Advertisement

ಮಸೀದಿಗಳಲ್ಲಿ ಧ್ವನಿವರ್ಧಕ ಶಬ್ದ ಕಡಿತ ಮಾಡಿ : ಪೊಲೀಸ್ ಆಯುಕ್ತ ಕಮಲ್‌ ಪಂತ್‌ ಸೂಚನೆ

03:52 PM Feb 20, 2022 | Team Udayavani |

ಬೆಂಗಳೂರು:  “ಆಜಾನ್‌’ ಕೂಗುವ ವೇಳೆ ಮಸೀದಿಯಲ್ಲಿ ಧ್ವನಿವರ್ಧಕಗಳ ಶಬ್ದ ನಿಗದಿತ ಡೆಸಿಬಲ್‌ಗಿಂತ ಜೋರಾಗಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶ್ರೀರಾಮ್‌ ಎಂಬುವವರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ದೂರು ನೀಡಿದ್ದಾರೆ. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಶನಿವಾರ ಹಮ್ಮಿಕೊಂಡಿದ್ದ “ಟ್ವಿಟರ್‌ ಲೈವ್‌’ನಲ್ಲಿ ನಾಗರಿಕರು, ಹತ್ತಾರು ದೂರುಗಳನ್ನು ನೀಡಿದ್ದು ಹಿಜಾಬ್‌ ಪ್ರಕರಣ, ಹೆಲ್ಮೆಟ್‌ ಕಡ್ಡಾಯ, ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ
ಆಯುಕ್ತರು ಮುಕ್ತವಾಗಿ ಚರ್ಚಿಸಿದರು.

Advertisement

ಈ ವೇಳೆ ಶ್ರೀರಾಮ್‌ ಎಂಬುವವರು, ನಮ್ಮ ಮನೆ ಬಳಿ ಇರುವ ಮಸೀದಿಯಲ್ಲಿ ಅಜಾನ್‌ ಕೂಗುವ ಶಬ್ದದ ಪ್ರಮಾಣ ಕಡಿಮೆ ಮಾಡಿಸುವಂತೆ ಹಲವಾರು ಬಾರಿ ಮಲ್ಲೇಶ್ವರ ಪೊಲೀಸ್‌ ಠಾಣೆಗೆ ಕರೆ ಮಾಡಿ ದೂರು ನೀಡಲಾಗಿದೆ. ದೂರು ನೀಡಿದ 2 ದಿನಗಳು ಮಾತ್ರ ಅಜಾನ್‌ ಶಬ್ದ ಕಡಿಮೆ ಇರುತ್ತದೆ. ಮತ್ತೆ ಅದೇ ಶಬ್ದ ಶುರುವಾಗುತ್ತದೆ. ಇದರಿಂದ ಮನೆಯಲ್ಲಿ ಇರಲು ಕಿರಿಕಿರಿ ಎನಿಸುತ್ತಿದೆ ಎಂದು ದೂರು ನೀಡಿದರು. ಮಂದಿರ, ಮಸೀದಿಗಳಲ್ಲಿ ಧ್ವನಿವರ್ಧಕಗಳ ಶಬ್ದದ ಡೆಸಿಬಲ್‌ ಕಡಿಮೆ ಮಾಡುವಂತೆ ನೋಟಿಸ್‌ ನೀಡಲಾಗಿದೆ. ಇಷ್ಟಾದರೂ ಶಬ್ದ ಕಡಿಮೆ ಮಾಡದಿರುವುದು ಕಂಡು ಬಂದರೆ ಅಂಥ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಂಬಂಧಪಟ್ಟ ಠಾಣೆ ಇನ್ಸ್‌ಪೆಕ್ಟರ್‌ ಗೆ ಸೂಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಇಲಾಖೆಯಲ್ಲಿ ಭ್ರಷ್ಟಾಚಾರ ಕಂಡುಬಂದ್ರೆ ಕ್ರಮ:
ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೇಗೆ ಕ್ರಮ ಕೈಗೊಳ್ಳುತ್ತೀರಿ, ಕೆಲ ಪ್ರಕರಣಗಳಲ್ಲಿ ಪೊಲೀಸರ ಮೇಲೂ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿವೆ ಎಂದು ಅಶೋಕ್‌ಕುಮಾರ್‌ ಎಂಬುವವರು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂತ್‌, ನಗರ ಪೊಲೀಸರು ಬೆಂಗಳೂರು ಜನರ ಸೇವೆ ಮಾಡುವ ಪ್ರತಿಜ್ಞೆ ಮಾಡಿದ್ದೇವೆ. ಭ್ರಷ್ಟಾಚಾರ ಎಸಗುವವರ ವಿರುದ್ಧ ದೂರು ನೀಡಿದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಂದೆ ರೇವನಾಥ್ ವಿಧಿವಶ

ಪೊಲೀಸರು ಸ್ಪಂದಿಸದಿದ್ದರೆ ನನಗೇ ದೂರು ನೀಡಿ
ಗೂಂಡಾಗಳಿಂದ ಗಲಾಟೆ, ಹಲ್ಲೆ ಅಥವಾ ಯಾವುದೇ ಅಪರಾಧ ಚಟುವಟಿಕೆಗೆ ಸಂಬಂಧಿಸಿದಂತೆ ಸಮೀಪದ ಠಾಣೆಗೆ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಒಂದು
ವೇಳೆ ಪೊಲೀಸರು ಕ್ರಮ ವಹಿಸದಿದ್ದರೆ, ಖುದ್ದಾಗಿ ನನಗೇ ದೂರು ನೀಡಿದರೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು. ಆ ವೇಳೆ ಸೈಯದ್‌ ಫಾರುಕ್‌ ಎಂಬುವರು, ಕೆಲವು
ಗೂಂಡಾಗಳು ತನ್ನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದೇನೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಂಡಿಲ್ಲ, ನಂತರ ವಿಧಾನಪರಿಷತ್‌ ಸದಸ್ಯರಿಗೆ ದೂರು ನೀಡಿದರೂ
ಪ್ರಯೋಜನವಾಗಿಲ್ಲ ಎಂದು ಟ್ವಿಟರ್‌ನಲ್ಲಿ ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರೀಯಿಸಿದ ಆಯುಕ್ತ ಕಮಲ್‌ ಪಂತ್‌, ಗೂಂಡಾಗಳಿಂದ ಗಲಾಟೆ, ಹಲ್ಲೆ ಅಥವಾ ಯಾವುದೇ ಅಪರಾಧ ಚಟುವಟಿಕೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್‌ ಠಾಣೆಗೆ ಭೇಟಿ ನೀಡಿ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next