Advertisement

ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನಕ್ಕೆ ತೆರೆ

06:36 AM Jan 28, 2019 | Team Udayavani |

ಬೆಂಗಳೂರು: ಗಣರಾಜೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ 209ನೇ ಫ‌ಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿತ್ತು. ಮಹಾತ್ಮ ಗಾಂಧೀಜಿಯವರಿಗೆ ಸಮರ್ಪಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಭಾನುವಾರ 70,000ಕ್ಕೂ ಹೆಚ್ಚು ಮಂದಿ ಸೇರಿದಂತೆ 10 ದಿನ ಪ್ರದರ್ಶನವನ್ನು 4 ಲಕ್ಷ ಮಂದಿ ಕಣ್ತುಂಬಿಕೊಂಡಿದ್ದು, 1.5 ಕೋಟಿ ರೂ. ಸಂಗ್ರಹವಾಗಿದೆ.

Advertisement

ಭಾನುವಾರ ಕೊನೆಯ ದಿನವಾದ ಹಿನ್ನೆಲೆ ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಪುಷ್ಪ ಸೊಬಗನ್ನು ಸವಿದರು. ಉದ್ಯಾನದ ಗಾಜಿನ ಮನೆಯ ಸುತ್ತ ಮುತ್ತ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೂ ಜನಜಂಗುಳಿ ಕಂಡುಬಂತು.

ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಲಾಲ್‌ಬಾಗ್‌ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ನಾಲ್ಕು ಪ್ರವೇಶ ದ್ವಾರಗಳ ಮುಂಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಜೆ ಪ್ರದರ್ಶನ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಸಾವಿರಾರು ಮಂದಿ ಒಮ್ಮೆಗೆ ಹೊರಗೆ ಬಂದಿದ್ದರಿಂದ ಆ ಸಂದರ್ಭದಲ್ಲಿ ಕೆಲಕಾಲ ದಟ್ಟಣೆ ಉಂಟಾಗಿತ್ತು. ಕೆ.ಎಚ್‌.ರಸ್ತೆ, ಲಾಲ್‌ಬಾಗ್‌ ಮುಖ್ಯದ್ವಾರ ಹಾಗೂ ಪಶ್ವಿ‌ಮ ದ್ವಾರದ ಬಳಿಯೂ ದಟ್ಟಣೆ ಕಂಡುಬಂತು.

ಒಂದೂವರೆ ಕೋಟಿ ಸಂಗ್ರಹ: ಕೊನೆಯ ದಿನವಾದ ಭಾನುವಾರ 78,150 ಮಂದಿ ಭೇಟಿ ನೀಡಿದ್ದರು. ಈ ಪೈಕಿ 55,500 ವಯಸ್ಕರು ಮತ್ತು 22,650 ಮಂದಿ ಮಕ್ಕಳು ಆಗಮಿಸಿದ್ದು, ಒಟ್ಟು 29.22 ಲಕ್ಷ ಹಣ ಸಂಗ್ರಹವಾಗಿದೆ. ಜ.18 ರಿಂದ 27ರವರೆಗೆ ಒಟ್ಟಾರೆ 4.02 ಲಕ್ಷಕ್ಕೂ ಅಧಿಕ ಮಂದಿ (2.64 ಲಕ್ಷ ಮಂದಿ ವಯಸ್ಕರು, 1.38 ಲಕ್ಷಕ್ಕೂ ಹೆಚ್ಚು ಮಕ್ಕಳು) ಭೇಟಿ ನೀಡಿದ್ದು, 1.55 ಕೋಟಿ ಹಣ ಸಂಗ್ರಹವಾಗಿದೆ. ಈ ಬಾರಿಯ ಪ್ರದರ್ಶನಕ್ಕೆ ಒಟ್ಟಾರೆ 1.8 ಕೋಟಿ. ರೂ. ವೆಚ್ಚವಾಗಿದೆ ಎಂದು ಲಾಲ್‌ಬಾಗ್‌ ಉದ್ಯಾನ ಉಪನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು. 

ಗಣ್ಯರ ಭೇಟಿ: ಕೊನೆಯ ದಿನದ ಪ್ರದರ್ಶನಕ್ಕೆ ರಾಷ್ಟ್ರೀಯ ಗಾಂಧಿ ಸ್ಮಾರಕ ಅಧ್ಯಕ್ಷ ಅಣ್ಣಾಮಲೈ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಭೇಟಿ ನೀಡಿದ್ದರು. ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿದ ಅಣ್ಣಾಮಲೈ, ಈ ಬಾರಿಯ ಫ‌ಲಪುಷ್ಪ ಪ್ರದರ್ಶನ ಗಾಂಧೀಜಿಗೆ ಅರ್ಹ ಸಮರ್ಪಣೆಯಾಗಿದೆ. ನಾನು ಕೂಡಾ ದೇಶಾದ್ಯಂತ ಓಡಾಡಿದ್ದೇನೆೆ. ಆದರೆ, ಗಾಂಧಿಯನ್ನು ನೆನಪಿಸುವ ಇಂತಹ ಪುಷ್ಪ ನಮನ ಕಂಡಿಲ್ಲ. ವ್ಯವಸ್ಥಿತ ಹಾಗೂ ಆಕರ್ಷಕ ಪ್ರದರ್ಶನಕ್ಕೆ ಕರ್ನಾಟಕ ಜನತೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Advertisement

ರಾಷ್ಟ್ರೀಯ ಗಾಂಧಿ ಮ್ಯೂಸಿಯಂನಿಂದ ಗಾಂಧೀಜಿಯವರಿಗೆ ಸಂಬಂಧಿಸಿದ ವಸ್ತುಗಳನ್ನು ವಿಶ್ವದಾದ್ಯಂತ ಸಾಕಷ್ಟು ಜನರಿಗೆ ನೀಡಲಾಗಿದೆ. ಆದರೆ, ಇಲ್ಲಿ ಅವುಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಇಲ್ಲಿರುವ ಕಲಾಕೃತಿಗಳಲ್ಲಿ ಸಬರಮತಿ ಆಶ್ರಮ ಹಾಗೂ ಸೇವಾ ಗ್ರಾಮ ಆಶ್ರಮ ಮಾದರಿ ಕಲಾಕೃತಿಗಳು ನಿಜಕ್ಕೂ ಉತ್ತಮವಾಗಿದ್ದು, ಒಟ್ಟಾರೆ, ಈ ಫ‌ಲಪುಷ್ಪ ಪ್ರದರ್ಶನವು ಗಾಂಧಿ ಕುರಿತಾದ ಶಿಕ್ಷಣವನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾ ಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮಾತನಾಡಿ, ಈ ಬಾರಿಯ ಪ್ರದರ್ಶನದ ಕಲಾಕೃತಿಗಳು, ಗಾಂಧೀಜಿ ಸಂದೇಶಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ಸಹಕಾರಿಯಾಗಿವೆ. ಲಕ್ಷಾಂತರ ಜನರಿಗೆ ಗಾಂಧೀಜಿ ಬದುಕನ್ನು ಹೂಗಳ ಮೂಲಕ ತೆರೆದಿಡುವ ಕೆಲಸ ಮಾಡಿರುವುದಕ್ಕೆ ತೋಟಗಾರಿಕೆ ಇಲಾಖೆಗೆ ಅಭಿನಂದನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next