Advertisement

ಲಾಲ್‌ಬಾಗ್‌-ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಶ್ರಮದಾನ

11:02 AM May 14, 2018 | |

ಮಹಾನಗರ : ನಾಲ್ಕನೇ ವರ್ಷದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಮೂವತ್ತನೇ ಶ್ರಮದಾನವನ್ನು ರವಿವಾರ ನಗರದ ಲಾಲ್‌ ಭಾಗ್‌-ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಡೆಸಲಾಯಿತು. ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಮುಂಭಾಗದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಲಾಯಿತು.

Advertisement

ಸ್ವಾಮಿ ಜಿತಕಾಮಾನಂದಜಿ ಸಮ್ಮುಖದಲ್ಲಿ, ಕೊಯಮತ್ತೂರು ರಾಮಕೃಷ್ಣ ಮಿಷನ್ನಿನ ಸ್ವಾಮಿ ಸೂರ್ಯಾತ್ಮಾನಂದಜಿ ಹಾಗೂ ಪತ್ರಕರ್ತೆ ರೇವತಿ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್‌ ಕಾರ್ಣಿಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜಯ ಪ್ರಭು, ಉಪನ್ಯಾಸಕಿ ಸ್ಮಿತಾ ಶೆಣೈ, ಇಮ್ತಿಯಾಜ್‌ ಶೇಖ್‌, ಡಾ| ರಾಜೇಂದ್ರ ಪ್ರಸಾದ್‌, ಸುದಿನಿ ಬೋರ್ಕರ್‌ ಉಪಸ್ಥಿತರಿದ್ದರು.

ಸ್ವಚ್ಛತೆ
ಕಾರ್ಯಕರ್ತರು ನಾಲ್ಕು ತಂಡಗಳಾಗಿ ವಿಂಗಡಿಸಿಕೊಂಡು ಮುಖ್ಯವಾಗಿ ಎಂ.ಜಿ. ರಸ್ತೆಯಲ್ಲಿ ಸ್ವಚ್ಛತೆಯ ಕಾರ್ಯ ಹಮ್ಮಿಕೊಂಡರು. ಮೆಹಬೂಬ್‌ ಖಾನ್‌ ಹಾಗೂ ಕಾರ್ಯಕರ್ತರ ತಂಡ ಮನಪಾ ಎದುರಿನಿಂದ ಮಂಗಳಾ ಸ್ಟೇಡಿಯಂವರೆಗಿನ ಫ‌ುಟ್‌ಪಾತ್‌ ಹಾಗೂ ರಸ್ತೆಯನ್ನು ಗುಡಿಸಿ ಸ್ವಚ್ಛಗೊಳಿಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿನಿಯರು ಡಾ| ಪುರುಷೋತ್ತಮ್‌ ಚಿಪ್ಪಾಲ್‌ ಮಾರ್ಗದರ್ಶನದಲ್ಲಿ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದಿಂದ ಲೇಡಿಹಿಲ್‌ನತ್ತ ಸಾಗುವ ಮಾರ್ಗವನ್ನು ಹಾಗೂ ಕಾಲುದಾರಿ ಯನ್ನು ಸ್ವತ್ಛಗೊಳಿಸಿದರು. ಜಯರಾಜ್‌ ಜಿ.ಎನ್‌. ಹಾಗೂ ಸ್ವಯಂ ಸೇವಕರು ಲಾಲ್‌ಬಾಗ್‌ 5ನೇ ಅಡ್ಡರಸ್ತೆಯಲ್ಲಿ ಫ‌ುಟ್‌ ಪಾತ್‌ನಲ್ಲಿ ಬಿದ್ದುಕೊಂಡಿದ್ದ ನಿರುಪಯುಕ್ತ ದೊಡ್ಡ ದೊಡ್ಡ ಸಿಮೆಂಟ್‌ ಸ್ಲಾಬ್‌ಗಳನ್ನು ಜೇಸಿಬಿ ಸಹಾಯದಿಂದ ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ವೃತ್ತದ ದುರಸ್ತಿ
ಮಹಾನಗರ ಪಾಲಿಕೆಯ ಮುಂಭಾಗದ ಮಹಾತ್ಮಾ ಗಾಂಧೀಜಿ ಪ್ರತಿಮೆಯುಳ್ಳ ವೃತ್ತಕ್ಕೆ ವಾಹನ ತಾಗಿದ ಪರಿಣಾಮ ವೃತ್ತಕ್ಕೆ ಹಾನಿಯಾಗಿತ್ತು. ಸ್ವಚ್ಛ ಮಂಗಳೂರು ಕಾರ್ಯಕರ್ತರು ಇಂದು ಅದನ್ನು ಗಾರೆಯವರ ಸಹಾಯದಿಂದ ಕಟ್ಟಿಸಿ ಪ್ಲಾಸ್ಟರಿಂಗ್‌ ಮಾಡಿಸಿದರು. ಅಭಿಯಾನದ ಪ್ರಧಾನ ಸಂಯೋಜಕ ದಿಲ್‌ರಾಜ್‌ ಆಳ್ವ ಹಾಗೂ ಸ್ವಯಂ ಸೇವಕರು ತ್ರಿಕೋನಾ ಕೃತಿಯುಳ್ಳ ಆ ಸ್ಥಳಗಳೆರಡನ್ನೂ ಸ್ವಚ್ಛಗೊಳಿಸಿ, ಪ್ರತಿಮೆಯನ್ನೂ ನೀರಿನಿಂದ ತೊಳೆದು ಶುಚಿಗೊಳಿಸಿದರು. ಅನಂತರ ಆ ಎರಡೂ ಸ್ಥಳಗಳಲ್ಲಿ ಹೂಗಿಡಗಳನ್ನು ಜೊತೆಗೆ ಹೂಬಳ್ಳಿಗಳನ್ನೂ ನೆಟ್ಟು ಅಂದಗೊಳಿಸಲು ಪ್ರಯತ್ನಿಸಿದರು.

ಸಂಕಲ್ಪ
ಹಿರಿಯ ಕಾರ್ಯಕರ್ತ ಅಶೋಕ್‌ ಸುಬ್ಬಯ್ಯ ಜತೆಗೂಡಿ ಸ್ವಯಂ ಸೇವಕರು ಲಾಲಬಾಗ್‌ ಪರಿಸರ ವಿಶೇಷವಾಗಿ ಮಂಗಳಾ ಸ್ಟೇಡಿಯಂ ಮುಂಭಾಗದ ಮನೆಗಳಿಗೆ ತೆರಳಿ ಸಂಕಲ್ಪ ಕರಪತ್ರ ವಿತರಿಸಿದರು. ಮನೆಯ ಮುಂಭಾಗ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ, ಅಚ್ಚುಕಟ್ಟಾಗಿಡುವಂತೆ ವಿನಂತಿಸಿದರು.

Advertisement

ಮಂಗಳೂರು ನಗರ ಬಿಜೆಪಿ ಅಧ್ಯಕ್ಷ ವೇದವ್ಯಾಸ್‌ ಕಾಮತ್‌, ಕುಶಿರಾಜ್‌ ಕೊಟ್ಟಾರಿ, ಕವಿತಾ ಪುರೋಹಿತ್‌, ಜಯಶ್ರೀ ಕುಳಾಯಿ, ಕಾವ್ಯಶ್ರೀ ಉಮಾಕಾಂತ್‌, ಅವಿನಾಶ್‌ ಅಂಚನ್‌ ಸಹಿತ ಅನೇಕ ಸ್ವಯಂಸೇವಕರು ಅಭಿಯಾನದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.

ಎಂಆರ್‌ಪಿಎಲ್‌ ಪ್ರಾಯೋಜಕತ್ವ
ಉಮಾನಾಥ್‌ ಕೋಟೆಕಾರ್‌ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿದ್ದರು. ಅಭಿಯಾನದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಅಭಿಯಾನಕ್ಕೆ ಎಂಆರ್‌ಪಿಎಲ್‌ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ ಎಂದು ಸ್ವಾಮಿ ಏಕಗಮ್ಯಾನಂದಜಿ ಅವರು ತಿಳಿಸಿದರು.

ಪ್ರಯಾಣಿಕರ ತಂಗುದಾಣಗಳ ಸ್ವಚ್ಛತೆ 
ಲಾಲ್‌ಬಾಗ್‌ನಲ್ಲಿರುವ ಮೂರು ಬಸ್‌ ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು. ಮೊದಲಿಗೆ ಸ್ವಾಮೀಜಿಗಳು, ಡಾ| ಶಶಿಧರ ಹಾಗೂ ಸ್ವಯಂ ಸೇವಕರು ಸಾಯಿಬಿನ್‌ ಮುಂಭಾಗದ ಬಸ್‌ ಶೆಲ್ಟರನ್ನು ಗುಡಿಸಿ ಸ್ವಚ್ಛಗೊಳಿಸಿದರು. ಅನಂತರ ಸುಜಿತ್‌ ಪ್ರತಾಪ್‌, ಆನಂದ ಅಡ್ಯಾರ ಮತ್ತಿತರರು ಸೇರಿಕೊಂಡು ಲಾಲ್‌ಬಾಗ್‌ನಲ್ಲಿರುವ ಜೋಡಿ ಬಸ್‌ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ಅಂಟಿಸಿದ್ದ ಜಾಹೀರಾತು ಪೋಸ್ಟರ್‌ ತೆಗೆದು ಕಂಬಗಳಿಗೆ ಸಿಲ್ವರ್‌ ಬಣ್ಣ ಹಚ್ಚಿ ಅಂದಗೊಳಿಸಿದರು. 

ಮಾರ್ಗಸೂಚಿ ಫಲಕಗಳ ನವೀಕರಣ
ಎಂಜಿ ರಸ್ತೆಯಿಂದ ಲೇಡಿಹಿಲ್‌ಗೆ ಸಾಗುವ ಮುಖ್ಯರಸ್ತೆಯಲ್ಲಿ ಕಾಣಸಿಗುವ ಆಫೀಸರ್ಸ್‌ ಕ್ಲಬ್‌, ಲೇಡಿಹಿಲ್‌ 5ನೇ ಅಡ್ಡರಸ್ತೆಯಲ್ಲಿರುವ ಫಲಕಗಳ ಬಣ್ಣ ಮಾಸಿಹೋಗಿ ಕಪ್ಪಾಗಿದ್ದವು. ಸ್ವಚ್ಛತಾ ಅಭಿಯಾನದ ಭಾಗವಾಗಿ ಈ ವಾರ ಅವುಗಳನ್ನು ನೀರಿನಿಂದ ತೊಳೆದು ಶುಚಿಮಾಡಿ, ಹಳದಿ ಬಣ್ಣ ಹಚ್ಚಲಾಯಿತು. ಅನಂತರ ದೇವಿ ಆರ್ಟ್ಸ್ ಕಲಾವಿದ ಕರ್ಣ ಅವರು ಸುಂದರ ಅಕ್ಷರಗಳಿಂದ
ಅವುಗಳ ಹೆಸರುಗಳನ್ನು ಬರೆದು ಅಂದಗೊಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next