Advertisement

ಇಂದಿರಾ ಕ್ಯಾಂಟೀನ್‌ ಮುಚ್ಚುವ ಸ್ಥಿತಿ ನಿರ್ಮಾಣ

01:06 AM Aug 28, 2019 | Lakshmi GovindaRaj |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಈ ತಿಂಗಳ ಅಂತ್ಯದ ಒಳಗೆ ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಅನುದಾನ ನೀಡದಿದ್ದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಹೇಳಿದರು. ಮಂಗಳವಾರ ಪಾಲಿಕೆಯ ಮಾಸಿಕ ಸಭೆಯಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಮತ್ತು ನಗರದಲ್ಲಿನ ರಸ್ತೆಗುಂಡಿಗಳ ಬಗ್ಗೆ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ವಿಷಯ ಪ್ರಸ್ತಾವನೆ ಮಾಡಿದರು.

Advertisement

ಇಂದಿರಾ ಕ್ಯಾಂಟೀನ್‌ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರ ಅನುದಾನ ನೀಡಬೇಕಾಗಿತ್ತು. ಈಗ ಈ ಯೋಜನೆಯನ್ನು ಮುಂದುವರಿಸಲು ಬಿಬಿಎಂಪಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಮೂಲಕ ಅನುದಾನ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕೆಂದರು. ಮಾಜಿ ಮೇಯರ್‌ ಸಂಪತ್‌ ರಾಜ್‌ ಮಾತನಾಡಿ, ಇಂದಿರಾ ಕ್ಯಾಂಟೀನ್‌ ಯೋಜನೆ ನಿಲ್ಲಿಸುವುದು ಅಥವಾ ಹೆಸರು ಬದಲಿಸುವುದು ಬೇಡ. ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳ ಹೆಸರನ್ನು ಬದಲಾಯಿಸಿಲ್ಲ ಎಂದರು.

ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ಮಾಡುವ ಬಗ್ಗೆ ಚರ್ಚೆಯೇ ನಡೆದಿಲ್ಲ. ಇಂದಿರಾ ಕ್ಯಾಂಟೀನ್‌ ಸರ್ಕಾರದ ಯೋಜನೆ, ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಬಿಬಿಎಂಪಿ ಅನುದಾನ ನೀಡಬೇಕಾಗಿತ್ತು. ಆದರೆ, ಅನುದಾನವನ್ನೇ ಮೀಸಲಿರಿಸಿಲ್ಲ. ಇದರಲ್ಲಿ ಆಯುಕ್ತ ಮಂಜುನಾಥ ಪ್ರಸಾದ್‌ ಸಹ ತಪ್ಪು ಮಾಡಿದ್ದಾರೆ. ಮೀಸಲಿರಿಸದೇ ಇರುವ ಕಾರಣ ಹೇಗೆ ಗುತ್ತಿಗೆದಾರರಿಗೆ ಹಣ ನೀಡುವುದು ಎಂದು ಪ್ರಶ್ನಿಸಿದರು.

ಬೋಗಸ್‌ ಬಿಲ್‌ಗ‌ಳ ಬಗ್ಗೆ ತನಿಖೆ ಮಾಡುವಂತೆ ಸಿಎಂ ಆದೇಶ ಮಾಡಿದ್ದಾರೆ. ಈ ಹಿಂದಿನ ಸರ್ಕಾರ ಯೋಜನೆಗೆ ಅನುದಾನ ನೀಡಬೇಕಾಗಿತ್ತು. ಈಗ ಹೊಸ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬೇಡವೆಂದರು. ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಬಿಬಿಎಂಪಿ ವ್ಯಾಪ್ತಿಯಲ್ಲಿ 173 ಸ್ಥಿರ ಇಂದಿರಾ ಕ್ಯಾಂಟೀನ್‌ ಮತ್ತು 18 ಮೊಬೈಲ್‌ ಕ್ಯಾಂಟೀನ್‌ಗಳಿವೆ. 2017-18ರಲ್ಲಿ 4.6 ಕೋಟಿ, 2018-19ರಲ್ಲಿ 7.70 ಕೋಟಿ ಹಾಗೂ 2019 -20ರಲ್ಲಿ 2.70 ಕೋಟಿ ಜನ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸಿದ್ದಾರೆ. ರಾಜ್ಯ ಸರ್ಕಾರ 2017-18ರಲ್ಲಿ ಯೋಜನೆ ಅನುಷ್ಠಾನಕ್ಕೆ 100 ಕೋಟಿ ರೂ. ನೀಡಿತ್ತು.

ಆದರೆ, ಅನುಷ್ಠಾನದ ಸಮಯದಲ್ಲಿ ಬಿಬಿಎಂಪಿ 24.37ಕೋಟಿ ರೂ. ಹೆಚ್ಚುವರಿ ವ್ಯಯಿಸಿದೆ. ಇಂದಿರಾ ಕ್ಯಾಂಟೀನ್‌ಯೋಜನೆಗೆ 2018-19ರಲ್ಲಿ ಸರ್ಕಾರ 115 ಕೋಟಿ ರೂ. ಬಿಡುಗಡೆ ಮಾಡಿತ್ತಾದರೂ, 145 ಕೋಟಿ ರೂ. ವೆಚ್ಚವಾಗಿದೆ. ಅಂದರೆ ಉಳಿದ 21.67 ಕೋಟಿ ರೂ ಬಿಬಿಎಂಪಿಯೇ ಭರಿಸಿತ್ತು. ಜನವರಿಯಲ್ಲಿ ಮೈತ್ರಿ ಸರ್ಕಾರಕ್ಕೆ 210 ಕೋಟಿ ರೂ. ಅನುದಾನ ಮೀಸಲಿರಿಸಲು ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಲಿಲ್ಲ.

Advertisement

ಸರ್ಕಾರಕ್ಕೆ ಪತ್ರ ಬರೆದು ಪೂರಕ ಬಜೆಟ್‌ನಲ್ಲಾದರೂ,ಅನುದಾನ ಮೀಸಲಿರಿಸುವಂತೆ ಮನವಿ ಮಾಡಲಾಗಿತ್ತು ಎಂದು ವಿವರಿಸಿದರು. ಈಗ ಹೊಸ ಸರ್ಕಾರ ಮತ್ತು ಬಿಬಿಎಂಪಿ ಎರಡರಲ್ಲೂ ಅನುದಾನ ಮೀಸಲಿಡದೆ ಇರುವುದು ಇಂದಿರಾ ಕ್ಯಾಂಟೀನ್‌ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಏನು ಮಾಡಬೇಕು ಎಂದು ಪಾಲಿಕೆ ಸದಸ್ಯರೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಬಿಬಿಎಂಪಿಗೆ ಮತ್ತೂಂದು ಹೊರೆ?: ಈ ಹಿಂದಿನ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಕಳೆದ ಒಂದು ವರ್ಷದಿಂದ ಒಂದು ರೂ. ಸಹ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲ, 2017 ಮತ್ತು 2018ನೇ ಸಾಲಿನ ಹಣವನ್ನು ಸಹ ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಇದು ಮತ್ತೂಂದು ಹೊರೆಯಾಗಿದೆ.

ಬಿಬಿಎಂಪಿ 2019-20 ನೇ ಸಾಲಿನಲ್ಲಿ ಕ್ಯಾಂಟೀನ್‌ ನಿರ್ವಹಣೆಗೆ 152 ಕೋಟಿ ರೂ. ಅಂದಾಜು ಮಾಡುವುದರ ಜತೆಗೆ ಈ ಹಿಂದಿನ ವರ್ಷದಲ್ಲಿ ಹೆಚ್ಚುವರಿಯಾಗಿ ವೆಚ್ಚ ಮಾಡಿದ 58 ಕೋಟಿ ರೂ. ಸೇರಿಸಿ, ಒಟ್ಟು 210 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿತ್ತು. 2019-20ನೇ ಸಾಲಿನಲ್ಲಿ ಬಿಬಿಎಂಪಿ ಗುತ್ತಿಗೆದಾರರಿಗೆ ಜೂನ್‌ವರೆಗೆ 26 ಕೋಟಿ ರೂ. ಬಿಲ್‌ ಪಾವತಿ ಮಾಡಿದ್ದು, ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರಿಗೆ ಬಿಲ್‌ ಪಾವತಿಗೆ ಬಿಬಿಎಂಪಿ ಬೇರೆ ಬೇರೆ ಯೋಜನೆಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ.

ಯಶಸ್ವಿಯಾಗಿರುವ ಯಾವುದೇ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ನಿಲ್ಲಿಸಿದರೂ, ಬಿಬಿಎಂಪಿ ಮೂಲಕ ಮುಂದುವರಿಸಲಾಗುವುದು.
-ಗಂಗಾಂಬಿಕೆ, ಮೇಯರ್‌

ಬಿಬಿಎಂಪಿಯಲ್ಲಿ ಈಗ ಯಾವುದೇ ವಿಶೇಷ ಅನುದಾನ ಇಲ್ಲ. ಆಸ್ತಿ ತೆರಿಗೆ ಹಣ ಸಂಗ್ರಹಿಸುವಲ್ಲೂ ಆಡಳಿತ ಪಕ್ಷ ವಿಫ‌ಲವಾಗಿದೆ. ಈಗ ಉಳಿದಿರುವುದು ಮೇಯರ್‌ ನಿಧಿ ಮಾತ್ರ ಇದನ್ನು ಬೇಕಾದರೆ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಬಳಸಿಕೊಳ್ಳಲಿ ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ.
-ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next