Advertisement

5 ವರ್ಷಗಳಲ್ಲಿ ನಗರ ಸಮಗ್ರ ಅಭಿವೃದಿ: ಮೇಯರ್‌

06:37 AM Feb 14, 2019 | Team Udayavani |

ಮಹಾನಗರ : ಮಹಾನಗರ ಪಾಲಿಕೆ ವತಿಯಿಂದ 2014-15ರಿಂದ 2018- 19ರ ವರೆಗೆ ಎಸ್‌ಎಫ್‌ಸಿ ಅನುದಾನ, ಅಮೃತ್‌ ಯೋಜನೆ, 2ನೇ ಹಂತದ ಎಡಿಬಿ ಯೋಜನೆ, ವಸತಿ ಯೋಜನೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ಹೀಗಾಗಿ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಮೇಯರ್‌ ಭಾಸ್ಕರ್‌ ಕೆ. ವಿಶ್ವಾಸ ವ್ಯಕ್ತಪಡಿಸಿದರು.

Advertisement

ಐದು ವರ್ಷಗಳ ಅವಧಿಯಲ್ಲಿ ಮನಪಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ನಗರದ ಸರ್ಕಿಟ್ ಹೌಸ್‌ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಸಾಮಾನ್ಯ ನಿಧಿಯಿಂದ ಒಟ್ಟಾರೆ ಐದು ವರ್ಷಗಳಲ್ಲಿ 403.5 ಕೋಟಿ ರೂ. ವೆಚ್ಚದಲ್ಲಿ 11,688 ಕಾಮಗಾರಿ ಪೂರ್ಣಗೊಂಡಿವೆ. 2ನೇ ಹಂತದ ನಗರೋತ್ಥಾನ ಯೋಜನೆಯಡಿ 78.73 ಕೋಟಿ ರೂ. ವೆಚ್ಚದಲ್ಲಿ 126 ಕಾಮಗಾರಿ ಪೂರ್ಣಗೊಳಿಸಲಾಗಿದೆ. 3ನೇ ಹಂತದ ನಗರೋತ್ಥಾನ ಯೋಜನೆಯಡಿ 82.02 ಕೋಟಿ ರೂ. ವೆಚ್ಚದಲ್ಲಿ 103 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು.

ರಾಜ್ಯ ಹಣಕಾಸು ಆಯೋಗದಲ್ಲಿ ಸಾಮಾನ್ಯ ಅನುದಾನದಲ್ಲಿ ಐದು ವರ್ಷಗಳಲ್ಲಿ 66.68 ಕೋಟಿ ರೂ. ವೆಚ್ಚದಲ್ಲಿ 387 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಎಸ್‌ಎಫ್‌ಸಿ ಕುಡಿಯುವ ನೀರಿನ ಕಾಮಗಾರಿಗಾಗಿ 3.87 ಕೋಟಿ ರೂ. ವೆಚ್ಚದಲ್ಲಿ 132 ಕಾಮಗಾರಿ ನಡೆಸಲಾಗಿದೆ. ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 16.88 ಕೋಟಿ ರೂ. ವೆಚ್ಚದಲ್ಲಿ 70 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಎಸ್‌ಎಫ್‌ಸಿ ಪ್ರೋತ್ಸಾಹ ಧನ ಕಾರ್ಯಕ್ರಮದಡಿ 3.01 ಕೋಟಿ ರೂ. ವೆಚ್ಚದಲ್ಲಿ 6 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು. ಪಾಲಿಕೆಗೆ 14ನೇ ಹಣಕಾಸು ಆಯೋಗದ ಶಿಫಾರಸ್ಸಿನ ಕಾರ್ಯಕ್ರಮದಡಿ 32.29 ಕೋಟಿ ರೂ. ವೆಚ್ಚದಲ್ಲಿ 326 ಕಾಮಗಾರಿ ನಿರ್ವಹಿಸಲಾಗಿದೆ. ಅಮೃತ್‌ ಯೋಜನೆಯಡಿ 185 ಕೋಟಿ ರೂ. ಅನುದಾನದಲ್ಲಿ 148.42 ಕೋಟಿ ರೂ. ಒಳಚರಂಡಿ ನಿರ್ಮಾಣಕ್ಕೆ , 31.01
ಕೋಟಿ ರೂ. ಕುಡಿಯುವ ನೀರಿನ ಕಾಮಗಾರಿಗೆ, 4 ಕೋಟಿ ರೂ. ಮಳೆ ನೀರು ಚರಂಡಿಗೆ ಮತ್ತು 2 ಕೋಟಿ ರೂ. ಪಾರ್ಕ್‌ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಹೊಸಬೆಟ್ಟು, ಬೈಲಾರೆ ತೋಡು, ಕಾಟಿಪಳ್ಳ ಮಳೆ ನೀರಿನ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು 2020ರ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಒಳಚರಂಡಿ ಕಾಮಗಾರಿಗಳ ಪೈಕಿ ಮಿಸ್ಸಿಂಗ್‌ ಲಿಂಕ್‌ನ 59.73 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಒಳಚರಂಡಿ ಪುನರುಜ್ಜೀವನ ವಲಯ 1, 4 ಮತ್ತು 7ರ ಕಾಮಗಾರಿ 52.66 ಕೋಟಿ ರೂ., ವಲಯ 7ರ ಕಾಮಗಾರಿ 34.44 ಕೋಟಿ ರೂ., ತುಂಬೆ ಸಗಟು ನೀರು ಸರಬರಾಜು ಕಾಮಗಾರಿಗೆ 31.1 ಕೋಟಿ ರೂ. ನೀಡಲಾಗಿದೆ. ಈ ಎಲ್ಲ ಕಾಮಗಾರಿ ಮೇ 2020ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

2ನೇ ಹಂತದ ಎಡಿಬಿ ಯೋಜನೆಯಡಿ ಸಮಗ್ರ ಕುಡಿಯುವ ನೀರಿನ ಯೋಜನೆ 24×7ಗೆ 218.54 ಕೋಟಿ ರೂ. ಮತ್ತು ಒಳಚರಂಡಿ ಪುನರುಜ್ಜೀವನ ಕಾಮಗಾರಿಗಾಗಿ 195 ಕೋಟಿ ರೂ. ಅನುದಾನ ಕಾದಿರಿಸಲಾಗಿದೆ. ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿಯ 461 ಕೋಟಿ ರೂ. ಮೊತ್ತದ ಯೋಜನೆಗೆ ಸರಕಾರದಿಂದ ಅನುಮೋದನೆ ದೊರಕಿದ್ದು, ಕೂಡಲೇ ಟೆಂಡರ್‌ ಕರೆಯಲಾಗುವುದು ಎಂದರು.

Advertisement

ಮನೆ ನಿರ್ಮಾಣ ಯೋಜನೆ
ಪಾಲಿಕೆ ವ್ಯಾಪ್ತಿಯಲ್ಲಿ 2,322 ಮಂದಿ ವಸತಿ ರಹಿತರಿಗೆ ಜಿ+3 ಮಾದರಿಯ ಮನೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇಡ್ಯಾ ಗ್ರಾಮದಲ್ಲಿ 600 ಮನೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಪದವು ಗ್ರಾಮದಲ್ಲಿ 930 ಮನೆಗಳ ನಿರ್ಮಾಣ ಯೋಜನೆಗೆ ಸರಕಾರದಿಂದ ಅನುಮೋದನೆ ದೊರಕಿದೆ. ಸುರತ್ಕಲ್‌ ಗ್ರಾಮದಲ್ಲಿ 192, ತಿರುವೈಲ್‌ ಗ್ರಾಮದಲ್ಲಿ 600 ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದರು.

ಆರ್ಥಿಕ ಪ್ರಗತಿ
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳ ಕಲ್ಯಾಣ ಕಾರ್ಯಕ್ರಮ ಯೋಜನೆಯಡಿ 5 ವರ್ಷದಲ್ಲಿ 3,234 ಫಲಾನುಭವಿಗಳು ಪ್ರಯೋಜನ ಪಡೆದಿದ್ದು, 13.04 ಕೋಟಿ ರೂ. ಆರ್ಥಿಕ ಪ್ರಗತಿ ಸಾಧಿಸಿದೆ. ಇತರೆ ಬಡ ಕುಟುಂಬಗಳ ಕಲ್ಯಾಣ ಕಾರ್ಯಕ್ರಮದಲ್ಲಿ 5 ವರ್ಷಗಳಲ್ಲಿ 6,374 ಫಲಾನುಭವಿಗಳು ಪ್ರಯೋಜನ ಪಡೆದಿದ್ದು, 3.97 ಕೋಟಿ ರೂ. ಆರ್ಥಿಕ ಪ್ರಗತಿ ಸಾಧಿಸಿದೆ. ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ಯೋಜನೆಯಡಿ 5 ವರ್ಷಗಳಲ್ಲಿ 2369 ಫಲಾನುಭವಿಗಳು ಪ್ರಯೋಜನ ಪಡೆದಿದ್ದು, 2.17 ಕೋಟಿ ರೂ. ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್‌ ಮುಹಮ್ಮದ್‌ ಕೆ., ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರವೀಣ್‌ ಚಂದ್ರ ಆಳ್ವ, ರಾಧಾಕೃಷ್ಣ, ನವೀನ್‌ ಡಿ’ಸೋಜಾ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸದಸ್ಯ ಅಶೋಕ್‌ ಡಿ.ಕೆ. ಮೊದಲಾದವರು ಉಪಸ್ಥಿತರಿದ್ದರು.

ಮಾರುಕಟ್ಟೆಗಳ ನಿರ್ಮಾಣ
ಕಾವೂರು ಮಾರುಕಟ್ಟೆಯನ್ನು 4.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಸುರತ್ಕಲ್‌ ಮಾರುಕಟ್ಟೆ ನಿರ್ಮಾಣವನ್ನು 61 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಮಾರ್ಚ್‌ 2020ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. 12.3 ಕೋಟಿ ರೂ. ವೆಚ್ಚದಲ್ಲಿ ಕದ್ರಿ ಮಾರುಕಟ್ಟೆ ನಿರ್ಮಾಣ ಯೋಜನೆ ಟೆಂಡರ್‌ ಅನುಮೋದನೆಗೆ ಸರಕಾರಕ್ಕೆ ಸಲ್ಲಿಸಲಾಗಿದೆ. ಕಂಕನಾಡಿ ಮಾರುಕಟ್ಟೆ ಅಭಿವೃದ್ಧಿಗೆ 42.3 ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಿ ಟೆಂಡರ್‌ ಕರೆಯಲಾಗಿದೆ. ಅಳಕೆ ಮಾರುಕಟ್ಟೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. 1 ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾಪುರ ಮಾರುಕಟ್ಟೆ ಪ್ರಗತಿಯಲ್ಲಿದೆ. ಕಾಟಿಪಳ್ಳ, ಕೈಕಂಬದಲ್ಲಿ ಅಂಗಡಿ ಮಳಿಗೆಗಳ ನಿರ್ಮಾಣವನ್ನು 50 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಮೇಯರ್‌ ತಿಳಿಸಿದರು.

ತೆರಿಗೆ, ನೀರಿನ ಶುಲ್ಕ ಏರಿಸಿಲ್ಲ
ಐದು ವರ್ಷಗಳ ಅವಧಿಯಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ತೆರಿಗೆ ಹೆಚ್ಚಳ ಮಾಡದೆ, ನೀರಿನ ಶುಲ್ಕ ಏರಿಸದೆ ಹೊರೆಯಾಗದಂತೆ ಆಡಳಿತ ನಡೆಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ಈವರೆಗೆ 3 ಹಂತದಲ್ಲಿ 300 ಕೋಟಿರೂ. ಗಳು ಬಿಡುಗಡೆಯಾಗಿ ಕಾಮಗಾರಿಗಳು ನಡೆಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ 125 ಕೋಟಿ ರೂ. ವಿಶೇಷ ಅನುದಾನವನ್ನು ಘೋಷಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ನಿರ್ದೇಶನ ಬಂದ ಬಳಿಕ ಮುಂದಿನ ಕ್ರಮ ವಹಿಸುವುದಾಗಿ ಮೇಯರ್‌ ತಿಳಿಸಿದರು.

ಫೆ. 18: 10 ಆನ್‌ಲೈನ್‌ ಸೇವೆಗಳಿಗೆ ಮರುಚಾಲನೆ 
ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸಹಿತ ಪಾಲಿಕೆಯಿಂದ 10 ಸೇವೆಗಳಿಗೆ ಗ್ರಾಹಕರು ಆನ್‌ಲೈನ್‌ ಮೂಲಕ ಪಾವತಿ ಮಾಡುವ ಯೋಜನೆಗೆ ಫೆ. 18ರಂದು ಮರು ಚಾಲನೆ ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಮೊಹಮ್ಮದ್‌ ನಜೀರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next