Advertisement

ಮುಚ್ಚಿದ ಶಾಲೆ; ತೆರೆವ ಗ್ರಂಥಾಲಯ!

06:00 AM Oct 11, 2018 | Team Udayavani |

ಗದಗ: ಗ್ರಾಮೀಣ ಭಾಗದಲ್ಲಿ ಹಲವು ದಶಕಗಳಿಂದ ಶಿಥಲಗೊಂಡ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಸಂಖ್ಯೆಯ ಗ್ರಾಪಂ ಗ್ರಂಥಾಲಯಗಳಿಗೆ ಇದೀಗ ಸ್ಥಳಾಂತರದ ಭಾಗ್ಯ ಒಲಿದು ಬಂದಿದೆ. ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿರುವ ಶಾಲಾ ಕೊಠಡಿಗಳಿಗೆ ಗ್ರಂಥಾಲಯಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಉಭಯ ಇಲಾಖೆಗಳು ಮುಂದಾಗಿವೆ.

Advertisement

ಒಂದು ರಾಜ್ಯ ಕೇಂದ್ರ ಗ್ರಂಥಾಲಯ, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 26 ನಗರ ಕೇಂದ್ರ ಗ್ರಂಥಾಲಯಗಳು, 490 ಶಾಖಾ ಗ್ರಂಥಾಲಯಗಳು, 5766 ಗ್ರಾಪಂ ಗ್ರಂಥಾಲಯಗಳು, 15 ಸಂಚಾರಿ ಗ್ರಂಥಾಲಯಗಳು ಸೇರಿದಂತೆ ಒಟ್ಟು 6,328 ಗ್ರಂಥಾಲಯಗಳಿದ್ದು, ಆ ಪೈಕಿ ಗ್ರಂಥಪಾಲಕರು, ಗ್ರಂಥಾಲಯ ಸಹಾಯಕರು, ಮತ್ತಿತರೆ ಹುದ್ದೆಗಳಲ್ಲಿ 1,451 ಕಾಯಂ ಸಿಬ್ಬಂದಿ ಮತ್ತು ಗೌರವ ಸಂಭಾವನೆಯಡಿ 5,766 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯಗಳಿಗೆ ಹತ್ತಾರು ಸಾವಿರ ರೂ. ಮೌಲ್ಯದ ಪುಸ್ತಕಗಳು, ವೃತ್ತ ಪತ್ರಿಕೆಗಳು, ಕುರ್ಚಿ, ಮೇಜು ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ, ಸುಸಜ್ಜಿತ ಕಟ್ಟಡ ಒದಗಿಸುವಷ್ಟು ಆರ್ಥಿಕವಾಗಿ ಇಲಾಖೆ ಸದೃಢವಾಗಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಅದೆಷ್ಟೋ ಗ್ರಂಥಾಲಯಗಳು ಇಂದೋ, ನಾಳೆಯೋ ನೆಲಕ್ಕುರುಳುವ ಸ್ಥಿತಿಯಲ್ಲೇ ಜ್ಞಾನ ಪಸರಿಸುತ್ತಿವೆ.

16,000 ಕೊಠಡಿಗಳು ಖಾಲಿ:
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಕೊರತೆಯಿಂದ ನೂರಾರು ಶಾಲೆಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲ ಶಾಲೆಗಳಲ್ಲಿ ಖಾಲಿ ಉಳಿದಿರುವ ಕೊಠಡಿಗಳ ಸದ್ಬಳಕೆಗೆ ಇಲಾಖೆಗಳು ಮುಂದಾಗಿವೆ. ಶಾಲೆಗಳಲ್ಲಿ ಸುಸ್ಥಿತಿಯಲ್ಲಿರುವ 16,000 ಕೊಠಡಿಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲಿ ಶಿಥಿಲಗೊಂಡಿರುವ, ಬಾಡಿಗೆ ಅಥವಾ ಇನ್ಯಾವುದೋ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಪಂ ಗ್ರಂಥಾಲಯಗಳ ಸ್ಥಳಾಂತರಿಸುವ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ.

ಮಕ್ಕಳ ಜ್ಞಾನಾರ್ಜನೆಗೆ ಒತ್ತು:
ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸುವುದರಿಂದ ಬಹುಪಯೋಗಿಯಾಗಲಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮಸ್ಯೆಯಿಂದ ಮುಕ್ತಿಗೊಳಿಸುವುದರೊಂದಿಗೆ ಸರ್ಕಾರಿ ಶಾಲಾ ಮಕ್ಕಳ ಜ್ಞಾನಾರ್ಜನೆಗೆ ಒತ್ತು ನೀಡಿದಂತಾಗುತ್ತದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಜೋರಾಗಿ ಓದುವುದರಿಂದ ಗ್ರಂಥಾಲಯ ವಾಚಕರಿಗೆ ಸಮಸ್ಯೆಯಾಗಬಹುದು ಎನ್ನುತ್ತಾರೆ ಗದಗ ಬಿಇಒ ಎಂ.ಎ.ರಡ್ಡಿ.

Advertisement

ಇದು ಗ್ರಂಥಾಲಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿ ರಜನೀಶ್‌ ಗೋಯಲ್‌ ಅವರ ಚಿಂತನೆ. ಖಾಲಿ ಇರುವ ಶಾಲಾ ಕೊಠಡಿಗಳಿಗೆ ಗ್ರಂಥಾಲಯಗಳನ್ನು ಸ್ಥಳಾಂತರಿಸುವುದರಿಂದ ಜನರು ಮತ್ತು ಅಲ್ಲಿನ ಮಕ್ಕಳಿಗೆ ಅನುಕೂಲವಾಗುತ್ತದೆ. ಒಂದು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ 105 ಗ್ರಾಪಂ ಗ್ರಂಥಾಲಯಗಳನ್ನು ಸ್ಥಳಾಂತಿಸಲಾಗುತ್ತದೆ. ಶಿಕ್ಷಣ ಇಲಾಖೆಯೊಂದಿಗೆ ಕಟ್ಟಡಗಳ ಹಸ್ತಾಂತರ ಪ್ರಕ್ರಿಯೆ ಆರಂಭಿಸಲಾಗಿದೆ.
– ವೆಂಕಟೇಶ್ವರಿ, ಗದಗ ಜಿಲ್ಲಾ ಗ್ರಂಥಾಲಯ ಅಧಿಕಾರಿ

– ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next