Advertisement

ಕ್ಲಾಸ್‌ ಬಾತ್‌! ಮಿಡಲ್‌ ಕ್ಲಾಸ್‌ ಮತ್ತು ರಿಚ್‌ ಕ್ಲಾಸ್‌

08:31 PM Feb 16, 2020 | Sriram |

ಮಧ್ಯಮ ವರ್ಗದ ಮಂದಿಗೂ ಶ್ರೀಮಂತರಿಗೂ ನಡುವಿನ ವ್ಯತ್ಯಾಸ ಕೇವಲ ಹಣವಷ್ಟೇ ಅಲ್ಲ. ಹಣದ ಕುರಿತಾಗಿ ಎರಡೂ ವರ್ಗದವರ ಆಲೋಚನೆಗಳೂ ಭಿನ್ನವಾಗಿವೆ. ಎಷ್ಟೊಂದು ಭಿನ್ನವೆನ್ನುವುದು ಮುಂದೆ ಓದಿದರೆ ನಿಮಗೇ ತಿಳಿಯುತ್ತದೆ…

Advertisement

ಮಿಡಲ್‌ ಕ್ಲಾಸ್‌
1. ಆರಾಮದಾಯಕ ಬದುಕು
ಜೀವನದ ಭದ್ರತೆಗೆ ಹೆಚ್ಚು ಒತ್ತು ನೀಡುತ್ತಾರೆ. ಸೇಫ್ ಮತ್ತು ಆರಾಮ ಎನಿಸುವ ಆಯ್ಕೆಗಳನ್ನೇ ಆರಿಸಿಕೊಳ್ಳುತ್ತಾರೆ.
2. ಲೆವೆಲ್‌ ಮೀರುತ್ತಾರೆ
ಮನೆ ಇರಲಿ, ವಾಹನವಿರಲಿ, ಜೀವನಶೈಲಿಯೇ ಇರಲಿ, ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಹೆಚ್ಚು ಐಷಾರಾಮವನ್ನು ಬಯಸುತ್ತಾರೆ. ಹಾಸಿಗೆಯಿಂದಾಚೆಗೂ ಕಾಲು ಚಾಚುತ್ತಾರೆ.
3. ವೃತ್ತಿಯನ್ನು ಬದುಕಿನ ಏಣಿ ಎಂದು ತಿಳಿಯುತ್ತಾರೆ
ಯಾವಾಗಲೂ ಉದ್ಯೋಗವನ್ನು ಅರಸುತ್ತಾರೆ. ತಮ್ಮ ಕೆಲಸವೇ ತಮ್ಮನ್ನು ಕಾಪಾಡುತ್ತದೆ ಎಂದು ತಿಳಿಯುತ್ತಾರೆ. ಹೀಗಾಗಿ, ಜೀವನ ಪರ್ಯಂತ ನೌಕರರಾಗಿಯೇ ಇದ್ದುಬಿಡುತ್ತಾರೆ.
4. ಸಂಬಳ ಮುಖ್ಯ
ಯಾವುದೇ ಕೆಲಸವಾದರೂ ಹೆಚ್ಚಿನ ಸಂಬಳಕ್ಕೆ ಆದ್ಯತೆ ನೀಡುತ್ತಾರೆ. ಅದಕ್ಕಾಗಿ ಸಂಸ್ಥೆಯಿಂದ ಸಂಸ್ಥೆಗೆ ಹಾರುತ್ತಿರುತ್ತಾರೆ.
5. ಇವರ ಬಳಿ ವಸ್ತುಗಳಿರುತ್ತವೆ
ಇವರ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಒಂದಿಲ್ಲೊಂದು ವಸ್ತುಗಳ ಮೇಲೆ ಖರ್ಚು ಮಾಡುತ್ತಿರುತ್ತಾರೆ. ದುಡ್ಡು ಕೈಗೆ ಬರುವ ಮೊದಲೇ ಅದನ್ನು ಖರ್ಚು ಮಾಡುವುದು ಹೇಗೆ ಎಂಬುದು ನಿಶ್ಚಯವಾಗಿರುತ್ತದೆ.
6. ಉಳಿತಾಯಕ್ಕೆ ಆದ್ಯತೆ
ಉಳಿತಾಯ ಮಾಡುವುದು ಖರ್ಚು ಮಾಡಲೇ ಆದರೂ ಸಿಕ್ಕಿದ್ದರಲ್ಲಿ ಆದಷ್ಟೂ ಉಳಿತಾಯ ಮಾಡುವ ಅಭ್ಯಾಸವಿರುತ್ತದೆ. ಹೀಗಾಗಿ ತಮಗೆ ತಾವೇ ಹಲವು ಮಿತಿಗಳನ್ನು ಹಾಕಿಕೊಳ್ಳುತ್ತಾರೆ.
7. ದುಡ್ಡಿನ ಜೊತೆ ಎಮೋಷನ್‌
ಉಳಿತಾಯ ಮತ್ತಿತರ ಅಭ್ಯಾಸಗಳಿಂದಾಗಿ ಹಣದ ಜೊತೆ ಭಾವನಾತ್ಮಕ ನಂಟು ಹೊಂದಿರುತ್ತಾರೆ. ಹೀಗಾಗಿ ಅವರ ಪ್ರತಿಯೊಂದು ಖರ್ಚು ಕೂಡಾ ಒಂದಿಲ್ಲೊಂದು ಭಾವನೆಗಳ ಜೊತೆ ಬೆಸೆದುಕೊಂಡಿರುತ್ತದೆ. ಹೀಗಾಗಿ ಅವರ ನಿರ್ಧಾರಗಳು ಯಶಸ್ಸು ಕಾಣದೇ ಇರುವ ಸಾಧ್ಯತೆ ಹೆಚ್ಚು.
8. ಅಂಡರ್‌ ಎಸ್ಟಿಮೇಟ್‌ ಗುಣ
ತಮ್ಮನ್ನು ತಾವು ಅಂಡರ್‌ ಎಸ್ಟಿಮೇಟ್‌ ಮಾಡುತ್ತಾರೆ. ಹೀಗಾಗಿ ಹೊಸ ಅವಕಾಶಗಳು ಬಂದಾಗ ಇಲ್ಲವೇ ಗುರಿಯನ್ನು ಹಾಕಿಕೊಳ್ಳುವ ಸಂದರ್ಭಗಳಲ್ಲಿ ತಮ್ಮ ಪೂರ್ಣ ಸಾಮರ್ಥ್ಯವನ್ನು ಕಡೆಗಣಿಸಿ ಚಿಕ್ಕ ಗುರಿಗೇ ತೃಪ್ತಿ ಪಟ್ಟುಕೊಳ್ಳುತ್ತಾರೆ.

ರಿಚ್‌ ಕ್ಲಾಸ್‌
1. ಸವಾಲುಗಳ ಬದುಕು
ಸವಾಲುಗಳನ್ನು ಇಷ್ಟಪಡುತ್ತಾರೆ. ಕಂಫ‌ರ್ಟ್‌ ಝೋನ್‌ನಿಂದ ಹೊರಬರಲು ತುಡಿಯುತ್ತಿರುತ್ತಾರೆ. ಸೋಲುಗಳಿಗೆ ಅಂಜುವುದಿಲ್ಲ.
2. ಲೆವೆಲ್‌ ಮೀರುವುದಿಲ್ಲ
ತಮ್ಮ ಸಾಮರ್ಥ್ಯಕ್ಕಿಂತ ಕಡಿಮೆ ಖರ್ಚು ಮಾಡುತ್ತಾರೆ. ಖರ್ಚು ಮಾಡಿದರೂ ಅದು ಹೂಡಿಕೆಯ ರೂಪದಲ್ಲಿರುತ್ತದೆ. ಅಂದರೆ, ಅದರಿಂದ ಹಣ ಬೆಳೆಯುವಂತಿರುತ್ತದೆ. ದೊಡ್ಡ ದೊಡ್ಡ ಬಂಗಲೆ, ಸೂಪರ್‌ ಫಾಸ್ಟ್‌ ಕಾರುಗಳಿಗೆ ಸಾಮಾನ್ಯವಾಗಿ ಹಣ ವ್ಯಯ ಮಾಡುವುದಿಲ್ಲ.
3. ಏಣಿಯನ್ನೇ ಖರೀದಿಸುತ್ತಾರೆ.
ಉದ್ಯೋಗ ಮಾಡಲು ಇಷ್ಟ ಪಡುವುದಿಲ್ಲ. ಬದಲಾಗಿ, ಉದ್ಯೋಗ ನೀಡಲು ಇಷ್ಟಪಡುತ್ತಾರೆ! ಸಂಸ್ಥೆಗಳನ್ನು ಪ್ರಾರಂಭಿಸಿ ತಮಗಾಗಿ ಕೆಲಸ ಮಾಡಲು ನೌಕರರನ್ನು ನೇಮಿಸಿಕೊಳ್ಳುತ್ತಾರೆ.
4. ಕಲಿಕೆ ಮುಖ್ಯ
ಹೊಸ ಹೊಸ ವಿಷಯ, ವಿದ್ಯೆಗಳನ್ನು ಕಲಿಯುವ ತವಕವಿರುತ್ತದೆ. ಸಂಬಳ ನಂತರದ ಮಾತು. ಏಕೆಂದರೆ ಸಂಬಳ ತಾತ್ಕಾಲಿಕವಾದುದು, ಕಲಿಕೆ ಶಾಶ್ವತವಾದುದು ಎಂದವರ ನಂಬಿಕೆ. ಅಲ್ಲದೆ ದೀರ್ಘ‌ಕಾಲದಲ್ಲಿ ಕಲಿಕೆ ಅವರ ಕೈ ಹಿಡಿಯುತ್ತದೆ ಎಂದವರಿಗೆ ತಿಳಿದಿರುತ್ತದೆ.
5. ಇವರ ಬಳಿ ದುಡ್ಡಿರುತ್ತದೆ
ಇವರು ವಸ್ತುಗಳನ್ನು ಖರೀದಿಸುವುದು ವಿರಳ. ಹೀಗಾಗಿ ಖರ್ಚು ಕಡಿಮೆ. ಇದರಿಂದಾಗಿ ಇವರ ಬಳಿ ತುಂಬಾ ದುಡ್ಡಿರುತ್ತದೆ.
6. ಗಮನವೆಲ್ಲಾ ಸಂಪಾದನೆಯ ಮೇಲೆ
ಖರ್ಚು ಕಡಿಮೆ ಮಾಡುವುದರಿಂದ ಉಳಿತಾಯ, ಸಹಜವಾಗಿ ತನ್ನಷ್ಟಕ್ಕೆ ತಾನೇ ಆಗುತ್ತದೆ. ಅಲ್ಲದೆ ಇವರು ಹೆಚ್ಚು ಹಣ ಸಂಪಾದನೆಯತ್ತ ಲಕ್ಷ್ಯವಹಿಸುತ್ತಾರೆ. ಸಂಪಾದನೆಯ ಜೊತೆಗೆ ಹೂಡಿಕೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.
7. ದುಡ್ಡಿನ ಜೊತೆ ನಂಟಿರುವುದಿಲ್ಲ
ದುಡ್ಡನ್ನು ತರ್ಕಬದ್ಧವಾಗಿ ಖರ್ಚು ಮಾಡುತ್ತಾರೆ, ತರ್ಕಬದ್ಧವಾಗಿ ಹೂಡುತ್ತಾರೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಅವರ ನಿರ್ಧಾರಗಳು ಉತ್ತಮ ಫ‌ಲಿತಾಂಶ ನೀಡುತ್ತವೆ.
8. ದೊಡ್ಡ ಗುರಿ ಹಾಕಿಕೊಳ್ಳುತ್ತಾರೆ
ಜೀವನದಲ್ಲಿ ತಮ್ಮಿಂದ ಆಗುತ್ತದೆಯೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಗುರಿಗಳನ್ನು ಹಾಕಿಕೊಳ್ಳುವುದಿಲ್ಲ. ದೊಡ್ಡ ಗುರಿಗಳಿಂದ ವಿಮುಖರಾಗದೆ ಅದನ್ನು ಸಾಧಿಸಲು ಮುನ್ನುಗ್ಗುತ್ತಾರೆ. ಸೋಲು ಉಂಟಾದರೂ ಅದರಿಂದ ಪಾಠ ಕಲಿಯುತ್ತಾರೆ, ವಿನಾ ಹಿಂಜರಿಯುವುದಿಲ್ಲ.

-ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next