಿಕ ಗುರಿ 19,335 ಕೋಟಿ ರೂ. ಆಗಿದ್ದು, ಶೇ.58.72 ಪ್ರಗತಿ ಸಾಧಿಸಿದಂತಾಗಿದೆ.

ಸಭೆಗೆ ಗೈರು: ಖಾತೆ ವಾಪಸ್‌ ಎಚ್ಚರಿಕೆ
ಪ್ರತಿ ಬಾರಿಯೂ ಲೀಡ್‌ ಬ್ಯಾಂಕ್‌ ಸಭೆಗೆ ಗೈರಾಗುತ್ತಿರುವ ಐಸಿಐಸಿಐ ಬ್ಯಾಂಕ್‌ ಅಧಿಕಾರಿಗೆ ನೋಟಿಸ್‌ ನೀಡುವಂತೆ ತಿಳಿಸಿದ ಜಿ.ಪಂ. ಸಿಇಒ ಡಾ| ಕುಮಾರ್‌, ಇದೇ ಪರಿಪಾಠ ಮುಂದುವರಿದರೆ ಬ್ಯಾಂಕಿನಲ್ಲಿ ಇರುವ ಸರಕಾರದ ಖಾತೆಯನ್ನು ಹಿಂಪಡೆಯುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.

ಐಸಿಐಸಿಐ ಬ್ಯಾಂಕಿನ ಅಧಿಕಾರಿಗಳು ಯಾವುದೇ ಸಭೆಗಳಿಗೆ ಹಾಜರಾಗುತ್ತಿಲ್ಲ. ಜಿಲ್ಲಾಡಳಿತದ ಸಭೆಗಳಿಗೂ ಬರುತ್ತಿಲ್ಲ ಎಂದು ಲೀಡ್‌ ಬ್ಯಾಂಕ್‌ ಮೆನೇಜರ್‌ ಪ್ರವೀಣ್‌ ತಿಳಿಸಿದಾಗ,ಅಸಮಾಧಾನಗೊಂಡ ಸಿಇಒ ಡಾ| ಕುಮಾರ್‌,ವಿನಾಃ ಕಾರಣ ಗೈರಾಗುತ್ತಿರುವುದು ಹಾಗೂ ಆರ್‌ಬಿಐ ನಿಯಮ ಉಲ್ಲಂ ಸುತ್ತಿರುವ ಬ್ಯಾಂಕ್‌ಗಳಿಗೆ ನೋಟಿಸ್‌ ಜಾರಿಗೊಳಿಸಿ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next