Advertisement

ಅವಳಿ ನಗರದಲ್ಲಿ ಮೂರು ತಿಂಗಳು ಸ್ವಚ್ಛತಾ ಅಭಿಯಾನ 

04:45 PM Oct 28, 2018 | Team Udayavani |

ಹುಬ್ಬಳ್ಳಿ: ಮಹಾನಗರದ ಸ್ವಚ್ಛತೆಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದು, ನ. 1ರಿಂದ ಮೂರು ತಿಂಗಳ ಕಾಲ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಶನಿವಾರ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಪಾಲಿಕೆಯ ಹಿರಿಯ ಅಧಿಕಾರಿಗಳು, ವಲಯ ಆಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಕುರಿತು ನಿರ್ಧರಿಸಿದರು.

Advertisement

ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್‌, ನಗರದ ಸ್ವಚ್ಛತೆ ಕುರಿತು ಪಾಲಿಕೆಯ ವಲಯ ಅಧಿಕಾರಿಗಳು, ಎಂಜಿನಿಯರ್‌ ಗಳು, ಆರೋಗ್ಯ ನಿರೀಕ್ಷಕರ ಪಾತ್ರ ಮಹತ್ವದ್ದಾಗಿದೆ. ಸ್ವಚ್ಛತಾ ಅಭಿಯಾನವನ್ನು ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಪ್ರತಿ ವಾರ್ಡ್‌ಗಳಲ್ಲೂ ಆರಂಭಿಸಬೇಕು. ಎಲ್ಲಾ ರಸ್ತೆಗಳನ್ನು ಸಮೀಕ್ಷೆ ಮಾಡಿ ಗುಂಡಿಗಳನ್ನು ಮುಚ್ಚಬೇಕು ಹಾಗೂ ಕಸವನ್ನು ತೆಗೆಯಬೇಕು. ಈ ಕಾರ್ಯಕ್ರಮಕ್ಕೆ ಎನ್‌ಜಿಒ, ವಿದ್ಯಾರ್ಥಿಗಳ ಸಹಭಾಗಿತ್ವ ಮುಖ್ಯವಾಗಿದೆ ಎಂದು ಹೇಳಿದರು.

ಪ್ರತಿದಿನ ಆರೋಗ್ಯ ನಿರೀಕ್ಷಕರು ತಮ್ಮ ವ್ಯಾಪ್ತಿಗೆ ಬರುವ ರಸ್ತೆಗಳನ್ನು ಸ್ವತ್ಛಗೊಳಿಸಿ ಅವುಗಳ ಛಾಯಾಚಿತ್ರವನ್ನು ಬೆಳಗ್ಗೆ ಹಾಗೂ ಸಂಜೆ ಕಂಟ್ರೋಲ್‌ ರೂಮ್‌ಗೆ ಕಳುಹಿಸಬೇಕು. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವ್ಯಾಪಾರಿಗಳ ಪರವಾನಗಿ ರದ್ದುಗೊಳಿಸಿ, ಹಲವು ಬಾರಿ ತಪ್ಪುಗಳನ್ನು ಕೈಗೊಳ್ಳುವರ ಮೇಲೆ ಪ್ರಕರಣಗಳನ್ನು ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ಹಾಗೂ ಸುಳ್ಳು ಮಾಹಿತಿ ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ದೀಪಾ ಎಚ್ಚರಿಸಿದರು. ಪಾಲಿಕೆಯ ಅಪರ ಆಯುಕ್ತ ಅಜೀಜ್‌ ದೇಸಾಯಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ್‌ ಇನ್ನಿತರರಿದ್ದರು.

ಅಧಿಕಾರಿ, ಸಿಬ್ಬಂದಿ ಹಾಜರಿ ಕಡ್ಡಾಯ
ನ. 1ರಿಂದ ಆರಂಭವಾಗುವ ಸ್ವಚ್ಛತಾ ಅಭಿಯಾನ ಮೂರು ತಿಂಗಳು ನಡೆಯಲಿದ್ದು, ಈ ಅಭಿಯಾನದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿ ಕಡ್ಡಾಯವಾಗಿದೆ. ಕೂಡಲೇ ಅಧಿಕಾರಿಗಳು ಎಲ್ಲಾ ಮುಖ್ಯ ಹಾಗೂ ಒಳರಸ್ತೆಗಳನ್ನು ಗುರುತಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಅಭಿಯಾನದಿಂದ ದೂರ ಉಳಿಯುವಂತಿಲ್ಲ. 
 ದೀಪಾ ಚೋಳನ್‌ ಜಿಲ್ಲಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next